ತಾಯಿ ಕಳೆದುಕೊಂಡ ಎಳೆ ಕೂಸುಗಳಿಗೆ ಎದೆ ಹಾಲುಣಿಸಲು ಬಂದ ಮಹಾತಾಯಿ!! ಇದಲ್ಲವೆ ಮಾನವೀಯತೆ!

ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಗುಡ್ಡ ಕುಸಿತವು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಮಕ್ಕಳು, ವೃದ್ಧರು ಸೇರಿದಂತೆ ಮಹಿಳೆಯರು, ಪುರುಷರು ಈ ದುರಂತದಲ್ಲಿ ಮೃತಪಟ್ಟಿದ್ದಾರೆ. ನೂರಾರು ಮಂದಿ ಮನೆ, ಆಸ್ತಿ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಘಟನಾ ಸ್ಥಳದಲ್ಲಿ ಒಂದೊಂದು ಚಿತ್ರಣ ಮನಸ್ಸಿಗೆ ಘಾಸಿ ಮಾಡುವಂತಿದೆ.

ಕೆಲವರು ತಮ್ಮವರನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಮತ್ತೆ ಕೆಲವರು ಕೊಚ್ಚಿ ಹೋಗಿರುವ ತಮ್ಮ ಮನೆ, ಆಸ್ತಿಯ ಮುಂದೆ ರೋಧಿಸುತ್ತಿರುವ ಚಿತ್ರಣ ಎಂತವರ ಎದೆಯಲ್ಲೂ ನಡುಕ ಹುಟ್ಟಿಸುತ್ತಿದೆ. ಒಬ್ಬೊಬ್ಬರ ಕಣ್ಣುಗಳು ಒಂದೊಂದು ದಾರುಣ ಕಥೆಗಳ ಹೇಳುತ್ತಿವೆ. ಸದ್ಯ ಇಡೀ ಘಟನಾ ಸ್ಥಳ ಈಗ ನೊಂದ ಜೀವಗಳ ಕಣ್ಣೀರ ಕೋಡಿಯಾಗಿ ಬದಲಾಗಿದೆ.

Woman Offers Lifesaving Breast Milk To Orphaned Infants

ಇನ್ನು ಹೆತ್ತ ತಂದೆ ತಾಯಿ ಕಳೆದುಕೊಂಡ ಚಿಕ್ಕ ಪುಟ್ಟ ಮಕ್ಕಳ ನೋಡಿದರೆ ಎಂತವರಿಗೂ ಕಣ್ಣಲ್ಲಿ ನೀರು ಬರುತ್ತಿದೆ. ಇನ್ನು ಪ್ರಪಂಚದ ಅರಿವಿಲ್ಲದ ಮಕ್ಕಳು ತಂದೆ ತಾಯಿಯ ಕಳೆದುಕೊಂಡು ಪೋಷಕರ ದಾರಿ ನೋಡುತ್ತಾ ಸಮಯ ಕಳೆಯುತ್ತಿರುವುದು ನೋಡಿದರೆ ಕರುಳು ಹಿಂಡುವಂತಿದೆ.

ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ 20ಕ್ಕೂ ಹೆಚ್ಚು ಮಕ್ಕಳು ಬಲಿಯಾಗಿದ್ದಾರೆ ಜೊತೆಗೆ ಹತ್ತಾರು ಮಕ್ಕಳು ಪೋಷಕರ ಕಳೆದುಕೊಂಡು ಅನಾಥವಾಗಿವೆ. ಆದರೆ ಈ ಹೃದಯ ವಿದ್ರಾವಕ ಘಟನೆಗಳ ನಡುವೆಯು ಮಾನವೀಯ ಕಾರ್ಯಗಳು ಸಮಾಧಾನದಿಂದ ನಿಟ್ಟುಸಿರು ಬಿಡುವಂತೆ ಮಾಡುತ್ತವೆ.

ಈಗ ಇಡುಕ್ಕಿಯ ದಂಪತಿ ವಯನಾಡಿನ ಘಟನಾ ಸ್ಥಳಕ್ಕೆ ಆಗಮಿಸಿದ್ದು, ಪೋಷಕರ ಕಳೆದುಕೊಂಡು ಅನಾಥವಾಗಿರುವ ಮಕ್ಕಳಿಗೆ ಎದೆಹಾಲು ಉಣಿಸುವುದಾಗಿ ಆಕೆ ಹೇಳಿಕೊಂಡಿರುವುದು ಮಾನವೀಯತೆ ಎತ್ತಿತೋರಿಸುತ್ತಿದೆ. ಇಡುಕ್ಕಿಯ ಕಟ್ಟಪ್ಪನ ಬಳಿಯ ಉಪ್ಪುತಾರಾದಲ್ಲಿ ವಾಸಿಸುವ ಯುವ ದಂಪತಿ ಆಗಿರುವ ಸಜಿನ್ ಪರೇಕ್ಕರ್ ಮತ್ತು ಭಾವನಾ ವಯನಾಡಿಗೆ ಆಗಮಿಸಿದ್ದಾರೆ.

