For Quick Alerts
ALLOW NOTIFICATIONS  
For Daily Alerts

ಇಷ್ಟಾರ್ಥ ಸಿದ್ಧಿಸುವ ಸತ್ಯನಾರಾಯಣ ಪೂಜೆಯ ಮಹತ್ವವೇನು?

|

ಸತ್ಯ ನಾರಾಯಣ ವ್ರತವು ಆಸ್ತಿಕರ ಪಾಲಿಗೆ ಅತ್ಯಂತ ಶ್ರೇಷ್ಠವಾದ ವ್ರತಗಳಲ್ಲಿ ಒಂದಾಗಿದೆ. ಈ ವ್ರತವನ್ನು ಸತ್ಯನಾರಾಯಣ ಸ್ವಾಮಿಯನ್ನು ಮೆಚ್ಚಿಸಲು ಮಾಡಲಾಗುತ್ತದೆ. ಇಲ್ಲಿ ನಾರಾಯಣನು ಸತ್ಯ ಸ್ವರೂಪಿಯಾಗಿ ನಮ್ಮನ್ನು ಕಾಪಾಡಲಿ ಎಂಬ ಆಶಯ ಇರುತ್ತದೆ. ಈ ವ್ರತವನ್ನು ನಮ್ಮ ಇಷ್ಟಾರ್ಥಗಳ ಸಿದ್ಧಿಗಾಗಿ ಮಾಡಲಾಗುವುದರಿಂದ, ಇದನ್ನು ಒಂದು ಸಂಕಲ್ಪ ಅಥವಾ ಕೋರಿಕೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಈ ಪೂಜೆಯನ್ನು ನೀವು ಮಾಡಬಹುದು.

ಅಲ್ಲದೇ ಇಂತಹ ಪೂಜೆಯನ್ನು ಮಾಡಲು ಯಾವುದೇ ವಿಶೇಷ ದಿನಕ್ಕಾಗಿ ಕಾಯಬೇಕಾಗಿಲ್ಲ. ಆದರೂ ಚೈತ್ರ (ಮಾರ್ಚ್ -ಏಪ್ರಿಲ್), ವೈಶಾಖ (ಏಪ್ರಿಲ್-ಮೇ), ಶ್ರಾವಣ (ಜುಲೈ-ಆಗಸ್ಟ್) ಮತ್ತು ಕಾರ್ತಿಕ (ಅಕ್ಟೋಬರ್- ನವೆಂಬರ್) ಮಾಸಗಳಲ್ಲಿ ಇದನ್ನು ಮಾಡಿದರೆ ಒಳ್ಳೆಯದು. ಜೊತೆಗೆ ಸಂಕ್ರಾಂತಿ ಮತ್ತು ಹುಣ್ಣಿಮೆಯ ದಿನ ಸಹ ಇದನ್ನು ಮಾಡಲು ಪ್ರಶಸ್ತವಾದ ಸಮಯವಾಗಿರುತ್ತದೆ.

ಮದುವೆ, ಗೃಹಪ್ರವೇಶಗಳ ದಿನ ಈ ಪೂಜೆಯನ್ನು ಆಚರಿಸುವ ವಾಡಿಕೆ ಬಹುಕಾಲದಿಂದ ನಡೆದುಕೊಂಡು ಬಂದಿದೆ. ಈ ಪೂಜೆಯನ್ನು ಯಶಸ್ವಿಯಾಗಿ ಪೂರೈಸಿದಲ್ಲಿ, ಸ್ವಾಮಿಯು ಭಕ್ತಾಧಿಗಳಿಗೆ ಸಂಪತ್ತು, ಆರೋಗ್ಯ ಮತ್ತು ಐಶ್ವರ್ಯವನ್ನು ದಯಪಾಲಿಸುತ್ತಾನೆ ಎಂಬ ನಂಬಿಕೆ ಕೂಡ ಮನೆ ಮಾಡಿದೆ.

