ತ್ವಚೆಯ ಸಮಸ್ಯೆ ನಿವಾರಣೆಗೆ ಆಯುರ್ವೇದ ಚಿಕಿತ್ಸೆ

ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯಲ್ಲಿ ಚರ್ಮದ ಕುರಿತಾದ ಯಾವುದಾದರೊಂದು ತೊಂದರೆಯನ್ನು ಅನುಭವಿಸಿಯೇ ಇರುತ್ತಾರೆ. ವಿಶೇಷವಾಗಿ ಹದಿಯರೆಯಲ್ಲಿ ಕಾಡುವ ಮೊಡವೆ ಸಮಸ್ಯೆ. ಸೌಂದರ್ಯ ಮತ್ತು ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ನಮಗೆ ಸುಲಭವಾಗಿ ನೆನಪಿಗೆ ಬರುವುದು ಸೌಂದರ್ಯ ಪ್ರಸಾದನಗಳ ಜಾಹೀರಾತುಗಳು. ಈ ಪ್ರಸಾದನಗಳಲ್ಲಿ ಅಗತ್ಯವಾದ ಕೆಲವು ರಾಸಾಯನಿಕಗಳಿದ್ದರೂ ದೇಹಕ್ಕೆ ಅಲರ್ಜಿಯಾಗಬಲ್ಲ ಕೆಲವು ರಾಸಾಯನಿಕಗಳೂ ಇರಬಹುದು. ವಾಸ್ತವವಾಗಿ ಎಲ್ಲರ ಚರ್ಮ ಒಂದೇ ತರಹ ಇರುವುದಿಲ್ಲ. ಹಾಗಾಗಿ ಮಾರುಕಟ್ಟೆಯಲ್ಲಿ ದೊರಕುವ ಸೌಂದರ್ಯ ಪ್ರಸಾದನಗಳು ಎಲ್ಲರಿಗೂ ಏಕಪ್ರಕಾರವಾಗಿ ಪರಿಣಾಮಗಳನ್ನು ನೀಡುತ್ತದೆ ಎಂದು ಖಡಾಖಂಡಿತವಾಗಿ ಹೇಳಲಾಗದು.

ಪರಿಸ್ಥಿತಿ ಹೀಗಿದ್ದಾಗ ಜಾಹೀರಾತಿನಲ್ಲಿ ಬಂದಿರುವ ಉತ್ಪನ್ನವನ್ನು ಯಾವುದೇ ಮುನ್ನೆಚ್ಚರಿಕೆ ಕೈಗೊಳ್ಳದೇ ಉಪಯೋಗಿಸುವುದು ಹೇಗೆ? ಹೇರ್ ಡೈ ಮೊದಲಾದ ಉತ್ಪನ್ನಗಳಲ್ಲಿ ದೇಹದ ಬೇರೆ ಭಾಗದ ಚರ್ಮಕ್ಕೆ ಹಚ್ಚಿ ಅಲರ್ಜಿಯಾಗುತ್ತದೆಯೋ ನೋಡಿಕೊಳ್ಳಿ ಎಂದು ಒಂದು ಸೂಚನೆಯನ್ನು ನೀಡಲಾಗಿರುತ್ತದೆ. ಇದರ ಹೊರತಾಗಿ ಮೀಸೆಗೆ ಹಚ್ಚಿಕೊಂಡು ಬೊಬ್ಬೆಗಳು ಬಂದರೆ ಏನೂ ಮಾಡಲು ಸಾಧ್ಯವಿಲ್ಲ. ದೂರು ಕೊಟ್ಟರೆ ನಿರ್ಮಾಣ ಸಂಸ್ಥೆ 'ಹೀಗಾಗಬಹುದು ಎಂದು ಮೊದಲೇ ಹೇಳಿದ್ದೇವೆಲ್ಲಾ?' ಎಂದೇ ಉತ್ತರಿಸುತ್ತವೆ.

