For Quick Alerts
ALLOW NOTIFICATIONS  
For Daily Alerts

ಮದುವೆ ಎನ್ನುವುದು ಹುಡುಗಾಟಿಕೆಯಾಗಿ ಬಿಟ್ಟಿದೆ! ಹೀಗಾದರೆ ಹೇಗೆ?

By Arshad
|

ಮದುವೆ ಎಂದಾಕ್ಷಣ ನಮ್ಮೆಲ್ಲ ಸುಪ್ತ ಮನಸ್ಸಿನಲ್ಲಿ ಹಲವಾರು ಬಗೆಯ ಯೋಚನೆಗಳು ಹುಟ್ಟುತ್ತವೆ. ಮದುವೆಯ ಬಗ್ಗೆ ಪ್ರತಿಯೊಬ್ಬರಲ್ಲಿಯೂ ವಿಭಿನ್ನವಾದ ಅಭಿಪ್ರಾಯಗಳಿರುತ್ತವೆ. ಕೆಲವರಿಗೆ ಇದು ಇಬ್ಬರು ವ್ಯಕ್ತಿಗಳ ನಡುವೆ ಇರುವ ಅತ್ಯಂತ ಸುಂದರ ಹಾಗೂ ಭಾವುಕ ಸಂಬಂಧವಾಗಿದ್ದು ಎರಡು ಕುಟುಂಬಗಳನ್ನು ಬೆಸೆಯುತ್ತದೆ. ಕೆಲವರಿಗೆ ವಿವಾಹ ಎಂದರೆ ಇಬ್ಬರು ವ್ಯಕ್ತಿಗಳು ಪರಸ್ಪರರನ್ನು ಅರಿತುಕೊಳ್ಳುವ ಹಾಗೂ ಸಂತೋಷ ಮತ್ತು ದೌರ್ಬಲ್ಯಗಳನ್ನು ಸಮಾನವಾಗಿ ಹಂಚಿಕೊಳ್ಳುವುದೇ ಆಗಿದೆ.

ಆದರೆ, ಕೆಲವರು ಮದುವೆಯನ್ನು ಒಂದು ದುರಂತದ ರೂಪದಲ್ಲಿ ಕಾಣುತ್ತಾರೆ. ಇದು ಈ ವ್ಯಕ್ತಿಗಳು ಎದುರಿಸಿರುವ ಕೆಲವು ಸನ್ನಿವೇಶಗಳು ಹಾಗೂ ಮನಸ್ಸಿನಲ್ಲಿ ಎದುರಾಗುವ ಆಲೋಚನೆಗಳನ್ನು ಆಧರಿಸಿದೆ ಎಂದು ನಾವು ಹೇಳುತ್ತೇವೆ. ಏಕೆ? ವಿವಾಹದಿಂದ ಒಳ್ಳೆಯದೂ ಆಗಬಹುದು, ಕೆಲವರಿಗೆ ಹೊಂದಿಕೊಂಡು ಹೋಗದೇ ಇರಬಹುದು. ಒಂದು ವೇಳೆ ವ್ಯಕ್ತಿ ನಿರಾಶಾವಾದಿಯಾಗಿದ್ದರೆ ತನ್ನ ಸ್ವಂತ ಇಚ್ಛೆಯಿಂದ ವಿವಾಹವಂತೂ ಆಗಲಾರ, ಈ ವ್ಯಕ್ತಿಗಳು ವಿವಾಹವನ್ನು ದುರಂತವೆಂದೇ ಪರಿಗಣಿಸುತ್ತಾರೆ. ಕೆಲವೊಮ್ಮೆ ಆಶಾವಾದಿಗಳೂ ಈ ಬಗೆಯಾಗಿ ಯೋಚಿಸಬಹುದು. ಆಶಾವಾದಿಗಳು ಮದುವೆಯ ಬಂಧನಕ್ಕೆ ಒಳಪಟ್ಟ ಬಳಿಕವೂ ಇದರಿಂದ ಹೊರಬಹುದು, ಇದನ್ನು ಯಾರೂ ಅಂದಾಜಿಸಲು ಸಾಧ್ಯವಿಲ್ಲ.

