ಕರ್ವಾ ಚೌತ್ ವ್ರತದ ಹಿನ್ನೆಲೆ, ಪೂಜಾ ವಿಧಿ ವಿಧಾನ

By Super

ಪತಿವ್ರತೆಯರು ಆಚರಿಸುವ ಕರ್ವಾ ಚೌತ್ ಉತ್ತರ ಭಾರತದಲ್ಲಿ ಹೆಚ್ಚು ಜನಪ್ರಿಯ. ಪ್ರಾಚೀನ ಸಂಪ್ರದಾಯವಾದ ಈ ವ್ರತವನ್ನು ಆಚರಿಸುವ ಮೂಲಕ ಮಹಿಳೆಯರು ತಮ್ಮ ಪತಿಯ ದೀರ್ಘಾಯಸ್ಸು ಮತ್ತು ಆರೋಗ್ಯಕ್ಕಾಗಿ ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಸೂರ್ಯೋದಯದ ಸಮಯದಿಂದ ಪ್ರಾರಂಭಗೊಂಡು ಚಂದ್ರೋದಯದವರೆಗೆ ಇಡಿಯ ದಿನ ಉಪವಾಸವಿರಬೇಕಾದ ಈ ವ್ರತವನ್ನು ಆಚರಿಸುವುದು ಅಷ್ಟು ಸುಲಭವಲ್ಲ.

ಹಸಿವನ್ನು ತಡೆದುಕೊಂಡು ಚಂದ್ರ ಬರುವವರೆಗೆ ಕಾಯುತ್ತಿರುವ ಜೊತೆಗೇ ಇಡಿಯ ದಿನ ಪೂಜೆ ಪುನಸ್ಕಾರಗಳಲ್ಲಿ ತೊಡಗುವುದು ಸಹಾ ಮುಖ್ಯ. ಕೆಲವೆಡೆ ಚಂದ್ರೋದಯವನ್ನು ಹಿಟ್ಟು ಸಾಣಿಸುವ ಸಾರಣೆ (ಲೋಹದ ಪಟ್ಟಿಯದ್ದಾಗಿರಬೇಕು)ಯ ಮೂಲಕ ನೋಡಿಯೇ ಉಪವಾಸವನ್ನು ಸಂಪನ್ನಗೊಳಿಸುವುದು ಸಂಪ್ರದಾಯವಾಗಿದೆ. ಕೆಲವೆಡೆ ಸಾರಣೆ ಇಲ್ಲದೇ ಹಾಗೇ ನೋಡುವ ಪರಿಪಾಠವಿದೆ. ಈ ವ್ರತ ಮುಖ್ಯವಾಗಿ ವಿವಾಹಿತ ಮಹಿಳೆಯರಿಗೆ ಮೀಸಲಾಗಿದ್ದರೂ ಪಂಜಾಬ್ ಹರ್ಯಾನಾ ಮೊದಲಾದ ರಾಜ್ಯಗಳಲ್ಲಿ ಅವಿವಾಹಿತ ಕನ್ಯೆಯರೂ ತಮಗೆ ಉತ್ತಮ ಜೀವನಸಂಗಾತಿ ದೊರಕುವಂತಾಗಲಿ ಎಂದು ಪ್ರಾರ್ಥಿಸಿ ಈ ವ್ರತವನ್ನು ಆಚರಿಸುತ್ತಾರೆ.

ಹಿಂದೂ ಕ್ಯಾಲೆಂಡರ್‌ನ ಪ್ರಕಾರ ಕಾರ್ತಿಕ ಮಾಸದ ಹುಣ್ಣಿಮೆಯ ನಂತರದ ನಾಲ್ಕನೆಯ ದಿನ ಈ ವ್ರತವನ್ನು ಆಚರಿಸಬೇಕಾಗಿರುವ ಕಾರಣವೇ ಇದಕ್ಕೆ ಚೌತ್ (ಚತುರ್ಥಿಯ ಹೃಸ್ವರೂಪ) ಎಂಬ ಹೆಸರು ಬಂದಿದೆ. ಕರ್ವಾ ಎಂದರೆ ಮಣ್ಣಿನ ದೀವಟಿಗೆ ಎಂಬ ಅರ್ಥ ಬರುತ್ತದೆ. ದೀವಟಿಗೆ ಶಾಂತಿ ಮತ್ತು ಸಮೃದ್ಧಿಯ ಪ್ರತೀಕವಾಗಿದೆ. (ದೀವಟಿಗೆಯ ಜ್ವಾಲೆ ಉರಿಯುತ್ತಿರುವಾಗ ಯಾವುದೇ ಶಬ್ದ ಬರದಿರುವ ಕಾರಣ ಇದು ಶಾಂತಿಯ ಸಂಕೇತವಾಗಿದೆ.

