Latest Updates
-
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ? -
ದಶಕಗಳ ಬಳಿಕ ಅಪರೂಪದ ರಾಜಯೋಗ! ಈ ರಾಶಿಗಳಿಗೆ ಹರಿದು ಬರಲಿದೆ ಸಂಪತ್ತು.. ನಿಮ್ಮ ಕಷ್ಟಗಳೆಲ್ಲಾ ದೂರ! -
ಹೊಟ್ಟೆಗೆ ತಂಪು.. ನಾಲಿಗೆಗೆ ರುಚಿ..! ಇಡ್ಲಿ, ದೋಸೆ, ಅನ್ನಕ್ಕೆ ಸೂಪರ್.. ಸೌತೆಕಾಯಿ ಬಳಸಿ ಈ ರೀತಿ ಪಚ್ಚಡಿ ಮಾಡಿ -
March 18 Horoscope: ಪ್ರಯಾಣಗಳ ಮಾಡುವಾಗ ಎಚ್ಚರಿಕೆ ವಹಿಸಿ!
ರಾಮಾಯಣದಲ್ಲಿ ಬಚ್ಚಿಟ್ಟ ಸತ್ಯ-ಸೀತೆಯ ಜನ್ಮ ವೃತ್ತಾಂತ
ಭಾರತದ ಪುರಾಣಗಳೇ ಹಾಗೆ ವಿಶ್ವದಲ್ಲಿಯೇ ಅತ್ಯಂತ ಕುತೂಹಲ ಕೆರಳಿಸುವ, ಬಗೆದಷ್ಟು ಹೊರ ಬರುವ ರೋಚಕ ಕಥೆಗಳ ಆಗರ. ಬಹುಶಃ ರಾಮಾಯಣ ಮತ್ತು ಮಹಾಭಾರತಗಳು ಕವಿಗಳಿಗೆ ನೀಡಿದಷ್ಟು ಸ್ಫೂರ್ತಿಯನ್ನು ಪ್ರಪಂಚದ ಬೇರೆ ಯಾವ ಪುರಾಣಗಳು ಸಹ ನೀಡಿರುವುದಿಲ್ಲ. ಇಂದಿಗೂ ಸಹ ಹಲವಾರು ವಿದ್ವಾಂಸರು ಇವುಗಳನ್ನು ತಮ್ಮ ದೃಷ್ಟಿಕೋನದಲ್ಲಿ ಹೊಸದಾಗಿ ಬರೆಯುತ್ತಲೇ ಇದ್ದಾರೆ. ನಮ್ಮ ಕುಮಾರವ್ಯಾಸ, ಕುವೆಂಪುರಂತಹ ಮಹಾಕವಿಗಳು ಸಹ ಇದಕ್ಕೆ ಹೊರತಾಗಲಿಲ್ಲ. ಮೂಲ ಗ್ರಂಥಗಳ ಜೊತೆಗೆ ಮೌಖಿಕವಾಗಿ ಹರಿದು ಬಂದ ಮತ್ತು ಜನಪದರಿಂದ ಸೃಷ್ಟಿಯಾದ ಮಹಾಕಾವ್ಯಗಳ ಬಗೆಯು ಮತ್ತು
ಅವುಗಳಲ್ಲಿ ಬರುವ ಪಾತ್ರಗಳ ಪೋಷಣೆಯು ಸಹ ಈ ಕಾವ್ಯಗಳ ರೋಚಕ ಕಥೆಯನ್ನು ಮತ್ತಷ್ಟು ಹೆಚ್ಚಿಸಿವುದರ ಜೊತೆಗೆ ಜನರನ್ನು ನಿಬ್ಬೆರಗಾಗಿಸುತ್ತವೆ. ಇಂದು ನಾವು ಹೇಳಹೊರಟಿರುವುದು ಸೀತಾ ಮಾತೆಯ ಜನ್ಮ ವೃತ್ತಾಂತ. ಸೀತಾದೇವಿಯು ಜನಕರಾಜನ ಸಾಕು ಮಗಳು, ಈಕೆ ಶ್ರೀರಾಮನ ಪತ್ನಿ, ವಾಲ್ಮೀಕಿ ರಾಮಾಯಣದಲ್ಲಿ ಈಕೆಯೇ ಪ್ರಮುಖ ನಾಯಕಿ.

