Just In
Don't Miss
- News ಲೋಕಸಭಾ ಚುನಾವಣೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್ಡಿಕೆ ಮೇಕೆದಾಟು ಅಸ್ತ್ರ
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Movies Swathi Royal; ಒಂಬತ್ತನೇ ಕ್ಲಾಸ್ ನಲ್ಲೇ ಲವ್ವಲ್ಲಿ ಬಿದ್ದ ಅಮೃತಧಾರೆ ಅಪರ್ಣಾ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಕ್ತ ಪರಿಚಲನೆಯನ್ನು ಹೆಚ್ಚಿಸುವ ಎಂಟು ಅದ್ಭುತ ಆಹಾರಗಳು
ರಕ್ತ ಪರಿಚಲನೆ ಎಂದರೆ ನಮ್ಮ ದೇಹದ ವಿವಿಧ ಭಾಗಗಳಿಗೆ ನರಗಳ ಮೂಲಕ ರಕ್ತ ಹರಿದು ಎಲ್ಲಾ ಭಾಗಗಳಿಗೆ ಪೋಷಕಾಂಶಗಳನ್ನು ಒದಗಿಸುವುದು ಹಾಗೂ ಅಲ್ಲಿಂದ ಮಲಿನವನ್ನು ಹೊತ್ತು ತರುವುದೇ ಆಗಿದೆ. ರಕ್ತಪರಿಚಲನೆ ಉತ್ತಮವಾಗಿದ್ದಷ್ಟೂ ಹೃದಯದ ಮೇಲೆ ಬೀಳುವ ಒತ್ತಡ, ಘಾಸಿ ಕನಿಷ್ಟವಾಗಿರುತ್ತದೆ ಹಾಗೂ ಆರೋಗ್ಯಕರವಾಗಿರುತ್ತದೆ. ಇಂದಿನ ಲೇಖನದಲ್ಲಿ ರಕ್ತಪರಿಚಲನೆಯನ್ನು ಉತ್ತಮಗೊಳಿಸಿ ಆರೋಗ್ಯವನ್ನು ಕಾಪಾಡುವ ಎಂಟು ಆಹಾರಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿದ್ದೇವೆ.
ರಕ್ತಪರಿಚಲನೆಯ ಮೂಲಕ ಕೇವಲ ಪೋಷಕಾಂಶಗಳ ರವಾನೆ ಮಾತ್ರವಲ್ಲ, ಆಮ್ಲಜನಕವನ್ನು ಪ್ರತಿ ಜೀವಕೋಶಕ್ಕೆ ತಲುಪಿಸುವುದು, ದೇಹದ ತಾಪಮಾನವನ್ನು ಕಾಪಾಡಿಕೊಳ್ಳುವುದು, ದೇಹವನ್ನು ಆಕ್ರಮಿಸುವ ಸೋಂಕುಕಾರಕ ಕ್ರಿಮಿಗಳ ವಿರುದ್ದ ಸತತವಾಗಿ ಹೋರಾಡುವುದು, ರೋಗಗಳ ವಿರುದ್ಧ ಹೋರಾಡುವುದು ಹಾಗೂ ಅನಾರೋಗ್ಯಕ್ಕೊಳಗಾದರೆ ಶೀಘ್ರವೇ ಚೇತರಿಸಲು ನೆರವಾಗುವುದು ಮೊದಲಾದ ಪ್ರಮುಖ ಕಾರ್ಯಗಳೂ ಸತತವಾಗಿ ನಡೆಯುತ್ತಿರುತ್ತವೆ.
ರಕ್ತ ಸಂಚಾರ ವೃದ್ಧಿಸುವುದು ಹೇಗೆ ?