Satyanarayan Vrat And Its Importance

ಈ ಸತ್ಯ ನಾರಾಯಣ ಸ್ವಾಮಿಯ ವ್ರತ ಆರಂಭವಾದ ಹಿನ್ನಲೆಯಲ್ಲಿ ಒಂದು ಕುತೂಹಲಕಾರಿ ಕಥೆಯಿದೆ. ಒಮ್ಮೆ ತ್ರಿಲೋಕ ಸಂಚಾರಿಯಾದ ನಾರದ ಮಹರ್ಷಿಗಳು ಭೂಲೋಕಕ್ಕೆ ಬಂದರಂತೆ. ಆಗ ಅವರಿಗೆ ಮಾನವರು ಅನುಭವಿಸುತ್ತಿದ್ದ ಕಷ್ಟ ಮತ್ತು ದುಃಖಗಳನ್ನು ನೋಡಿ ಮನಸ್ಸಿಗೆ ನೋವಾಯಿತಂತೆ. ಇದನ್ನು ಪರಿಹರಿಸುವಂತೆ ನಾರದರು ಭಗವಾನ್ ಮಹಾವಿಷ್ಣುವನ್ನು ಪ್ರಾರ್ಥಿಸಿದಾಗ, ಸ್ವಾಮಿಯು ಮಾನವರು ತಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳಲು, ಸತ್ಯನಾರಾಯಣ ವ್ರತವನ್ನು ಆಚರಿಸುವಂತೆ ತಿಳಿಸಿದರಂತೆ. ಇದನ್ನು ಆಚರಿಸುವುದರಿಂದ ಅವರ ಎಲ್ಲಾ ಸಂಕಷ್ಟಗಳನ್ನು ತಾನು ಪರಿಹರಿಸುತ್ತೇನೆ ಎಂಬ ಅಭಯವನ್ನು ನೀಡಿದನಂತೆ. ಇದನ್ನು ಆಚರಿಸುವ ಬಗೆಯನ್ನು ತಿಳಿದುಕೊಂಡ ನಾರದನು ಅದನ್ನು ಭೂಲೋಕದಲ್ಲಿ ಪ್ರಚಾರ ಮಾಡಿದನಂತೆ.

ಸತ್ಯ ನಾರಾಯಣ ವ್ರತವನ್ನು ಹೇಗೆ ಆಚರಿಸಲಾಗುತ್ತದೆ?
ಸತ್ಯ ನಾರಾಯಣ ಸ್ವಾಮಿಯನ್ನು ಕುಂಡ, ನೀರು, ಅಕ್ಕಿ ಮತ್ತು ಬಾಳೆಹಣ್ಣು, ಎಲೆ, ಒಣ ಖರ್ಜೂರ, ಅರಿಶಿನ ಪುಡಿ ಮತ್ತು ಅಡಿಕೆಗಳ ಮೂಲಕ ಆಹ್ವಾನಿಸಿ ಆರಾಧಿಸಲಾಗುತ್ತದೆ. ಪೂಜಾವೇದಿಕೆಯ ನಾಲ್ಕು ಮೂಲೆಗೆ ಬಾಳೆ ಗಿಡಗಳನ್ನು ಕಟ್ಟಲಾಗುತ್ತದೆ. ಇದು ಫಲವತ್ತತೆಯ ಸಂಕೇತ. ಮೊದಲಿಗೆ ಗಣೇಶನ ಆರಾಧನೆ, ನಂತರ ನವಗ್ರಹಗಳ ಪ್ರಾರ್ಥನೆ ನಂತರ ದಿಕ್ಪಾಲಕರು ಮತ್ತು ಪಂಚ ಲೋಕ ಪಾಲಕರ ಪ್ರಾರ್ಥನೆ ಮಾಡಲಾಗುತ್ತದೆ.


ಆ ನಂತರವೇ ಸತ್ಯನಾರಾಯಣ ಸ್ವಾಮಿಯ ಪ್ರಾರ್ಥನೆಯನ್ನು ಆರಂಭಿಸಲಾಗುತ್ತದೆ. ಒಂದೊಮ್ಮೆ ಈ ವ್ರತವನ್ನು ನೀವು ಪುರೋಹಿತರ ಮೂಲಕ ನೆರವೇರಿಸಿದರೆ, ಆತ ಈ ಸಂದರ್ಭದಲ್ಲಿ ವಿಷ್ಣು ಸಹಸ್ರ ನಾಮವನ್ನು ಪಠಿಸುತ್ತಾನೆ. ಅದಾದ ಮೇಲೆ ಸತ್ಯ ನಾರಾಯಣ ಸ್ವಾಮಿಯ ಮಹಿಮೆಗಳನ್ನು ಕೊಂಡಾಡುವ ಹಾಡುಗಳನ್ನು ಮತ್ತು ವ್ರತ ಮಹಿಮೆಯ ಕತೆಗಳನ್ನು ವಾಚನ ಮಾಡಲಾಗುತ್ತದೆ. ಈ ವ್ರತಕ್ಕೆಂದೆ ವಿಶೇಷವಾಗಿ ಪ್ರಸಾದವನ್ನು ತಯಾರಿಸಲಾಗುತ್ತದೆ.

