Ganesh Chaturthi 2025: ಈ ವರ್ಷ ಗಣೇಶ ಚತುರ್ಥಿ ಯಾವಾಗ? ಮೂರ್ತಿ ಪ್ರತಿಷ್ಠಾಪನೆ, ವಿಸರ್ಜನೆ ಸಮಯ ಇಲ್ಲಿದೆ

ಗಣೇಶ ಚತುರ್ಥಿ ಸಂಭ್ರಮಕ್ಕೆ ಕ್ಷಣಗಣನೆ. ಇದುವೇ ಸಕಲ ವಿಘ್ನಗಳನ್ನು ನಿವಾರಿಸಲು ವಿನಾಯಕನನ್ನು ಪೂಜಿಸುವ ದಿನ. ಹೌದು, ದೇಶದಾದ್ಯಂತ ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ಒಂದು. ಇದನ್ನು ಗಣೇಶನ ಜನ್ಮದಿನವೆಂದು ಆಚರಿಸಲಾಗುತ್ತದೆ. ಈ ದಿನದಂದು ಜನರು ಗಣೇಶನ ಮೂರ್ತಿಯನ್ನು ಮನೆಗೆ ತಂದು ಪೂಜೆ ಸಲ್ಲಿಸುತ್ತಾರೆ. ಈ ಹಬ್ಬವು ಸಾಮಾನ್ಯವಾಗಿ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಬರುತ್ತದೆ. ಗಣೇಶ ಚತುರ್ಥಿಯಂದು, ಭಕ್ತರು ಉಪವಾಸವಿದ್ದು, ವಿನಾಯಕನಿಗೆ ಪ್ರಿಯವಾದ ಮೋದಕ ಮತ್ತು ಲಡ್ಡುಗಳನ್ನು ತಯಾರಿಸಿ ನೈವೇದ್ಯ ಮಾಡುತ್ತಾರೆ. ಹಾಗಿದ್ರೆ, ಈ ವರ್ಷ (Ganesh Chaturthi 2025) ಗಣೇಶ ಚತುರ್ಥಿ ಯಾವಾಗ? ಪೂಜೆಗೆ ಶುಭ ಮುಹೂರ್ತ ಯಾವುದು? ಎಂಬುದನ್ನು ತಿಳಿಯೋಣ ಬನ್ನಿ.

ಗಣೇಶ ಚತುರ್ಥಿಯನ್ನು ಭಾರತದಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಮತ್ತು ಜಿಲ್ಲೆಗಳಲ್ಲಿ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಬೀದಿ-ಬೀದಿಗಳಲ್ಲಿ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಇದು ಒಂದು ದೊಡ್ಡ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಬ್ಬವಾಗಿದೆ. ಈ ಹಬ್ಬವು ಜನರು ಒಟ್ಟಿಗೆ ಸೇರಲು, ಸಂಭ್ರಮಿಸಲು ಮತ್ತು ಗಣೇಶನ ಆಶೀರ್ವಾದ ಪಡೆಯಲು ಒಂದು ಅವಕಾಶವನ್ನು ನೀಡುತ್ತದೆ. ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಈ ಹಬ್ಬವು ಪ್ರಾರಂಭವಾಗಿ, ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ದಶಿಯಂದು ಕೊನೆಗೊಳ್ಳುತ್ತದೆ.

Ganesh Chaturthi date

ಈ ವರ್ಷ ಗಣೇಶ ಚತುರ್ಥಿ ಯಾವಾಗ?

ಈ ವರ್ಷ ಗಣೇಶ ಚತುರ್ಥಿಯನ್ನು ಆಗಸ್ಟ್ 27, 2025ರಂದು ಆಚರಿಸಲಾಗುವುದು. ಪಂಚಾಂಗದ ಪ್ರಕಾರ, ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ಆಗಸ್ಟ್ 26ರ ಮಧ್ಯಾಹ್ನ 1.54 ಗಂಟೆಗೆ ಪ್ರಾರಂಭವಾಗುತ್ತದೆ. ಇದು ಆಗಸ್ಟ್ 27ರ ಮಧ್ಯಾಹ್ನ 3.44 ಗಂಟೆಗೆ ಕೊನೆಗೊಳ್ಳುತ್ತದೆ.

ಗಣೇಶ ಪೂಜೆಗೆ ಶುಭ ಸಮಯ

ಆಗಸ್ಟ್ 27 ರಂದು ಗಣೇಶ ಪೂಜೆಗೆ ಮಧ್ಯಾಹ್ನದ ಶುಭ ಮುಹೂರ್ತವು ಬೆಳಗ್ಗೆ 11.05 ಗಂಟೆಯಿಂದ ಮಧ್ಯಾಹ್ನ 1.40 ಗಂಟೆ ವರೆಗೆ ಇರುತ್ತದೆ. ಈ ಸಮಯದಲ್ಲಿ ವಿಧಿ-ವಿಧಾನಗಳೊಂದಿಗೆ ಪೂಜೆ ಸಲ್ಲಿಸಿ, ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿ, ಪೂಜೆ ಮಾಡುವುದು ಮಂಗಳಕರವಾಗಿರುತ್ತದೆ. ಈ ದಿನ ಭಕ್ತರು ಗಣಪತಿಯ ಮೂರ್ತಿಯನ್ನು ಮನೆ, ಕಚೇರಿ ಅಥವಾ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸುತ್ತಾರೆ.

