ತಪ್ಪು, ಸರಿಗಳ ನಡುವೆ ವೈದ್ಯರ ಲೋಕ!

Doctor Day
"ವೈದ್ಯೋ ನಾರಾಯಣ ಹರಿ" ಈ ಮಾತು ಅಕ್ಷರಶಃ ಸತ್ಯ. ಯಾವುದಾದರೂ ಕಾಯಿಲೆ ಬಂದಾಗ ಅಥವಾ ಅಪಘಾತವಾದಾಗ ಇನ್ನೇನು ಜೀವ ಹೋಗುತ್ತದೆ ಎನ್ನುವ ಪ್ರಾಣ ಸಂಕಟದಲ್ಲಿರುವಾಗ ನಾವೆಲ್ಲ ನಂಬುವುದು ಕಣ್ಣಿಗೆ ಕಾಣದ ಆ ದೇವರನ್ನು ಮತ್ತು ಕಣ್ಣೆದುರಿಗೆ ಇರುವ ಈ ವೈದ್ಯ ದೇವರನ್ನು. ಆದ್ದರಿಂದಲೇ ವೈದ್ಯ ವೃತ್ತಿಯನ್ನು ಅಷ್ಟೊಂದು ಗೌರವಿಸುತ್ತೇವೆ.

ಜುಲೈ 1 ರಂದು ವೈದ್ಯ ದಿನಾಚರಣೆಯನ್ನು ಆಚರಿಸಲಾಗುವುದು. ಈ ಹಿನ್ನಲೆಯಲ್ಲಿ ವೈದ್ಯ ದಿನದ ಮಹತ್ವದ ಕುರಿತು ತಿಳಿಯೋಣ:

ಭಾರತದಲ್ಲಿ ವೈದ್ಯ ದಿನಾಚರಣೆಯನ್ನು ಭಾರತ ರತ್ನ ಪುರಸ್ಕೃತ, ಪಶ್ಚಿಮ ಬಂಗಾಳದಲ್ಲಿ ಎರಡನೇ ಮುಖ್ಯಮಂತ್ರಿಯಾಗಿದ್ದ ಬಿಧಾನ್‌ ಚಂದ್ರ ರಾಯ್‌ ಹುಟ್ಟಿದ (ಮತ್ತು ಮರಣಿಸಿದ) ದಿನವಾದ ಜುಲೈ ೧ನ್ನು ರಾಷ್ಟ್ರೀಯ ವೈದ್ಯರ ದಿನವೆಂದು ಪ್ರತಿ ವರ್ಷ ಆಚರಿಸಲಾಗುವುದು. ಬಿಧಾನ್ ಚಂದ್ರ ರಾಯ್ ರವರು ಅತ್ಯಂತ ಗೌರವಾನ್ವಿತ ವೈದ್ಯರಾಗಿದ್ದರು. ತಮ್ಮ ಜೀವನವನ್ನು ಬಡವ ಬಲ್ಲಿದರ ಸೇವೆಗೋಸ್ಕರವೇ ಮುಡುಪಾಗಿಟ್ಟಿದ್ದರು. ಅವರ ಸೇವೆಗೆ ಗೌರವಾರ್ಥವಾಗಿ ಮತ್ತು ಅವರಂತೆಯೇ ಜನರ ಸೇವೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟ ವೈದ್ಯರಿಗೆ ಗೌರವಾರ್ಥಕವಾಗಿ ಈ ವೈದ್ಯ ದಿನಾಚರಣೆಯನ್ನು ಆಚರಿಸಲಾಗುವುದು.

ವೈದ್ಯ ದಿನಾಚರಣೆಯ ಮಹತ್ವದ ಕುರಿತು ಜನಸಾಮಾನ್ಯರು ಮತ್ತು ವೈದ್ಯರು ಚಿಂತಿಸಬೇಕಾಗಿದೆ.

ಒಬ್ಬ ವ್ಯಕ್ತಿ ಉತ್ತಮ ವೈದ್ಯ ಎಂದು ಕರೆಸಿಕೊಳ್ಳಲು ತನ್ನ ಖಾಸಗಿ ಜೀವನಕ್ಕಿಂತ ವೈದ್ಯಕೀಯ ಜೀವನಕ್ಕೆ ಹೆಚ್ಚು ಮಹತ್ವ ಕೊಡಬೇಕಾಗುತ್ತದೆ. ನೊಂದ ರೋಗಿಯ ಬದುಕಿನಲ್ಲಿ ಭರವಸೆ ಮೂಡಿಸಬೇಕಾಗುತ್ತದೆ. ಎಷ್ಟೇ ಸುಸ್ತು ಇದ್ದರೂ ಅದನ್ನು ತೋರಿಸಿಕೊಳ್ಳದೆ ಅವನನ್ನು ನಂಬಿ ಬಂದ ರೋಗಿಯನ್ನು ಬದುಕಿಸುವ ಅಥವಾ ರೋಗವನ್ನು ಗುಣಪಡಿಸುವುದೇ ಅವರ ಮುಖ್ಯ ಗುರಿಯಾಗಿರುತ್ತದೆ. ಅದೇ ಅವರ ವೃತ್ತಿಧರ್ಮ. ಆದರೆ ಕೆಲವು ವೈದ್ಯರುಗಳು ಹಣದ ದುರಾಸೆಯಿಂದ ವೃತ್ತಿ ಧರ್ಮವನ್ನು ಮರೆತಿರುವ ಕಾರಣ ಜನರಿಗೆ ವೈದ್ಯರ ಬಗ್ಗೆ ಅಸಮಧಾನ ಕೂಡ ಇದೆ.

