ಯುವಜನರ ಹಾಟ್ ಫೇವರೆಟ್ ಬೀದಿ ಬದಿ ಪಾನಿಪೂರಿಯ ವೈಶಿಷ್ಟ್ಯವೇನು?

By Super

ಮೈಸೂರಿಗೆ ಮೊದಲ ಬಾರಿ ಹೋದವರು ಮೈಸೂರು ಅರಮನೆಯ ಜೊತೆ ಅಲ್ಲಿ ಸರ್ವೇಸಾಮಾನ್ಯವಾಗಿ ಹಾದಿಬದಿಯ ಗೂಡಂಗಡಿಯಲ್ಲಿ ದೊರಕುವ ಪಾನಿಪೂರಿಯನ್ನು ಮರೆಯಲಾರರು. ಏಕೆಂದರೆ ಇದರ ರುಚಿಯೇ ಅಂತಹದ್ದು. ಇನ್ನೊಂದೆಡೆ ಸುಲಭದರದಲ್ಲಿ ಸಿಗುವ ಈ ಪೌಷ್ಟಿಕ ಆಹಾರ ರಾತ್ರಿವೇಳೆ ಹೋಟೆಲಿಗೆ ಹೋಗಿ ಊಟ ಮಾಡುವಷ್ಟು ಸಮಯ ಇಲ್ಲದವರಿಗೊಂದು ವರದಾನ ಸಹಾ.

ಅಂದ ಹಾಗೆ ಪಾನಿಪೂರಿಯನ್ನು ಇದುವರೆಗೆ ಕಂಡಿರುವವರಿಗೆ ಇದರ ಹೆಸರನ್ನು ನೋಡಿ ನೀರಿನಲ್ಲಿ ಬೇಯಿಸಿರುವ ಪೂರಿ ಎಂಬ ಕಲ್ಪನೆ ಮೂಡಬಹುದು. ಆದರೆ ವಾಸ್ತವದಲ್ಲಿ ಒಂದು ಚಿಕ್ಕ ತಟ್ಟೆಯಲ್ಲಿ ಸುಮಾರು ಆರರಿಂದ ಒಂಭತ್ತು ಪುಟ್ಟ ಪುಟ್ಟ ಪೂರ್ಣವಾಗಿ ಉಬ್ಬಿರುವ ಪೂರಿಗಳು, ಅದರ ತೆಳುಭಾಗವನ್ನು ಒಡೆದು ಅದರಲ್ಲಿ ಸೇರಿಸಿರುವ ಬೇಯಿಸಿದ ಆಲುಗಡ್ಡೆ, ಹಸಿನೀರುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ಮುಖ್ಯವಾಗಿ ಪುದಿನಾ ಮತ್ತು ಹುಣಸೆಹುಳಿಯನ್ನು ಉಪಯೋಗಿಸಿ ತಯಾರಿಸಲಾದ ಹುಳಿ-ಖಾರ ಮಿಶ್ರಿತ ನೀರು. ಈ ಪೂರಿಯನ್ನು ಇಡಿಯಾಗಿ ಬಾಯಲ್ಲಿಟ್ಟು ಜಗಿದ ಬಳಿಕ ಆಸ್ವಾದಿಸುವ ರುಚಿ ಯಾವ ಪಂಚಭಕ್ಷ್ಯ ಪರಮಾನ್ನಕ್ಕಿಂತಲೂ ಮಿಗಿಲಾದುದು. ಬೀದಿ ಬದಿಯ ತಿಂಡಿಗಳ ಸ್ವರ್ಗ, ನಮ್ಮ ಭಾರತ!

ಎಲ್ಲಾ ಪೂರಿಗಳನ್ನು ತಿಂದಾದ ಮೇಲೆ ಅದೇ ನೀರನ್ನು ಎಷ್ಟು ಬೇಕಾದರೂ ಕುಡಿಯಬಹುದು, ಅದೂ ಉಚಿತವಾಗಿ. ಬಳಿಕ ನಾಲಿಗೆಯ ಮೇಲೆ ತೆಳುವಾಗಿ ಉಳಿದುಕೊಳ್ಳುವ ಖಾರದ ಲೇಪನ ಕೊಂಚಕಾಲ ಹಾಗೇ ಉಳಿದು ಅಷ್ಟೂ ಹೊತ್ತು ನಮ್ಮ ಸಂವೇದನೆಯನ್ನು ಚುರುಕುಗೊಳಿಸುತ್ತಾ ಇರುತ್ತದೆ. ಬಳಿಕ ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಬರುತ್ತದೆ.

