ಸಿಕ್ಕಾಪಟ್ಟೆ ದುಡ್ಡು ಖರ್ಚು ಮಾಡುತ್ತಿದ್ದೀರಾ? ಹಾಗಾದ್ರೆ ವಿಧುರರ ಈ ಮಾತು ಕೇಳಲೇಬೇಕು

ನಮಗೆಲ್ಲಾ ಗೊತ್ತಿರುವ ಹಾಗೇ ವಿಧುರರು ಮಹಾಭಾರತ ಕಾಲದ ಶ್ರೇಷ್ಠ ವಿಧ್ವಾಂಸ ಹಾಗೂ ತತ್ವಜ್ಞಾನಿಯಾಗಿದ್ದರು. ಅಷ್ಟೇ ಯಾಕೆ ಮಾಹಾಭಾರತ ಕಾಲದಲ್ಲಿ ನಡೆದ ಕುರುಕ್ಷೇತ್ರ ಯುದ್ಧವನ್ನು ನಿಲ್ಲಿಸಬೇಕೆಂದು ಇವರು ತುಂಬಾನೇ ಪ್ರಯತ್ನ ಪಟ್ಟಿದ್ದರಂತೆ ಆದರೆ ಅದು ಸಾಧ್ಯವಾಗಿಲ್ಲ. ವಿಧುರರು ನಮಗೆ ಧರ್ಮ ಮಾರ್ಗದಲ್ಲೇ ನಡೆಯಿರಿ ಎಂದು ಕಿವಿ ಮಾತನ್ನು ಹೇಳಿದ್ದಾರೆ. ಯಾಕಂದ್ರೆ ಧರ್ಮ ಮಾರ್ಗದಲ್ಲಿ ಯಾರು ನಡೆಯುತ್ತಾನೋ ಆ ವ್ಯಕ್ತಿಗೆ ಎಂದಿಗೂ ಸೋಲು ಅನ್ನೋದೇ ಎದುರಾಗೋದಿಲ್ವಂತೆ.

ಹಣ ಸಂಪಾದನೆಯ ವಿಚಾರದಲ್ಲೂ ಕೂಡ ಅಷ್ಟೇ, ನಾವು ಧರ್ಮವನ್ನು ಯಾವತ್ತಿಗೂ ಬಿಡಬಾರದು ಎಂದು ವಿಧುರರು ಹೇಳಿದ್ದಾರೆ. ಅಷ್ಟೇ ಅಲ್ಲ, ಮನುಷ್ಯರ ಕ್ಷೇಮಾಭಿವೃದ್ಧಿಗೂ ಕೆಲವೊಂದು ನೀತಿಗಳನ್ನು ರೂಪಿಸಿರುವ ವಿಧುರರು ಹಣವನ್ನು ಸಂಪಾದಿಸೋದು ಹೇಗೆ? ಅದನ್ನು ಉಳಿತಾಯ ಮಾಡೋದು ಹೇಗೆ? ಯಾವ ರೀತಿಯ ಖರ್ಚುಗಳು ಅನಗತ್ಯ ಅನ್ನೋ ವಿಚಾರಗಳನ್ನು ಕೂಡ ಅವರು ಉಲ್ಲೇಖಿಸಿದ್ದಾರೆ. ಹಾಗಾದ್ರೆ ವಿಧುರರು ಹಣದ ವಿಚಾರವಾಗಿ ಏನು ಹೇಳಿದ್ದಾರೆ ಅನ್ನೋದನ್ನ ತಿಳಿಯೋಣ.

Vidura Neethi: How To Save Money And Money Management Techniques In Kannada

ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಬೇಡಿ
ಮನುಷ್ಯನಿಗೆ ಹಣ ಸಂಪಾದನೆ ಮಾಡೋದು ಎಷ್ಟು ಮುಖ್ಯವೋ ಆ ಹಣವನ್ನು ಸರಿಯಾದ ಪ್ರಮಾಣದಲ್ಲಿ ಖರ್ಚು ಮಾಡೋದು ಅಷ್ಟೇ ಮುಖ್ಯವಾಗುತ್ತದೆ. ದುಡ್ಡು ಕೈಯಲ್ಲಿ ಇದೆ ಅಂತ ಸುಖಾ ಸುಮ್ಮನೇ ಸಿಕ್ಕಾಪಟ್ಟೆ ಖರ್ಚು ಮಾಡೋದು ಸರಿಯಲ್ಲ. ಮಿತ ಪ್ರಮಾಣದಲ್ಲಿ ಖರ್ಚು ಮಾಡಿದಷ್ಟು ನಮ್ಮ ಮುಂದಿನ ಭವಿಷ್ಯಕ್ಕೆ ಉಳಿತಾಯ ಮಾಡಬಹುದು. ಇವತ್ತು ಮಾಡಿದ ಉಳಿತಾಯ ಮುಂದೆ ಕಷ್ಟ ಕಾಲದಲ್ಲಿ ನಿಮ್ಮ ಕೈ ಹಿಡಿಯಬಹುದು.