ಒಂದು ವೇಳೆ ಕಾರಣಾಂತರಗಳಿಂದ ರಕ್ತಪರಿಚಲನೆಗೆ ಏನಾದರೂ ಅಡ್ಡಿಯುಂಟಾದರೆ ದೇಹದ ವಿವಿಧ ಭಾಗಗಳಿಗೆ ಸೂಕ್ತ ಪೋಷಣೆ ದೊರಕದೇ ಹಲವಾರು ತೊಂದರೆಗಳು ಎದುರಾಗುತ್ತವೆ. ಹಸಿವಿಲ್ಲದಿರುವುದು, ವಿವಿರಿಸಲು ಸಾಧ್ಯವಾಗದ ಜೀರ್ಣಕ್ರಿಯೆಯ ತೊಂದರೆಗಳು, ಕಾಲುಗಳಲ್ಲಿ ಸತತವಾಗಿ ಮರಗಟ್ಟಿದಂತಾಗುವುದು, ಚರ್ಮದ ಬಣ್ಣ ಬದಲಾಗುವುದು, ಸತತವಾಗಿ ಸುಸ್ತಾಗುತ್ತಿರುವುದು, ತಿರುಚಿದ ನರಗಳು ಹಾಗೂ ಸುಲಭವಾಗಿ ತುಂಡಾಗುವ ಕೂದಲು ಮತ್ತು ಉಗುರುಗಳು ಮೊದಲಾದವು ಕಂಡುಬರುತ್ತವೆ.
ರಕ್ತಪರಿಚಲನೆ ಕುಂಠಿತಗೊಳ್ಳಲು ಕಾರಣಗಳೇನು?
ಅತ್ಯಂತ ಪ್ರಮುಖ ಕಾರಣವೆಂದರೆ ಧೂಮಪಾನ. ಈ ಹೊಗೆಯಲ್ಲಿರುವ ಕಾರ್ಬನ್ ಮಾನಾಕ್ಸೈಡ್ ಎಲ್ಲೆಲ್ಲಿ ಸಾಗುತ್ತದೆಯೋ ಅಲ್ಲೆಲ್ಲಾ ಜೀವಕೋಶಗಳ ಪದರವನ್ನು ಘಾಸಿಗೊಳಿಸುತ್ತಾ ನರಗಳ ಒಳಭಾಗದಲ್ಲಿ ಕರಗಿ ಜಿಡ್ಡಿನಂತೆ ನರ ಕವಲೊಡೆಯುವಲ್ಲೆಲ್ಲಾ ಅಂಟಿಕೊಳ್ಳುತ್ತದೆ. ಇದರ ಬಳಿಕ ಚಲನವಲನ ಕನಿಷ್ಟವಾಗಿರುವ ಜೀವನಕ್ರಮ, ಸಿದ್ದ ಆಹಾರಗಳ ಬಗ್ಗೆ ಒಲವು, ಅಧಿಕ ಅಥವಾ ಅಗತ್ಯಕ್ಕೂ ಕಡಿಮೆಯಾದ ರಕ್ತದೊತ್ತಡ ಹಾಗೂ ರಕ್ತದಲ್ಲಿ ಈಗಾಗಲೇ ಸಂಗ್ರಹಗೊಂಡಿರುವ ಕೊಲೆಸ್ಟ್ರಾಲ್ ಮೊದಲಾದವು ರಕ್ತಪರಿಚಲನೆ ಕುಂಠಿತಗೊಳಿಸಲು ಕಾರಣಗಳಾಗಿವೆ. ಈ ತೊಂದರೆಯನ್ನು ನಿವಾರಿಸಲು ಉತ್ತಮವಾದ ಆಹಾರಗಳು ಯಾವುವು ಎಂಬುದನ್ನು ನೋಡೋಣ:
1. ಒಮೆಗಾ ೩ ಕೊಬ್ಬಿನ ಆಮ್ಲಯುಕ್ತ ಮೀನು (Cold-water Fish)
ಸಾಲ್ಮನ್, ಬಂಗಡೆ ಮೊದಲಾದ ಸಾಗರದ ಮೀನುಗಳಲ್ಲಿ ಹೆಚ್ಚಿನ ಪ್ರಮಾಣದ ಒಮೆಗಾ ೩ ಕೊಬ್ಬಿನ ಆಮ್ಲಗಳಿವೆ. ಇವು ಅತ್ಯಂತ ಆರೋಗ್ಯಕರ ಕೊಬ್ಬು ಆಗಿದ್ದು ಹೃದಯ ಮತ್ತು ರಕ್ತಪರಿಚಲನೆಯನ್ನು ಉತ್ತಮಗೊಳಿಸುವ ಆಹಾರಗಳಾಗಿವೆ. ಅಲ್ಲದೇ ಇವು ಉರಿಯೂತ ಮತ್ತು ರಕ್ತದಲ್ಲಿರುವ ಪ್ಲೇಟ್ಲೆಟ್ ಎಂಬ ತಟ್ಟೆಯಾಕಾರದ ಕಣಗಳು ನರಗಳ ಒಳಗೋಡೆಗೆ ಅಂಟಿಕೊಳ್ಳದಂತೆ ತಡೆಯುತ್ತವೆ. ಉತ್ತಮ ಪರಿಣಾಮಕ್ಕಾಗಿ ವಾರಕ್ಕೆ ಕನಿಷ್ಟ ಎರಡು ಅಥವಾ ಮೂರು ಹೊತ್ತಾದರೂ ಮೀನಿನ ಪದಾರ್ಥವನ್ನು ಸೇವಿಸಿ.
