ಹಿಂದೂ ಮದುವೆಯಲ್ಲಿ ಸಪ್ತಪದಿ ತುಳಿಯದಿದ್ದರೆ ಅದು ಮದುವೆಯೇ ಅಲ್ಲ ಎಂದ ಕೋರ್ಟ್: ಸಪ್ತಪದಿಯ ಮಹತ್ವವೇನು?

ಹಿಂದೂ ಮದುವೆಯಲ್ಲಿ ಸಪ್ತಪದಿ ತುಳಿಯುವುದು ಒಂದು ಸಂಪ್ರದಾಯ. ಮದುವೆಯಲ್ಲಿ ನವ ವಧು-ವರ ಸಪ್ತಪದಿ ತುಳಿಯುವುದರ ಹಿಂದೆ ವೈವಾಹಿಕ ಬದುಕಿನ ಅರ್ಥ ಇದೆ. ಈ ಆಚರಣೆಯು ಮುಂದೆ ವೈವಾಹಿಕ ಬದುಕನ್ನು ಹೇಗೆ ನಡೆಸಬೇಕು ಎಂಬುವುದರ ಬಗ್ಗೆ ಹೇಳುತ್ತದೆ. ಇದಿಗ ಅಲಹಾಬಾದ್‌ ಕೈಕೋರ್ಟ್ ಸಪ್ತಪದಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿದೆ.

ಸಪ್ತಪದಿ ತುಳಿಯದಿದ್ದರೆ ಹಿಂದೂ ಮದುವೆ ಮಾನ್ಯವಾಗುವುದಿಲ್ಲ ಎಂದು ಹೇಳಿದೆ. 1955ರ ಹಿಂದೂ ಮದುವೆ ಕಾಯ್ದೆ ಪ್ರಕಾರ ಸಪ್ತಪದಿ ತುಳಿಯದೆ ಮದುವೆಯಾದರೆ ಅದನ್ನು ಮದುವೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

Saptapadi

ಪ್ರಕರಣವೇನು?

ಸತ್ಯಂ ಸಿಂಗ್ ಎಂಬುವವರು ನನ್ನ ಪತ್ನಿ ಸ್ಮಿತಿ ಸಿಂಗ್ ನನಗೆ ವಿಚ್ಛೇದನ ನೀಡದೆ ಎರಡನೇ ಮದುವೆಯನ್ನು ಶಾಸ್ತ್ರೋಕ್ತವಾಗಿ ಆಗಿದ್ದಾಳೆ, ಅವಳಿಗೆ ಶಿಕ್ಷೆ ನೀಡಬೇಕು ಎಂದು ಹೇಳಿ ದೂರು ನೀಡಿದ್ದ. ಇದನ್ನು ಪ್ರಶ್ನಿಸಿ ಸ್ಮಿತಿ ಸಿಂಗ್ ಮರು ಅರ್ಜಿ ಸಲ್ಲಿಸಿದ್ದಳು. ಸತ್ಯಂ ಸಿಂಗ್ ಆಕೆ ಸಪ್ತಪದಿ ತುಳಿದು ಮದುವೆಯಾಗಿದ್ದಾಳೆ ಎಂಬುವುದರ ಬಗ್ಗೆ ಯಾವುದೇ ಸಾಕ್ಷ್ಯ ಒದಗಿಸಿರಲಿಲ್ಲ. ಈ ದೂರಿನ ವಿಚಾರಣೆ ನಡೆಸಿದ ನ್ಯಾಯಾಧೀಶರು ಸಪ್ತಪದಿ ತುಳಿಯದಿದ್ದರೆ ಅದನ್ನು ಮದುವೆಯೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಹಿಂದೂ ಮದುವೆ ಸಪ್ತಪದಿ ತುಳಿದು ಮದುವೆಯಾದರೆ ಮಾತ್ರ ಅದನ್ನು ಮದುವೆಯೆಂದು ಪರಿಗಣಿಸಲಾಗುವುದು, ಇಲ್ಲದಿದ್ದರೆ ಅದು ಮದುವೆಯಾಗುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಸತ್ಯಂ ಸಿಂಗ್‌ಗೆ ಸ್ಮೃತಿ ಸಿಂಗ್ ಜೊತೆಗೆ 2017ರಲ್ಲಿ ಮದುವೆಯಾಗಿತ್ತು. ಆದರೆ ಅವರಿಬ್ಬರ ನಡುವೆ ಹೊಂದಾಣಿಕೆಯಿಲ್ಲದ ಕಾರಣ ಅತ್ತೆ ಮನೆ ಬಿಟ್ಟು ಹೊರ ಬಂದು, ಗಂಡ ಹಾಗೂ ಅತ್ತೆ ವಿರುದ್ಧ ವರದಕ್ಷಿಣೆ ಕೇಸ್ ನೀಡಿದ್ದಳು. ಅಲ್ಲದೆ ತಿಂಗಳ ಖರ್ಚು ಗಂಡ ಭರಿಸಬೇಕೆಂದು ಕೋರಿ ಅರ್ಜಿ ನೀಡಿದ್ದಳು. ಈ ಕೋರ್ಟ್‌ನ ವಿಚಾರಣೆ ಮಾಡಿ ಮಿರ್ಝಾಪುರದ ಕುಟುಂಬ ನ್ಯಾಯಾಲಯ 2021, ಜನವರಿಯಲ್ಲಿ ಆಕೆಗೆ ಪ್ರತಿ ತಿಂಗಳು 4000 ಸಾವಿರ ರುಪಾಯಿ ಆಕೆಯ ಖರ್ಚಿಗೆ ನೀಡಬೇಕು, ಆಕೆ ಮರು ಮದುವೆಯಾಗುವವರೆಗೆ ಈ ಹಣವನ್ನು ನೀಡಬೇಕು ಎಂಬ ಆದೇಶವನ್ನು ನೀಡಿತು.

