For Quick Alerts
ALLOW NOTIFICATIONS  
For Daily Alerts

ಗಣಪತಿ ಪೂಜೆಯಲ್ಲಿ ಯಾಕೆ ತುಳಸಿಯನ್ನು ಬಳಸುವಂತಿಲ್ಲ ಗೊತ್ತಾ?

ಯಾವುದೇ ಕೆಲಸ ಆರಂಭಿಸುವಾಗ ವಿಘ್ನಗಳನ್ನು ನಿವಾರಿಸಪ್ಪ ಎಂದು ಬೇಡುವ ಗಣೇಶನ ಪೂಜೆಗೆ ತುಳಸಿಯನ್ನು ಬಳಸುವಂತಿಲ್ಲ. ಹಾಗಾದ್ರೆ ಇದಕ್ಕೆ ಕಾರಣವೇನು ಅನ್ನುವುದನ್ನು ತಿಳಿದುಕೊಳ್ಳಲು ಈ ಲೇಖನ ಓದಿ

By Sushma Charhra
|

ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ತುಂಬಾ ಮಹತ್ವವಿದೆ. ವಿಷ್ಣು ಮತ್ತು ಕೃಷ್ಣನ ಪೂಜೆಯು ತುಳಸಿ ಇಲ್ಲದೆ ಸಂಪೂರ್ಣಗೊಳ್ಳುವುದೇ ಇಲ್ಲ. ಮಂಗಳವಾಗಬೇಕಾದರೆ ತುಳಸಿ ಪೂಜೆ ಮಾಡಲೇಬೇಕು. ಶಾಂತಿ ಮತ್ತು ಏಳಿಗೆಯ ಪ್ರತೀಕವಾಗಿ ಪ್ರತಿ ಮನೆಯಲ್ಲೂ ತುಳಸಿ ಗಿಡವನ್ನು ನೆಡಲೇಬೇಕು ಎಂದು ಹೇಳಲಾಗುತ್ತೆ. ಅಷ್ಟೇ ಅಲ್ಲ, ತುಳಸಿ ಆರೋಗ್ಯದ ದೃಷ್ಟಿಯಿಂದಲೂ ಬಹಳ ಉಪಯೋಗಕಾರಿಯಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವುದೇ ಆಗಿದೆ.

ಆದರೆ ಇಷ್ಟೆಲ್ಲ ಮಹತ್ವವಿರುವ ತುಳಸಿಯನ್ನು ಒಂದು ದೇವರ ಪೂಜೆಗೆ ನಿಷಿದ್ಧಗೊಳಿಸಲಾಗಿದೆ. ಯಾವುದೇ ಕೆಲಸ ಆರಂಭಿಸುವಾಗ ವಿಘ್ನಗಳನ್ನು ನಿವಾರಿಸಪ್ಪ ಎಂದು ಬೇಡುವ ಗಣೇಶನ ಪೂಜೆಗೆ ತುಳಸಿಯನ್ನು ಬಳಸುವಂತಿಲ್ಲ. ಹಾಗಾದ್ರೆ ಇದಕ್ಕೆ ಕಾರಣವೇನು ಅನ್ನುವುದನ್ನು ತಿಳಿದುಕೊಳ್ಳಲು ಈ ಲೇಖನ ಓದಿ.