marriage

ಇಂದಿನ ಜನಾಂಗದಲ್ಲಿ ವಿವಾಹ ಎಂದರೆ ಒಂದು ಹುಡುಗಾಟಿಕೆಯಂತಾಗಿದೆ. ಏಕೆ? ಇಬ್ಬರು ವ್ಯಕ್ತಿಗಳು ವಿವಾಹ ಬಂಧನಕ್ಕೆ ಒಳಗಾಗುತ್ತಾರೆ ಹಾಗೂ ಕಡೆಗೊಂದು ದಿನ ಕೆಲವಾರು ಕಾರಣಗಳಿಂದಾಗಿ ಬೇರೆ ಬೇರೆಯಾಗುತ್ತಾರೆ. ಈ ಕಾರಣಗಳ ಬಗ್ಗೆ ಇಂದು ಚರ್ಚಿಸೋಣ ಹಾಗೂ ಇಂದು ವಿವಾಹಗಳೇಕೆ ದುರಂತಮಯವಾಗುತ್ತಿವೆ ಎಂಬುದನ್ನು ಅರಿಯಲು ಯತ್ನಿಸೋಣ.

1. ಹೊಂದಾಣಿಕೆಯ ತೊಂದರೆಗಳು

ಇಂದಿನ ದಿನಗಳಲ್ಲಿ ಬಹುತೇಕ ದಂಪತಿಗಳು ಇಬ್ಬರೂ ಹೊರಗೆ ದುಡಿಯುವವರಾಗಿದ್ದಾರೆ. ಇಬ್ಬರಿಗೂ ವಿವಾಹ ಎಂದರೆ ಸ್ವಾತ್ಯಂತ್ರಕ್ಕೆ ಕಡಿವಾಣ ಎಂದು ಪರಿಗಣಿಸಲ್ಪಡುತ್ತದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಇಬ್ಬರೂ ಪ್ರಯತ್ನಿಸುತ್ತಾರಾದರೂ ಕಡೆಗೆ ಪರಸ್ಪರರಲ್ಲಿ ಅತೃಪ್ತಿಯನ್ನೇ ಕಂಡುಕೊಳ್ಳುತ್ತಾರೆ ಹಾಗೂ ಇದರಿಂದ ಹೊರಬರುತ್ತಾರೆ. ಇದೇ ಇಂದಿನ ದಿನಗಳಲ್ಲಿ ವಿಚ್ಛೇದನಕ್ಕೆ ಬಹುತೇಕ ಕಾರಣವಾಗಿದೆ. ಹೆಚ್ಚಿನ ಜನರು ಒಂಟಿಯಾಗಿಯೇ ಇದ್ದು ವಿಹಾಹದ ಬಂಧನಕ್ಕೆ ಒಳಗಾಗದೇ ಇರುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಸಾಮಾನ್ಯವಾಗಿ ಇಂದು ಜರುಗುತ್ತಿರುವ ವಿದ್ಯಮಾನದ ಪ್ರತಿ ಇವರು ಅಸಮಾಧಾನ ತಳೆದಿರುತ್ತಾರೆ. ವಿವಾಹದ ಮೂಲವೇ ಅನ್ಯೋನ್ಯತೆಯಾಗಿದ್ದು ಪರಸ್ಪರರಿಗೆ ಹೊಂದಿಕೊಳ್ಳಲು ತಮ್ಮನ್ನು ತಾವು ಕೊಂಚ ಬದಲಿಸಿ ಕೊಳ್ಳಬೇಕಾಗಿರುವುದು ತುಂಬಾ ಅಗತ್ಯವಾಗಿದೆ. 21ನೇ ಶತಮಾನದ ಇಂದಿನ ದಿನಗಳಲ್ಲಿ ಹೀಗೆ ಇನ್ನೊಬ್ಬರಿಗಾಗಿ ತಮ್ಮನ್ನು ಬದಲಿಸಿಕೊಳ್ಳಲು ಯಾರಿಗೂ ಇಷ್ಟವಿಲ್ಲದಾಗಿದೆ. ಹೀಗೆ ಬದಲಿಸಿಕೊಳ್ಳುವ ಬದಲು ವಿವಾಹದಿಂದ ವಿಮುಖರಾಗಿರುವುದೇ ಇವರಿಗೆ ಆದ್ಯತೆಯ ವಿಷಯವಾಗುತ್ತದೆ. ವಿವಾಹ ವಿಚ್ಛೇದನ ಪ್ರಕರಣಗಳನ್ನು ನಿಭಾಯಿಸುವ ವೃತ್ತಿಯಲ್ಲಿರುವವರ ಬಳಿ ಬರುವ ಹೆಚ್ಚಿನ ಪ್ರಕರಣಗಳಲ್ಲಿ ಹೊಂದಾಣಿಕೆಯಾಗದಿರುವುದೇ ಅತಿ ಹೆಚ್ಚಾಗಿ ಕೊಡಲ್ಪಡುವ ಕಾರಣವಾಗಿದೆ. ವಿವಾಹದ ಬಳಿಕ ಹೆಚ್ಚಿನ ದಂಪತಿಗಳಲ್ಲಿ ಎಲ್ಲೋ, ಯಾವುದೋ ವಿಷಯಕ್ಕೆ ಪರಸ್ಪರರಲ್ಲಿ ಅಸಂತೋಷವಿದ್ದೇ ಇರುತ್ತದೆ. ಹೀಗೆ ಚಿಕ್ಕ ಪುಟ್ಟ ಅಸಮಾಧಾನ ಇಲ್ಲದ ದಂಪತಿಗಳೇ ಈ ಜಗತ್ತಿನಲ್ಲಿಲ್ಲ, ಆದರೆ ಹಿಂದೆಲ್ಲಾ ಈ ಕೋಳಿ ಜಗಳಗಳನ್ನು ಇಬ್ಬರ ವಲಯದಿಂದ ಹೊರಬರಲು ಬಿಡದೇ ಪರಿಹರಿಸಿ ಕೊಳ್ಳುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಈ ಜಗಳ ಇನ್ನಷ್ಟು ಮುಂದುವರೆದು ಇಬ್ಬರ ವಲಯದಿಂದ ಹೊರಬಂದಿರುವುದೇ ಜೋಡಿ ಬೇರ್ಪಡಲು ಹೆಚ್ಚಾಗಿ ಕಾರಣವಾಗುತ್ತಿದೆ.