ಈ ಎಲ್ಲಾ ಮಾಹಿತಿಗಳು ಎಲ್ಲರಿಗೂ ಗೊತ್ತಿರುತ್ತವೆ. ಆದರೆ ಸೀತೆಯ ಕುರಿತಾದ ಕೆಲವೊಂದು ಕುತೂಹಲಕಾರಿ ಮಾಹಿತಿಗಳು ಬಹುತೇಕ ಮಂದಿಗೆ ತಿಳಿದಿಲ್ಲ. ಸೀತಾ ಮಾತೆಯು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿದೇವಿಯ ಅವತಾರವೆಂದು ಪರಿಗಣಿಸಲ್ಪಟ್ಟಿದ್ದಾಳೆ. ಸೀತಾ ದೇವಿಯು ತನ್ನ ಪತಿಯಾದ ರಾಮನ ಜೊತೆಗೆ 14 ವರ್ಷದ ವನವಾಸವನ್ನು ಸಹ ಅನುಭವಿಸಿದಳು. ಆ ಮೂಲಕ ತಾಳ್ಮೆ ಮತ್ತು ಪತಿ ವ್ರತಾ ಧರ್ಮ ಏನೆಂಬುದನ್ನು ಇಡೀ ಪ್ರಪಂಚಕ್ಕೆ ಸಾರಿ ಹೇಳಿದಳು.
ಮಿಥಿಲೆಯ ಜನಕ ಮಹಾರಾಜನು ಯಾಗ ನಿಮಿತ್ತವಾಗಿ ನೆಲವನ್ನು ಉಳಲು ಹೋದಾಗ ಸುಂದರವಾದ ಹೆಣ್ಣು ಮಗುವನ್ನು ನೋಡಿದನು. ಆ ಮಗುವನ್ನು ದೇವರ ಆಶೀರ್ವಾದವೆಂದು ಭಾವಿಸಿ ಪ್ರೀತಿ, ಆರೈಕೆಗಳಿಂದ ಅದನ್ನು ಸಾಕಿದನು. ಮುಂದೆ ಆಕೆ ಪ್ರಾಪ್ತ ವಯಸ್ಕಳಾದಾಗ ಸ್ವಯಂವರವನ್ನು ಏರ್ಪಡಿಸಿ ಅದರಲ್ಲಿ ಗೆದ್ದ ಶ್ರೀರಾಮನ ಜೂತೆಗೆ ಆಕೆಯ ವಿವಾಹವನ್ನು ಮಾಡಿದನು. ತನ್ನ ಗಂಡನನ್ನು ಸದಾ ಕಾಲ ಅನುಸರಿಸಿಕೊಂಡು ಹೋಗಬೇಕು ಎಂಬ ಒಂದು ಮಾತಿಗೆ ಕಟ್ಟು ಬಿದ್ದು ಆಕೆ ಶ್ರೀರಾಮನ ಜೊತೆಗೆ ಹಲವಾರು ಕಷ್ಟಗಳನ್ನು ಎದುರಿಸಲು ವನವಾಸಕ್ಕೆ ಹೋದಳು. ಈ ವನವಾಸದಲ್ಲಿ ಆಕೆಯ ಸೌಂದರ್ಯಕ್ಕೆ ಮನಸೋತ ರಾವಣನು ಆಕೆಯನ್ನು ಅಪಹರಿಸಿದನು.
ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸಹ ತಾಳ್ಮೆ ಮತ್ತು ಸ್ಥಿತಪ್ರಜ್ಞೆಯನ್ನು, ಹಾಗೂ ಧೈರ್ಯವನ್ನು ಹೊಂದಿದ್ದಳು, ಅಲ್ಲದೆ ತನಗೆ ಎದುರಾಗುವ ಸವಾಲುಗಳನ್ನು ಸಕಾರಾತ್ಮಕವಾಗಿ ಸ್ಪಂದಿಸಿ ಅವುಗಳನ್ನು ಎದುರಿಸಿದ್ದಳು. ವನವಾಸದಿಂದ ಹೊರಬಂದ ಮೇಲೂ ಸಹ ಆಕೆ ತನ್ನ ಪಾತಿವ್ರತ್ಯವನ್ನು ಸಾಬೀತು ಮಾಡಲು ಈಕೆ ಅಗ್ನಿ ಪ್ರವೇಶವನ್ನು ಮಾಡಬೇಕಾಗಿ ಬಂದಿತು. ಸೀತೆಯು ನಂಬಿಕೆ, ಗೌರವ, ಪಾತ್ರಿವ್ರತ್ಯ, ಭಕ್ತಿಗಳಿಗೆ ಸಂಕೇತವಾಗಿ ನಿಂತಿದ್ದಳು. ಹಾಗಾಗಿ ಪ್ರತಿಯೊಬ್ಬರೂ ಸೀತೆಯಂತಹ ಮಗಳನ್ನು, ಪತ್ನಿಯನ್ನು ಮತ್ತು ತಾಯಿಯನ್ನು ಬಯಸುತ್ತಾರೆ. ಬನ್ನಿ ಸೀತಾದೇವಿಯ ಕುರಿತಾದ ಕೆಲವೊಂದು ಕುತೂಹಲಕಾರಿ ಸಂಗತಿಗಳನ್ನು ತಿಳಿದುಕೊಳ್ಳೋಣ ಬನ್ನಿ.
1. "ಸೀತಾ" ಎಂಬ ಪದವು ಸಂಸ್ಕೃತ ಪದವಾಗಿದ್ದು, ಇದರ ಅರ್ಥ ಭೂಮಿಯಲ್ಲಿ ಮಾಡಿದ ಮಡಿಕೆ ಎಂದಾಗುತ್ತದೆ. ಇದು ಸೀತಾದೇವಿಯು ನೆಲವನ್ನು ಉಳುವಾಗ ಆ ಹೊಲದ ಸಾಲಿನಲ್ಲಿ ಸಿಕ್ಕವಳು ಎಂದು ಸೂಚಿಸುತ್ತದೆ. ಈ ಹೆಸರು ವೇದಗಳ ಕಾಲದ ಇಳುವರಿ ದೇವತೆಯ ಹೆಸರು ಸಹ ಆಗಿರುವುದು ವಿಶೇಷ.
2. ಈಕೆ ಭೂದೇವಿಯ ಮಗಳು. ಹಾಗಾಗಿ ಈಕೆಯನ್ನು "ಭೂಮಿಜೆ" ಎಂದು ಸಹ ಕರೆಯುತ್ತಾರೆ. ಈಕೆಯನ್ನು ವನವಾಸದ ಸಂದರ್ಭದಲ್ಲಿ "ವೈದೇಹಿ" ಎಂದು ಸಹ ಕರೆಯುತ್ತಿದ್ದರು. ರಾಮನ ಪ್ರೀತಿ ಪಾತ್ರ ಮಡದಿಯಾಗಿದ್ದರಿಂದ ಈಕೆಯನ್ನು "ರಮಾ" ಎಂದು ಸಹ ಕರೆಯುತ್ತಿದ್ದರು.
3. ಸೀತಾ ದೇವಿಯ ಜನ್ಮ ಸ್ಥಳದ ಕುರಿತು ಹಲವಾರು ವಿವಾದಗಳಿವೆ. ಹಲವರ ಪ್ರಕಾರ ಸೀತಾದೇವಿ ಜನಿಸಿದ್ದು ಮಿಥಿಲೆಯ ಜನಕ್ಪುರ್, ಇದು ದಕ್ಷಿಣ ನೇಪಾಳದಲ್ಲಿದೆ. ಇನ್ನೂ ಕೆಲವರ ಪ್ರಕಾರ ಈಕೆ ಜನಿಸಿದ್ದು, ಬಿಹಾರದ ಸೀತಾಮರ್ಹಿಯಲ್ಲಿ.