ಬಡವರಿಂದ ಹಿಡಿದು ದುಬಾರಿ ಕಾರುಗಳಲ್ಲಿ ಸಾಗುವ ಶ್ರೀಮಂತರೂ ಪಾನಿಪೂರಿ ಗಾಡಿಗಳನ್ನು ಕಂಡ ಕೂಡಲೇ ತಮ್ಮ ಸಮಯದಲ್ಲಿ ಕೊಂಚ ಬದಲಾವಣೆಯನ್ನು ಥಟ್ಟನೇ ಪ್ರಕಟಿಸಿ ಸ್ವಲ್ಪ ಪಾನಿಪೂರಿ ತಿಂದು ಮುಂದೆ ಹೋಗುವಾ ಎಂಬ ನಿರ್ಧಾರಕ್ಕೆ ಬರುತ್ತಾರೆ. ಈ ಲೇಖನದಲ್ಲಿ ಪಾನಿಪೂರಿ ಏಕೆ ನಮ್ಮೆಲ್ಲರ ಮೆಚ್ಚಿನ ತಿನಿಸಾಗಿದೆ ಎಂಬ ವಿಷಯದಲ್ಲಿ ಕೆಲವು ವಿವರಗಳನ್ನು ನೀಡಲಾಗಿದೆ.

ನಿಮ್ಮಿಷ್ಟದ ಖಾರ ಅಥವಾ ಸಿಹಿಯನ್ನು ತಕ್ಷಣ ಪಡೆಯಬಹುದು

ನಿಮ್ಮಿಷ್ಟದ ಖಾರ ಅಥವಾ ಸಿಹಿಯನ್ನು ತಕ್ಷಣ ಪಡೆಯಬಹುದು

ಉತ್ತರ ಭಾರತ, ಮಹಾರಾಷ್ಟ್ರಗಳಲ್ಲಿ ಗೋಲ್ ಗಪ್ಪಾ ಎಂದೂ ಕರೆಯಲ್ಪಡುವ ಈ ಪಾನಿಪೂರಿಯ ರುಚಿ ಎಲ್ಲರಿಗೂ ಅಪ್ಯಾಯಮಾನವಾಗಿದೆ. ಪೂರ್ತಿಯಾಗಿ ಉಬ್ಬಿದ್ದ ಪುಟ್ಟ ಪೂರಿಯನ್ನು ಮಸಾಲೆ ಮತ್ತು ಪಾನಿಯೊಡನೆ ಇಡಿಯಾಗಿ ಬಾಯಿಯೊಳಗಿಟ್ಟು ಜಗಿದಾಗ ಕುರುಕು ಸ್ವರದಲ್ಲಿ ಪುಡಿಯಾಗುವ ಪೂರಿ, ಅದರೊಂದಿಗೆ ಒಸರುವ ರಸ ಒಂದು ಧಾರೆಯಾಗಿ ನಿಮ್ಮ ನಾಲಿಗೆಯ ಅಷ್ಟೂ ರುಚಿಸಂವೇದಕಗಳನ್ನು ಆವರಿಸಿ ಬಿಡುತ್ತದೆ. ಇದು ಎಲ್ಲರಿಗೂ ಇಷ್ಟವಾಗುವ ರುಚಿಯಾಗಿದೆ. ಹೆಚ್ಚು ಖಾರ ಬೇಕೇ, ಬೇಡವೇ ಕೊಂಚ ಸಿಹಿಯಾಗಿದ್ದರೆ ಒಳಿತೇ, ಹುಳಿ ಹೆಚ್ಚು ಬೇಕೇ, ಬೇಡವೇ ಪಾನಿಪೂರಿ ತುಂಬಿಸುವ ಮುನ್ನ ಅಂಗಡಿಯಾತನಿಗೆ ಹೇಳಿದರೆ ಸಾಕು, ಅದೇ ಕ್ಷಣದಲ್ಲಿ ನಿಮಗೆ ಸೂಕ್ತವಾದ ಖಾರ ಅಥವಾ ಸಿಹಿಯ ಪ್ರಮಾಣವನ್ನು ಬದಲಿಸಲು ಸಾಧ್ಯ. ಎಲ್ಲರ ಮೆಚ್ಚುಗೆಗೆ ಪಾತ್ರನಾಗಲು ಪಾನಿಪೂರಿಯ ಈ ವೈಶಿಷ್ಟ್ಯವೇ ಕಾರಣ.