ರಾಕ್ಷಸನನ್ನು ತುಳಸಿ ವರಿಸಿದ್ದು ಯಾಕೆ

ಯಮುನಾ ದಂಡೆಯ ತೀರದಲ್ಲಿ ಒಮ್ಮೆ ಗಣಪತಿ ಧ್ಯಾನಸ್ಥನಾಗಿರುತ್ತಾನೆ. ತುಳಸಿ ಅನ್ನುವ ಹುಡುಗಿ ಅಲ್ಲಿ ಹೋಗುತ್ತಿರುತ್ತಾಳೆ. ಆಕೆ ಗಣೇಶನನ್ನು ನೋಡಿದಾಗ ಆಕರ್ಷಿತಳಾಗಿ ತನ್ನನ್ನು ಮದುವೆಯಾಗುವಂತೆ ವಿನಾಯಕನನ್ನು ಕೇಳಿಕೊಳ್ಳುತ್ತಾಳೆ. ಆದರೆ ಆಕೆಯ ಆಸೆಗೆ ತಣ್ಣೀರೆರಚುವ ಗಣೇಶ, ಸಹನೆಯಿಂದ ನಿರಾಕರಿಸುತ್ತಾನೆ. ಇದರಿಂದ ಕೋಪೋದ್ರಿಕ್ತಗೊಳ್ಳುವ ತುಳಸಿ, ಗಣೇಶನಿಗೆ ಎರಡೆರಡು ಬಾರಿ ಮದುವೆಯಾಗುವಂತೆ ಆಗಲಿ ಎಂದು ಶಪಿಸುತ್ತಾಳೆ. ಇದಕ್ಕೆ ಪ್ರತಿಯಾಗಿ ಗಣಪತಿಯೂ ಕೂಡ ಶಾಪ ನೀಡುತ್ತಾನೆ. ನೀನು ರಾಕ್ಷಸನನ್ನು ಮದುವೆಯಾಗುವಂತೆ ಆಗಲಿ ಎಂದು ಹೇಳಿಬಿಡುತ್ತಾನೆ ಮತ್ತು ಆತನ ಪೂಜೆಯಲ್ಲಿ ಯಾವುದೇ ಕಾರಣಕ್ಕೂ ತುಳಸಿಗೆ ಅವಕಾಶವಿಲ್ಲ.

ಅದೇ ಕೂಡಲೇ ತುಳಸಿದೇವಿಗೆ ಬೇಸರವಾಗುತ್ತೆ ಮತ್ತು ಗಣಪತಿಯಲ್ಲಿ ತನ್ನ ತಪ್ಪಿಗಾಗಿ ಕ್ಷಮೆಯಾಚಿಸುತ್ತಾಳೆ. ಗಣೇಶನಿಗೂ ಹೃದಯ ಕರಗಿ ರಾಕ್ಷಸನನ್ನು ಮದುವೆಯಾಗುವುದನ್ನು ತಪ್ಪಿಸಲಾಗದು ಆದರೆ ನಿನಗೆ ವಿಶೇಷ ಮಹತ್ವ ಸಿಗಲಿದೆ. ಕೃಷ್ಣ ಮತ್ತು ವಿಷ್ಣುವಿನ ಪೂಜೆಯು ನೀನಲ್ಲದೆ ಅಪೂರ್ಣವಾದಂತೆ. ನಿನಗೆ ಈ ಪ್ರಪಂಚದಲ್ಲಿ ಬಹಳ ಬೆಲೆ ಸಿಗಲಿದೆ ಎಂದು ವರವನ್ನು ಪ್ರಾಪ್ತಿಸುತ್ತಾನೆ. ಹಾಗಾಗಿ ಗಣೇಶನ ಪೂಜೆಯಲ್ಲಿ ತುಳಸಿಗೆ ಜಾಗವಿಲ್ಲದೆ ಇದ್ದರೂ ವಿಷ್ಣು ಮತ್ತು ಕೃಷ್ಣನ ಪೂಜೆಯಲ್ಲಿ ತುಳಸಿ ಇರಲೇಬೇಕು.

ಈಗ ಉದ್ಭವಿಸುವ ಪ್ರಶ್ನೆ ಏನೆಂದರೆ, ಶಾಪದ ನಂತರ ಏನಾಯಿತು ಎಂಬುದು. ಹಾಗಿದ್ದರೆ ಅದಕ್ಕೆ ಉತ್ತರ ಇಲ್ಲಿದೆ ನೋಡಿ.

