ಅಯೋಧ್ಯೆ ರಾಮನಂತೆ ಮತ್ತೊಂದು ಸಣ್ಣ ಮೂರ್ತಿ ಕೆತ್ತಿದ ಅರುಣ್ ಯೋಗಿರಾಜ್..!

ಅಯೋಧ್ಯೆ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಂಡಿರುವ ಬಾಲ ರಾಮ ಎಷ್ಟು ಸುಂದರವಾಗಿತ್ತೆಂದರೆ ಅದನ್ನು ರಚಿಸಿದ ಕಲಾವಿದ ಅರುಣ್ ಯೋಗಿರಾಜ್ ಅವರನ್ನು ಕೊಂಡಾಡುವಂತೆ ಮಾಡಿತ್ತು. ಭಕ್ತರಿಗೆ ಈ ರಾಮಲಲ್ಲಾನ ಮೂರ್ತಿ ಅಯೋಧ್ಯೆಯತ್ತ ಸೆಳೆಯುತ್ತಿತ್ತು. ಮಂದಿರಕ್ಕಾಗಿ ಶಿಲ್ಪಿ ಅರುಣ್ ಯೋಗಿರಾಜ್ ಅತ್ಯದ್ಭುತ ಕಲಾಕೃತಿಯನ್ನು ನೀಡಿದ್ದರು.

ಆದರೆ ಅವರು ಅಯೋಧ್ಯೆಯಲ್ಲಿ ಈ ರಾಮನ ಮೂರ್ತಿ ಕೆತ್ತನೆ ಮಾಡುವಾಗ ಮತ್ತೊಂದು ಚಿಕ್ಕದಾದ ರಾಮಲಲ್ಲಾನ ಕೆತ್ತಿದ್ದಾರೆ. ಅವರ ಮೂರ್ತಿ ಅಯೋಧ್ಯೆ ರಾಮ ಮಂದಿರದಲ್ಲಿಡಲು ಆಯ್ಕೆಯಾದ ಬಳಿಕ ಅದೇ ರೀತಿಯ ರಾಮಲಲ್ಲಾನ ಹೋಲುವ ಚಿಕ್ಕ ಮೂರ್ತಿಯನ್ನೂ ಸಹ ಕೆತ್ತಿದ್ದಾರೆ.

Sculptor Arun Yogiraj Carves Small Ram Lalla Idol Pic Goes Viral

ಈ ಕುರಿತು ಶಿಲ್ಪಿ ಅರುಣ್ ಯೋಗಿರಾಜ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 'ರಾಮ ಲಲ್ಲಾನ ಮುಖ್ಯ ಮೂರ್ತಿಯನ್ನು ಆಯ್ಕೆ ಮಾಡಿದ ನಂತರ, ನಾನು ಅಯೋಧ್ಯೆಯಲ್ಲಿ ನನ್ನ ಬಿಡುವಿನ ವೇಳೆಯಲ್ಲಿ ಮತ್ತೊಂದು ಸಣ್ಣ ರಾಮಲಲ್ಲಾ ಮೂರ್ತಿಯನ್ನು (ಕಲ್ಲು) ಕೆತ್ತಿದ್ದೇನೆ' ಎಂದು ಸಣ್ಣ ಮೂರ್ತಿಯೊಂದಿಗೆ ಅವರು ನಿಂತಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಇದಕ್ಕೂ ಮೊದಲು, ಶಿಲ್ಪಿ ಅವರು ಪ್ರತಿಮೆಯ ಕಣ್ಣುಗಳನ್ನು ಕೆತ್ತಲು ಬಳಸಿದ ವಿಶೇಷ ಸಾಧನಗಳ ಚಿತ್ರವನ್ನು ಸಹ ಹಂಚಿಕೊಂಡಿದ್ದರು. "ನಾನು ಅಯೋಧ್ಯೆಯ ರಾಮ್ ಲಲ್ಲಾನ ದಿವ್ಯ ಕಣ್ಣುಗಳನ್ನು (ನೆಟ್ರೋನ್ಮಿಲನ) ಕೆತ್ತಿದ ಚಿನ್ನದ ಉಳಿಯೊಂದಿಗೆ ಈ ಬೆಳ್ಳಿಯ ಸುತ್ತಿಗೆಯನ್ನು ಹಂಚಿಕೊಳ್ಳಲು ಯೋಚಿಸಿದೆ' ಎಂದು ಮಾಹಿತಿ ನೀಡಿದ್ದರು. ಈಗ ಈ ಸಣ್ಣ ರಾಮಲಲ್ಲಾನ ಮೂರ್ತಿಯ ಕುರಿತು ಹಂಚಿಕೊಂಡಿದ್ದು ಎಲ್ಲರ ಗಮನ ಸೆಳೆದಿದೆ.

