COVID-19: ರಾಜ್ಯದಲ್ಲಿ ಇಬ್ಬರು ಸಾವು! 150ರ ಸಮೀಪಕ್ಕೆ ಸಕ್ರಿಯ ಕೇಸ್.. ಬೆಳಗಾವಿಯಲ್ಲಿ ಓರ್ವ ಬಲಿ

ರಾಜ್ಯದಲ್ಲಿ ಕೋವಿಡ್‌ ಮಹಾಮಾರಿಗೆ ಎರಡನೇ ಬಲಿ! ಬೆಳಗಾವಿಯಲ್ಲಿ ಕೊರೊನಾ ಸೋಂಕಿಗೆ 72 ವರ್ಷದ ವ್ಯಕ್ತಿ ಸಾವು. 150ರ ಸಮೀಪಕ್ಕೆ ಸಕ್ರಿಯ ಪ್ರಕರಣಗಳ ಸಂಖ್ಯೆ. ಹೌದು, ರಾಜ್ಯದಲ್ಲಿ ಕೋವಿಡ್‌-19 (Covid-19) ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದಂತೆ ಆರೋಗ್ಯ ಇಲಾಖೆ ಹೈ ಅಲರ್ಟ್​ ಆಗಿದೆ. ಎಲ್ಲಾ ಆಸ್ಪತ್ರೆಗಳಲ್ಲೂ ಕೋವಿಡ್ ಪಾಸಿಟಿವ್​ ಬರುವವರ ಸಂಖ್ಯೆ ಏರಿಕೆಯಾಗುತ್ತಿದ್ದಂತೆ, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಆದರೆ, ಈ ಮುನ್ನೆಚ್ಚರಿಕಾ ಕ್ರಮಗಳ ನಡುವೆಯೂ ರಾಜ್ಯದಲ್ಲಿ ಕೋವಿಡ್ ಸೋಂಕಿಗೆ ಬಲಿಯಾದವರ ಸಂಖ್ಯೆ ಹೆಚ್ಚಾಗಿದೆ.

ಹೌದು, ಒಂದೇ ವಾರದಲ್ಲಿ ಕೋವಿಡ್ ಸೋಂಕಿಗೆ ಇಬ್ಬರು ವ್ಯಕ್ತಿಗಳು (Covid Death) ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಕೊರೊನಾ ಸೋಂಕಿಗೆ ಮೊದಲ ಸಾವು ವರದಿಯಾಗಿತ್ತು. ಇದೀಗ, ಕೋವಿಡ್‌-19 ಸೋಂಕು ಮತ್ತೊಂದು ಜೀವವನ್ನು ಬಲಿ ಪಡೆದಿದೆ. ಈ ಮೂಲಕ ಬೆಳಗಾವಿ ಜಿಲ್ಲೆಯಲ್ಲಿ ತನ್ನ ಖಾತೆ ತೆರಿದಿದೆ. ಕಳೆದ ವಾರ ಬೆಂಗಳೂರಿನ ವೈಟ್ ಫೀಲ್ಡ್ ಮೂಲದ 84 ವರ್ಷದ ವ್ಯಕ್ತಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು. ಸದ್ಯ ಕೋವಿಡ್ ಸೋಂಕಿತರಾಗಿದ್ದ ಬೆಳಗಾವಿ ಜಿಲ್ಲೆಯ ಬೆನಕನಹಳ್ಳಿ ಗ್ರಾಮದ 70 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ.

Karnataka Covid Death

ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ

ಕೊರೊನಾ ಮಹಾಮಾರಿಗೆ ಬೆಳಗಾವಿಯಲ್ಲಿ ಮೊದಲ ಬಲಿಯಾಗಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಚಿಕಿತ್ಸೆಗೆ ಎಂದು ಬೀಮ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ. ಬುಧವಾರದಂದು ಕೋವಿಡ್ ತಪಾಸಣೆಯಲ್ಲಿ ಪಾಸಿಟಿವ್ ಕಂಡು ಬಂದಿತ್ತು. ತಡರಾತ್ರಿ ಚಿಕಿತ್ಸೆ ಫಲಿಸದೆ ವೃದ್ಧ ಮೃತಪಟ್ಟಿದ್ದಾರೆ. ಈತ ಬೆಳಗಾವಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ರಾಜ್ಯದಲ್ಲಿ ಒಟ್ಟು 42 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 148ಕ್ಕೆ ಏರಿಕೆಯಾಗಿದೆ.

ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 150ರ ಸಮೀಪ

- ಕಳೆದ 24 ಗಂಟೆಯಲ್ಲಿ 42 ಹೊಸ ಕೋವಿಡ್ ಪ್ರಕರಣ

- ಕಳೆದ 24 ಗಂಟೆಯಲ್ಲಿ 19 ಜನ ಕೋವಿಡ್ ಸೋಂಕಿನಿಂದ ಗುಣಮುಖ

- ಕಳೆದ 24 ಗಂಟೆಯಲ್ಲಿ 513 ಮಂದಿಗೆ ಕೋವಿಡ್ ಪರೀಕ್ಷೆ

- ಸರ್ಕಾರಿ ಆಸ್ಪತ್ರೆಯಲ್ಲಿ 3 ಕೋವಿಡ್ ಸೋಂಕಿತರಿಗೆ ಚಿಕಿತ್ಸೆ

- ಖಾಸಗಿ ಆಸ್ಪತ್ರೆಯಲ್ಲಿ 6 ಕೋವಿಡ್ ಸೋಂಕಿತರಿಗೆ ಚಿಕಿತ್ಸೆ

- ರಾಜ್ಯದಲ್ಲಿ 33 ಕೋವಿಡ್ ಸೋಂಕಿತರು ಹೋಮ್ ಐಸೋಲೇಶನ್

- ಕಳೆದ 24 ಗಂಟೆಯಲ್ಲಿ ಕೋವಿಡ್ ಪಾಸಿಟಿವ್ ದರ 8.18%

ಬೆಂಗಳೂರು ಕೋವಿಡ್ ಸೋಂಕಿಗೆ ಹಾಟ್​ಸ್ಪಾಟ್

ರಾಜ್ಯದಲ್ಲಿ ಕೊರೊನಾ ಸೋಂಕಿನ ಒಮಿಕ್ರಾನ್‌ ರೂಪಾಂತರದ ಜೆಎನ್ 1 ಆತಂಕ ಶುರುವಾಗಿದೆ. ಇದರಿಂದ ರಾಜ್ಯ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಅದರಲ್ಲೂ ಕೋವಿಡ್ ಸೋಂಕಿಗೆ ರಾಜಧಾನಿ ಬೆಂಗಳೂರು ಹಾಟ್​​ಸ್ಪಾಟ್ ಆಗುತ್ತಿರುವುದು ಆತಂಕ ಮೂಡಿಸಿದೆ. ರಾಜ್ಯದಲ್ಲಿ ದಾಖಲಾಗುವ ಒಟ್ಟು ಕೋವಿಡ್ ಪ್ರಕರಣಗಳಲ್ಲಿ ಶೇ.75 ಕ್ಕಿಂತ ಹಚ್ಚು ಬೆಂಗಳೂರಿನಲ್ಲಿಯೇ ಪತ್ತೆಯಾಗಿವೆ.

ಬೆಂಗಳೂರಿನಲ್ಲಿಯೇ ಸಕ್ರಿಯ ಪ್ರಕಣಗಳು ಹೆಚ್ಚು

ಇನ್ನು ಸಕ್ರಿಯ ಪ್ರಕಣಗಳು ಹೆಚ್ಚು ಬೆಂಗಳೂರಿನಲ್ಲಿಯೇ ದಾಖಲಾಗುತ್ತಿವೆ. ಕಳೆದ 20 ದಿನಗಳಲ್ಲಿ ರಾಜ್ಯದಲ್ಲಿ 171ಕ್ಕಿಂತ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ. ಪ್ರತಿ ದಿನ 36ಕ್ಕೂ ಹೆಚ್ಚು ಹೊಸ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಈ ಪೈಕಿ ಬೆಂಗಳೂರಿನಲ್ಲಿ 25ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ.

