ಮಳೆಗಾಗಿ ಭಾರತದಲ್ಲಿ ಆಚರಿಸುವ ಚಿತ್ರ-ವಿಚಿತ್ರವಾದ ಪದ್ಧತಿಗಳಿವು

ರೈನ್‌ ರೈನ್ ಗೋ ಎವೇ... ಎಂದು ಮಕ್ಕಳು ರೈಮ್ಸ್‌ ಹೇಳುತ್ತಿದ್ದರೆ ಅದನ್ನೊಮ್ಮೆ ನಿಲ್ಸಿ ಹುಯ್ಯೋ ಹುಯ್ಯೋ ಮಳೆರಾಯ ಎಂದು ಹಾಡ್ರಿ, ಹಾಗಾದರೂ ಈ ಭೂಮಿಗೆ ಮಳೆ ಬಂದು ಇಳೆ ತಂಪಾಗಲಿದೆ. ಕೆರೆ, ಕೊಳ, ಬಾವಿ, ನದಿಗಳು ನೀರಿಯಿಲ್ಲದೆ ಬತ್ತಿ ಹೋಗಿವೆ, ಇಷ್ಟೊತ್ತಿಗೆ ಪೈರು ನಾಟಿ ಮಾಡುವ ಸಮಯವಾಯ್ತು, ಆದ್ರೆ ಮಳೆಯ ಸುಳಿವೇ ಇಲ್ಲ ಎಂದು ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಈ ವರ್ಷ ಇನ್ನೂ ಮಳೆ ಶುರುವಾಗದ ಕಾರಣ ಬರಗಾಲದ ಸೂಚನೆಯೇ? ಒಂದು ವೇಲೆ ಮಳೆ ಸರಿಯಾಗಿ ಬೀಳದಿದ್ದರೆ ಗತಿಯೇನು ಎಂಬ ಚಿಂತೆ ಕಾಡಿದೆ. ಮಳೆಗಾಗಿ ಜನ ಪೂಜೆಗಳನ್ನು ಮಾಡಿಸುತ್ತಿದ್ದಾರೆ, ವರುಣದೇವನ ತೃಪ್ತಿ ಪಡಿಸಲು ಕೆಲವೊಂದು ವಿಚಿತ್ರ ಸಂಪ್ರದಾಯಗಳನ್ನು ಕೂಡ ಭಾರತದಲ್ಲಿ ಪಾಲಿಸಲಾಗುವುದು. ಮಳೆಗಾಗಿ ಭಾರತದಲ್ಲಿ ಆಚರಿಸುವ ವಿಚಿತ್ರ ಪದ್ಧತಿಗಳ ಬಗ್ಗೆ ಇಲ್ಲಿ ಹೇಳಲಾಗಿದೆ ನೋಡಿ:

Bizarre Practices

ವರುಣ ಯಜ್ಞ
ಅರ್ಚಕರುಗಳು ನೀರು ತುಂಬಿದ ದೊಡ್ಡ ಬ್ಯಾರೆಲ್‌ಗಳಲ್ಲಿ ಮುಳುಗಿ ನಿಂತು ಮಂತ್ರಗಳನ್ನು ಹೇಳುತ್ತಾ ವರುಣನ ಪ್ರಾರ್ಥನೆ ಮಾಡಲಾಗುವುದು. ವರುಣನ ಮಂತ್ರಗಳನ್ನು 1 ಸಾವಿರ ಬಾರಿ ಪಠಿಸಲಾಗುವುದು. ಈ ರೀತಿ ಯಜ್ಞವನ್ನು ಕರ್ನಾಟಕದಲ್ಲೂ ಮಾಡಲಾಗಿತ್ತು. ವರುಣನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮಳೆಗಾಗಿ ಪ್ರಾರ್ಥಿಸಲಾಗುವುದು.

