Just In
- 1 hr ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 2 hrs ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- 3 hrs ago ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- 7 hrs ago ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
Don't Miss
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- News Bird Flu: ಮೊಟ್ಟೆ-ಕೋಳಿ ತಿನ್ನುವವರೇ ಹುಷಾರ್!- ಹೆಚ್ಚಾಗಿದೆ ಹಕ್ಕಿಜ್ವರ
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Automobiles ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕರಾವಳಿ ಭಾಗದಲ್ಲಿ ನಡೆಯುವ ಪ್ರೇತ ಮದುವೆ ಬಗ್ಗೆ ನಿಮಗೆಷ್ಟು ಗೊತ್ತು?
ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ವಿವಾಹ ಸಂಭ್ರಮ ನಡೆಯುತ್ತೆ. ಈ ಮದುವೆ ಬಗ್ಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದೆ. ಇದಕ್ಕೆ ಕಾರಣ ಇಲ್ಲಿ ಮದುವೆಯಾಗಿದ್ದು ಜೀವಂತ ಇರುವ ವಧು-ವರನಲ್ಲ. ಬದಲಾಗಿ ಮೂವತ್ತು ವರ್ಷಗಳ ಹಿಂದೆ ಸಾವಿನಪ್ಪಿದ ಯುವಕ ಮತ್ತು ಯುವತಿಯ ಮದುವೆ. ಹೌದು, ಇದು ಅಚ್ಚರಿಯಾದ್ರೂ ಸತ್ಯ. ದಕ್ಷಿಣ ಕನ್ನಡ ಜಿಲ್ಲೆಯ ಶೋಭಾ ಮತ್ತು ಚಂದ್ರಪ್ಪ ಸುಮಾರು ಮೂವತ್ತು ವರ್ಷಗಳ ಹಿಂದೆ ಚಿರ ಯವ್ವನದಲ್ಲೇ ಸಾವನಪ್ಪಿದ್ದರು.
ಹೀಗಾಗಿ ಅವರ ಆತ್ಮಕ್ಕೆ ಶಾಂತಿ ಸಿಗುವ ದೃಷ್ಟಿಯಿಂದ ಇವರಿಬ್ಬರ ಆತ್ಮಕ್ಕೆ ಮದುವೆ ಮಾಡಲಾಗಿದೆ. ಇದೇ ಜುಲೈ 28 ರಂದು ಮದುವೆ ಸಮಾರಂಭ ನಡೆದಿದೆ. ಹೇಗೆ ಜೀವಂತ ಯುವಕ-ಯುವತಿಯ ವಿವಾಹ ಆಗುತ್ತೆ. ಅದೇ ರೀತಿಯಲ್ಲಿ ಇವರ ವಿವಾಹವು ನಡೆದಿದೆ. ಸಪ್ತಪದಿ, ಸೀರೆ ಕೊಡುವ ಶಾಸ್ತ್ರ, ಇನ್ನಿತರ ಶಾಸ್ತ್ರದೊಂದಿಗೆ ವಿವಾಹ ನಡೆದಿದೆ. ಇನ್ನು ಬಂದಂತಹ ಅತಿಥಿಗಳಿಗೆ ಬಾಡೂಟ ಕೊಟ್ಟು ಸತ್ಕರಿಸಲಾಗಿದೆ. ಈ ವಿಭಿನ್ನ ವಿವಾಹವನ್ನು ಪ್ರೇತ ಮದುವೆ ಅಥವಾ ಆತ್ಮಗಳ ಮದುವೆ ಎಂದು ಕರಾವಳಿ ಭಾಗದಲ್ಲಿ ಕರೆಯುತ್ತಾರೆ. ಇದು ಕರಾವಳಿಯಲ್ಲಿ ಸಾಮಾನ್ಯವಾಗಿ ನಡೆದುಕೊಂಡಿರುವ ಸಂಪ್ರದಾಯವಾಗಿದೆ.
ಇನ್ನು ಇಂಟ್ರೆಸ್ಟಿಂಗ್ ಸಂಗತಿ ಎಂದರೆ ಈ ಪ್ರೇತ ಮದುವೆಗೆ ಮದುವೆಯಾಗದ ಯುವಕ-ಯುವತಿ ಪಾಲ್ಗೊಳ್ಳುವಂತಿಲ್ಲ. ಹಾಗಾದ್ರೆ ಪ್ರೇತ ಮದುವೆ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಆಸಕ್ತಿ ನಿಮಗಿದ್ದರೆ ಮುಂದೆ ಓದಿ.
ಏನಿದು ಪ್ರೇತ ಮದುವೆ?