ಆದರೆ ಮೊಡವೆಗೆ, ಗೌರವರ್ಣ ತರುವ ಇರುವ ಕ್ರೀಂ ಮೊದಲಾದವುಗಳಲ್ಲೆಲ್ಲಾ ಇಂತಹ ಎಚ್ಚರಿಕೆಗಳೇ ಇಲ್ಲ. ಅಷ್ಟಕ್ಕೂ ಇವು ಏಕೆ ಎಚ್ಚರಿಕೆ ನೀಡುವುದಿಲ್ಲ ಎಂದರೆ ಅಲರ್ಜಿಕಾರಕ ರಾಸಾಯನಿಕಗಳು ಅತ್ಯಲ್ಪ ಪ್ರಮಾಣದಲ್ಲಿದ್ದು ಇವುಗಳ ಪರಿಣಾಮ ನೋಡಲು ಕೆಲ ವರ್ಷಗಳೇ ಬೇಕಾಗಬಹುದು. ಅಷ್ಟರಲ್ಲಿ ಈ ಕ್ರೀಮಿನ ಬಳಕೆ ಮುಗಿದು ನಿಮ್ಮಲ್ಲಿ ದಾವೆ ಹೂಡಲು ಯಾವುದೇ ಸಾಕ್ಷಿ ಉಳಿದಿರುವುದಿಲ್ಲ. ಒಂದು ವೇಳೆ ದಾವೆ ಹೂಡಿದರೂ ಈ ಕ್ರೀಂ ತಯಾರಿಸಿದ ಸಂಸ್ಥೆ ಹಿಂದೆಂದೋ ನೀವು ಬಳಸಿದ್ದ ಬೇರಾವುದೋ ಉತ್ಪನ್ನದಿಂದ ಹೀಗಾಗಿದೆ ಎಂದು ಜಾರಿಕೊಳ್ಳುತ್ತದೆ.

ಇನ್ನೂ ದೊಡ್ಡ ತೊಂದರೆ ಎಂದರೆ ಕಠಿಣ ರಾಸಾಯನ ಮತ್ತು ಸ್ಟೆರಾಯ್ಡುಗಳನ್ನು ಬಳಿಸಲಾಗಿರುವ ಈ ಉತ್ಪನ್ನಗಳ ಬಳಕೆಯಿಂದ ಕೊಂಚ ಶಮನ ಕಂಡುಬಂದರೂ ಕೆಲ ತಿಂಗಳ ಬಳಿಕ ಈ ತೊಂದರೆ ಮತ್ತೆ ಕಾಣಿಸಿಕೊಳ್ಳಬಹುದು, ನೀವು ಮತ್ತೊಮ್ಮೆ ಇದೇ ಕ್ರೀಂಗಳನ್ನು ಬಳಸಬೇಕಾಗುತ್ತದೆ, ಈ ಉತ್ಪನ್ನದವರು ಬಯಸಿದ್ದೇ ಇದನ್ನು! ಇದನ್ನು ತಪ್ಪಿಸಿಕೊಳ್ಳಲು ಆಯುರ್ವೇದ ಕೆಲವು ನೈಸರ್ಗಿಕ ಚಿಕಿತ್ಸೆಗಳನ್ನು ಸೂಚಿಸಿದೆ. ಇದು ಫಲಪ್ರದವಾದರೂ ಇದರ ಪರಿಣಾಮಗಳನ್ನು ಅರಿಯಲು ಕೆಲವು ತಿಂಗಳುಗಳೇ ಬೇಕಾದುದರಿಂದ ಕೊಂಚ ತಾಳ್ಮೆ ಅಗತ್ಯ. ಈ ಬಗ್ಗೆ ಕೆಲವು ವಿವರಗಳನ್ನು ನೋಡೋಣ:

ಸಾಕಷ್ಟು ಹಸಿರು ತರಕಾರಿಗಳನ್ನು ತಿನ್ನಿರಿ

ಸಾಕಷ್ಟು ಹಸಿರು ತರಕಾರಿಗಳನ್ನು ತಿನ್ನಿರಿ

ತರಕಾರಿಗಳಲ್ಲಿ ಹೆಚ್ಚಿನ ನಾರು, ಆಂಟಿ ಆಕ್ಸಿಡೆಂಟುಗಳು, ಪೋಷಕಾಂಶಗಳು ಮತ್ತು ಮುಖ್ಯವಾಗಿ ನೀರಿನ ಅಂಶವಿದೆ. ನಿಮ್ಮ ಆಹಾರದಲ್ಲಿ ಸಾಕಷ್ಟು ತರಕಾರಿಗಳಿರುವಂತೆ ನೋಡಿಕೊಳ್ಳುವುದು ಮುಖ್ಯವಾದ ಚಿಕಿತ್ಸೆಯಾಗಿದೆ. ಸಾಧ್ಯವಿದ್ದಲ್ಲಿ ಹಸಿಯಾಗಿಯೇ ಸೇವಿಸಬಹುದಾದ ತರಕಾರಿಗಳನ್ನು ಮದ್ಯಾಹ್ನದ ಮತ್ತು ರಾತ್ರಿಯೂಟದಲ್ಲಿ ಸೇರಿಸಿಕೊಳ್ಳಿ. ಕ್ಯಾರೆಟ್, ಸೌತೆ, ಮೂಲಂಗಿ, ಮೊದಲಾದ ತರಕಾರಿಗಳು ಚರ್ಮಕ್ಕೆ ಉತ್ತಮ ಪೋಷಣೆ ನೀಡುತ್ತವೆ. ದೊಡ್ಡ ಜೀರಿಗೆ (ಸೌಂಫ್) ಸಹಾ ಚರ್ಮದ ಆರೈಕೆಗೆ ಉತ್ತಮ. ಊಟದ ಬಳಿಕ ಸ್ವಲ್ಪ ಪ್ರಮಾಣವನ್ನು ಜಗಿಯುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುವುದರ ಜೊತೆಗೇ ಚರ್ಮದ ಆರೈಕೆಯನ್ನೂ ಮಾಡುತ್ತದೆ. ತರಕಾರಿಗಳ ಜೊತೆಗೆ ಹಣ್ಣುಗಳ ಸೇವನೆಯೂ ಉತ್ತಮ.

ವಿವಿಧ ಒಣಫಲ ಮತ್ತು ಬೀಜಗಳನ್ನು ಸೇವಿಸಿರಿ

ವಿವಿಧ ಒಣಫಲ ಮತ್ತು ಬೀಜಗಳನ್ನು ಸೇವಿಸಿರಿ

ಚರ್ಮದ ಆರೈಕೆಗೆ ಆಯುರ್ವೇದ ಸೂಚಿಸುವ ಇನ್ನೊಂದು ಆಹಾರವೆಂದರೆ ಒಣಫಲ ಮತ್ತು ಒಣಗಿಸಿದ ಹಣ್ಣುಗಳ ಬೀಜಗಳು. ಇದರಲ್ಲಿ ಪ್ರಮುಖವಾಗಿ ಒಮೆಗಾ-3 ಕೊಬ್ಬಿನ ತೈಲ ಎಂಬ ಅಂಶವಿದ್ದು ಚರ್ಮದ ಆರೈಕೆಗೆ ಉತ್ತಮವಾದ ಪೋಷಕಾಂಶವಾಗಿದೆ. ಬಾದಾಮಿ, ಸೂರ್ಯಕಾಂತಿ ಬೀಜಗಳು, ಅಗಸೆ ಬೀಜ, ಕುಂಬಳಕಾಯಿಯ ಬೀಜ, ಅಕ್ರೋಟು ಮೊದಲಾದವು ಚರ್ಮದ ಆರೈಕೆಗೆ ಉತ್ತಮವಾಗಿವೆ.

ಹರ್ಬಲ್ ಟೀ ಕುಡಿಯಿರಿ

ಹರ್ಬಲ್ ಟೀ ಕುಡಿಯಿರಿ

ಇಂದು ಹರ್ಬಲ್ ಟೀ ಎಂದು ವಿವಿಧ ಗಿಡಮೂಲಿಕೆಗಳನ್ನು ಟೀ ಪುಡಿಯಲ್ಲಿ ಸೇರಿಸಿರುವ ಉತ್ಪನ್ನಗಳು ಮಾರುಕಟ್ಟೆಯಲ್ಲಿ ದೊರಕುತ್ತವೆ. ಹಾಲಿಲ್ಲದ ಈ ಟೀ ಚರ್ಮಕ್ಕೆ ಉತ್ತಮವಾಗಿದೆ. ರುಚಿಗಾಗಿ ಕೊಂಚ ಲಿಂಬೆ ಅಥವಾ ಶುಂಠಿಯನ್ನು ಸಹಾ ಸೇರಿಸಬಹುದು. ಇದರ ನಿಯಮಿತ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುವುದು ಮಾತ್ರವಲ್ಲದೇ ನೀರಿನಂಶವನ್ನು ಚರ್ಮದ ಜೀವಕೋಶಗಳು ಹೀರಿಕೊಳ್ಳಲು ಸಹಕರಿಸಿ ಚರ್ಮದ ಸೆಳೆತವನ್ನು ಹೆಚ್ಚಿಸುವ ಮೂಲಕ ಸಹಜ ಕಾಂತಿಯನ್ನು ಪಡೆಯಲು ಸಾಧ್ಯವಾಗುತ್ತದೆ.