2. ಭಿನ್ನ ಮನೋಭಾವನೆಗಳು

ದಂಪತಿಗಳು ಬೇರ್ಪಡುವ ಅತ್ಯಂತ ನೋವಿನ ಸಂಗತಿಗೆ ಕಾರಣವಾಗುವುದರಲ್ಲಿ ಇದೂ ಒಂದು. ಇಬ್ಬರ ಮನೋಭಾವನೆಗಳೂ ಭಿನ್ನವಾಗಿದ್ದು ಇನ್ನೊಬ್ಬರಿಗಾಗಿ ಇದನ್ನು ಬದಲಿಸಿಕೊಳ್ಳಲು ಇಬ್ಬರಿಗೂ ಇಷ್ಟವಿಲ್ಲ. ಇದಕ್ಕಾಗಿ ಇವರು ಆಡುವ ಜಗಳಗಳು ದೀರ್ಘವಾಗುತ್ತಾ ಹೊಗುತ್ತವೆ ಹಾಗೂ ಜಗಳ ನಿತ್ಯದ ವಿಷಯವಾಗಿದ್ದು ನಿಭಾಯಿಸಲು ಕಷ್ಟವಾಗತೊಡಗುತ್ತದೆ. ಯಾವಾಗ ತನ್ನ ಮನೋಭಾವನೆಯನ್ನು ತನ್ನ ಪತಿ/ಪತ್ನಿ ಗೌರವಿಸುವುದಿಲ್ಲವೋ ಆಗ ಇಬ್ಬರ ಅಹಮ್ಮಿಕೆ ಕೆರಳಿ ಚಿಕ್ಕ ಪುಟ್ಟ ತಪ್ಪುಗಳೆಲ್ಲಾ ಮಹಾಪರಾಧಗಳಂತೆ ಬಿಂಬಿಸತೊಡಗುತ್ತಾರೆ. ಮೊಸರಲ್ಲಿ ಕಲ್ಲು ಹೆಕ್ಕುವ ಪ್ರಯತ್ನ ಅವ್ಯಾಹತವಾಗುತ್ತದೆ. ಕಡೆಗೊಮ್ಮೆ ವಿವಾಹದ ಬಂಧನ ಕಳಚಿಬೀಳುತ್ತದೆ.

