ಸೃಷ್ಟಿಯ ಸಂರಕ್ಷಕ ಶಿವನ ಜನ್ಮವಾಗಿದ್ದು ಹೇಗೆ ಗೊತ್ತಾ? ಏನಿದು ಪುರಾಣ ಕಥೆ..!

ಈ ವರ್ಷದ ಮಹಾ ಶಿವರಾತ್ರಿ ಇನ್ನೇನು ಹತ್ತಿರ ಬರುತ್ತಿದೆ. ಹೀಗಾಗಿ ನಾವು ಶಿವನಾಮ ಸ್ಮರಣೆಯ ಕಡೆ ಹೆಚ್ಚು ಗಮನಕೊಡೋಣ. ಶಿವನಲ್ಲಿ ಭಕ್ತಿಯಿಂದ ನಡೆದುಕೊಂಡರೆ ಪಾಪಗಳು ಮರೆಯಾಗಿ ಮುಕ್ತಿ ಮಾರ್ಗ ದೊರೆಯಲಿದೆ ಎಂಬುದು ಪುರಾಣಗಳ ಉಲ್ಲೇಖವಾಗಿದೆ. ಶಿವ ಎಲ್ಲಾ ದೇವರಿಗೂ ಮೂಲ ಎನ್ನಲಾಗಿದೆ. ಶಿವನಿಂದ ಆಗದ ಕೆಲಸಗಳಿಲ್ಲ, ಆತ ಒಲಿದರೆ ಎಲ್ಲಾ ಕಷ್ಟಗಳು ಮರೆಯಾಗುತ್ತವೆ ಎಂದು ನಂಬಲಾಗಿದೆ.

ಹಿಂದೂ ಧರ್ಮದಲ್ಲಿ ಶಿವನು ದೇವರುಗಳಿಗೆ ದೇವನಾದ ಅಗ್ರಗಣ್ಯನು ಎ೦ದೇ ಲೋಕಪ್ರಸಿದ್ಧನಾಗಿರುವವನು. ಬ್ರಹ್ಮ ವಿಷ್ಣು ಮಹೇಶ್ವರ ಎಂಬ ತ್ರಿದೇವರಲ್ಲಿ ಮಹೇಶ್ವರನೇ ಹೆಚ್ಚು ಶಕ್ತಿಶಾಲಿ ಎಂದು ನಂಬುವ ಕಾರಣ ಇತರ ದೇವರುಗಳೂ ಸಂಕಟಬಂದಾಗ ಶಿವನ ಬಳಿ ಸಹಾಯ ಬೇಡಿ ಧಾವಿಸುವ ಹಲವಾರು ದೃಷ್ಟಾಂತಗಳನ್ನು ಪುರಾಣಗಳಲ್ಲಿ ಕಾಣಬಹುದು. ಶಿವನನ್ನು ಭಕ್ತರು ಇನ್ನೂ ಹಲವಾರು ಹೆಸರುಗಳಿಂದ ಕರೆಯುತ್ತಾರೆ.

 Birth Story Of Lord Shiva in Kannada

ಮಹಾದೇವ, ಮಹಾಯೋಗಿ, ಪಶುಪತಿ, ನಟರಾಜ, ಭೈರವ, ವಿಶ್ವನಾಥ, ಭಾವ, ಭೋಲೆನಾಥ ಇತ್ಯಾದಿ. ಅತಿ ಪರಾಕ್ರಮಿಯಾಗಿದ್ದರೂ ಅಗತ್ಯಬೀಳದೇ ಉಪಯೋಗಿಸದ, ಭವ್ಯತೆಯಲ್ಲಿರುವ ಅವಕಾಶವಿದ್ದರೂ ಸರಳವಾದ, ಹಿಮಾಚ್ಛಾದಿತ ಪ್ರದೇಶದಲ್ಲಿ ನೆಲೆಸುವ, ವೈಜ್ರವೈಢೂರ್ಯಗಳಿಂದ ಭೂಷಿತನಾಗಬಹುದಾದರೂ ಸರಳವಾದ ಉಡುಗೆಗಳಿಂದ, ಭಕ್ತನ ನೆರವಿಗೆ ಸದಾ ಧಾವಿಸುವ, ಕೋಪಗೊಂಡರೆ ಭೂಮಿಯನ್ನೇ ಸುಟ್ಟುಬಿಡುವ ಸಾಮರ್ಥ್ಯವಿರುವ ಶಿವ ಇತರ ದೇವರುಗಳಿಗಿಂತ ಭಿನ್ನನೂ, ಜಟಿಲನೂ ಆಗಿದ್ದಾನೆ.

