ಶ್ರಾವಣದಲ್ಲಿ ಮಹಿಳೆಯರು ಹಸಿರು ಬಳೆಗಳನ್ನು ಧರಿಸಿದರೆ ಶುಭ ಯಾಕೆ?

ಶ್ರಾವಣ ಮಾಸ ಮಹಾದೇವನ ನೆಚ್ಚಿನ ತಿಂಗಳು. ಈ ತಿಂಗಳಿನಲ್ಲಿ ನಾವು ಶಿವನನ್ನು ಭಕ್ತಿಯಿಂದ ಪೂಜೆ ಮಾಡಿದ್ರೆ ನಮ್ಮ ಕಷ್ಟ-ಕಾರ್ಪಣ್ಯಗಳೆಲ್ಲಾ ದೂರವಾಗಿ ಇಷ್ಟಾರ್ಥಗಳು ಸಿದ್ಧಿಸುತ್ತೆ ಎನ್ನುವ ನಂಬಿಕೆಯಿದೆ.

ಇನ್ನೂ ಮಳೆಗಾಲದಲ್ಲಿ ಶ್ರಾವಣ ಮಾಸ ಬಂದಿರೋದ್ರಿಂದ ಮತ್ತೂ ಒಳ್ಳೆಯದು ಅಂತ ಹೇಳಲಾಗುತ್ತದೆ. ಮಳೆಯ ಸಮಯದಲ್ಲಿ ಹೇಗೆ ಸಸ್ಯಗಳು ಚಿಗುರೊಡೆದು ಸೊಂಪಾಗಿ ಬೆಳೆಯುತ್ತದೆ. ಅದೇ ರೀತಿ ನಮ್ಮ ಬದುಕಿನಲ್ಲೂ ಕೂಡ ಬದಲಾವಣೆಯ ಪರ್ವ ಆಗಲಿದ್ಯಂತೆ.

Why Do People Wear Green Bangles in Shravan Month? Know the Significance in Kannada

ಶ್ರಾವಣದಲ್ಲಿ ಶಿವನನ್ನು ಮೆಚ್ಚಿಸಲು ಏನು ಮಾಡಬೇಕು?

ಈ ಶ್ರಾವಣ ತಿಂಗಳಿನಲ್ಲಿ ಶಿವನನ್ನು ಮೆಚ್ಚಿಸೋದಕ್ಕೆ ವಿಶೇಷ ಪೂಜೆಯನ್ನು ಮಾಡುವುದು ತುಂಬಾನೇ ಮುಖ್ಯವಾಗುತ್ತದೆ. ಇದಿಷ್ಟೇ ಅಲ್ಲದೇ, ವಿಶೇಷ ವ್ರತಗಳನ್ನು ಕೈಗೊಳ್ಳುವುದು ಮುಖ್ಯವಾಗುತ್ತದೆ. ಇದರ ಜೊತೆಗೆ ಮದುವೆಯಾದ ಮಹಿಳೆಯರು ಶಿವನನ್ನು ಮೆಚ್ಚಿಸಬೇಕೆಂದರೆ ಹಸಿರು ಬಣ್ಣದ ವಸ್ತುವನ್ನು ಧರಿಸೋದು ತುಂಬಾನೇ ಮುಖ್ಯವಾಗುತ್ತದೆ.

ಅದ್ರಲ್ಲೂ ಹಸಿರು ಬಳೆಯನ್ನು ಮದುವೆಯಾದ ಮಹಿಳೆಯರು ಶ್ರಾವಣ ಮಾಸದಲ್ಲಿ ಧರಿಸಿದರೆ ಶುಭ ಸಂಕೇತವೆಂದು ನಂಬಲಾಗಿದೆ. ಸಾಮಾನ್ಯವಾಗಿ ಮದುವೆಯಾದ ಮಹಿಳೆಯರು ಈ ಶ್ರಾವಣ ಮಾಸದಲ್ಲಿ ಹಸಿರು ಬಳೆ ಹಾಗೂ ಹಸಿರು ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ. ಅಷ್ಟಕ್ಕು ಶ್ರಾವಣ ಮಾಸದಲ್ಲಿ ಹಸರು ಬಳೆಗಳನ್ನು ಧರಿಸುವುದು ಶುಭ ಯಾಕೆ? ಇದರಿಂದ ಏನೆಲ್ಲಾ ಪ್ರಯೋಜನಗಳು ಇದೆ ಅನ್ನೋದನ್ನು ತಿಳಿಯೋಣ.