ಇದರಿಂದಾಗಿ ಸತ್ಯಂ ಸಿಂಗ್‌ಗೆ ಆಕೆಗೆ ನಾಲ್ಕು ಸಾವಿರ ನೀಡಬೇಕಾಗಿತ್ತು. ಹೀಗಾಗಿ ಸತ್ಯಂಸಿಂಗ್ ಸ್ಮೃತಿ ಸಿಂಗ್‌ಗೆ ಎರಡನೇ ಮದುವೆ ಶಾಸ್ತ್ರೋಕ್ತವಾಗಿ ಆಗಿದೆ, ಆಕೆ ವಿಚ್ಚೇದನ ಪಡೆಯುವ ಮೊದಲೇ ಮದುವೆಯಾಗಿದ್ದಾಳೆ ಎಂದು ದೂರನ್ನು ಸಲ್ಲಿಸಿದ್ದ. ಇದರ ವಿಚಾರಣೆಯಲ್ಲಿ ಆತ ಸ್ಮೃತಿಸಿಂಗ್ ಶಾಸ್ತ್ರೋಕ್ತವಾಗಿ ಮದುವೆಯಾಗಿರುವುದಕ್ಕೆ ಯಾವುದೇ ಸಾಕ್ಷಿ ಒದಗಿಸಿರಲಿಲ್ಲ. ಹೀಗಾಗಿ ಕೋರ್ಟ್ ಸಪ್ತಪದಿ ತುಳಿಯದೆ ಮದುವೆಯಾದರೆ ಅದನ್ನು ಮದುವೆಯೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಹಿಂದೂ ಮದುವೆಯಲ್ಲಿ ಸಪ್ತಪದಿಯ ಮಹತ್ವ
ಮದುವೆಯಾದ ಬಳಿಕ ವರ-ವಧು ಸಪ್ತಪದಿ ತುಳಿಯುವ ಸಂಪ್ರದಾಯದಲ್ಲಿ ಅಡಗಿದೆ ಈ ಮಹತ್ವದ ಸಂದೇಶ
* ಮೊದಲ ಹೆಜ್ಜೆ: ವಧು-ವರ ಪರಸ್ಪರ ನಿನ್ನೆಲ್ಲಾ ನೋವು- ನಲಿವು ನನ್ನದೂ ಆಗಿರುತ್ತದೆ ಎಂದು ಪ್ರತಿಜ್ಙೆಯನ್ನು ತೆಗೆದುಕೊಳ್ಳಲಾಗುವುದು. ಸಂಪತ್ತು,, ಆಹಾರ, ದೈಹಿಕ ಸುಖ, ಮಾನಸಿಕ ಸುಖ ಎಲ್ಲವನ್ನೂ ನೀಡುತ್ತೇನೆ ಎಂದು ಮಾಡುವ ಪ್ರತಿಜ್ಙೆಯಾಗಿದೆ.

ಎರಡನೇ ಹೆಜ್ಜೆ: ವರ ವಧುವಿಗೆ ನಿನ್ನ ನಂಬಿಕೆಗೆ ಅರ್ಹನಾಗಿ ನಿಷ್ಠಾವಂತನಾಗಿ ಇರುತ್ತೇನೆ, ಕುಟುಂಬದಲ್ಲಿ ಸಂಪತ್ತು, ಆಹಾರ, ದೈಹಿಕ, ಮಾನಸಿಕ ಸುಖ, ಆರ್ಥಿಕ ಸ್ಥಿರತೆಯನ್ನು ನೀಡುತ್ತೇನೆ ಎಂದು ಪ್ರತಿಜ್ಞೆ ಮಾಡಿದರೆ ನಿನ್ನೆಲ್ಲಾ ಜವಾಬ್ದಾರಿಯಲ್ಲಿ ನಾನು ನಿನ್ನ ಜೊತೆಯಾಗಿರುತ್ತೇನೆ ಎಂದು ವಧು ಪ್ರತಿಜ್ಞೆ ತೆಗೆದುಕೊಳ್ಳುತ್ತಾಳೆ.