NHM ವೈದ್ಯರಿಗೆ, ನರ್ಸ್​ಗಳ ವೇತನ ಹೆಚ್ಚಳ

ಆರೋಗ್ಯ ಇಲಾಖೆ NHM ವೈದ್ಯರಿಗೆ, ನರ್ಸ್​ಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. NHM ಅಡಿಯಲ್ಲಿ ನೇಮಕವಾಗುವ ಗುತ್ತಿಗೆ ವೈದ್ಯರ ವೇತನವನ್ನ ಹೆಚ್ಚಿಸಿ ಆದೇಶ ಹೊರಡಿಸಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ತಮ್ಮ ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕರ್ತವ್ಯ ನಿರ್ವಹಿಸುವ ತಜ್ಞ ವೈದ್ಯರು, ಎಂಬಿಬಿಎಸ್ ವೈದ್ಯರು ಹಾಗೂ ಸ್ಟಾಫ್ ನರ್ಸ್​ಗಳ ವೇತನ ಪರಿಷ್ಕರಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಶೇ.25 ರಿಂದ 50 ರಷ್ಟು ವೇತನ ಹೆಚ್ಚಳ

ಸಾರ್ವಜನಿಕರಿಗೆ ಸಮರ್ಪಕ ಆರೋಗ್ಯ ಸೇವೆ ಒದಗಿಸುವಲ್ಲಿ ತಜ್ಞ ವೈದ್ಯರ ಸೇವೆ ಮುಖ್ಯವಾದದ್ದು. ಈ ನಿಟ್ಟಿನಲ್ಲಿ ನಮ್ಮ ಆರೋಗ್ಯ ಇಲಾಖೆಯಿಂದ ಮಹತ್ವದ ನಿರ್ಧಾರ ಕೈಗೊಂಡಿದ್ದು, NHM ಅಡಿಯಲ್ಲಿ ನೇಮಕವಾಗುವ ಗುತ್ತಿಗೆ ವೈದ್ಯರ ವೇತನವನ್ನ ಹೆಚ್ಚಿಸಿ ಆದೇಶಿಸಲಾಗಿದೆ. ಕೇಂದ್ರದ ಅನುಮತಿ ಪಡೆದು ಶೇ.25 ರಿಂದ 50 ರಷ್ಟು ವೇತನ ಹೆಚ್ಚಳ ಮಾಡಿದ್ದು, 45 ಸಾವಿರ ಇದ್ದ MBBS ವೈದ್ಯರ ವೇತನವನ್ನು 75 ಸಾವಿರಕ್ಕೆ ಪರಿಷ್ಕರಿಸಲಾಗಿದೆ. ಪ್ರಸ್ತುತ 1,10000 ಪಡೆಯುತ್ತಿದ್ದ ತಜ್ಞ ವೈದ್ಯರ ವೇತನವನ್ನು 1,40000ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೇ ನರ್ಸ್​ಗಳ ವೇತನ 18 ರಿಂದ 22 ಸಾವಿರಕ್ಕೆ ಹೆಚ್ಚಿಸಲಾಗಿದೆ.

ಖಾಲಿ ಇರುವ ಅನೇಕ ಹುದ್ದೆ ಭರ್ತಿ

ವೇತನದಲ್ಲಿನ ಭಾರಿ ಹೆಚ್ಚಳದಿಂದಾಗಿ ನಾವು ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಅನೇಕ ಹುದ್ದೆಗಳನ್ನು ಭರ್ತಿ ಮಾಡಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರು ಹಾಗೂ ತಜ್ಞ ವೈದ್ಯರುಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ಮುಂದೆಬರಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದುಆರೋಗ್ಯ ಸಚಿವ ದಿನೇಶ್​ ಗುಂಡೂರಾವ್ ಹೇಳಿದ್ದಾರೆ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Covid Death Toll In Karnataka Rises To 2; 70 Year Elderly Man Dies In Belagavi

Covid Death Toll In Karnataka Rises To 2; 70 Year Elderly Man Dies In Belagavi
Story first published: Friday, May 30, 2025, 9:10 [IST]
X
Desktop Bottom Promotion