ಮಹಿಳೆಯರಿಗೆ ಶ್ರಾವಣ ತಿಂಗಳು ವಿಶೇಷ ಯಾಕೆ?

ಶ್ರಾವಣ ಮಾಸವು ಭಗವಾನ್ ಶಿವನ ಆಶೀರ್ವಾದವನ್ನು ಪಡೆಯಲು ಸೂಕ್ತ ಸಮಯವಾಗಿದೆ. ಅದ್ರಲ್ಲೂ ಮಹಿಳೆಯರು ಶಿವ ಮತ್ತು ಶಕ್ತಿಯನ್ನು ಆಶೀರ್ವಾದವನ್ನು ಪಡೆಯೋದಕ್ಕೆ ವಿಶೇಷ ಪೂಜೆಯನ್ನು ಸಮರ್ಪಣೆ ಮಾಡಬೇಕಾಗುತ್ತದೆ. ಈ ಶ್ರಾವಣ ತಿಂಗಳ ಪ್ರತಿ ಮಂಗಳವಾರ ಪಾರ್ವತಿ ದೇವಿಗೆ ಸಮರ್ಪಿತವಾಗಿದ್ದು, ಈ ದಿನ ಮಂಗಳ ಗೌರಿ ವ್ರತವನ್ನು ಸಹ ಆಚರಿಸಲಾಗುತ್ತದೆ.

ಈ ದಿನ ಮಹಿಳೆಯರು ಕುಟುಂಬದ ಒಳಿತು ಹಾಗೂ ತಮ್ಮ ಮಕ್ಕಳ ದೀರ್ಘಾಯುಷ್ಯಕ್ಕಾಗಿ ಉಪವಾಸ ಮಾಡುತ್ತಾರೆ. ಇನ್ನೂ ಅವಿವಾಹಿತ ಮಹಿಳೆಯರು ಈ ದಿನ ಉತ್ತಮ ಗಂಡ ಸಿಗಲೆಂದು ಹಾಗೂ ಆದಷ್ಟು ಬೇಗ ಕಂಕಣ ಭಾಗ್ಯ ಕೂಡಿ ಬರಲೆಂದು ಉಪವಾಸವನ್ನು ಆಚರಣೆ ಮಾಡುತ್ತಾರೆ. ಇದೇ ಕಾರಣಕ್ಕಾಗಿ ಶ್ರಾವಣ ಮಂಗಳವಾರವನ್ನು ಮಹಿಳೆಯರ ದೃಷ್ಟಿಯಿಂದ ಶುಭ ಎಂದು ಪರಿಗಣಿಸಲಾಗಿದೆ.

ಹಸಿರು ಬಳೆಗಳು ಮಹಿಳೆಯರಿಗೆ ಶುಭ ಸಂಕೇತವೇ? ಹೇಗೆ?

ಶ್ರಾವಣ ಮಾಸದಲ್ಲಿ ವಿವಾಹಿತ ಮಹಿಳೆಯರು ಹಸಿರು ಬಟ್ಟೆ ಅಥವಾ ಹಸಿರು ಬಳೆಗಳನ್ನು ಧರಿಸಿರುತ್ತಾರೆ. ಹಿಂದೂ ಧರ್ಮದಲ್ಲಿ ಕೆಂಪು ಬಣ್ಣವನ್ನು ಹೊರತುಪಡಿಸಿ, ಹಸಿರು ಬಳೆಗಳನ್ನು ವೈವಾಹಿಕ ಆನಂದ ಮತ್ತು ಫಲವತ್ತತೆಯ ಸಂಕೇತವೆಂದು ಪರಿಗಣಿಸಲಾಗಿದೆ. ಶ್ರಾವನ ಮಾಸದಲ್ಲಿ ಹಸಿರು ಬಳೆಗಳನ್ನು ತೊಡುವುದರಿಂದ ಭಗವಾನ್ ಶಿವ ಮತ್ತು ಪಾರ್ವತಿ ಇಬ್ಬರಿಗೂ ಸಂತೋಷವಾಗುತ್ತದೆ ಮತ್ತು ಅವರ ಆಶೀರ್ವಾದ ಸದಾ ನಮ್ಮ ಮೇಲಿರುತ್ತಂತೆ.

ಮಹಾದೇವ ಹಸಿರು ಬಣ್ಣವನ್ನು ಇಷ್ಟ ಪಡೋದಕ್ಕೆ ಕಾರಣವೇನು?