ಮೂರನೇ ಹೆಜ್ಜೆ: ಪತಿ ನಾನು ಕಷ್ಟಪಟ್ಟು ದುಡಿದು ಮನೆಯಲ್ಲಿ ಸಿರಿ, ಸಂಪತ್ತು, ಸಮೃದ್ಧಿಯನ್ನು ತರುತ್ತೇನೆ, ನಿನ್ನನ್ನು, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಪ್ರತಿಜ್ಞೆ ಮಾಡಿದರೆ ವಧು ನಾನು ನನ್ನ ಗಂಡನಿಗೆ ನಿಷ್ಠಳಾಗಿರುತ್ತೇನೆ, ಪತಿ ದುಡಿದು ತಂದ ಸಂಪತ್ತನ್ನು ಜವಾಬ್ದಾರಿ ನೋಡಿಕೊಳ್ಳುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತಾಳೆ.

ನಾಲ್ಕನೇ ಹೆಜ್ಜೆ: ನಾಲ್ಕನೇ ಹೆಜ್ಜೆಯಲ್ಲಿ ವರ ವಧುವಿಗೆ ತನ್ನ ಬದುಕನ್ನು ಸುಂದರವಾಗಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತಾನೆ. ವರನು ವಧುವಿನ ಕುಟುಂಬದವರನ್ನೂ ಕೂಡ ಗೌರವದಿಂದ ಕಾಣುತ್ತೇನೆ ಎಂದು ಹೇಳಿದರೆ , ಪತ್ನಿ ಪತಿಯ ಎಲ್ಲಾ ನಿರ್ಧಾರಗಳಲ್ಲಿ ಕೈ ಜೋಡಿಸುತ್ತೇನೆ, ಪತಿಯ ಎಲ್ಲಾ ಆಸೆಗಳನ್ನು ಪೂರೈಸುತ್ತೇನೆ ಎಂದು ಪತ್ನಿ ಮಾತು ಕೊಡುತ್ತಾಳೆ.

ಐದನೇ ಹೆಜ್ಜೆ:ಕಷ್ಟವಿರಲಿ-ಸುಖವಿರಲಿ ಇಬ್ಬರು ಜೊತೆಯಾಗಿಯೇ ಇರುತ್ತೇವೆ ಎಂದು ವಧು-ವರ ಇಬ್ಬರು ಪ್ರತಿಜ್ಞೆ ಮಾಡುತ್ತಾರೆ. ನಮಗೆ ಸುಂದರ ದಾಂಪತ್ಯ ನೀಡು, ಆರೋಗ್ಯಕರ ಮಕ್ಕಳನ್ನು ನೀಡು ದೇವರೇ ಎಂದು ಇಬ್ಬರು ಅಗ್ನಿ ಸಾಕ್ಷಿಯಾಗಿ ಪ್ರಾರ್ಥನೆ ಮಾಡುತ್ತಾರೆ.

ಆರನೇ ಹೆಜ್ಜೆ: ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ, ಗೌರವಿಸುತ್ತೇವೆ, ಎಂಥದ್ದೇ ಕಠಿಣ ಸಂದರ್ಭ ಬರಲಿ ಜೊತೆಯಾಗಿ ಇರುತ್ತೇವೆ, ಎಲ್ಲಾ ಜವಾಬ್ದಾರಿಗಳನ್ನು ಜೊತೆಯಾಗಿ ನಿಭಾಯಿಸುತ್ತೇವೆ ಎಂದು ಇಬ್ಬರು ಪ್ರತಿಜ್ಞೆ ಮಾಡುತ್ತಾರೆ.

ಏಳನೇ ಹೆಜ್ಜೆ: ಏಳನೇ ಹೆಜ್ಜೆಯಲ್ಲಿ ಮೇಲೆ ಹೇಳಿದ ಎಲ್ಲಾ ಪ್ರತಿಜ್ಞೆಗಳನ್ನು ತಪ್ಪದೆ ಪಾಲಿಸುತ್ತೇವೆ, ಯಾವುದೇ ಸಂದರ್ಭ ಬರಲಿ ಇಬ್ಬರು ಜೊತೆಯಾಗಿಯೇ ಇರುತ್ತೇವೆ ಎಂದು ಪ್ರತಿಜ್ಞೆಯನ್ನು ಮಾಡುತ್ತಾರೆ.

ಒಂದು ಸುಂದರ ದಾಂಪತ್ಯಕ್ಕೆ ಏನು ಮಾಡಬೇಕು ಎಂಬುವುದನ್ನು ಈ ಸಪ್ತಪದಿ ತಿಳಿಸಿಕೊಡುತ್ತದೆ.

English summary

Hindu marriage invalid without ‘Saptapadi: Allahabad High Court

Hindu marriage invalid without ‘Saptapadi’, other rituals: Allahabad High Court, What are the significance of saptappadi, read on..
X
Desktop Bottom Promotion