ಡಂಬ ಎಂಬ ಒಬ್ಬ ರಾಕ್ಷಸನಿದ್ದ. ಆತನಿಗೆ ವಿಷ್ಣುವಿನ ವರದಿಂದಾಗಿ ಒಬ್ಬ ಪುತ್ರ ಜನಿಸಿದ. ಆತನ ಹೆಸರೇ ಶಂಖಚೂಢ. ಶಂಖಚೂಡ ಗಾಢ ತಪಸ್ಸನ್ನು ಕೈಗೊಂಡ ಮತ್ತು ಬ್ರಹ್ಮದೇವನ ಕೃಪೆಗೆ ಪಾತ್ರನಾದ. ಶಂಖಚೂಢನ ತಪಸ್ಸಿಗೆ ಮೆಚ್ಚಿದ ಬ್ರಹ್ಮದೇವ ಆತನ ಮುಂದೆ ಪ್ರತ್ಯಕ್ಷನಾಗಿ ನಿನಗೆ ವರ ಏನು ಬೇಕು ಎಂದು ಕೇಳಿದಾಗ, ಯಾರಿಂದಲೂ, ಯಾವ ದೇವರಿಂದಲೂ ತನನ್ನ ಸೋಲಿಸಲು ಸಾಧ್ಯವಾಗದ ವರವನ್ನು ಬೇಡಿದ. ಅದಕ್ಕೆ ಬ್ರಹ್ಮದೇವನು ಭದ್ರಿವನಕ್ಕೆ ತೆರಳಿ ಅಲ್ಲಿ ಧ್ಯಾನಸ್ಥಳಾಗಿರುವ ತುಳಸಿಯನ್ನು ವರಿಸುವಂತೆ ಹೇಳುತ್ತಾನೆ.

ಶಂಖಚೂಢ ಭದ್ರಿವನಕ್ಕೆ ತೆರಳಿದಾಗ ಅಲ್ಲಿದ್ದ ತುಳಸಿಯನ್ನು ನೋಡಿ ಮನಸೋಲುತ್ತಾನೆ ಮತ್ತು ತುಳಸಿಯನ್ನು ಪ್ರೀತಿಸಲು ಆರಂಭಿಸುತ್ತಾನೆ. ಆಗ ಬ್ರಹ್ಮದೇವನೆ ಖುದ್ದು ನಿಂತು ಅವರಿಬ್ಬರ ಗಾಂಧರ್ವ ವಿವಾಹವನ್ನು ನೆರವೇರಿಸುತ್ತಾನೆ. ಆದ್ರೆ ಅಲ್ಲಿಂದ ಈ ರಾಕ್ಷಸ ಮತ್ತಷ್ಟು ಬಲಿಷ್ಟಗೊಳ್ಳುತ್ತಾನೆ. ಹಾಗಾಗಿ ದಿನದಿಂದ ದಿನಕ್ಕೆ ಶಂಖಚೂಢ ಹೆಮ್ಮೆಯಿಂದ ಬೀಗುತ್ತಾನೆ. ಒಂದು ದಿನ ಅವನು ದೇವತೆಗಳೊಡನೆ ಯುದ್ಧ ಮಾಡಲಾರಂಭಿಸುತ್ತಾನೆ ಮತ್ತು ಒಬ್ಬೊಬ್ಬರನ್ನೇ ಸೋಲಿಸುತ್ತಾನೆ. ಇವಳ ಉಪಟಳದಿಂದ ಬೇಸತ್ತ ದೇವತೆಗಳೆಲ್ಲರೂ ಒಟ್ಟುಗೂಡಿ ವೈಕುಂಠಕ್ಕೆ ತೆರಳಿ ಭಗವಾನ್ ವಿಷ್ಣು ಪರಮಾತ್ಮನಲ್ಲಿ ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ. ಆದರೆ ವಿಷ್ಣು ರಾಕ್ಷಸರನ್ನು ಕೇವಲ ಪರಶಿವನ ತ್ರಿಶೂಲದಿಂದ ಮಾತ್ರ ಕೊಲ್ಲಲು ಸಾಧ್ಯವೆಂದು ತಿಳಿಸುತ್ತಾನೆ. ಆದರೆ ಶಿವ ಶಂಖಚೂಡನನ್ನು ಕೊಲ್ಲಬೇಕೆಂದರೆ ಆತನ ವಿಷ್ಣು ಕವಚವನ್ನು, ವಿಷ್ಣು ಹಿಂಪಡೆಯದ ವಿನಃ ಸಾಧ್ಯವಿಲ್ಲ ಎಂಬ ಸಂಗತಿಯೊಂದು ಅಶರೀರವಾಣಿಯ ರೂಪದಲ್ಲಿ ತಿಳಿಯಲ್ಪಡುತ್ತೆ ಮತ್ತು ತುಳಸಿಯು ಆತನ ಸತಿಯಾಗಿರಬಾರದು ಎಂದು ಹೇಳಲಾಗುತ್ತೆ.