ಎಲ್ಲರೂ ಮೆಚ್ಚುವ ಹುಳಿ-ಸಿಹಿ ರುಚಿ-ಎಷ್ಟು ಬೇಕಾದರೂ ತಿನ್ನಬಹುದು

ಎಲ್ಲರೂ ಮೆಚ್ಚುವ ಹುಳಿ-ಸಿಹಿ ರುಚಿ-ಎಷ್ಟು ಬೇಕಾದರೂ ತಿನ್ನಬಹುದು

ಪಾನಿಪೂರಿಯಲ್ಲಿ ಪ್ರಮುಖವಾಗಿ ಬಳಸಲಾಗುವ ಹಸಿಮೆಣಸು, ಪುದಿನಾ ಮತ್ತು ಹುಣಸೆಹುಳಿಯ ಪ್ರಮಾಣವನ್ನು ಕೊಂಚ ಆಚೀಚೆ ಮಾಡುವ ಮೂಲಕ ಹುಳಿ-ಸಿಹಿ ಮಿಶ್ರಿತ ರುಚಿಯನ್ನು ನಿಮಗಿಷ್ಟವಾಗುವ ಪ್ರಮಾಣದಲ್ಲಿ ಬದಲಿಸಬಹುದು. ಈ ಹುಳಿ ಸಿಹಿ ರುಚಿ ಎಲ್ಲರ ಮನಮೆಚ್ಚಿನ ರುಚಿಯಾಗಿದೆ. ಇದಕ್ಕಾಗಿಯೇ ಕೆಲವರು ಪೂರಿಗಳನ್ನು ತಾನು ಹೇಳುವವರೆಗೂ ನಿಲ್ಲಿಸಬೇಡ ಎಂದು ಮೊದಲೇ ಹೇಳಿ ಒಂದಾದ ಮೇಲೊಂದರಂತೆ ಗುಳುಂಕರಿಸುತ್ತಾ ಹೋಗುತ್ತಾರೆ. ಅಂಗಡಿಯವರಿಗೆ ಇಂತಹವರು ದಿನಕ್ಕೆ ಐವತ್ತಾದರೂ ಸಿಗುತ್ತಾರೆ. ಹೋಟೆಲಿನಲ್ಲಿ ಹಾಗಲ್ಲ, ಯಾವುದೇ ತಿಂಡಿ ಪ್ಲೇಟ್ ಲೆಕ್ಕದಲ್ಲಿಯೇ ತೆಗೆದುಕೊಳ್ಳಬೇಕು. ಇಷ್ಟವಾದ ತಿಂಡಿಯನ್ನು ಇನ್ನೊಂದು ಪ್ಲೇಟ್ ತೆಗೆದುಕೊಂಡು ಅರ್ಧ ತಿಂದ ಬಳಿಕ ಸಾಕೆನಿಸಿದರೆ ಉಳಿದ ಅರ್ಧಭಾಗ ವ್ಯರ್ಥವಾಗಿ ಹೋಗುತ್ತದೆ. ಪಾನಿಪೂರಿಯ ವಿಷಯದಲ್ಲಿ ಹಾಗಲ್ಲ, ನಿಮಗೆ ಎಷ್ಟು ಬೇಕೋ ಅಷ್ಟೇ ಪೂರಿ ಸೇವಿಸಬಹುದು. ವ್ಯರ್ಥವಾಗುವ ಪ್ರಶ್ನೆಯೇ ಇಲ್ಲ!