3. ದಾಂಪತ್ಯ ದ್ರೋಹ

ದಾಂಪತ್ಯ ಕೊನೆಗೊಳ್ಳಲು ಇದೂ ಒಂದು ಪ್ರಮುಖ ಕಾರಣವಾಗಿದೆ. ಯಾವುದೇ ವಿವಾಹವಾಗಲಿ, ಪರಸ್ಪರರಿಗೆ ವಿಧೇಯರಾಗಬೇಕಾಗಿದ್ದು ಇದನ್ನು ಮೀರುವ ಯಾವುದೇ ವ್ಯಕ್ತಿ ತಪ್ಪಿತಸ್ಥನಾಗುತ್ತಾನೆ/ಳೆ. ಈ ದ್ರೋಹದ ಮೂಲಕ ದಾಂಪತ್ಯದ ವಿಶ್ವಾಸವೇ ಕಳಚಿಬೀಳುತ್ತದೆ ಹಾಗೂ ವಿಶ್ವಾಸವಿಲ್ಲದ ದಾಂಪತ್ಯಕ್ಕೆ ಯಾವುದೇ ಬೆಲೆಯಿಲ್ಲ. ಪ್ರತಿ ವ್ಯಕ್ತಿಯೂ ತನ್ನ ಸಂಗಾತಿಯ ಒಡೆತನದ ಭಾವನೆ ಪಡೆದಿರುತ್ತಾನೆ ಹಾಗೂ ಯಾರೊಂದಿಗೂ ಇವರನ್ನು ಹಂಚಿಕೊಳ್ಳಲು ಬಯಸುವುದಿಲ್ಲ. ಒಂದು ವೇಳೆ ಇಬ್ಬರಲ್ಲೊಬ್ಬರು ಯಾವುದೋ ಕಾರಣ ಅಥವಾ ಪ್ರಲೋಭನೆಯಿಂದ ವಂಚನೆ ಮಾಡಿದರೆ ಹಾಗೂ ಈ ವಂಚನೆ ಇನ್ನೊಬ್ಬರಿಗೆ ಗೊತ್ತಾದ ಕ್ಷಣದಲ್ಲಿಯೇ ವಿಶ್ವಾಸದ ಕೊಂಡಿ ಕಳಚುತ್ತದೆ. ತಪ್ಪು ಒಪ್ಪಿಕೊಂಡು ಪರಸ್ಪರ ಒಂದಾದರೆ ದಾಂಪತ್ಯ ಉಳಿಸಬಹುದಾದರೂ ಇದಕ್ಕೆ ವಿಶಾಲವಾದ ಮನಸ್ಸಿನ ಅಗತ್ಯವಿದೆ ಹಾಗೂ ಇಂದಿನ ದಿನಗಳಲ್ಲಿ ಈ ವಿಶಾಲ ಮನಸ್ಸಿರುವ ಯುವಜನತೆ ಅಪರೂಪವಾಗುತ್ತಿದ್ದಾರೆ.