ಹಣ ಉಳಿತಾಯದ ಕಲೆ ಗೊತ್ತಿರಬೇಕು
ಪ್ರತಿಯೊಬ್ಬರು ಕೂಡ ಹಣ ಸಂಪಾದನೆ ಮಾಡಬೇಕು ಅನ್ನೋ ಉದ್ದೇಶದಿಂದ ದುಡಿಯುತ್ತಾರೆ. ಜೀವನದಲ್ಲಿ ಹಣ ಸಂಪಾದಿಸೋದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ನಾವು ಸಂಪಾದಿಸಿದ ದುಡ್ಡನ್ನು ಹೇಗೆ ನಿಭಾಯಿಸುತ್ತೇವೆ ಅನ್ನೋದು ಕೂಡ. ವಿಧುರರ ಪ್ರಕಾರ ಕೆಲವರು ದುಡಿದ ದುಡ್ಡಿನಲ್ಲಿ ಒಂದು ರೂಪಾಯಿ ಕೂಡ ಅವರ ಕೈಯಲ್ಲಿ ಉಳಿಯೋದಿಲ್ಲ. ಕಾರಣ ಅವರಿಗೆ ದುಡಿದ ದುಡ್ಡನ್ನು ಉಳಿಸಿಕೊಳ್ಳುವ ಕಲೆ ಗೊತ್ತಿರೋದಿಲ್ಲ. ಹೀಗಾಗಿ ಸಂಪಾದನೆ ಎಷ್ಟು ಮುಖ್ಯವೋ ಉಳಿತಾಯವು ಅಷ್ಟೇ ಮುಖ್ಯವಾಗುತ್ತದೆ.

ಪ್ರಾಮಾಣಿಕವಾಗಿ ಸಂಪಾದಿಸಿ
ಮಾತೆ ಲಕ್ಷ್ಮಿಯು ಚಂಚಲ ಸ್ವಭಾವದವಳು ಅವಳು ಒಂದೇ ಕಡೆ ಇರೋದಿಲ್ಲ. ಯಾವ ಮನೆಯಲ್ಲಿ ಶಾಂತಿ, ಖುಷಿ ಹಾಗೂ ಸ್ವಚ್ಛವಾಗಿರೋ ಮನೆಯಲ್ಲಿ ಮಾತ್ರ ಲಕ್ಷ್ಮೀ ನೆಲೆಸುತ್ತಾಳೆ. ಅದೇ ನೀವು ಎಷ್ಟೇ ದುಡ್ಡನ್ನು ಸಂಪಾದಿಸಿ ಪರವಾಗಿಲ್ಲ. ಆದರೆ ಅದನ್ನು ನ್ಯಾಯ ಮಾರ್ಗದಿಂದ ಮಾತ್ರ ಸಂಪಾದಿಸಬೇಕು. ನೀವು ಪ್ರಮಾಣಿಕತೆಯಿಂದ ದುಡ್ಡು ಸಂಪಾದಿಸಿದರೆ ಮಾತ್ರ ಲಕ್ಷ್ಮೀ ನಿಮ್ಮ ಜೊತೆಗೆ ಕಡೇವರೆಗೂ ಇರುತ್ತಾಳೆ. ಇಲ್ಲದಿದ್ದರೆ ನಿಮ್ಮನ್ನು ಬಿಟ್ಟು ಹೋಗುತ್ತಾಳೆ ಎಂದು ವಿಧುರರು ಹೇಳಿದ್ದಾರೆ.

ಉದಾಸೀನ ಮಾಡಬೇಡಿ
ಉದಾಸೀನ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಶತ್ರು ಇದ್ದ ಹಾಗೆ. ನೀವು ಯಶಸ್ಸು ಸಾಧಿಸಬೇಕೆಂದು ಹೊರಟಾಗ ಈ ಉದಾಸೀನ ನಿಮ್ಮ ಸಾಧನೆಗೆ ಅಡ್ಡಗಾಲು ಹಾಕುತ್ತದೆ. ವಿಧುರರ ಪ್ರಕಾರ ನೀವು ಜೀವನದಲ್ಲಿ ಅಭಿವೃದ್ಧಿಯಾಗಬೇಕಾದರೆ ಉದಾಸೀನ ಬಿಡಲೇಬೇಕು. ಇಲ್ಲದಿದ್ದರೆ ಅಭಿವೃದ್ಧಿಯಾಗೋದಕ್ಕೆ ಸಾಧ್ಯವಿಲ್ಲ. ಉದಾಸೀನವನ್ನು ಮೈಗೂಡಿಸಿಕೊಂಡ ವ್ಯಕ್ತಿ ಕಷ್ಟ ಪಡೋದಕ್ಕೆ ಸಿದ್ಧವಿರೋದಿಲ್ಲ. ಕೂತಲ್ಲಿಗೆ ಎಲ್ಲವೂ ಬರಬೇಕು ಅಂದುಕೊಳ್ಳುತ್ತಾನೆ. ಒಂದು ವೇಳೆ ಆತ ಆಗರ್ಭ ಶ್ರೀಮಂತನಾಗಿದ್ದರೂ ಸಹ ಸುಲಭವಾಗಿ ಆ ಹಣವನ್ನೆಲ್ಲಾ ಕಳೆದುಕೊಂಡು ಬಿಡುತ್ತಾನೆ.

ಜೀವನದಲ್ಲಿ ಯಾವುದು ಕೂಡ ಸುಲಭವಾಗಿ ದೊರೆಯೋದಿಲ್ಲ. ಪ್ರತಿಯೊಂದಕ್ಕೂ ಕಷ್ಟ ಪಡಲೇಬೇಕು. ಹೀಗಾಗಿ ಕಷ್ಟ ಪಟ್ಟು ದುಡಿದ ದುಡ್ಡನ್ನು ಸುಖಾ ಸುಮ್ಮನೇ ವ್ಯರ್ಥ ಮಾಡಬೇಡಿ ಅನ್ನೋದೇ ವಿಧುರರ ಕಿವಿಮಾತು.

English summary

Vidura Neethi: How To Save Money And Money Management Techniques In Kannada

Here are the techniques of Vidura to save money and Management of Money.
Story first published: Friday, April 7, 2023, 12:00 [IST]
X
Desktop Bottom Promotion