ಗಣೇಶ ಪ್ರತಿಷ್ಠಾಪನೆ ನಿಯಮಗಳು

ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಲು ಕೆಲವು ನಿಯಮಗಳಿವೆ. ವಿಘ್ನ ನಿವಾರಕನಾದ ಗಣಪತಿಯ ಮೂರ್ತಿಯನ್ನು ಮನೆಯಲ್ಲಿ ಇಡುವಾಗ ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಶುಭ ಮುಹೂರ್ತದಲ್ಲಿ ಗಣೇಶನ ವಿಗ್ರಹವನ್ನು ಮನೆಯ ಉತ್ತರ ಅಥವಾ ಆಗ್ನೇಯ ದಿಕ್ಕಿನಲ್ಲಿ ಪ್ರತಿಷ್ಠಾಪಿಸಬೇಕು. ಬಲಮುರಿ ಗಣೇಶನನ್ನು ಮಾತ್ರ ಪ್ರತಿಷ್ಠಾಪಿಸಬೇಕು. ಗಣೇಶನು ಕುಳಿತಿರುವ ಭಂಗಿಯಲ್ಲಿರಬೇಕು. ವಿಗ್ರಹದಲ್ಲಿ ಪವಿತ್ರ ಜನಿವಾರ ಮತ್ತು ಇಲಿ ಇರಬೇಕು. ಮೂರ್ತಿಯನ್ನು ಪ್ರತಿಷ್ಠಾಪಿಸುವ ಸ್ಥಳವು ಸ್ವಚ್ಛವಾಗಿರಬೇಕು. ಗಣೇಶನ ಮುಖವು ಪಶ್ಚಿಮ ದಿಕ್ಕಿಗೆ ಇರುವಂತೆ ನೋಡಿಕೊಳ್ಳಬೇಕು.

ಗಣೇಶ ವಿಸರ್ಜನೆ ಯಾವಾಗ?

ಈ ವರ್ಷ ಗಣೇಶ ವಿಸರ್ಜನೆಯು ಸೆಪ್ಟೆಂಬರ್ 6, 2025ರ ಶನಿವಾರದಂದು ಅನಂತ ಚತುರ್ದಶಿಯ ದಿನ ನಡೆಯಲಿದೆ. ಅಂದರೆ, ಗಣೇಶ ಚತುರ್ಥಿಯ ಹತ್ತು ದಿನಗಳ ನಂತರ ಗಣೇಶ ವಿಸರ್ಜನೆಯನ್ನು ಮಾಡುವುದು ಮಂಗಳಕರ ಎನ್ನಲಾಗಿದೆ. ಈ ದಿನ ಭಕ್ತರು 'ಗಣಪತಿ ಬಪ್ಪಾ ಮೋರಯಾ' ಎಂದು ಹೇಳಿ ಗಣೇಶನ ವಿಗ್ರಹವನ್ನು ನೀರಿನಲ್ಲಿ ವಿಸರ್ಜಿಸುತ್ತಾರೆ.

ಚಂದ್ರ ದರ್ಶನ ಯಾವಾಗ ತಪ್ಪಿಸಬೇಕು?

ಗಣೇಶ ಚತುರ್ಥಿಯಂದು ಚಂದ್ರ ದರ್ಶನ ಮಾಡುವುದನ್ನು ಕೆಲ ಸಮಯಗಳವರೆಗೆ ತಪ್ಪಿಸಬೇಕು. ಆಗಸ್ಟ್ 26 ರಂದು ಮಧ್ಯಾಹ್ನ 1.54 ರಿಂದ ರಾತ್ರಿ 8.29 ಗಂಟೆಯವರೆಗೆ ಚಂದ್ರ ದರ್ಶನ ಮಾಡಬಾರದು. ಹಾಗೆಯೇ, ಆಗಸ್ಟ್ 27 ರಂದು ಬೆಳಗ್ಗೆ 9.28 ರಿಂದ ರಾತ್ರಿ 8.57 ರವರೆಗೆ ಚಂದ್ರ ದರ್ಶನವನ್ನು ಮಾಡಬಾರದು.

English summary

Ganesh Chaturthi 2025: When will Ganesha Chaturthi be celebrated this year?

Ganesh Chaturthi 2025: When will Ganesha Chaturthi be celebrated this year? Know the muhurat, puja vidhi & significance
Story first published: Wednesday, July 23, 2025, 19:00 [IST]
X
Desktop Bottom Promotion