ಶಿವನಲ್ಲಿ ಲೋಕವನ್ನೇ ವಿನಾಶಗೊಳಿಸುವ ಶಕ್ತಿಯಿದ್ದರೂ ಈ ಶಕ್ತಿಯನ್ನು ಎಂದಿಗೂ ಆತ ತಪ್ಪು ಕೆಲಸಗಳಿಗೆ ಬಳಸಲಾರ. ದುಷ್ಟರ ವಿನಾಶ ಮತ್ತು ದುಷ್ಟಶಕ್ತಿಗಳನ್ನು ನಿವಾರಿಸಲು ಈ ಶಕ್ತಿಯನ್ನು ಬಳಸುವ ಶಿವ ಹಲವು ಬಾರಿ ಮಾತ್ರ ತನ್ನ ಈ ಶಕ್ತಿಯನ್ನು ಬಳಸಿದ್ದಾನೆ.


ಶಿವನ ಜನನವಾದುದು ಹೇಗೆ?

ಶಿವನ ಜನನದ ಬಗೆ ಒಂದು ಕುತೂಹಲಕಾರವಾದ ಕಥೆಯಿದೆ. ಒಂದು ದಿನ ಬ್ರಹ್ಮ ಮತ್ತು ವಿಷ್ಣು ಇಬ್ಬರೂ ತಮ್ಮಿಬ್ಬರಲ್ಲಿ ಬಲಶಾಲಿ ಯಾರು ಎಂಬ ವಿಷಯವಾಗಿ ವಾಗ್ಯುದ್ದ ನಡೆಸಿದ್ದರು. ಆ ಸಮಯದಲ್ಲಿ ಅವರೆದುರಿಗೆ ಅತ್ಯಂತ ಎತ್ತರವಾದ ಮತ್ತು ಪ್ರಖರವಾದ ಬೆಳಕಿನ ಕಂಭವೊಂದು ಪ್ರತ್ಯಕ್ಷವಾಯಿತು. ಇದರ ಬೇರುಗಳು ಪಾತಾಳಕ್ಕೂ, ಮರದ ತುದಿ ಆಕಾಶಕ್ಕಿಂತಲೂ ಮೇಲೆ ವ್ಯಾಪಿಸಿದ್ದವು.

ಈ ಕಂಭದ ಬಗ್ಗೆ ಕುತೂಹಲಗೊಂಡ ಬ್ರಹ್ಮ ಮತ್ತು ವಿಷ್ಣು ಇಬ್ಬರೂ ಇದರ ಬುಡ ಮತ್ತು ತುದಿಗಳೆಲ್ಲಿವೆ ಎಂದು ತಿಳಿದುಕೊಳ್ಳಲು ಉತ್ಸುಕರಾದರು. ಬ್ರಹ್ಮ ಒಂದು ಹಂಸದ ರೂಪ ತಾಳಿ ಕಂಭದ ತುತ್ತ ತುದಿಗೆ ಹಾರಿ ಹೋದರೆ ವಿಷ್ಣು ಒಂದು ಕಾಡುಹಂದಿಯ ರೂಪವನ್ನು ತಳೆದು ಭೂಮಿಯಲ್ಲಿ ಸುರಂಗ ಕೊರೆಯುತ್ತಾ ಪಾತಾಳದತ್ತ ಸಾಗಿದ. ಆದರೆ ಇಬ್ಬರ ಸಾಮರ್ಥಕ್ಕೂ ಮೀರಿ ಆ ಕಂಭ ಬೆಳೆದಿರುವುದರಿಂದ ಇದರ ತುದಿ ಅಥವಾ ಬುಡಗಳನ್ನು ತಲುಪಲಾರದೇ ಸೋತು ಇಬ್ಬರೂ ಭೂಮಿಯ ಮೇಲೆ ಹಿಂದಿರುಗುತ್ತಾರೆ.