ಸರ್ವೇ ಸಾಮಾನ್ಯವಾಗಿ ಎಲ್ಲೆಡೆ ಸಿಗುತ್ತದೆ

ಸರ್ವೇ ಸಾಮಾನ್ಯವಾಗಿ ಎಲ್ಲೆಡೆ ಸಿಗುತ್ತದೆ

ಪಾನಿ ಪೂರಿ ಎಲ್ಲಿ ಸಿಗುತ್ತದೆ ಎಂದು ಹುಡುಕಾಡುವುದೇ ಬೇಡ. ಏಕೆಂದರೆ ಈಗ ಪ್ರತಿ ಊರಿನಲ್ಲಿಯೂ ನಾಲ್ಕು ಜನ ಸೇರುವಲ್ಲಿ ಒಂದಾದರೂ ಪಾನಿಪೂರಿ ಅಂಗಡಿ ಇದ್ದೇ ಇರುತ್ತದೆ.

ಮಾಮೂಲಿ ಸ್ಥಳದಲ್ಲಿ ನೀವು ಕೇಳದೆಯೇ ನಿಮ್ಮ ರುಚಿ ತಯಾರಾಗುತ್ತದೆ

ಮಾಮೂಲಿ ಸ್ಥಳದಲ್ಲಿ ನೀವು ಕೇಳದೆಯೇ ನಿಮ್ಮ ರುಚಿ ತಯಾರಾಗುತ್ತದೆ

ನೀವು ವಾಸಿಸುವ ಸ್ಥಳದಲ್ಲಿ ಪ್ರತಿದಿನ ಸಂಜೆ ತನ್ನ ತಳ್ಳುಗಾಡಿಯೊಂದಿಗೆ ಆಗಮಿಸುವ ಅಂಗಡಿಯಾತನನ್ನು ಶೀಘ್ರವೇ ಪರಿಚಯಿಸಿಕೊಂಡುಬಿಡುತ್ತೀರಿ. ನಿಮಗೇನು ಬೇಕು ಎಂದು ಆತನಿಗೆ ಕೆಲವು ದಿನಗಳಲ್ಲಿಯೇ ಗೊತ್ತಾಗಿ ಬಿಡುತ್ತದೆ. ಬಳಿಕ ನೀವು ಹೇಳದೆಯೇ ನಿಮ್ಮ ಬಯಸಿದ್ದಷ್ಟು ಖಾರದ (ಅಥವಾ ಸಿಹಿಯ) ಪಾನಿಪೂರಿ ನೀವು ಕೇಳದೇ ಸಿದ್ಧವಾಗಿಬಿಡುತ್ತದೆ. ಸಾಮಾನ್ಯವಾಗಿ ಸಮಾಜದ ಕೆಳಸ್ತರದಿಂದ ಬಂದಿರುವ ವ್ಯಕ್ತಿಗಳು ಪಾನಿಪೂರಿ ಅಂಗಡಿಯನ್ನು ನಡೆಸುತ್ತಾರೆ. ಅವರಿಗೆ ತಮ್ಮ ಗಿರಾಕಿಗಳ ವಿಶ್ವಾಸ ಗಳಿಸುವುದು ಅತ್ಯಂತ ಅವಶ್ಯವಾಗಿದೆ. ಏಕೆಂದರೆ ತಮ್ಮ ಗ್ರಾಹಕರನ್ನು ಕಳೆದುಕೊಂಡು ತಮ್ಮ ವ್ಯಾಪಾರವನ್ನು ಕುಂಠಿತಗೊಳಿಸಲು ಯಾರಿಗೂ ಇಷ್ಟವಿಲ್ಲ. ಇದಕ್ಕಾಗಿ ನಿಮ್ಮ ಮಾತುಗಳನ್ನು ಅವರು ಗಮನವಿಟ್ಟು ಕೇಳುತ್ತಾರೆ. ನಿಮ್ಮ ಅಭಿರುಚಿಯನ್ನು ಕೇಳಿ ಅದಕ್ಕೆ ತಕ್ಕಂತೆ ಪಾನಿಪೂರಿ ತಯಾರಿಸಿಕೊಡುತ್ತಾರೆ. ಇದು ನಿಮ್ಮಲ್ಲಿ ವಿಶ್ವಾಸ ಹೆಚ್ಚಿಸುತ್ತದೆ. ಕಾಲಕ್ರಮೇಣ ಪಾನಿಪೂರಿಯಾತನೂ ತನ್ನ ಮನೆಯ ಸಮಸ್ಯೆಗಳನ್ನೂ ನಿಮ್ಮೊಂದಿಗೆ ವಿಮರ್ಶಿಸುವಷ್ಟು ಅತ್ಮೀಯತೆ ಬೆಳೆಯುತ್ತದೆ.