ರಾಮ ಮಂದಿರದಲ್ಲಿರುವ ಮೂರ್ತಿಯಂತೆ ಈ ಮೂರ್ತಿಯೂ ಈಗ ಎಲ್ಲರ ಗಮನ ತನ್ನತ್ತ ಸೆಳೆಯುತ್ತಿದೆ. ರಾಮಮಂದಿರದಲ್ಲಿರುವ 51 ಇಂಚಿನ ಎತ್ತರದ ಮೂರ್ತಿಯಂತೆಯೇ ಕಮಲದ ಹೂವಿನ ಮೇಲೆ ಈ ಚಿಕ್ಕ ಮೂರ್ತಿ ಸಹ ಕೆತ್ತಲಾಗಿದೆ. ಆದರೆ ಈ ಮೂರ್ತಿ ಈಗ ಎಲ್ಲಿದೆ ಎಂಬ ಕುರಿತು ಅವರು ಮಾಹಿತಿ ಹಂಚಿಕೊಂಡಿಲ್ಲ. ಸಾಮಾನ್ಯವಾಗಿ ಈ ಮೂರ್ತಿ ಅವರು ತಮ್ಮ ನಿವಾಸದಲ್ಲಿ ಪ್ರತಿಷ್ಠಾಪಿಸಿರಬಹುದು ಎಂದು ಅಂದಾಜಿಸಲಾಗಿದೆ.

ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಂಡ ವಿಗ್ರಹವೂ ಕರ್ನಾಟಕದಿಂದ ಕಳುಹಿಸಲಾಗಿದ್ದ ಕಲ್ಲಿನಿಂದ ಕೆತ್ತಲಾಗಿತ್ತು. ಕೃಷ್ಣ ಶಿಲೆಯಲ್ಲಿ ಈ ಮೂರ್ತಿ ಮೂಡಿಬಂದಿತ್ತು. ಇದನ್ನು ಅರುಣ್ ಯೋಗಿರಾಜ್ ತಿಂಗಳುಗಳ ಕಾಲ ಶ್ರಮ ಹಾಕಿ ಕೆತ್ತನೆ ಕಾರ್ಯ ಮಾಡಿದ್ದರು. ಅಂತಿಮ ಮೂರು ಮೂರ್ತಿಗಳ ಪೈಕಿ ಅರುಣ್ ಯೋಗಿರಾಜ್ ಅವರ ಕಪ್ಪು ಶಿಲೆಯ ರಾಮ ಅಯೋಧ್ಯೆಯ ಮಂದಿರದಲ್ಲಿ ಪ್ರತಿಷ್ಠಾಪನೆಗೆ ಆಯ್ಕೆಯಾಗಿತ್ತು.


ಯಾರು ಅರುಣ್ ಯೋಗಿರಾಜ್?

ದೇಶದ ಅತ್ಯಂತ ಬೇಡಿಕೆಯ ಶಿಲ್ಪಿಗಳಲ್ಲಿ ಒಬ್ಬರಾದ ಅರುಣ್ ಯೋಗಿರಾಜ್ ಅವರು ಕುಶಲತೆಯ ಶ್ರೀಮಂತ ಪರಂಪರೆಯನ್ನು ಹೊಂದಿರುವ ಕುಟುಂಬದಿಂದ ಬಂದವರು. ಅವರ ತಂದೆ ಮತ್ತು ಅಜ್ಜ ಪ್ರಸಿದ್ಧ ಶಿಲ್ಪಿಗಳಾಗಿದ್ದರು. MBA ಮುಗಿಸಿದ ನಂತರ, ಶ್ರೀ ಯೋಗಿರಾಜ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದರು ಆದರೆ ತಮ್ಮ ಪೂರ್ವಜರ ಪರಂಪರೆಯನ್ನು ಅನುಸರಿಸಲು ಬಯಸಿದ್ದರು. 2008 ರಿಂದ, ಅವರು ಪ್ರತಿಮೆ ಕೆತ್ತನೆಯ ಕಾರ್ಯ ಮಾಡುತ್ತಿದ್ದಾರೆ.

ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಜ್ಯೋತಿಯ ಹಿಂಭಾಗದ ಭವ್ಯವಾದ ಮೇಲಾವರಣದಲ್ಲಿ ಆಕರ್ಷಣೆಯ ಕೇಂದ್ರವಾದ ಸುಭಾಷ್ ಚಂದ್ರ ಬೋಸ್ ಅವರ 30 ಅಡಿ ಪ್ರತಿಮೆಯನ್ನು ಶ್ರೀ ಯೋಗಿರಾಜ್ ಅವರು ರಚಿಸಿದ್ದಾರೆ. ಅಲ್ಲದೆ ಕೇದಾರನಾಥದಲ್ಲಿ 12 ಅಡಿ ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆ ಮತ್ತು ಮೈಸೂರು ಜಿಲ್ಲೆಯ ಚುಂಚನಕಟ್ಟೆಯಲ್ಲಿರುವ 21 ಅಡಿ ಎತ್ತರದ ಹನುಮಾನ್ ಪ್ರತಿಮೆ ಸಹ ಇವರ ಕೈಚಳಕದಲ್ಲಿ ಮೂಡಿ ಬಂದಿವೆ.

English summary

Sculptor Arun Yogiraj Carves Small Ram Lalla Idol Pic Goes Viral

While carving this Rama idol in Ayodhya, another smaller Rama Lalla was carved. Sculptor Arun Yogiraj Carves Small Ram Lalla Idol Pic Goes Viral
Story first published: Monday, March 25, 2024, 11:00 [IST]
X
Desktop Bottom Promotion