COVID-19: ರಾಜ್ಯದಲ್ಲಿ ಶತಕ ಬಾರಿಸಿದ ಕೊರೊನಾ! ನಿನ್ನೆ 381 ಮಂದಿಗೆ ಕೋವಿಡ್ ಪರೀಕ್ಷೆ.. 36 ಹೊಸ ಪ್ರಕರಣ ಪತ್ತೆ

ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಶತಕ ತಲುಪಿದೆ. ನಿನ್ನೆ 36 ಜನರಿಗೆ ಕೋವಿಡ್ (Covid-19) ಪಾಸಿಟಿವ್‌ ದೃಢಪಡುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 100ಕ್ಕೆ ಏರಿಕೆಯಾಗಿದೆ. ರಾಜ್ಯ ಆರೋಗ್ಯ ಇಲಾಖೆ ಕೋವಿಡ್ ಬುಲೆಟಿನ್ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಆರ್‌ಟಿಪಿಸಿಆ‌ರ್ ಮೂಲಕ 361, ರಾಟ್ ಮೂಲಕ 20 ಜನರು ಸೇರಿದಂತೆ 381 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ 36 ಜನರಿಗೆ ಕೊರೊನಾ ಸೋಂಕು (corona cases) ದೃಢಪಟ್ಟಿದೆ. ಹೀಗಾಗಿ, ಸೋಂಕಿತರ ಸಂಖ್ಯೆ 100ಕ್ಕೆ ಏರಿಕೆಯಾಗಿದೆ.

ಮಹಾಮಾರಿ ಕೊರೊನಾ ವೈರಸ್ ಮತ್ತೆ ರಾಜ್ಯಕ್ಕೆ ವಕ್ಕರಿಸಲು ಪ್ರಾರಂಭಿಸಿದೆ. ಈಗಾಗಲೇ ಲಕ್ಷಾಂತರ ಮಂದಿಯ ಜೀವ ಕಸಿದಿರುವ ಕೋವಿಡ್ 19 ಹೊಸ ರೂಪಾಂತರದೊಂದಿಗೆ ಭಯ ಹುಟ್ಟಿಸಿದೆ. ಕೊರೊನಾ ಹೋಯ್ತು ಎಂದು ನಿಟ್ಟುಸಿರು ಬಿಡುವಾಗಲೇ, ರಾಜ್ಯದಲ್ಲಿ 100ರ ಗಡಿ ದಾಟುವ ಮೂಲಕ ಭೀತಿ ಹುಟ್ಟಿಸಿದೆ. ಈ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಆದರೂ, ಚೀನಾದ ಈ ಸೋಂಕು ಆಮೆಗತಿಯಲ್ಲಿ ಹೆಚ್ಚಾಗುತ್ತಿದೆ.

Covid-19 cases in Karnataka

ರಾಜ್ಯದಲ್ಲಿ ಸಕ್ರಿಯ ಕೇಸ್​ಗಳ ಸಂಖ್ಯೆ 100ಕ್ಕೆ ಏರಿಕೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊವಿಡ್-19 ಸೋಂಕು ಕಂಡುಬಂದಿದ್ದು, ಜನರನ್ನ ಆತಂಕಕ್ಕೆ ತಳ್ಳಿದೆ. ​ಕೊರೊನಾ ವೈರಸ್ ಸೈಲೆಂಟ್​ ಆಗಿಯೇ ಮತ್ತೆ ರಾಜ್ಯದಲ್ಲಿ ತನ್ನ ಅಧಿಪತ್ಯ ಸಾಧಿಸುತ್ತಿದೆ. ನಿನ್ನೆ ಬೆಳಗ್ಗೆವರೆಗೂ ಒಟ್ಟು 47 ಮಂದಿಯಲ್ಲಿ ಕೋವಿಡ್ ಸೋಂಕು ದೃಢವಾಗಿತ್ತು. ಸಂಜೆಯೊಳಗೆ ಮತ್ತಷ್ಟು ಪ್ರಕರಣಗಳು ಪತ್ತೆಯಾಗಿವೆ.

ರಾಜ್ಯದಲ್ಲಿ ಕೊರೊನಾ ಸಕ್ರೀಯ ಕೇಸ್​ಗಳು 100ಕ್ಕೆ ಏರಿಕೆಯಾಗಿ ಶತಕ ಸಿಡಿಸಿದೆ. ಕಳೆದ 24 ಗಂಟೆಯಲ್ಲಿ ಸುಮಾರು 36 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿದೆ. ಅದೇ ಕಳೆದ 24 ಗಂಟೆಯಲ್ಲಿ 16 ಜನ ಕೊರೊನಾದಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇನ್ನೂ ಕಳೆದ 24 ಗಂಟೆಯಲ್ಲಿ 381 ಮಂದಿಯನ್ನು ಕೊರೊನಾ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದೆ.