ಪ್ರತಿ ಪೂರಿ ಒಂದು ತುತ್ತಿಗೆ ಸಮಾನವಾಗಿದೆ

ಪ್ರತಿ ಪೂರಿ ಒಂದು ತುತ್ತಿಗೆ ಸಮಾನವಾಗಿದೆ

ಭಾರತೀಯರು ಯಾವ ರುಚಿಯನ್ನು ಬಯಸುತ್ತಾರೆ ಎನ್ನುವುದರ ಜೊತೆಗೇ ಯಾವ ಗಾತ್ರದಲ್ಲಿದ್ದರೆ ಉತ್ತಮ ಎಂಬ ಪ್ರಶ್ನೆಯನ್ನೂ ವಿದೇಶೀ ಸಂಸ್ಥೆಗಳು ಮೊದಲೇ ಕೇಳಿಕೊಂಡಿದ್ದರೆ ಇನ್ನೂ ಹೆಚ್ಚಿನ ವ್ಯಾಪಾರಗಳಿಸುತ್ತಿದ್ದವು. ಏಕೆಂದರೆ ಭಾರತೀಯರಿಗೆ ತುತ್ತುಗಳನ್ನಾಗಿ ತಮ್ಮ ಆಹಾರಗಳನ್ನು ಸೇವಿಸುವ ಸಂಪ್ರದಾಯವಿದೆ. ದೋಸೆಯನ್ನು ಸಹಾ ನಾವು ತಟ್ಟೆಯಲ್ಲಿದ್ದಂತೆಯೇ ಒಂದು ತುತ್ತಿಗಾಗುವಷ್ಟು ಮುರಿದುಕೊಂಡು ಬಾಯಿಯಲ್ಲಿಡುತ್ತೇವೆಯೇ ವಿನಃ ಸುರುಳಿಯಾಗಿಸಿ ಬಾಳೆಹಣ್ಣಿನಂತಲ್ಲ. ಆದರೆ ವಿದೇಶೀ ಆಹಾರಕ್ರಮದಲ್ಲಿ ಆಹಾರದ ದೊಡ್ಡ ಭಾಗವನ್ನು ಕೈಯಲ್ಲಿ ಹಿಡಿದು ಅದರ ಒಂದು ಭಾಗವನ್ನು ತಿಂದು ಉಳಿದದ್ದನ್ನು ಕೈಯಲ್ಲಿಯೇ ಉಳಿಸಿಕೊಳ್ಳುವ ಬಗೆಯಾಗಿದೆ (ಉದಾಹರಣೆಗೆ ಬರ್ಗರ್) ಅಥವಾ ಚಾಕು, ಮುಳ್ಳಿನಿಂದ ಹಿಡಿದು ಬಲಗೈ, ಎಡಗೈಗಳ ಬೇಧವಿಲ್ಲದೇ ತಿನ್ನುವ ಬಗೆ ಭಾರತೀಯರು ಬಯಸದ ವಿಧಾನವಾಗಿದೆ.ಆದರೆ ಪಾನಿಪೂರಿಯ ಪ್ರತಿ ಪೂರಿ ಒಂದು ತುತ್ತಿಗೆ ಸಮಾನವಾಗಿದ್ದು ಎಡಗೈಯಲ್ಲಿ ತಿನ್ನುವ ಪ್ರಮೇಯವೇ ಇಲ್ಲದಿರುವ ಕಾರಣ ನಮ್ಮೆಲ್ಲರಿಗೆ ಅಚ್ಚುಮೆಚ್ಚಿನದ್ದಾಗಿದೆ.