ಶಿವನ ಅಚ್ಚುಮೆಚ್ಚಿನ ತಿಂಗಳಾದ ಶ್ರಾವಣ ಮಾಸ ಹಾಗೂ ಹಸಿರು ಬಣ್ಣದ ನಡುವೆ ಒಂದು ಸಾಮ್ಯತೆ ಇದೆ. ಅದೇನೆಂದರೆ ಎರಡು ಕೂಡ ಮಹಾದೇವನಿಗೆ ತುಂಬಾನೇ ಇಷ್ಟ. ಶಿವನು ನಿಸರ್ಗ ಪ್ರೇಮಿ. ಆತ ಹಿಮಾಲಯದಲ್ಲಿ ವಾಸವಾಗಿದ್ದಾನೆ ಎನ್ನುವ ನಂಬಿಕೆ ಕೂಡ ಇದೆ. ಇನ್ನೂ ಅವನ ನೆಚ್ಚಿನ ವಸ್ತುಗಳೆಂದರೆ ಗಾಂಜಾ, ದತುರಾ ಮತ್ತು ಬಿಲ್ವಪತ್ರೆ. ಇವುಗಳ ಬಣ್ಣ ಕೂಡ ಹಸಿರು.

ಶಿವನು ಹಸಿರು ವನಗಳ ಮಧ್ಯೆ ವಾಸಿಸೋದಕ್ಕೆ ಇಷ್ಟ ಪಡುತ್ತಾನೆ. ಭಗವಾನ್ ಶಿವನು ಪ್ರಕೃತಿಗೆ ಹತ್ತಿರದಲ್ಲಿ ವಾಸಿಸುತ್ತಾನೆ ಮತ್ತು ಅಲ್ಲಿರುವ ಪ್ರತಿಯೊಂದು ವಸ್ತುವನ್ನು ಪ್ರೀತಿಸುತ್ತಾನೆ. ಹಸಿರು ಬಣ್ಣವನ್ನು ಅವರ ಮೆಚ್ಚಿನವೆಂದು ಪರಿಗಣಿಸಲು ಇದು ಕೂಡ ಒಂದು ಕಾರಣವಾಗಿದೆ.

ಬುಧನು ಹಸಿರು ಬಣ್ಣದಿಂದ ಸಂತುಷ್ಟರಾಗುತ್ತಾನೆ ಯಾಕೆ ಗೊತ್ತಾ?

ಹಸಿರು ಬಣ್ಣವು ಬುಧ ಗ್ರಹದೊಂದಿಗೆ ಸಂಬಂಧಿಸಿದೆ ಎಂಬ ನಂಬಿಕೆಯಿದೆ. ಯಾರ ಜಾತಕದಲ್ಲಿ ಬುಧ ಗ್ರಹವು ಸರಿಯಾದ ಸ್ಥಾನದಲ್ಲಿಲ್ಲವೋ ಅವರು ಹಸಿರು ಬಣ್ಣವನ್ನು ಧರಿಸಿದರೆ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆಯಿದೆ. ಬುಧ ಗ್ರಹವು ಬುದ್ಧಿವಂತಿಕೆ, ವೃತ್ತಿ ಮತ್ತು ವ್ಯವಹಾರದೊಂದಿಗೆ ಸಂಬಂಧವನ್ನು ಹೊಂದಿದೆ. ಹಸಿರು ಬಣ್ಣವನ್ನು ಧರಿಸಿರುವ ವ್ಯಕ್ತಿಯ ಮೇಲೆ ಶಿವನ ಆಶೀರ್ವಾದ ಯಾವಾಗಲೂ ಇರುತ್ತೆ ಎನ್ನುವ ನಂಬಿಕೆಯಿದೆ.

ಶ್ರಾವಣ ತಿಂಗಳಿನಲ್ಲಿ ವಿವಾಹಿತ ಹಾಗೂ ಅವಿವಾಹಿತ ಮಹಿಳೆಯರು ಸಾಧ್ಯವಾದಷ್ಟು ಹಸಿರು ಬಣ್ಣದ ಬಳೆ ಹಾಗೂ ಬಟ್ಟೆಯನ್ನು ಧರಿಸೋದಕ್ಕೆ ಪ್ರಯತ್ನಿಸಿ. ಇದರಿಂದ ಶಿವ ಹಾಗೂ ಪಾರ್ವತಿಯ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ.

English summary

Why Do People Wear Green Bangles in Shravan Month? Know the Significance in Kannada

Understanding the tranditional signifiance of Wearing green Bangles in Shravan Month. Read more.
Story first published: Tuesday, July 25, 2023, 13:00 [IST]
X
Desktop Bottom Promotion