ಭೂತಾರಾಧನೆ, ನಾಗರಾಧನೆಗೆ ಹೆಸರುವಾಸಿಯಾಗಿರುವ ಕರಾವಳಿ ಭಾಗದದಲ್ಲಿ ಪ್ರೇತಗಳ ಮದುವೆ ಅನ್ನೋದು ಮತ್ತೊಂದು ವಿಶೇಷ. ಪ್ರತಿ ವರ್ಷದ ಆಷಾಢ ಮಾಸದಲ್ಲಿ ತುಳುವಿನಲ್ಲಿ ಇದನ್ನು ಆಟಿ ತಿಂಗಳು(ಆಟಿ ತಿಂಗಳು ಎಂದರೆ ಪ್ರೇತಗಳ ತಿಂಗಳು) ಎಂದು ಕರೆಯುತ್ತಾರೆ. ಈ ಆಷಾಢ ತಿಂಗಳಲ್ಲಿ ಹೀಗೆ ಪ್ರೇತಗಳಿಗೆ ಇಲ್ಲಿ ಮದುವೆ ಮಾಡುತ್ತಾರೆ. ಮದುವೆ ಆಗುವ ಮುಂಚೆ ಅಪ್ರಾಪ್ತ ವಯಸ್ಸಿನಲ್ಲಿ ದುರ್ಮರಣಕ್ಕೀಡಾದವರು ಅತೃಪ್ತ ಆತ್ಮಗಳಾಗಿ ತಿರುಗುತ್ತಿರುತ್ತಾರೆ. ಹೀಗಾಗಿ ಇವರಿಗೆ ಮೋಕ್ಷ ಕಲ್ಪಿಸುವ ಉದ್ದೇಶದಿಂದ ಈ ಪ್ರೇತ ಮದುವೆ ಈ ಭಾಗದಲ್ಲಿ ನಡೆಸುತ್ತಾರೆ.
ಪ್ರೇತ ಮದುವೆಯ ಉದ್ದೇಶವೇನು?
ಹೀಗೆ ಮದುವೆಗಿಂತ ಮುಂಚೆ ಯಾರಾದರೂ ಹುಡುಗಿ ಅಥವಾ ಹುಡುಗ ಸತ್ತರೆ. ಅವರು ಕುಟುಂಬದಲ್ಲಿರುವ ಯವ್ವನಕ್ಕೆ ಬಂದಿರುವ ಯುವಕ-ಯುವತಿಯರಿಗೆ ಕೀಟಲೆ ಅಥವಾ ಸಮಸ್ಯೆ ಕೊಡಲು ಆರಂಭಿಸುತ್ತಾರೆ. ಅನೇಕರಿಗೆ ಮದುವೆ ಆಗದೆ ಇರಲು ಈ ಪ್ರೇತಗಳೇ ಕಾರಣ ಎನ್ನುತ್ತಾರೆ. ಹೀಗಾಗಿ ಇವುಗಳಿಗೆ ಮದುವೆ ಮಾಡಿ ಅವರನ್ನು ಸಂತೃಪ್ತಿಪಡಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ. ಅಲ್ಲದೇ ತಮ್ಮ ಮನೆಯಲ್ಲಿ ನಡೆಯುವ ಶುಭ ಕಾರ್ಯಕ್ಕಾಗಲಿ ಅಥವಾ ತಮ್ಮ ಕುಟುಂಬದ ಮುಂದಿನ ಪೀಳಿಗೆಗಾಗಲಿ ಯಾವುದೇ ತೊಂದರೆ ಬಾರದಿರಲಿ ಎಂಬುದು ಪ್ರೇತ ಮದುವೆಯ ಮೂಲ ಉದ್ದೇಶ. ಮದುವೆ ಮಾಡಿಸಿದ ಮೇಲೆ ಅತೃಪ್ತ ಆತ್ಮ ಸಂತೃಪ್ತವಾಗುವ ಮೂಲಕ ಮನೆಯವರಿಗೆ ಉಪದ್ರವ ನೀಡುವುದು ನಿಲ್ಲಿಸುತ್ತದೆ. ಅಲ್ಲದೇ ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತದೆ.
ಹೇಗೆ ಜೋಡಿ ಸೆಟ್ ಮಾಡುತ್ತಾರೆ!