ವೈದ್ಯರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಮಧ್ಯಮವರ್ಗದ ಸುಶೀಲರವನ್ನು ಕೇಳಿದಾಗ ಅವರು "ಬಡವರಿಗೆಂದು ಇರುವ ಸರ್ಕಾರಿ ಆಸ್ಪತ್ರೆಗಳಿಗೆ ಹೋದರೆ ಅಲ್ಲಿರುವ ಕೆಲವು ಡಾಕ್ಟರ್, ನರ್ಸ್, ಆಯಾಗಳಿಗೆ ಗಿಂಬಳ ಕೊಟ್ಟೇ ಸಾಕಾಗುವುದು, ಆದರೆ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲು ಬಡವರಲ್ಲಿ ಶಕ್ತಿ ಇರುವುದಿಲ್ಲ, ಬಡವರ ಗೋಳು ಕೇಳುವವರು ಯಾರು?" ಎಂದು ಪ್ರಶ್ನಿಸಿದರು.

ಇದೇ ಪ್ರಶ್ನೆಯನ್ನು ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಚಂದ್ರಿಕಾವರಿಗೆ ಕೇಳಿದಾಗ "ಹೋದ ವರ್ಷ ನಂಗೆ ಗರ್ಭ ಕೋಶದ ಆಪರೇಸನ್ ಆಯ್ತು ಕಣ್ವ, ನನ್ನ ಚೆಕಪೂ ಡಾಕ್ಟರ್ರೂ ಒಂದೂ ಕಾಸು ನಮ್ಮ ಹತ್ರ ಇಸ್ಕೊಂಡಿಲ್ಲ, ಆ ದೇವರು ಅವರಿಗೆ ಒಳ್ಳೆಯದು ಮಾಡಲಿ' ಎಂದು ನಿಜವಾದ ವೈದ್ಯ ವೃತ್ತಿ ಮೆರೆದ ವೈದ್ಯನನ್ನು ಕೊಂಡಾಡಿದರು.

ವೈದ್ಯರು ಹಣ ತೆಗೆದುಕೊಳ್ಳುವುದರ ಬಗ್ಗೆ ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತದೆ. ಒಬ್ಬ ವ್ಯಕ್ತಿ ಡಾಕ್ಟರ್ ಆಗಲು ಲಕ್ಷಗಟ್ಟಲೆ ಹಣ ಸುರಿದಿರುತ್ತಾನೆ, ತುಂಬಾ ಸಾಲ ಮಾಡಿ ಓದಿರುತ್ತಾರೆ. ಅವರು ಹಣ ಪಡೆಯಲಿಲ್ಲ ಎಂದರೆ ಅದನ್ನು ತೀರಿಸುವುದು ಹೇಗೆ? ಯಾವುದೇ ವೃತ್ತಿಯಾದರೂ ಹಣ ಗಳಿಸಬೇಕು. ಆದರೆ ಬಡವರಿಗಾಗಿ ಇರುವ ಸರ್ಕಾರಿ ಆಸ್ಪತ್ರೆಯಲ್ಲಿ ಸರ್ಕಾರಿ ವೈದ್ಯನಾಗಿದ್ದು, ರೋಗಿಗಳ ಹತ್ತಿರ ಹಣ ಪಡೆಯುವುದು ಯಾವ ವೃತ್ತಿ ಧರ್ಮ?

ಖಾಸಗಿ ಕಂಪನಿಯಲ್ಲಿ ಉನ್ನತ ಉದ್ದೆಯಲ್ಲಿರುವ ಅಪ್ರಮಯರವರು " ನಾನು ಡಾಕ್ಟರ್ ಹತ್ತಿರ ಚೆಕ್ ಅಪ್ ಗೆ ಹೋಗಿ ತುಂಬಾ ಕಾಲವಾಯಿತು, ಸಣ್ಣ ತಲೆನೋವೆಂದು ಹೋದರೆ ಇಡೀ ಬಾಡಿ ಸ್ಕ್ಯಾನಿಂಗ್ ಮಾಡಿಸಿ ಹಣ ಕೀಳುತ್ತಾರೆ" ಎಂದು ದೂರಿದರು.