Have These Items For Karva Chauth Vrat

ಕತ್ತಲನ್ನು ಹೊಡೆದೋಡಿಸಿ ಬೆಳಕನ್ನು ತುಂಬುವ ಮೂಲಕ ಸಮೃದ್ಧಿಯ ಸಂಕೇತವಾಗಿದೆ) ಆ ಪ್ರಕಾರ ಹಿಂದಿ ಭಾಷೆಯಲ್ಲಿ ನಾಲ್ಕನೆಯ ದಿನ ಶಾಂತಿಗಾಗಿ ಆಚರಿಸುವ ವ್ರತ ಎಂಬರ್ಥ ಬರುತ್ತದೆ. ಈ ವ್ರತವನ್ನು ಆಚರಿಸಲು ಹಲವು ವಿಷಯಗಳ ಬಗ್ಗೆ ಅರಿವಿರಬೇಕು. ಬನ್ನಿ ಕೆಲವೊಂದು ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ಅವು ಯಾವುದು ಎಂಬುದನ್ನು ನೋಡೋಣ..

ಪೂಜಾ ಸಾಮಾಗ್ರಿಗಳು: ಕರ್ವಾ ಚೌತ್ ಪುಸ್ತಕ
ನಿಮ್ಮ ವ್ರತಕ್ಕೆ ಅತ್ಯುತ್ತಮವಾದ ಸಹಾಹ ಕರ್ವಾ ಚೌತ್ ಪುಸ್ತಕದ ಮೂಲಕ ಲಭಿಸುತ್ತದೆ. ಈ ವ್ರತಕ್ಕೆ ಕಾರಣವಾದ ಕಥೆಯನ್ನು ವ್ರತ ಆಚರಿಸುತ್ತಿರುವ ಇತರ ಮಹಿಳೆಯರಿಗೆ ಉಪವಾಸದ ಅವಧಿಯಲ್ಲಿ ಓದಿ ಹೇಳುವ ಮೂಲಕ ಇದರ ಮಹತ್ವವನ್ನು ಸಾರಬಹುದು. ಸಾಮಾನ್ಯವಾಗಿ ಮನೆಯ ಹಿರಿಯ ಮಹಿಳೆಯರು ಅಥವಾ ಪಂಡಿತರು ಈ ಪುಸ್ತಕವನ್ನು ಓದುತ್ತಾರೆ.

ಪೂಜಾ ಸಾಮಾಗ್ರಿಗಳು:ಪೂಜೆಯ ತಟ್ಟೆ (ಥಾಲಿ)
ಊಟಕ್ಕೆ ಉಪಯೋಗಿಸುವ ದೊಡ್ಡ ತಟ್ಟೆಯಲ್ಲಿ ವಿವಿಧ ವಸ್ತುಗಳನ್ನು ಇರಿಸಲಾಗುತ್ತದೆ. ಪ್ರಾಂತದಿಂದ ಪ್ರಾಂತಕ್ಕೆ, ಸಂಸ್ಕೃತಿಯಿಂದ ಸಂಸ್ಕೃತಿಗೆ ಈ ಪರಿಕರಗಳಲ್ಲಿ ಕೊಂಚ ವ್ಯತ್ಯಾಸವಿದೆ. ಆದರೆ ಸರ್ವೇ ಸಾಮಾನ್ಯವಾಗಿ ರೋಲಿ, ಅಕ್ಕಿ, ನೀರು ತುಂಬಿದ ಕರ್ವಾ (ಮಣ್ಣಿನ ಲೋಟ), ಒಂದು ಸಿಹಿಪದಾರ್ಥ, ದೀವಟಿಗೆ, ಕಾಣಿಕೆಗೆ ಕೊಂಚ ಹಣ ಮತ್ತು ಕುಂಕುಮ ಎಲ್ಲಾ ರಾಜ್ಯಗಳ ಸಂಪ್ರದಾಯದಲ್ಲಿ ಕಂಡುಬರುತ್ತದೆ. ರಾಜಸ್ಥಾನದಲ್ಲಿ ಇದರೊಂದಿಗೆ ಗೋಧಿ, ಮಣ್ಣು ಸಹಾ ಸೇರಿಸುತ್ತಾರೆ.
ಪಂಜಾಬ್ ರಾಜ್ಯದಲ್ಲಿ ಇವುಗಳೊಂದಿಗೆ ಕೆಂಪು ನೂಲು, ಲೋಹದ ಚೌಕಟ್ಟಿನ ಸಾರಣೆ ಮತ್ತು ಉಪವಾಸ ಸಂಪನ್ನಗೊಳಿಸಲು ಒಂದು ಲೋಟ ನೀರು ಇವಿಷ್ಟನ್ನು ತಟ್ಟೆಯಲ್ಲಿರಿಸುತ್ತಾರೆ. ಇನ್ನುಳಿದಂತ ತಮ್ಮನ್ನು ತಾವು ಸಿಂಗರಿಸಿಕೊಳ್ಳುವ ಪರಿ ಪ್ರತಿ ರಾಜ್ಯದಲ್ಲಿ ಭಿನ್ನವಾಗಿದೆ. ಹೆಚ್ಚಿನವರು ಕೈಗಳಿಗೆ ಮದರಂಗಿ ಹಚ್ಚಿ, ಹೆಚ್ಚಿನ ಸಂಖ್ಯೆಯಲ್ಲಿ ಬಳೆ ತೊಟ್ಟು, ಕೆಂಪು ಸೀರೆಯುಟ್ಟು ಸೆರಗನ್ನು ತಲೆತುಂಬಾ ಹೊದ್ದುಕೊಂಡು ತಮ್ಮ ಆಭರಣಗಳನ್ನು ತೊಟ್ಟುಕೊಂಡು ಮಂಗಳಸೂತ್ರವನ್ನು ಪ್ರಮುಖವಾಗಿ ಕಾಣುವಂತೆ ಸಿಂಗರಿಸಿಕೊಳ್ಳುತ್ತಾರೆ.