ಜೀವಂತ ಮನುಷ್ಯರು ಹೇಗೆ ವಧು-ವರರನ್ನು ಹುಡುಕುತ್ತಾರೆ ಅದೇ ರೀತಿ ಸಂಪ್ರದಾಯವನ್ನು ಇಲ್ಲಿ ಪಾಲಿಸಲಾಗುತ್ತೆ. ಅಂದರೆ ಒಂದು ಮನೆಯಲ್ಲಿ ಮದುವೆಗಿಂತ ಮುಂಚೆ ಹುಡುಗನೊಬ್ಬ ಸತ್ತಿದ್ದನೆಂದರೆ ಆತನಿಂದ ತೊಂದರೆ ಇತ್ತು ಎಂದಾದರೆ ಮನೆಯವರು ಜ್ಯೋತಿಷಿಯ ಸೂಚನೆಯಂತೆ ತಮ್ಮ ಕುಟುಂಬದಲ್ಲಿ ಈ ಮೊದಲು ಸತ್ತಿರುವ ಯುವತಿಯರು ಯಾರಾದರೂ ಇದ್ದಾರಾ ಎಂದು ಹುಡುಕುತ್ತಾರೆ. ಸಿಗದಿದ್ದದಲ್ಲಿ ದಲ್ಲಾಳಿಗಳೋ, ಜೋತಿಷಿ, ಮಂತ್ರವಾದಿಗಳಿಗೆ ತಿಳಿದಿರುವ ಪ್ರೇತದಲ್ಲೇ ತಮ್ಮ ಜಾತಿಯ ಪ್ರೇತವನ್ನು ಹುಡುಕಿ ಆ ಪ್ರೇತದ ಮನೆಯವರೊಂದಿಗೆ ಹೊಸ ಸಂಬಂಧವನ್ನು ಕುದುರಿಸುತ್ತಾರೆ. ಸಂಬಂಧ ನಿಗದಿಯಾದ ಮೇಲೆ ಹುಡುಗನ ಮನೆಯವರು ಹುಡುಗಿ ಮನೆಗೆ ಬಂದು ಗೋತ್ರ, ನಕ್ಷತ್ರ ಹೊಂದಾಣಿಕೆ ಮಾಡುವ ಮೂಲಕ ಮದುವೆ ದಿನಾಂಕ ನಿಶ್ಚಯ ಮಾಡಿಕೊಂಡು ಹೋಗುತ್ತಾರೆ. ಜೀವಂತ ಮದುವೆಗಳಂತೆ ಇಲ್ಲಿಯೂ ಕುಲ, ಗೋತ್ರ ಜಾತಿ ಎಲ್ಲವನ್ನು ಪರಿಗಣಿಸಿ ಶಾಸ್ತ್ರ ಪ್ರಕಾರವಾಗಿ ಮದುವೆ ಮಾಡಿಸುತ್ತಾರೆ. ಹೀಗೆ ಹುಡುಗ-ಹುಡುಗಿ ಜೋಡಿಯನ್ನು ಸೆಟ್ ಮಾಡಿಕೊಳ್ಳುತ್ತಾರೆ.
ಮದುವೆ ಶಾಸ್ತ್ರ ಹೇಗೆ ಇರುತ್ತೆ?
ಹೀಗೆ ಸೆಟ್ ಮಾಡಿದ ಜೋಡಿಗಳ ಮದುವೆ ಮಾಡಲು ಆಷಾಢದದ ಒಂದು ದಿನ ಫಿಕ್ಸ್ ಮಾಡುತ್ತಾರೆ (ಅನೇಕರು ಅಷಾಢದ ಅಮವಾಸ್ಯೆಯಂದು ಜಾಸ್ತಿ). ಎಲ್ಲರಿಗೂ ಬಾಯಿ ಮಾತಿನಲ್ಲಿ ಹೇಳಿ ಮದುವೆಗೆ ಬರುವಂತೆ ಆಹ್ವಾನಿಸುತ್ತಾರೆ. ಹೀಗೆ ಮದುವೆ ದಿನ ಜೀವಂತ ಇರುವವರಿಗೆ ಮದುವೆ ಮಾಡಿಸಿದ ಹಾಗೇ ಶಾಸ್ತ್ರೋಕ್ತವಾಗಿಯೇ ಮದುವೆ ನಡೆಯುತ್ತದೆ. ಆದರೆ ಇಲ್ಲಿ ಹೋಮ ಕುಂಡಗಳು ಹಾಗೂ ಮಂತ್ರ ಹೇಳಲು ಪೂಜಾರಿಗಳು ಇರುವುದಿಲ್ಲ. ಬದಲಾಗಿ ಎರಡು ಕುರ್ಚಿ ಅಥವಾ ಕಲ್ಲಿನ ಮೇಲೆ ಸೀರೆ, ಪಂಚೆ ಇರಿಸಿ ಮದುವೆ ಮಾಡಲಾಗುತ್ತದೆ. ಮದುವೆ ಸಂಪ್ರದಾಯದಂತೆ ಹುಡುಗಿಗೆ ರೇಷ್ಮೆ ಸೀರೆ, ತಾಳಿ, ಹೂ ಮತ್ತು ವರನಿಗೆ ಪಂಚೆ ಶಲ್ಯ ಎಲ್ಲವನ್ನು ತಂದು ಇರಿಸಿ ಒಂದು ಕಡೆ ಗಂಡು ಪ್ರೇತ, ಇನ್ನೊಂದು ಕಡೆ ಹೆಣ್ಣು ಪ್ರೇತ ಇದೆ ಎಂದು ಕಲ್ಪಿಸಿಕೊಂಡು ಮದುವೆ ಮಾಡಿಸಲಾಗುತ್ತದೆ. ಈ ಮದುವೆಯಲ್ಲಿ ಸಾಮಾನ್ಯವಾಗಿ ಸಂಭ್ರಮ ಇರುವುದಿಲ್ಲ. ಮದುವೆ ವೇಳೆ ಜಾಸ್ತಿಯಾಗಿ ಮೌನ ಆವರಿಸಿರುತ್ತದೆ. ಇನ್ನು ಮದುವೆ ಬಳಿಕ ಬಂದ ಅತಿಥಿಗಳಿಗೆ ಊಟದ ವ್ಯವಸ್ಥೆ ಇರುತ್ತದೆ. ಅಂದು ಪ್ರೇತಗಳಿಗೆ ಇಷ್ಟದ ಆಹಾರವನ್ನು ತಯಾರಿಸುತ್ತಾರೆ. ಪ್ರೇತಗಳಿಗೂ ಎಲೆ ಹಾಕಿ ಊಟ ಬಡಿಸಿ ಅವರನ್ನು ಸಂತುಷ್ಟಗೊಳಿಸುತ್ತಾರೆ. ಹೀಗೆ ಮದುವೆ ಮಾಡುವುದರಿಂದ ಪ್ರೇತಾತ್ಮಗಳು ತಮ್ಮದೇ ಸಂಸಾರ ಕಟ್ಟಿಕೊಂಡು ಜೀವನ ನಡೆಸುತ್ತವೆ, ಬದುಕಿರುವ ತಮ್ಮ ಸಂಬಂಧಿಕರಿಗೆ ಯಾವುದೇ ತೊಂದರೆ ನೀಡುವುದಿಲ್ಲ ಎನ್ನುವುದು ಕರಾವಳಿ ಭಾಗದ ಜನರ ನಂಬಿಕೆ.ಅಷ್ಟೇ ಅಲ್ಲದೇ ಪ್ರೇತಗಳಿಗೆ ಮದುವೆ ಮಾಡಿಸಿದ ಎರಡು ಕುಟುಂಬಗಳು ಮುಂದೆ ಸಂಬಂಧವನ್ನು ಹಾಗೇ ಉಳಿಸಿಕೊಂಡು ಬರುತ್ತಾರೆ. ತಮ್ಮ ಮನೆಯ ಎಲ್ಲಾ ಆಗು ಹೋಗುಗಳಲ್ಲೂ ಆ ಪ್ರೇತ ಕುಟುಂಬವನ್ನು ಕರೆಯುವುದು ಕೂಡ ವಾಡಿಕೆ. ಹೀಗೆ ಪ್ರೇತಗಳ ಮದುವೆ ಮಾಡುವ ಮೂಲಕ ಆತ್ಮಗಳಿಗೆ ಅಂತರ ಪಿಶಾಚಿಯಾಗದಂತೆ ಮಾಡುವುದು ತುಳುನಾಡಿನ ನಂಬಿಕೆಯಲ್ಲೊಂದು.
ಸಾಮಾಜಿಕ ಜಾಲತಾಣದಲ್ಲಿ ಏಕೆ ಸದ್ದು ಮಾಡುತ್ತಿದೆ ಪ್ರೇತಾತ್ಮ!
ಮೂವತ್ತು ವರ್ಷಗಳ ಹಿಂದೆ ಸಾವನಪ್ಪಿದ್ದ ಶೋಭಾ ಮತ್ತು ಚಂದ್ರಪ್ಪ ಅವರ ವಿವಾಹ ಜುಲೈ 28 ದಕ್ಷಿಣ ಕನ್ನಡದಲ್ಲಿ ನಡೆದಿತ್ತು. ಈ ಬಗ್ಗೆ ಯೂಟ್ಯೂಬರ್ ಆನಿ ಅರುಣ್ ಎನ್ನುವವರು ಈ ಬಗ್ಗೆ ವಿಡಿಯೋ ಮೂಲಕ ಟ್ವೀಟ್ ಮಾಡಿದ್ದರೆ. ಕರಾವಳಿ ಬಿಟ್ಟು ಉಳಿದ ಭಾಗದ ಜನರಿಗೆ ಇದು ಹೊಸ ವಿಚಾರವಾಗಿದ್ದರಿಂದ ಈ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಜನರು ಕೂಡ ಏನಾಪ್ಪ ಇದು ಪ್ರೇತ ಮದುವೆ ಎಂದು ಸುದ್ದಿಯತ್ತ ಇಣುಕಿ ನೋಡುತ್ತಿದ್ದಾರೆ.