ಪಾಸಿಟಿವ್ ರೇಟ್ ಶೇ. 9.44%

ಕೊರೊನಾ ಸೋಂಕಿನ ಪಾಸಿಟಿವ್ ರೇಟ್ ಶೇ. 9.44% ಇದೆ. ಮೊನ್ನೆಗೆ ಹೋಲಿಕೆ ಮಾಡಿದರೆ ಮಂಗಳವಾರ ಸ್ವಲ್ಪ ಇಳಿಕೆಯಾಗಿದೆ. ಮೊನ್ನೆ ಕೊರೊನಾ ಪಾಸಿಟಿವಿಟಿ ರೇಟ್ 19.37% ಇತ್ತು. ಇನ್ನೂ 100 ಕೇಸ್‌ಗಳ ಪೈಕಿ 96 ಮಂದಿ ಹೋಮ್ ಐಸೋಲೇಷನ್‌ನಲ್ಲಿದ್ದಾರೆ. ನಾಲ್ಕು ಸೋಂಕಿತರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯ ಮಾತ್ರವಲ್ಲದೆ, ದೇಶದಲ್ಲಿಯೂ ಕೋವಿಡ್ ಸಂಖ್ಯೆ ಸಾವಿರ ಗಡಿ ದಾಟಿದೆ. ಕೇರಳ, ಮಹಾರಾಷ್ಟ್ರ, ದೆಹಲಿ ಮತ್ತು ಗುಜರಾತ್​ನಲ್ಲೂ ಕೊರನಾ ಸೋಂಕು ಹೆಚ್ಚಳವಾಗಿದೆ.

ಆರೋಗ್ಯ ಇಲಾಖೆ ಸಿಬ್ಬಂದಿ ರಜೆ ರದ್ದು

ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಈ ಬೆನ್ನಲ್ಲೇ, ಆರೋಗ್ಯ ಇಲಾಖೆ ಸಿಬ್ಬಂದಿ ರಜಾ ಹಾಕಿ ತೆರಳದೆ ಕೇಂದ್ರ ಸ್ಥಾನದಲ್ಲಿಯೇ ಇದ್ದು ಕಾರ್ಯ ನಿರ್ವಹಿಸಲು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಸೂಚನೆ ನೀಡಿದ್ದಾರೆ. ಕೋವಿಡ್ ನಿಯಂತ್ರಣ ಸಂಬಂಧ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಕೋವಿಡ್ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಸಿಎಂ ನಿರ್ದೇಶನ ನೀಡಿದ್ದಾರೆ.

ಬೆಂಗಳೂರಿನ ಆಸ್ಪತ್ರೆಗಳಿಗೆ ಮಹತ್ವದ ಸೂಚನೆ

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಲರ್ಟ್ ಆಗಿದೆ. ಬೆಂಗಳೂರಿನ ಆಸ್ಪತ್ರೆಗಳಲ್ಲಿ ಕೋವಿಡ್ ಬೆಡ್ ಮೀಸಲಿಡಲು ಸೂಚನೆ ನೀಡಿದೆ. ಈವರೆಗೂ ದೇಶಾದ್ಯಂತ ಒಂದು ಸಾವಿರಕ್ಕೂ ಹೆಚ್ಚು ರೂಪಾಂತರ ಹೊಸ ಕೊರೊನಾ ತಳಿ ಪ್ರಕರಣಗಳು ಪತ್ತೆ ಆಗಿವೆ. ರಾಜ್ಯದಲ್ಲಿ ಒಟ್ಟು 100 ಜನರಿಗೆ ಕೋವಿಡ್ ಸೋಂಕು ದೃಢವಾಗಿದೆ. ಬೆಂಗಳೂರಿನಲ್ಲೇ 73 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕೆ.ಸಿ‌ ಜನರಲ್ ಆಸ್ಪತ್ರೆಗೆ ಆರೋಗ್ಯ ಸಚಿವರ ಭೇಟಿ

ರಾಜ್ಯದಲ್ಲಿ ಹರಡುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆ ಇಂದು ಮಲ್ಲೇಶ್ವರಂ ಬಳಿಯಿರುವ ಕೆ.ಸಿ‌ ಜನರಲ್ ಆಸ್ಪತ್ರೆಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆಕ್ಸಿಜನ್ ಸಿಲಿಂಡರ್, ತುರ್ತು ಐಸಿಯು ಬೆಡ್ ವ್ಯವಸ್ಥೆ, ತುರ್ತು ಚಿಕಿತ್ಸಾ ಘಟಕ, ವೆಂಟಿಲೆಟರ್, ಸ್ಯಾನಿಟೈಸರ್, ಮಾಸ್ಕ್ ಸೇರಿದಂತೆ ಕೋವಿಡ್ ಸಂಬಂಧಿಸಿದ ಉಪಕರಣಗಳು ಹಾಗೂ ಅವುಗಳ ಗುಣಮಟ್ಟವನ್ನು ಖುದ್ದಾಗಿ ಪರಿಶೀಲನೆ ನಡೆಸಿದ್ದಾರೆ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Covid-19 Active cases in Karnataka cross 100 mark; 36 fresh cases on Tuesday

Covid-19 Active cases in Karnataka cross 100 mark; 36 fresh cases on Tuesday.
Story first published: Wednesday, May 28, 2025, 10:49 [IST]
X
Desktop Bottom Promotion