4. ಸೀತಾದೇವಿಯ ಕುರಿತಾದ ಕುತೂಹಲಕಾರಿ ವಿಚಾರವೊಂದಿದೆ. ಆಕೆ ವೇದಾವತಿಯ ಅವತಾರ ಎಂದು ಸಹ ಪರಿಗಣಿಸಲಾಗಿದೆ. ಈ ವೇದಾವತಿಯು ವಿಷ್ಣುವಿನ ಪತ್ನಿಯಾಗಬೇಕು ಎಂದು ತಪಸ್ಸು ಮಾಡುತ್ತಿದ್ದಾಗ, ರಾವಣನು ಆಕೆಯ ಮೇಲೆ ಬಲಾತ್ಕಾರವನ್ನು ಮಾಡಿದನಂತೆ. ಆಗ ಆಕೆಯು ಮುಂದಿನ ಜನ್ಮದಲ್ಲಿ ರಾವಣನ ನಾಶಕ್ಕೆ ಕಾರಣವಾಗುತ್ತೇನೆ ಎಂದು ಶಾಪ ನೀಡಿದಳಂತೆ.
5. ಪುರಾಣಗಳ ಪ್ರಕಾರ ಸೀತಾದೇವಿಯು ರಾವಣ ಮತ್ತು ಮಂಡೋದರಿಯರಿಗೆ ಜನಿಸಿದ ಮಗಳಂತೆ. ಜ್ಯೋತಿಷ್ಯಜ್ಞರ ಪ್ರಕಾರ ಮಂಡೋದರಿಗೆ ಜನಿಸುವ ಮೊದಲ ಮಗುವಿನಿಂದ ಇಡೀ ಕುಲ ನಾಶವಾಗುತ್ತದೆ ಎಂದು ಹೇಳಿದ್ದರು. ರಾವಣನು ಈ ವಿಚಾರದಿಂದ ಬೇಸರಗೊಂಡು, ಆ ಮಗುವನ್ನು ದೂರದಲ್ಲಿ ಎಲ್ಲಾದರೂ ನೆಲದಲ್ಲಿ ಹೂತು ಬರುವಂತೆ ತನ್ನ ಅನುಚರರಿಗೆ ತಿಳಿಸಿದನು. ಹೀಗೆ ನೆಲದಲ್ಲಿ ಹೂತಿಟ್ಟ ಮಗುವು ಜನಕ ರಾಜನಿಗೆ ಅಚಾನಕ್ಕಾಗಿ ಸಿಕ್ಕಿ, ಆ ದಂಪತಿಗಳು ಆ ಮಗುವನ್ನು ಮಗಳಾಗಿ ಸಾಕಿಕೊಂಡರಲ್ಲದೆ, ಮಿಥಿಲೆಯ ಯುವರಾಣಿಯನ್ನಾಗಿ ಮಾಡಿದರು.
6. ಮತ್ತೊಂದು ಕುತೂಹಲಕಾರಿ ವಿಚಾರವೆಂದರೆ, ರಾಮಾಯಣದ ಕೆಲವೊಂದು ಆವೃತ್ತಿಗಳಲ್ಲಿ, ಮಾಯಾಸೀತೆಯ ಉಲ್ಲೇಖ ಸಹ ಬರುತ್ತದೆ. ಅವುಗಳ ಪ್ರಕಾರ ರಾವಣನಿಂದ ಅಪಹರಿಸಲ್ಪಟ್ಟವಳು ಮಾಯಾಸೀತೆ. ಆಗ ನಿಜವಾದ ಸೀತೆಯು ಅಗ್ನಿಯಿಂದ ರಕ್ಷಿಸಲ್ಪಟ್ಟಿದ್ದಳು. ಅಗ್ನಿಯು ಆಗ ಆಕೆಯನ್ನು ಪಾರ್ವತಿಯ ಆವಾಸ ಸ್ಥಾನದಲ್ಲಿ ಸೀತೆಯನ್ನು ಇರಿಸಿದ್ದನು. ಯುದ್ಧ ಮುಗಿದ ಮೇಲೆ ಆಕೆ ರಾಮನೊಂದಿಗೆ ಹಿಂತಿರುಗಿದಳು. ಮಾಯಾಸೀತೆಯೇ ಮುಂದಿನ ಜನ್ಮದಲ್ಲಿ ದ್ರೌಪದಿಯಾಗಿ ಜನಿಸಿದಳು ಎಂದು ಹೇಳಲಾಗುತ್ತದೆ. ಹೀಗೆ ಸೀತಾ ದೇವಿಯ ಹಿಂದೆ ಸಹ ಹಲವಾರು ಕುತೂಹಲಕಾರಿ ಕಥೆಗಳು ಇವೆ.



Click it and Unblock the Notifications