2. ಕಿತ್ತಳೆ ಹಣ್ಣು
ಕಿತ್ತಳೆಯಲ್ಲಿ ಅಧಿಕ ಪ್ರಮಾಣದ ವಿಟಮಿನ್ ಸಿ ಇದೆ. ಇದೊಂದು ಅಮೂಲ್ಯ ಪೋಷಕಾಂಶವಾಗಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪ್ರಮುಖ ಕಾರ್ಯದ ಜೊತೆಗೇ ರಕ್ತಪರಿಚಲನೆಯನ್ನೂ ಉತ್ತಮಗೊಳಿಸುತ್ತದೆ. ವಿಶೇಷವಾಗಿ, ನಮ್ಮ ನರವ್ಯವಸ್ಥೆಯ ಅತ್ಯಂತ ಕಡೆಯಲ್ಲಿ ಬರುವ ಅತಿಸೂಕ್ಷ್ಮ ನರಗಳಲ್ಲಿ ರಕ್ತ ನೇರವಾಗಿ ಜೀವಕೋಶಗಳಿಗೆ ತಲುಪುವಲ್ಲಿ ಈ ಪೋಷಕಾಂಶ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೇ ಕೊಲ್ಯಾಜೆನ್ ಎಂಬ ಕಣದ ಉತ್ಪತ್ತಿಗಾಗಿಯೂ ವಿಟಮಿನ್ ಸಿ ಅವಶ್ಯವಿದೆ. ವಿಟಮಿನ್ ಸಿ ಕೇವಲ ಕಿತ್ತಳೆಗಳಲ್ಲಿ ಮಾತ್ರವಲ್ಲ, ಲಿಂಬೆ, ದೊಣ್ಣೆಮೆಣಸು, ಅನಾನಸು, ಬ್ರೋಕೋಲಿ ಹಾಗೂ ಸ್ಟ್ರಾಬೆರಿಗಳಲ್ಲಿಯೂ ಸಮೃದ್ದವಾಗಿದೆ.
3. ಒಣಫಲಗಳು
ರಕ್ತಪರಿಚಲನೆಯನ್ನು ಉತ್ತಮಗೊಳಿಸಲು ಒಣಫಲಗಳೂ ಉತ್ತಮವಾದ ಆಹಾರಗಳಾಗಿವೆ. ಇವುಗಳಲ್ಲಿ ಸಮೃದ್ದವಾಗಿರುವ ಮೆಗ್ನೇಶಿಯಂ ನರಗಳನ್ನು ಸಡಿಲಗೊಳಿಸಿ ಹಿಗ್ಗಲು ಮತ್ತು ಕುಗ್ಗಲು ನೆರವಾಗುವ ಮೂಲಕ ರಕ್ತಪರಿಚಲನೆಯನ್ನು ಸರಾಗವಾಗಿಸುತ್ತದೆ ಹಾಗೂ ಇದರಲ್ಲಿರುವ ಇನ್ನೊಂದು ಪೋಷಕಾಂಶವಾದ ಎಲ್-ಆರ್ಜಿನೈನ್ ರಕ್ತದಲ್ಲಿ ನೈಟ್ರಿಕ್ ಆಕ್ಸೈಡ್ ಅನ್ನು ಉತ್ಪಾದಿಸಿ ನರಗಳು ಸಡಿಲಗೊಳ್ಳಲು ನೆರವಾಗುತ್ತದೆ.