ತಾಯಿಯ ಕಳೆದುಕೊಂಡು ಹಸಿವಿನಿಂದ ಕಂಗೆಟ್ಟಿರುವ ನವಜಾತ ಶಿಶುಗಳಿಗೆ ಎದೆಹಾಲು ಉಣಿಸುವುದಾಗಿ ಆಕೆ ಹೇಳಿಕೊಂಡಿದ್ದು, ಮಹಾತಾಯಿಯ ತ್ಯಾಗದ ಕಾರ್ಯಕ್ಕೆ ಎಲ್ಲು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಪೋಷಕರನ್ನು ಕಳೆದುಕೊಂಡಿರುವ ಪರಿಹಾರ ಶಿಬಿರದಲ್ಲಿರುವ ಶಿಶುಗಳಿಗೆ ಎದೆ ಹಾಲು ನೀಡಲು ಭಾವನಾ ಸಿದ್ಧ ಎಂದು ಸಾಮಾಜಿಕ ಮಾಧ್ಯಮದಲ್ಲಿ ಆಕೆಯ ಪತಿ ಬರೆದುಕೊಂಡಿದ್ದರು. ಅಲ್ಲದೆ ವಯನಾಡಿನ ಗುಡ್ಡ ಕುಸಿದ ಪ್ರದೇಶಕ್ಕೆ ಅವರು ಆಗಮಿಸಿದ್ದಾರೆ.

"ನಾನು ಎರಡು ಮಕ್ಕಳ ತಾಯಿ. ಹೆತ್ತವರನ್ನು ಕಳೆದುಕೊಂಡ ಶಿಶುಗಳ ನೋವು ನನಗೆ ಗೊತ್ತು. ಶಿಶುಗಳಿಗೆ ಎದೆಹಾಲು ಒದಗಿಸುವ ನನ್ನ ಆಲೋಚನೆಯನ್ನು ನಾನು ನನ್ನ ಪತಿಯೊಂದಿಗೆ ಹಂಚಿಕೊಂಡಿದ್ದೇನೆ ಮತ್ತು ಅವರು ಅದನ್ನು ಸಂಪೂರ್ಣವಾಗಿ ಬೆಂಬಲಿಸಿದರು, "ಎಂದು ಭಾವನಾ ಹೇಳಿಕೊಂಡಿದ್ದಾರೆ.

ಇಡುಕ್ಕಿಯಿಂದ ಸುಮಾರು 400 ಕಿಮೀ ಪ್ರಯಾಣವಿದ್ದು, ಪತಿ ಪಿಕಪ್ ವಾಹನದಲ್ಲಿ ವಯನಾಡಿಗೆ ಆಗಮಿಸಿದ್ದಾರೆ. ಇಂದು ಬೆಳಗ್ಗೆ ಅವರು ಪರಿಹಾರ ಕೇಂದ್ರಕ್ಕೂ ಭೇಟಿ ನೀಡಿದ್ದಾರೆ. ಈ ಶಿಬಿರದಲ್ಲಿ ಸಾಧ್ಯವಾದಷ್ಟು ದಿನಗಳನ್ನು ಕಳೆಯಲು ಮತ್ತು ಶಿಬಿರಗಳಲ್ಲಿರುವ ಶಿಶುಗಳಿಗೆ ಎದೆ ಹಾಲು ನೀಡಲು ನಾವು ಯೋಜಿಸಿದ್ದೇವೆ ಎಂದು ಆಕೆಯ ಪತಿ ಸಜಿನ್ ಪರೇಕ್ಕರ್ ಹೇಳಿದ್ದಾರೆ.

ಈ ದುರಂತದಲ್ಲಿ ಹಲವು ಮಕ್ಕಳು ತಮ್ಮ ತಂದೆ ತಾಯಿಯ ಕಳೆದುಕೊಂಡಿರುವ ಸುದ್ದಿಯನ್ನ ಕೇಳಿದ ಬಳಿಕ ಆಕೆ ತಕ್ಷಣ ಘಟನಾ ಸ್ಥಳಕ್ಕೆ ಹೋಗುವ ನಿರ್ಧಾರ ಮಾಡಿದ್ದರಂತೆ. ನಂತರ ತನ್ನ 4 ವರ್ಷದ ಮಗು ಹಾಗೂ 4 ತಿಂಗಳ ಮಗುವಿನ ಜೊತೆಗೆ ವಯನಾಡಿಗೆ ಆಗಮಿಸಲು ತಯಾರಾದರು, ಇದಕ್ಕೆ ಪತಿ ಸಹ ಜೊತೆಯಾಗಿ ನಿಂತು ಅವರನ್ನು ಕರೆತಂದಿದ್ದಾರೆ.

ಈ ಮಹಾತಾಯಿಯ ಮಾನವೀಯ ಕಾರ್ಯಕ್ಕೀಗ ಎಲ್ಲೆಡೆ ಭಾರೀ ಮೆಚ್ಚುಗೆ ಕೇಳಿಬಂದಿದೆ. ಆಕೆ ತನ್ನ ಎದೆಹಾಲು ನೀಡುವ ಮೂಲಕ ಜೀವ ಉಳಿಸುವ ಕಾರ್ಯ ಮಾಡಲಿದ್ದು, ಪರಿಹಾರ ಕೇಂದ್ರದಲ್ಲಿರುವ ಪುಟಾಣಿಗಳ ಜೀವನಕ್ಕೆ ಆಕೆ ಆಸರೆಯಾಗುತ್ತಿದ್ದಾಳೆ.

English summary

Wayanad Landslide: Kind-Hearted Woman Offers Lifesaving Breast Milk To Orphaned Infants

A couple from Idukki arrived at the scene in Wayanad and she claimed to breastfeed the orphaned children, showing her humanity.
X
Desktop Bottom Promotion