ವೈದ್ಯರು ಈ ರೀತಿ ಮಾಡುವುದರಿಂದ ನಿಜವಾಗಲೂ ನಮಗೆ ಸ್ಕ್ಯಾನಿಂಗ್, ಬ್ಲಡ್ ಟೆಸ್ಟ್ ಮಾಡಬೇಕಾದಾಗ ವೈದ್ಯರು ಹಣಕ್ಕಾಗಿ ಮಾಡಿಸುತ್ತಿದ್ದಾರಾ ಎಂಬ ಅನುಮಾನ ಪಡುವಂತಾಗಿದೆ ಎಂದು ಮಾಧ್ಯಮ ಪ್ರತಿನಿಧಿಯಾಗಿರುವ ಶುಚಿಯವರು ಧ್ವನಿಗೂಡಿಸಿದರು.

ಜನಸಾಮಾನ್ಯರೂ ಅಷ್ಟೇ ವೈದ್ಯರ ಬಳಿ ಕೆಲವೊಮ್ಮೆ ತುಂಬಾ ನಿಷ್ಠೂರವಾಗಿ ನಡೆದುಕೊಳ್ಳುತ್ತೇವೆ. ವೈದ್ಯರ ಚಿಕಿತ್ಸೆ ಫಲಕಾರಿಯಾಗದಿದ್ದಾಗ ಕೂಗಾಡಿ, ಹಾರಾಡುತ್ತೇವೆ. ಜೀವನವನ್ನು ಉಳಿಸಿದ ಡಾಕ್ಟರ್ ಬಗ್ಗೆ ಇನ್ನೂ ಕೆಲವರು ಏನು ಸುಮ್ಮನೆ ಮಾಡಿದ್ರಾ, ದುಡ್ಡು ತಗೊಂಡು ತಾನೆ ಚಿಕಿತ್ಸೆ ಮಾಡಿದರು ಎಂದು ವ್ಯಂಗ್ಯವಾಡುತ್ತಾರೆ. ಹೀಗೆ ಹೇಳುವವರು ಒಂದು ಕ್ಷಣ ಯೋಚಿಸಬೇಕು ಬರೀ ದುಡ್ಡಿದ್ದರೆ ಜೀವ ಉಳಿಸಲು ಸಾಧ್ಯವಿಲ್ಲ.

ವೈದ್ಯನಾದವನು ತನ್ನ ವೃತ್ತಿ ಧರ್ಮವನ್ನು ಯಾವತ್ತು ಮರೆಯಬಾರದು. ಅಂತಹವರು ಮಾತ್ರ ಜನರ ಮನಸ್ಸಿನಲ್ಲಿ ಉಳಿಯುತ್ತಾರೆ, ಜೀವನದಲ್ಲಿ ಯಶಸ್ವಿಗಳಿಸುತ್ತಾರೆ. ಜನಸಾಮಾನ್ಯರು ಒಬ್ಬ ಕೆಲ ವೈದ್ಯ ಮಾಡುವ ತಪ್ಪಿಗೆ ಇಡೀ ವೈದ್ಯ ಕುಲದ ಬಗ್ಗೆ ಇರುವ ತಿರಸ್ಕಾರ ಬಿಡಬೇಕು. ಅವರೂ ನಮ್ಮಂತೆ ಮನುಷ್ಯರು ಸುಸ್ತು, ಒತ್ತಡ ಎಲ್ಲಾ ಇರುತ್ತದೆ ಎಂದು ಅರ್ಥೈಹಿಸಿಕೊಳ್ಳಬೇಕು.

ಕನ್ನಡ ಬೋಲ್ಡ್ ಸ್ಕೈ ಯಿಂದ ವೃತ್ತಿ ಧರ್ಮವನ್ನು ಪಾಲಿಸುತ್ತಿರುವ ನಾಡಿನ ಸಮಸ್ತ ವೈದ್ಯರಿಗೆ ರಾಷ್ಟೀಯ ವೈದ್ಯ ದಿನಾಚರಣೆಯ ಶುಭಾಶಯಗಳು.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Doctor Day Special Story | Health And Doctor | ವೈದ್ಯರ ದಿನಾಚರಣೆಗೆ ವಿಶೇಷ ಲೇಖನ | ಆರೋಗ್ಯ ಮತ್ತು ಆರೋಗ್ಯ

Every year Doctor’s Day is celebrated in India on the 1st of July. This show the doctors and physicians in our lives how important they are to us and how invaluable their treatments are that cure us.
Story first published: Saturday, June 30, 2012, 16:23 [IST]
X
Desktop Bottom Promotion