4. ಹಸಿರು ಟೀ
ಒಂದು ವೇಳೆ ನೀವು ದಿನದಲ್ಲಿ ಹಲವಾರು ಬಾರಿ ಹಾಲು ಬೆರೆಸಿದ ಟೀ ಕುಡಿಯುವ ಅಭ್ಯಾಸದವರಾಗಿದ್ದರೆ ಈಗ ಅವುಗಳಲ್ಲಿ ಕೆಲವು ಅವಧಿಯನ್ನು ಹಸಿರು ಟೀ ಸೇವನೆಗೆ ಬದಲಿಸಿಕೊಳ್ಳಲು ಸಕಾಲ. ಏಕೆಂದರೆ ಹಸಿರು ಟೀ ದೇಹದ ಹಲವು ಕಾರ್ಯಗಳಿಗೆ ಪ್ರಚೋದನೆ ನೀಡುತ್ತದೆ. ಹಸಿರು ಟೀ ಸೇವನೆಯ ಮೂಲಕ ರಕ್ತದ ನಾಳಗಳು ಹಿಗ್ಗುತ್ತವೆ ಹಾಗೂ ಈ ಮೂಲಕ ರಕ್ತಪರಿಚಲನೆ ಸರಾಗವಾಗುತ್ತದೆ. ಹಸಿರು ಟೀ ಆಂಟಿ ಆಕ್ಸಿಡೆಂಟುಗಳಿಂದ ಸಮೃದ್ದವಾಗಿದ್ದು ಒಟ್ಟಾರೆ ಆರೋಗ್ಯವನ್ನೂ ವೃದ್ದಿಸುತ್ತದೆ.
5. ಬೆಳ್ಳುಳ್ಳಿ
ರಕ್ತಪರಿಚಲನೆಯನ್ನು ಪ್ರಚೋದಿಸಲು ಬೆಳ್ಳುಳ್ಳಿಯ ಉರಿಯೂತ ನಿವಾರಕ ಮತ್ತು ಅತಿಸೂಕ್ಷ್ನಜೀವಿ ನಿವಾರಕ ಗುಣಗಳು ನೆರವಾಗುತ್ತವೆ ಹಾಗೂ ಈ ಮೂಲಕ ಜೀರ್ಣಕ್ರಿಯೆ ಸರಾಗವಾಗುವಂತೆ ಮಾಡುತ್ತದೆ. ಅಲ್ಲದೇ ಬೆಳ್ಳುಳ್ಳಿಯಲ್ಲಿ ಸಾವಯವ ಗಂಧಕದ ಸಂಯುಕ್ತಗಳಿದ್ದು ದೇಹವನ್ನು ಕಾಡುವ ಹಲವಾರು ಸೋಂಕುಗಳಿಂದ ರಕ್ಷಿಸುತ್ತದೆ ಹಾಗೂ ಕಲ್ಮಶಗಳನ್ನು ದೇಹದಿಂದ ಹೊರ ವಿಸರ್ಜಿಸಲು ನೆರವಾಗುತ್ತದೆ. ರಕ್ತಪರಿಚಲನೆ ಹೆಚ್ಚಿಸಲು ಬೆಳ್ಳುಳ್ಳಿಯೊಂದಿಗೆ ಹಸಿಶುಂಠಿ ಹಾಗೂ ನೀರುಳ್ಳಿ ಸಹಾ ಹೆಚ್ಚಿನ ನೆರವು ನೀಡುತ್ತವೆ.
6. ಹಸಿರು ಸೊಪ್ಪುಗಳು:
ಹಸಿರು ಸೊಪ್ಪುಗಳೂ ರಕ್ತಪರಿಚಲನೆಗೆ ಹೆಚ್ಚಿನ ನೆರವು ನೀಡುತ್ತವೆ ಹಾಗೂ ಅನಾರೋಗ್ಯದಿಂದ ಶೀಘ್ರವೇ ಚೇತರಿಸಿಕೊಳ್ಳಲು ನೆರವಾಗುತ್ತವೆ. ಬಿಲ್ಬೆರಿ, ಪಾರ್ಸ್ಲೆ ಸೊಪ್ಪು ಮೊದಲಾದವು ರಕ್ತಪರಿಚಲನೆಯನ್ನು ಹೆಚ್ಚಿಸಲು ನೆರವಾಗುತ್ತವೆ.