ದೀರ್ಘ ಉಸಿರಾಟದ ವ್ಯಾಯಾಮವನ್ನು ಮಾಡಿ

ದೀರ್ಘ ಉಸಿರಾಟದ ವ್ಯಾಯಾಮವನ್ನು ಮಾಡಿ

ಚರ್ಮದ ಆರೋಗ್ಯಕ್ಕೆ ಮಾನಸಿಕ ಒತ್ತಡವೂ ಕಾರಣ ಎಂಬುದನ್ನು ಈಗ ಕಂಡುಕೊಳ್ಳಲಾಗಿದೆ. ಆಯುರ್ವೇದ ಸೂಚಿಸುವ ವಿವಿಧ ಉಸಿರಾಟದ ವ್ಯಾಯಾಮಗಳು ಆರೋಗ್ಯಕ್ಕೆ ಉತ್ತಮವಾಗಿವೆ. ದಿನಕ್ಕೆ ಕೇವಲ ಹತ್ತು ನಿಮಿಷಗಳ ಪ್ರಾಣಾಯಾಮ ಅಥವಾ ಪೂರ್ಣ ಪ್ರಮಾಣದ ಉಸಿರಾಟವನ್ನು ಎಳೆದುಕೊಂಡು ಪೂರ್ಣಪ್ರಮಾಣದಲ್ಲಿ ಹೊರಬಿಡುವ ಸುಲಭ ವಿಧಾನದ ಮೂಲಕ ಚರ್ಮಕ್ಕೆ ಉತ್ತಮ ಆರೈಕೆಯನ್ನು ನೀಡಬಹುದು. ಇದು ನಿಮಗೆ ಹೊಸ ಚೈತನ್ಯವನ್ನೂ ಹೆಚ್ಚಿನ ಶಕ್ತಿಯನ್ನೂ ಹುರುಪನ್ನೂ ನೀಡುತ್ತದೆ.

ಸಾಕಷ್ಟು ಪ್ರಮಾಣದ ನಿದ್ದೆ ಅಗತ್ಯ

ಸಾಕಷ್ಟು ಪ್ರಮಾಣದ ನಿದ್ದೆ ಅಗತ್ಯ

ಪ್ರತಿದಿನ ಸಾಮಾನ್ಯವಾಗಿ ಎಂಟು ಘಂಟೆಗಳ ನಿದ್ದೆ ಅಗತ್ಯವಿದ್ದರೂ ಕನಿಷ್ಟ ಏಳು ಘಂಟೆಗಳ ಅನವರತ ನಿದ್ದೆ ಅಗತ್ಯವಾಗಿದೆ. ಈ ನಿದ್ದೆ ನಿಮಗೆ ಅಗತ್ಯವಾದ ವಿಶ್ರಾಂತಿ ನೀಡಿ ಎಲ್ಲಾ ಒತ್ತಡಗಳಿಂದ ಹೊರಬರಲು ನೆರವಾಗುತ್ತದೆ. ಕಣ್ಣುಗಳು ಹೊಳೆಯುತ್ತವೆ. ಚರ್ಮದ ಕಾಂತಿಯೂ ಹೆಚ್ಚುತ್ತದೆ. ಎದ್ದ ಬಳಿಕ ಸ್ನಾನ ಮತ್ತು ವ್ಯಾಯಾಮ, ಸೂರ್ಯನಮಸ್ಕಾರ ಮೊದಲಾದವು ಚರ್ಮದ ಕಾಂತಿಯನ್ನು ಹೆಚ್ಚಿಸಲು ನೆರವಾಗುತ್ತವೆ.

Story first published: Tuesday, June 16, 2015, 23:00 [IST]
X
Desktop Bottom Promotion