4. ಲೈಂಗಿಕ ಅತೃಪ್ತಿ

ಪ್ರತಿ ವ್ಯಕ್ತಿಯ ಲೈಂಗಿಕ ಬಯಕೆಯನ್ನು ಪೂರೈಸಲೆಂದೇ ಸಮಾಜ ವಿವಾಹ ವ್ಯವಸ್ಥೆಯನ್ನು ಮಾಡಿದ್ದು ತನ್ನೆಲ್ಲಾ ಬಯಕೆಯನ್ನು ತನ್ನ ಸಂಗಾತಿಯಿಂದಲೇ ಪೂರೈಸಿಕೊಳ್ಳಬೇಕಾಗುತ್ತದೆ. ಒಂದು ವೇಳೆ ಈ ಬಯಕೆ ಪೂರೈಸದೇ ಇದ್ದರೆ ಅಥವಾ ತಾನಂದುಕೊಂಡಂತೆ ಇಲ್ಲದಿದ್ದರೆ ಇದು ಅತೃಪ್ತಿಗೆ ಕಾರಣವಾಗಬಹುದು. ಪರಿಣಾಮವಾಗಿ ದಾಂಪತ್ಯ ದ್ರೋಹ ಅಥವಾ ದಾಂಪತ್ಯದಿಂದ ಹೊರಬರುವ ಬಗ್ಗೆಯೂ ಇವರು ಯೋಚಿಸಬಹುದು. ಇಂದಿನ ದಿನಗಳಲ್ಲಿ ವಿವಾಹಗಳು ಮುರಿದು ಬೀಳಲು ಈ ಕಾರಣವೂ ಪ್ರಮುಖವಾಗಿದೆ.

5. ಆಘಾತಕಾರಿ ಜೀವನ ಪರಿಸ್ಥಿತಿಗಳು

ದಾಂಪತ್ಯ ಜೀವನದಲ್ಲಿ ಕೆಲವು ಆಘಾತಕಾರಿ ಪರಿಸ್ಥಿತಿಗಳು ಎದುರಾಬಹುದು ಹಾಗೂ ಈ ಪರಿಸ್ಥಿತಿಗಳನ್ನು ಎದುರಿಸುವುದು ಕಷ್ಟಕರವಾಗಬಹುದು. ಈ ಪರಿಸ್ಥಿತಿಗಳನ್ನು ದಂಪತಿಗಳು ಸರಿಯಾಗಿ ಎದುರಿಸಲು ಸಾಧ್ಯವಾಗದೇ ಹೋದರೆ ಪರಿಸ್ಥಿತಿಯೇ ದಾಂಪತ್ಯವನ್ನು ಮುರಿದುಬೀಳಿಸಲು ಕಾರಣವಾಗಬಹುದು. ಪರಿಸ್ಥಿತಿ ನಿಭಾಯಿಸುವಲ್ಲಿ ಇಬ್ಬರಲ್ಲೊಬ್ಬರು ತಾಳ್ಮೆಗೆಟ್ಟು ಸೋತರೂ ವಿವಾಹ ಮುರಿದುಬೀಳಬಹುದು. ಹಾಗಾದರೆ ವಿವಾಹಗಳೆಲ್ಲವೂ ಮುರಿದು ಬೀಳಲೇಬೇಕೇ? ಇದನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲವೇ? ಅಷ್ಟಕ್ಕೂ ವಿವಾಹಬಂಧನದಿಂದ ಹೊರಬರಲು ಯತ್ನಿಸುವ ದಂಪತಿಗಳು ನೀಡುವ ಕಾರಣಗಳು ನಿಜಕ್ಕೂ ಸರಿಪಡಿಸಲಾಗದ ಕಾರಣಗಳೇ? ಈ ಪ್ರಶ್ನೆಗಳನ್ನು ಈ ದಂಪತಿಗಳು ತಮ್ಮಲ್ಲಿಯೇ ಕೇಳಿಕೊಂಡು ವಿವಾಹದ ಸುಂದರ ಕಾಮನಬಿಲ್ಲು ಮುರಿಯದಂತೆ ನೋಡಿಕೊಳ್ಳಲು ಸಾಧ್ಯವಿಲ್ಲವೇ? ಈ ಬಗ್ಗೆ ನಿಮ್ಮ ಅನಿಸಿಕೆಗಳೇನು? ನಿಮ್ಮ ಅನಿಸಿಕೆಗಳನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ನಮಗೆ ಖಂಡಿತಾ ತಿಳಿಸಿ.

English summary

Marriage Nowadays Is The Most Beautiful Tragedy

You must be wondering about marriage in the subconscious mind. The thing about marriage and its opinions changes from people to people. Some think of marriage as a beautiful act of conjugation between two human beings and some think it as a beautiful act of two families bonding as well. There are some people who think marriage is all about knowing each other and sharing the vulnerabilities as well as the happiness of two souls.Let's talk about these problems that suggest marriage is a beautiful tragedy these days.
X
Desktop Bottom Promotion