ವಾಸ್ತು ಪ್ರಕಾರ ಮನೆಗೆ ದೋಷ ತರುವ ವಸ್ತುಗಳು!

ಭಾರತೀಯರು ಹೆಚ್ಚಾಗಿ ವಾಸ್ತು ಪ್ರಕಾರ ಮನೆ ಕಟ್ಟಿಸುವುದು ಜಾಸ್ತಿ. ಕೆಲವರು ಅದನ್ನು ಮೂಢನಂಬಿಕೆ ಎಂದು ಹೇಳಿದರೆ ಮತ್ತೆ ಕೆಲವರು ತುಂಬಾ ದೃಢವಾಗಿ ವಾಸ್ತು ಶಾಸ್ತ್ರ ನಂಬುತ್ತಾರೆ. ವಾಸ್ತು ನಂಬಬೇಕೋ? ಬೇಡ್ವ? ಅನ್ನುವುದು ಅವರವರ ಅಭಿಪ್ರಾಯಕ್ಕೆ ಬಿಟ್ಟದ್ದು. ಪ್ರತಿಯೊಬ್ಬರೂ ನಮ್ಮ ಮನೆಯಲ್ಲಿ ಆರೋಗ್ಯ, ಸಂತೋಷ ಮತ್ತು ಐಶ್ಚರ್ಯ ಇರಬೇಕೆಂದು ಬಯಸುತ್ತೇವೆ. ಈ ರೀತಿ ಇರಬೇಕಾದರೆ ವಾಸ್ತು ಶಾಸ್ತ್ರದಲ್ಲಿ ಈ ಕೆಳಗಿನ ಪ್ರಮುಖ ವಸ್ತುಗಳನ್ನು ಮನೆಯಲ್ಲಿ ಇಡಬಾರದೆಂದು ಹೇಳುತ್ತಾರೆ, ವಾಸ್ತು ಪ್ರಕಾರ ಮನೆಗೆ ದೋಷ ತರುವ ಆ ವಸ್ತುಗಳು ಯಾವುದು ಎಂದು ತಿಳಿಯಲು ಮುಂದೆ ಓದಿ.

Vastu For Home

ಮಹಾಭಾರತದ ಚಿತ್ರಗಳು: ಮಹಾಭಾರತ ಪವಿತ್ರವಾದ ಗ್ರಂಥವಾದರೂ, ಅದರ ಕತೆಯನ್ನು ವಿವರಿಸುವ ಯಾವುದೇ ಫೋಟೊವನ್ನು ಮನೆಯಲ್ಲಿ ಇಡಬಾರದು ಎಂದು ಹೇಳಲಾಗುವುದು. ಮಹಾಭಾರತದಲ್ಲಿ ಯುದ್ಧ ಪ್ರಮುಖ ಕೇಂದ್ರಬಿಂದುವಾಗಿರುವುದರಿಂದ , ಇದರ ಪೋಟೊ ಇಟ್ಟರೆ ಮನೆಯವರ ಮಧ್ಯ ಜಗಳ ತಪ್ಪುವುದಿಲ್ಲ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.

ತಾಜ್ ಮಹಲ್: ಅಮರ ಪ್ರೇಮದ ಸಂಕೇತವಾಗಿರುವ ತಾಜ್ ಮಹಲ್ ಪ್ರಪಂಚದ ಏಳನೇ ಅದ್ಭುತಗಳಲ್ಲಿ ಒಂದು. ಇದನ್ನು ನೋಡಿದರೆ ಇದರ ಸೌಂದರ್ಯಕ್ಕೆ ಮನ ಸೋಲದವರೇ ಇಲ್ಲ, ಆದರೆ ಎಷ್ಟೇ ಸೌಂದರ್ಯವಿರಲಿ ವಾಸ್ತು ಪ್ರಕಾರ ಹೇಳುವುದಾದರೆ ಇದೊಂದು ಸಮಾಧಿ, ಸಮಾಧಿಯ ಚಿತ್ರ ಮನೆಯಲ್ಲಿ ಇಡುವುದು ಸರಿಯಲ್ಲ, ಇದು ಮನೆಯಲ್ಲಿದ್ದರೆ ಮನೆಗೆ ಸ್ಮಶಾನದ ಕಳೆ ಬರುತ್ತದೆ.

ನಟರಾಜ: ಸಾಮಾನ್ಯವಾಗಿ ನೃತ್ಯ ಪಂಡಿತರ, ನೃತ್ಯ ಅಭ್ಯಾಸ ಮಾಡುವವರ ಮನೆಯಲ್ಲಿ ನಟರಾಜ ಮೂರ್ತಿ ಇರುತ್ತದೆ. ಇದು ಶಿವನ ತಾಂಡವ ನೃತ್ಯದ ಭಂಗಿಯಾಗಿದೆ. ಶಿವ ದುಷ್ಟರನ್ನು ಸಂಹರಿಸುವ ಸಮಯದಲ್ಲಿ ತಾಂಡವ ನೃತ್ಯ ಮಾಡುತ್ತಾ ಕೊಲ್ಲುತ್ತಾನೆ ಎಂದು ಕತೆ ಪುರಾಣದಲ್ಲಿ ಹೇಳಲಾಗುವುದು. ಆದ್ದರಿಂದ ಈ ಮೂರ್ತಿಯನ್ನು ಮನೆಯಲ್ಲಿಡುವುದು ಒಳ್ಳೆಯದಲ್ಲ ಎಂಬ ನಂಬಿಕೆ ವಾಸ್ತು ಶಾಸ್ತ್ರದಲ್ಲಿದೆ.

ಮುಳುಗುವ ಬೋಟಿನ ಚಿತ್ರ: ಮುಳುಗುವ ಬೋಟಿನ ಚಿತ್ರ ಮನೆಯಲ್ಲಿದ್ದರೆ ಮನೆಯವರ ನಡುವೆ ಸಂಬಂಧ ಹಾಳಾಗಿ ಕುಟುಂಬ ಛಿದ್ರ ಛಿದ್ರವಾಗುವುದು.

ನೀರಿನ ಕಾರಂಜಿ: ನೀರಿನ ಕಾರಂಜಿ ಮನೆಯಲ್ಲಿದ್ದರೆ ಮನೆ ಸೌಂದರ್ಯ ಹೆಚ್ಚುವುದು, ಆದರೆ ವಾಸ್ತು ಶಾಸ್ತ್ರದ ಪ್ರಕಾರ ಇದು ಮನೆಯಲ್ಲಿದ್ದರೆ ಹಣ, ಐಶ್ವರ್ಯ ಕೈಯಲ್ಲಿ ನಿಲ್ಲುವುದಿಲ್ಲ ಎಂದು ಹೇಳಲಾಗಿದೆ.

ಕಾಡುಪ್ರಾಣಿಗಳ ಚಿತ್ರ ಅಥವಾ ಕೊಂಬುಗಳು: ಕಾಡು ಪ್ರಾಣಿಗಳ ಚರ್ಮ, ಕೊಂಬು ಅಥವಾ ಚಿತ್ರವನ್ನು ಮನೆಯಲ್ಲಿ ಇಡಬಾರದು,ಇವುಗಳು ಮನೆಯಲ್ಲಿದ್ದರೆ ಅಲ್ಲಿ ವಾಸಿಸುವ ಮನುಷ್ಯರು ಕೂಡ ಕ್ರೂರ ಸ್ವಭಾವದವರಾಗುತ್ತಾರೆ ಎಂದು ಹೇಳಲಾಗಿದೆ.

Story first published: Monday, July 2, 2012, 14:21 [IST]
X
Desktop Bottom Promotion