ಶೃಂಗಾರ ಸಾಧನಗಳು
ಈ ವ್ರತವನ್ನು ಆಚರಿಸಲು ಮಹಿಳೆಯರು ಇಡಿಯ ವರ್ಷ ಕಾತುರದಿಂದ ಕಾಯುತ್ತಾರೆ. ತಮ್ಮ ಪತಿಯರ ಮೆಚ್ಚುಗೆ ಪಡೆಯಲು ಮತ್ತು ತಮ್ಮ ದಾಂಪತ್ಯ ಸುಖಕರ ಮತ್ತು ದೀರ್ಘಾವಧಿಯಾಗಲು ಮತ್ತೊಮ್ಮೆ ಮದುಮಗಳಂತೆ ಸಿಂಗರಿಸಿಕೊಳ್ಳುತ್ತಾರೆ. ಇಡಿಯ ದಿನ ಪೂಜೆ, ಹಬ್ಬದ ಅಡುಗೆ ಮೊದಲಾದ ಕಾರ್ಯಗಳಲ್ಲಿ ನಿರತರಾಗಿದ್ದರೂ ಸಂಜೆಯಾಗುತ್ತಿದ್ದಂತೆಯೇ ಊರಿನಲ್ಲಿ ವ್ರತ ಆಚರಿಸುತ್ತಿರುವ ಎಲ್ಲಾ ಮಹಿಳೆಯರು ಒಂದಾಗಿ ಒಂದು ಸ್ಥಳದಲ್ಲಿ ನೆರೆದು ಹಬ್ಬದ ವಾತಾವರಣವನ್ನು ಮೂಡಿಸುತ್ತಾರೆ. ಹಾಡು, ನರ್ತನ, ಹಾಸ್ಯ, ಅನುಕರಣೆ, ಒಬ್ಬರ ಉಡುಗೆ ತೊಡುಗೆಯ ಶ್ಲಾಘನೆ ಎಲ್ಲವೂ ನಡೆಯುತ್ತವೆ. ಕೈಗೆ ಮದರಂಗಿ, ಪ್ರಖರ ಬಣ್ಣದ ಸೀರೆ ಅಥವಾ ಲೆಹೆಂಗಾ ಈ ಹೊತ್ತಿನಲ್ಲಿ ಹೆಚ್ಚಾಗಿ ಧರಿಸಲ್ಪಡುತ್ತವೆ.

ಆಹಾರ ವಸ್ತುಗಳು
ಹಬ್ಬದ ದಿನ ಪ್ರತಿ ಮನೆಯಲ್ಲಿಯೂ ವಿವಿಧ ಬಗೆಯ ಭಕ್ಷ್ಯಗಳು ತಯಾರಾಗುತ್ತವೆ. ಹಬ್ಬಕ್ಕೆ ಇಂತಹದ್ದೇ ತಿಂಡಿ ಮಾಡಬೇಕೆಂಬ ನಿಯಮವಿಲ್ಲದ ಕಾರಣ ಪ್ರತಿ ಮಹಿಳೆಯೂ ತನ್ನ ಇಷ್ಟದ ಮತ್ತು ಆಯ್ಕೆಯ ತಿಂಡಿಗಳನ್ನು ಮಾಡಲು ಸ್ವಾತಂತ್ರ್ಯ ಹೊಂದಿರುತ್ತಾಳೆ. ಕೆಲವರು ಕಚೋರಿ, ಸಬ್ಜಿ ಮೊದಲಾದ ಖಾದ್ಯಗಳನ್ನು ತಯಾರಿಸಿದರೆ ಕೆಲವು ಸಂಪ್ರದಾಯಗಳಲ್ಲಿ ಸರ್ಗಿ ಎಂಬ ತಟ್ಟೆ ಊಟವನ್ನು ತಯಾರಿಸಲಾಗುತ್ತದೆ. ಈ ತಟ್ಟೆಯಲ್ಲಿ ಫೇಣಿ (ಸಿಹಿಪದಾರ್ಥ), ಪರಾಠಾ, ಹಣ್ಣುಗಳು ಮತ್ತಿತರ ಸಿಹಿಗಳಿರುತ್ತವೆ. ಮಾಥಿಸ್ ಮತ್ತು ಪುವಾಸ್ ಎಂಬ ಎರಡು ಆಹಾರವವಸ್ತುಗಳು ಸಹಾ ಪೂಜೆಗೆ ಅಗತ್ಯವಾದ ಪರಿಕರಗಳಲ್ಲಿ ಸೇರಿವೆ.

Story first published: Friday, October 30, 2015, 16:30 [IST]
X
Desktop Bottom Promotion