ಕಪ್ಪೆಗಳ ಮದುವೆ
ನಮ್ಮ ಕರ್ನಾಟಕದಲ್ಲಿ ಈ ಆಚರಣೆ ಹಲವು ಕಡೆ ಇದೆ. ಮಳೆ ಬೀಳದೆ ಇದ್ದಾಗ ಎರಡು ಕಪ್ಪೆಗಳಿಗೆ ಮದುವೆ ಮಾಡಲಾಗುವುದು. ಹೀಗೆ ಕಪ್ಪೆಗಳಿಗೆ ಮದುವೆ ಮಾಡುವುದರಿಂದ ಮಳೆ ಬರುತ್ತದೆ ಎಂಬ ನಂಬಿಕೆ ಇದೆ.
ಕಪ್ಪೆ ತಾಳಿ
ಇನ್ನು ಕಪ್ಪೆಗಳನ್ನು ಕೋಲಿನ ಮಧ್ಯ ಕಟ್ಟಿ ಅದನ್ನು ಭುಜದಲ್ಲಿ ಎತ್ತಿಕೊಂಡು ಜಾನಪದ ಹಾಡುಗಳನ್ನು ಹಾಡುತ್ತಾ ಮನೆಮನೆಗೆ ಹೋಗಿ ಅಕ್ಕಿಯನ್ನು ಭಿಕ್ಷೆ ಬೇಡಿ, ಆ ಅಕ್ಕಿಯನ್ನು ತಂದು ಅನ್ನ ಮಾಡಿ ಬೇಯಿಸಿ ತಿನ್ನುವ ಸಂಪ್ರದಾಯವಿದೆ. ಹೀಗೆ ಮಾಡುವುದರಿಂದ ಮಳೆ ಬರುವುದು ಎಂಬ ನಂಬಿಕೆ ಇದೆ.
ಕಪ್ಪೆಗಳ ಮದುವೆ ಆಚರಣೆ
ಹೆಣ್ಣು-ಗಂಡು ಕಪ್ಪೆಯನ್ನು ಹಿಡಿದು ತರಲಾಗುವುದು. ಹೆಣ್ಣು ಕಪ್ಪೆಗೆ ಎಣ್ನೆ ಹಚ್ಚಿ ಸ್ನಾನ ಮಾಡಿಸಿ, ಅದಕ್ಕೆ ಸಿಂಧೂರ ಹಾಕಿ , ಬಣ್ಣದ ಬಟ್ಟೆಯ ತುಂಡನ್ನು ಹಾಕಿ ಅಲಂಕರಿಸಿ , ನಂತರ ಗಂಡು ಕಪ್ಪೆಯನ್ನು ಕೂರಿಸಿ ಅದರಿಂದ ತಾಳಿ ಕಟ್ಟಿಸುವಂತೆ ಗ್ರಾಮಸ್ಥರೇ ತಾಳಿ ಕಟ್ಟಿ ನಂತರ ಆ ಎರಡು ಕಪ್ಪೆಗಳನ್ನು ಮೆರವಣಿಗೆಯಲ್ಲಿ ತಂದು ಕೊಳಕ್ಕೆ ಬಿಡಲಾಗುವುದು. ಹೀಗೆ ಮಾಡುವುದರಿಂದ ಮಳೆಯಾಗುತ್ತದೆ ಎಂದು ಹಲವು ಕಡೆ ನಂಬಲಾಗಿದೆ.

ಗಂಡು ಮಕ್ಕಳನ್ನು ಬೆತ್ತಲೆಯಾಗಿ ಮಣ್ಣಿನಲ್ಲಿ ಮುಚ್ಚುವುದು
ಈ ರೀತಿಯ ವಿಚಿತ್ರ ಪದ್ಧತಿ ಉತ್ತರ ಪ್ರದೇಶದಲ್ಲಿದೆ. ಮಣ್ಣಿನ ಗುಡ್ಡೆ ರೀತಿ, ಗಂಡು ಮಕ್ಕಳ ಹಿಂಬದಿಗೆ ಮಣ್ಣು ಮೆತ್ತಿ ನಂತರ ಅವರ ಕೈಗಳನ್ನು ಕಟ್ಟಿದಂತೆ ಆ ಮಣ್ಣಿನ ಗುಡ್ಡೆಯಲ್ಲಿ ಮಲಗಬೇಕು, ಅವರ ಮೈ ಮುಚ್ಚುವಂತೆ ಮಣ್ಣು ಹಾಕಲಾಗುವುದು, ಆ ಮಕ್ಕಳು ಮಳೆಗಾಗಿ ಪ್ರಾರ್ಥಿಸಬೇಕು, ಆಗ ವರುಣ ದೇವ ಆ ಮಕ್ಕಳ ಪ್ರಾರ್ಥನೆಗೆ ಕರಗಿ ಮಳೆ ಸುರಿಸುತ್ತಾನೆ ಎಂಬ ವಿಚಿತ್ರ ಪದ್ಧತಿ ಇದೆ.