7. ಬೀಟ್ರೂಟ್
ಸಮೃದ್ಧವಾದ ಪೋಷಣೆಯ ಗುಣಗಳನ್ನು ಒಳಗೊಂಡಿರುವ ತರಕಾರಿಗಳಲ್ಲಿ ಬೀಟ್ರೂಟ್ ಸಹ ಒಂದು. ಬೀಟ್ರೂಟ್ ತನ್ನದೇ ಆದ ವಿಭಿನ್ನ ರುಚಿಯಿಂದ ಕೂಡಿರುತ್ತದೆ. ಕಡು ಕೆಂಪು ಬಣ್ಣಗಳಿಂದ ಕೂಡಿರುವ ಈ ಗಡ್ಡೆ ರೂಪದ ತರಕಾರಿ ರಕ್ತಹೀನತೆ, ರಕ್ತದೊತ್ತಡ, ಕೊಲೆಸ್ಟ್ರಾಲ್ ಸೇರಿದಂತೆ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುತ್ತದೆ. ಅಂತೆಯೇ ಈ ಕೆಂಪು ತರಕಾರಿಯಲ್ಲಿ ಸಮೃದ್ದವಾಗಿರುವ ನೈಟ್ರೇಟುಗಳು ರಕ್ತಪರಿಚಲನೆಯನ್ನು ಉತ್ತಮಗೊಳಿಸುವಲ್ಲಿ ಖ್ಯಾತಿ ಗಳಿಸಿವೆ. ಆಹಾರದ ಮೂಲಕ ಲಭಿಸುವ ನೈಟ್ರೇಟು ಜೀರ್ಣಕ್ರಿಯೆಯ ಬಳಿಕ ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತಿತವಾಗುತ್ತದೆ ಹಾಗೂ ಇದು ರಕ್ತನಾಳಗಳನ್ನು ಸಡಿಲಿಸಲು ನೆರವಾಗುತ್ತದೆ.
8. ಕಪ್ಪು ಚಾಕಲೇಟು
ಮಕ್ಕಳು ಚಾಕಲೇಟು ತಿಂದರೆ ಹಿರಿಯರ ಮೊತ್ತಮೊದಲ ಪ್ರತಿಕ್ರಿಯೆ ಎಂದರೆ 'ಚಾಕಲೇಟು ಹೆಚ್ಚು ತಿನ್ನಬೇಡ, ಹಲ್ಲು ಹಾಳಾಗುತ್ತದೆ' ಆದರೆ ಕಪ್ಪು ಚಾಕಲೇಟಿನಲ್ಲಿ ಹಲವು ಆಂಟಿ ಆಕ್ಸಿಡೆಂಟುಗಳು, ಫ್ಲೇವನಾಯ್ಡುಗಳು ಮತ್ತಿತರ ಪೋಷಕಾಂಶಗಳಿವೆ. ಇವು ರಕ್ತನಾಳಗಳ ಸೆಡೆತವನ್ನು ಸಡಿಲಿಸಿ ರಕ್ತದ ಒತ್ತಡವನ್ನು ಕಡಿಮೆಗೊಳಿಸುತ್ತದೆ. ಆದರೆ ಚಾಕಲೇಟಿನ ಪ್ರಮಾಣ ಕಡಿಮೆ ಇರಬೇಕು ಅಷ್ಟೇ. ಆದರೆ ಚಾಕಲೇಟು ಎಂದರೆ ಕಪ್ಪು ಚಾಕಲೇಟು ಆರೋಗ್ಯಕ್ಕೆ ಉತ್ತಮ. ಇನ್ನು ಸುಮಾರು 70%ಕ್ಕೂ ಹೆಚ್ಚು ಕೋಕೋ ಇರುವ ಚಾಕಲೇಟುಗಳನ್ನು ಕಪ್ಪು ಅಥವಾ ಡಾರ್ಕ್ ಚಾಕಲೇಟುಗಳೆಂದು ಕರೆಯುತ್ತಾರೆ. ಇವುಗಳ ಸೇವನೆಯಿಂದಲೂ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ. ಇದರಲ್ಲಿರುವ ಹೆಚ್ಚಿನ ಫ್ಲೇವನಾಯ್ಡ್ ಗಳು ಎಂಬ ಪ್ರಬಲ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿ ಕ್ಯಾನ್ಸರ್ ಉಂಟುಮಾಡುವ ಫ್ರೀ ರ್ಯಾಡಿಕಲ್ ಎಂಬ ಕಣಗಳನ್ನು ತಡೆದು ನಿಲ್ಲಿಸಿ ಉರಿಯೂತವಾಗುವುದರಿಂದ ರಕ್ಷಣೆ ಒದಗಿಸುತ್ತವೆ.