ಆ ಬಳಿಕ ಆ ಕಂಭದಲ್ಲಿ ಒಂದು ಬಿರುಕು ಮೂಡಿ ಆ ಬಿರುಕಿನಿಂದ ಶಿವ ಹೊರಬರುತ್ತಾನೆ. ಶಿವನ ಈ ಪರಾಕ್ರಮ ಮತ್ತು ಅಪರಿಮಿತ ಶಕ್ತಿಯನ್ನು ಕಂಡ ಇಬ್ಬರೂ ತಮಗಿಂತಲೂ ಶಕ್ತಿಶಾಲಿಯಾದ ದೇವರು ಎಂದು ಶಿವನನ್ನು ಮೂರನೆಯವನಾಗಿ ಸೇರಿಸಿಕೊಳ್ಳುತ್ತಾರೆ. ಆದ್ದರಿಂದಲೇ ತ್ರಿಮೂರ್ತಿಗಳ ಹೆಸರು ಹೇಳುವಾಗ ಮೊದಲು ಬಂದ ಕಾರಣ ಬ್ರಹ್ಮ ವಿಷ್ಣುರವರ ಹೆಸರನ್ನೂ ನಂತರ ಬಂದ ಕಾರಣ ಮಹೇಶ್ವರ ಎಂಬ ಹೆಸರನ್ನೂ ಕರೆಯಲಾಗುತ್ತದೆ.

ಹೀಗಾಗಿ ಈ ದಿನವನ್ನೂ ಮಹಾ ಶಿವರಾತ್ರಿ ಅಂತಲೂ ಆಚರಿಸಲಾಗುತ್ತದೆ. ಆದರೆ ಶಿವರಾತ್ರಿಯಂದೇ ಶಿವನ ಜನ್ಮದಿನ ಎಂದು ಎಲ್ಲಿಯೂ ಉಲ್ಲೇಖವಿಲ್ಲ. ಶಿವರಾತ್ರಿಗೆ ಇದೂ ಒಂದು ಕಾರಣ ಅಂತಲೂ ಹೇಳಲಾಗುತ್ತದೆ.


ಎಲ್ಲಾ ದೇವರಿಗಿಂತ ಶಿವ ಹೇಗೆ ಪರಾಕ್ರಮಿ?

ಇನ್ನೊಂದು ಕಥೆಯ ಪ್ರಕಾರ ಒಮ್ಮೆ ದೇವಲೋಕದ ಮೇಲೆ ಅಸುರರು ಧಾಳಿಯಿಟ್ಟಾಗ ಎಲ್ಲಾ ದೇವತೆಗಳು ಶಿವನಲ್ಲಿ ಸಹಾಯಕ್ಕಾಗಿ ಧಾವಿಸಿದರು. ರಾಕ್ಷಸರ ಸಂಹಾರಕ್ಕಾಗಿ ಶಿವ ಎಲ್ಲಾ ದೇವರ ಶಕ್ತಿಯ ಸ್ವಲ್ಪ ಪ್ರಮಾಣವನ್ನು ಎರವಲು ಪಡೆದುಕೊಂಡ. ಬಳಿಕ ಅಷ್ಟೂ ಅಸುರರನ್ನು ಹಿಮ್ಮೆಟ್ಟಿಸಿ ದೇವಲೋಕವನ್ನು ಉಳಿಸಿದ. ಆದರೆ ಆ ಬಳಿಕ ದೇವತೆಗಳ ಶಕ್ತಿಯನ್ನು ಹಿಂದಿರುಗಿಸದೇ ಇದ್ದ ಕಾರಣ ಶಿವ ಎಲ್ಲರಿಗಿಂತಲೂ ಪರಾಕ್ರಮಿಯಾದ ದೇವನಾಗಿದ್ದಾನೆ.

English summary

MahaShivaratri 2024: How Lord Shiva Was Born: What Is The Birth Story Of Lord Shiva

The festival of Maha Shivratri is approaching. But let's see how Shiva was born in Kailasa, what is there in the Puranas about this.
Story first published: Thursday, February 22, 2024, 7:00 [IST]
X
Desktop Bottom Promotion