ಸತ್ಯನಾರಾಯಣ ಸ್ವಾಮಿ ವ್ರತ ಹೇಗೆ ವಿಭಿನ್ನ?
ಭಕ್ತಾಧಿಗಳ ಪ್ರಕಾರ ಸತ್ಯನಾರಾಯಣ ಸ್ವಾಮಿ ವ್ರತವನ್ನು ಆಚರಿಸಿದರೆ ಶೀಘ್ರ ಫಲಸಿದ್ಧಿ ನಿಶ್ಚಿತ ಎನ್ನಲಾಗುತ್ತದೆ. ಇದನ್ನು ಮಾಡಲು ಕಷ್ಟಪಡಬೇಕಾಗಿಲ್ಲ. ಇದಕ್ಕೆ ಸಿಕ್ಕಾಪಟ್ಟೆ ನಿಯಮಗಳು ಸಹ ಇಲ್ಲ. ಈ ವ್ರತ ಅತ್ಯಂತ ಸರಳ. ಇದರ ಮತ್ತೊಂದು ಹೆಚ್ಚುಗಾರಿಕೆ ಎಂದರೆ ಇದನ್ನು ಪುರೋಹಿತರ ಸಮ್ಮುಖದಲ್ಲಿಯೇ ಮಾಡಬೇಕೆಂಬ ನಿಯಮವು ಸಹ ಇಲ್ಲ. ಇದನ್ನು ಜಾತಿ, ಮತ ಮತ್ತು ಲಿಂಗ ಬೇಧವಿಲ್ಲದೆ ಯಾರು ಬೇಕಾದರು ಮಾಡಬಹುದು. ಇತರೆ ವ್ರತಗಳಂತೆ ಇದಕ್ಕಾಗಿ ದೇವರ ಚಿತ್ರವು ಸಹ ಅವಶ್ಯಕತೆ ಇಲ್ಲ.

ಇದನ್ನು ಮಾಡಲು ಶಾಶ್ವತವಾದ ಪೂಜಾಗೃಹವು ಸಹ ಅವಶ್ಯಕತೆ ಇಲ್ಲ. ಇದನ್ನು ನೀವು ಮನೆಯಲ್ಲಿ ಅಥವಾ ದೇವಾಲಯದಲ್ಲಿ ಎಲ್ಲಿ ಬೇಕಾದರೂ ಮಾಡಬಹುದು. ಈ ಪೂಜೆಯು ಕಲಿಯುಗದ ಪರಿಕಲ್ಪನೆಯ ಮೇಲೆ ರೂಪಿತಗೊಂಡಿದೆ. ಇದನ್ನು ಮಾಡಲು ಭಕ್ತಾಧಿಗಳು ವೇದಗಳನ್ನು ತಿಳಿದುಕೊಂಡಿರಬೇಕಾದ ಅಗತ್ಯವಿಲ್ಲ.
ಅಲ್ಲದೆ ಮೋಕ್ಷವನ್ನು ಪಡೆಯಲು ಇವರು ಮಂತ್ರಗಳನ್ನು ಮತ್ತು ತಾಂತ್ರಿಕ ವಿದ್ಯೆಯನ್ನು ತಿಳಿದುಕೊಂಡಿರಬೇಕಾದ ಅಗತ್ಯವಿಲ್ಲ. ಭಕ್ತಿ ಮತ್ತು ಸಮರ್ಪಣಾ ಮನೋಭಾವದಿಂದ ನಾರಾಯಣನನ್ನು ಧ್ಯಾನ ಮಾಡಿದರೆ ಸಾಕು. ಈ ವ್ರತವನ್ನು ಅದ್ಧೂರಿಯಾಗಿ ಸಹ ಮಾಡಬೇಕಾದ ಅಗತ್ಯವಿಲ್ಲ. ಇದರ ವಿಧಿ ವಿಧಾನಗಳು ಸರಳಾತಿ ಸರಳ. ವ್ರತ ಮಾಡಿದರೆ ಸಾಕು ಅದಕ್ಕೆ ಪ್ರತಿಯಾಗಿ ನಾರಾಯಣನ ಅನುಗ್ರಹವು ನಿಮಗೆ ತಪ್ಪದೆ ದೊರೆಯುತ್ತದೆ.

English summary

Satyanarayan Vrat And Its Importance

Satyanarayan vrat is easily one of the most popular vrats observed by devotees. The Vrat is observed as an offering to Lord Satyanarayan - the embodiement of truth, a form of Lord Maha Vishnu. The Vrat is usually done for the fulfillment of a desire or a wish. You may choose to perform the Vrat prior to or after the gratification of the desire.
X
Desktop Bottom Promotion