ವನವಾಸಕ್ಕೆ ಹೋಗುವುದು
ತೆಲಂಗಾಣ ಸೇರಿದಂತೆ ಈ ನಂಬಿಕೆ ಇದೆ. ಮಳೆ ಬಾರದಿದ್ದಾಗ ಗ್ರಾಮಸ್ಥರು ಕಾಡಿಗೆ ಹೋಗಿ ನೆಲೆಸುತ್ತಾರೆ, ಹೀಗೆ ಮಾಡುವುದರಿಂದ ಮಳೆ ಬರುತ್ತದೆ ಎಂಬ ನಂಬಿಕೆ ಇದೆ. ಅಲ್ಲಿಯ ಮಂತ್ರಿಯೊಬ್ಬರ ಪತ್ನಿ ಕೂಡ ಈ ರೀತಿ ಮಳೆಗಾಗಿ ಪ್ರಾರ್ಥಿಸಿ ಗ್ರಾಮಸ್ಥರ ಜೊತೆಗೆ ವನವಾಸಕ್ಕೆ ಹೋಗಿದ್ದರು.

ಮಹಿಳೆಯರು ಬೆತ್ತಲೆಯಾಗಿ ಹೊಲ ಊಳುವುದು
ಉತ್ತರ ಪ್ರದೇಶದಲ್ಲಿ ಇಂಥದ್ದೊಂದು ನಂಬಿಕೆ ಇದೆ. ಮಹಿಳೆಯರು ತಲೆಗೆ ಪಲ್ಲು ಹಾಕದೆ ಮನೆಯಿಂದ ಹೊರಗಡೆ ಬರುವುದಿಲ್ಲ, ಅಂಥದ್ದರಲ್ಲಿ ಮಧ್ಯರಾತ್ರಿ ಮಹಿಳೆಯರು ಬೆತ್ತಲೆಯಾಗಿ ಹೊರಬಂದು ಹೊಲವನ್ನು ಹೂಳುವ ಪದ್ಧತಿ ಇದೆ. ಇದನ್ನು ಮಾಡುವ ಮೊದಲು ಇಂಧ್ರ ಪೂಜೆ ಮಾಡಲಾಗುವುದು. ಈ ಸಮಯದಲ್ಲಿ ಯಾವುದೇ ಪುರುಷರ ಹೊರಬರುವಂತಿಲ್ಲ.
ಹೀಗೆ ಮಳೆಗಾಗಿ ಹಲವು ಕಡೆ ಹಲವಾರು ಚಿತ್ರ-ವಿಚಿತ್ರವಾದ ಆಚರಣೆಗಳಿವೆ.

3 ವರ್ಷದ ಹಿಂದೆ ಕೊಪ್ಪಳದಲ್ಲಿ ಮಹಿಳೆಯೊಬ್ಬರು ಅನ್ನ ನೀರು ಬಿಟ್ಟು ಉಪವಾಸವಿದ್ದು ಮಳೆಗಾಗಿ ಪ್ರಾರ್ಥನೆ ಮಾಡಿದ್ದರು, ಇದು ತುಂಬಾನೇ ಸುದ್ದಿಯಾಗಿತ್ತು.

ಮಳೆಯನ್ನು ತರುವುದು ವರುಣ ದೇವ. ದೇವರು ಮುನಿಸಿಕೊಂಡರೆ ಸರಿಯಾಗಿ ಮಳೆಯಾಗಲ್ಲ ಎಂಬುವುದು ನಮ್ಮಲ್ಲಿರುವ ಧಾರ್ಮಿಕ ನಂಬಿಕೆ. ಈ ಬಗೆಯ ಆಚರಣೆಗಳ ಹಿಂದೆ ಕಾರಣವನ್ನು ಹುಡುಕುವವರೂ ಇದ್ದಾರೆ, ಆದರೆ ಇವೆಲ್ಲಾ ತಾರ್ಕಿಕ ನಿಲುವಿಗೆ ಮೀರಿದ್ದು. ಈ ರೀತಿಯ ಆಚರಣೆ ಮಾಡಿದಾಗ ಮಳೆ ಬಂದಿದ್ದು ಇದೆ, ಬಾರದಿದ್ದದ್ದೂ ಇದೆ. ಆದ್ದರಿಂದ ಈ ಬಗೆಯ ಆಚರಣೆಗಳನ್ನು ಒಪ್ಪುವುದು, ಬಿಡುವುದು ಅವರವರ ನಂಬಿಕೆಗೆ ಬಿಟ್ಟ ವಿಚಾರ.

English summary

Bizarre Practices Do In India To Attract Rain In Kannada

These are the bizzare practices people follow to attract the the rain read on...
Story first published: Friday, June 30, 2023, 13:05 [IST]
X
Desktop Bottom Promotion