 ಪಾನಿಪೂರಿ ಸ್ವಚ್ಛವಾಗಿಲ್ಲ ಎಂಬ ಕುಂಟುನೆಪ ಬೇಡ

ಪಾನಿಪೂರಿ ಸ್ವಚ್ಛವಾಗಿಲ್ಲ ಎಂಬ ಕುಂಟುನೆಪ ಬೇಡ

ಪಾನಿಪೂರಿ ಅಂಗಡಿಯವರು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದಿಲ್ಲ ಎಂದು ದೂರದಿಂದ ನೋಡಿ ನಿರ್ಧಾರಕ್ಕೆ ಬರುವುದು ಬೇಡ. ಎಲ್ಲೋ ಒಂದೆರಡು ಕಡೆ ಅಪವಾದಗಳನ್ನು ಹೊರತುಪಡಿಸಿ ಎಲ್ಲಾ ಪಾನಿಪೂರಿ ತಯಾರಿಸುವವರು ಸ್ವಚ್ಛತೆಗೆ ಆದ್ಯತೆ ನೀಡುತ್ತಾರೆ. ನೀರುಳ್ಳಿ, ಆಲುಗಡ್ಡೆ, ಮಸಾಲಾಗಳನ್ನು ಅವರು ಮನೆಯಲ್ಲಿಯೇ ತಯಾರಿಸಿಕೊಂಡು ತರುತ್ತಾರೆ. ತಮ್ಮ ತಳ್ಳುಗಾಡಿಯನ್ನೂ ಸಾಧ್ಯವಾದಷ್ಟು ಮಟ್ಟಿಗೆ ಸ್ವಚ್ಛವಾಗಿಯೇ ಇಟ್ಟುಕೊಂಡಿರುತ್ತಾರೆ. ಏಕೆಂದರೆ ಸ್ವಚ್ಛವಾಗಿಲ್ಲ ಎಂದು ಗ್ರಾಹಕ ದೂರಹೋದರೆ ಮತ್ತೊಮ್ಮೆ ಅದೇ ಅಂಗಡಿಗೆ ಬರುವುದು ಅನುಮಾನ.

 ಪಾನಿಪೂರಿ ಸ್ವಚ್ಛವಾಗಿಲ್ಲ ಎಂಬ ಕುಂಟುನೆಪ ಬೇಡ

ಪಾನಿಪೂರಿ ಸ್ವಚ್ಛವಾಗಿಲ್ಲ ಎಂಬ ಕುಂಟುನೆಪ ಬೇಡ

ಮೊದಲು ಸ್ಟೀಲಿನ ಪ್ಲೇಟುಗಳಲ್ಲಿ ಪಾನಿಪೂರಿ ಒದಗಿಸಲಾಗುತ್ತಿತ್ತು. ಕೊಂಚಹೊತ್ತಿನಲ್ಲಿಯೇ ಎಲ್ಲ ತಟ್ಟೆಗಳು ಮುಗಿದು ಕೂಡಲೇ ಎಂಜಲುತಟ್ಟೆಗಳನ್ನು ತೊಳೆಯುವ ಅಗತ್ಯವಿರುತ್ತಿತ್ತು. ಆ ಧಾವಂತದಲ್ಲಿ ಅತಿ ಸ್ವಚ್ಛತೆ ಕಾಪಾಡಿಕೊಳ್ಳಲು ಅವರು ವಿಫಲರಾಗುತ್ತಿದ್ದರು. ಇಂದು ಒಮ್ಮೆ ಬಳಸಿ ಎಸೆಯುವ ಪ್ಲೇಟುಗಳಿರುವುದರಿಂದ ಈ ತೊಂದರೆ ತಪ್ಪಿದೆ. ಅಷ್ಟಕ್ಕೂ ಪಾನಿಪೂರಿಯವರು ಅಸ್ವಚ್ಛರಾಗಿದ್ದಲ್ಲಿ ನಮ್ಮ ಕಣ್ಣಿನೆದುರೇ ಇರುವುದರಿಂದ ಪಾನಿಪೂರಿಯನ್ನು ತಿರಸ್ಕರಿಸುವ ಹಕ್ಕು ನಿಮಗೆ ಇದೆ. ಆದರೆ ಹೋಟೆಲಿನಲ್ಲಿ ನೀವು ತಿನ್ನುವ ಸ್ವಾದಿಷ್ಟ ತಿಂಡಿ ತಯಾರಾದ ಅಡುಗೆ ಮನೆಯ ಸ್ವಚ್ಛತೆಯನ್ನು ಎಂದಾದರೂ ಗಮನಿಸಿದ್ದೀರಾ?

X
Desktop Bottom Promotion