ಹಾಗಾಗಿ ವಿಷ್ಣುವು ಬ್ರಾಹ್ಮಣ ರೂಪ ಪಡೆದು ಶಂಖಚೂಡನ ಬಳಿ ತೆರಳುತ್ತಾನೆ. ಬ್ರಾಹ್ಮಣನು ಆತನ ಕವಚವನ್ನು ಬೇಡುತ್ತಾನೆ. ಬ್ರಾಹ್ಮಣನು ತನ್ನ ಮನೆಯಿಂದ ಖಾಲಿ ಕೈಯಲ್ಲಿ ತೆರಳುವುದರಿಂದ ಅಪಶಕುನವಾಗುತ್ತೆ ಎಂದು ಅರಿತಿರುವ ಶಂಖಚೂಡನು ತನ್ನ ಕವಚವನ್ನು ಆತನಿಗೆ ನೀಡುತ್ತಾನೆ. ನಂತರ ವಿಷ್ಣುವು ಶಂಖಚೂಢನ ವೇಷದಲ್ಲಿ ತುಳಸಿಯ ಬಳಿ ಬರುತ್ತಾನೆ. ಆಕೆ ಶಂಖಚೂಢನ ವೇಷದಲ್ಲಿರುವ ವಿಷ್ಣುವೇ ತನ್ನ ಗಂಡನೆಂದು ಭಾವಿಸಿ ಆತನನ್ನು ಸ್ಪರ್ಷಿಸುತ್ತಾಳೆ. ವಿಷ್ಣುವನ್ನು ಸ್ಪರ್ಷಿಸಿದಾಗ ಆಕೆಯ ಪತಿವ್ರತತ್ವ ತೊಡೆದುಹೋಗುತ್ತೆ ಹಾಗಾಗಿ ಕೋಪಗೊಳ್ಳುವ ತುಳಸಿಯು ವಿಷ್ಣುವಿಗೆ ನೀನು ಕಲ್ಲಾಗಿ ಹೋಗು ಎಂದು ಶಾಪ ನೀಡುತ್ತಾಳೆ. ಅದೇ ಕಾರಣಕ್ಕೆ ವಿಷ್ಣುವು ಸಾಲಿಗ್ರಾಮ ಶಿಲೆಯಾದ ಅನ್ನುವುದು ಪ್ರತೀತಿ.

ವಿಷ್ಣುವನ್ನು ಮುಟ್ಟಿದಾಗ ತುಳಸಿಯ ಕನ್ಯತ್ವ ನಾಶವಾಯಿತು. ಆದರೆ ತುಳಸಿಯು ವಿಷ್ಣುವಿನ ಪರಮ ಭಕ್ತೆಯಾಗಿದ್ದು, ತನ್ನ ಜೀವಮಾನವಿಡೀ ವಿಷ್ಣು ನಾಮಸ್ಮರಣೆಯಲ್ಲೇ ಕಳೆದಿರುತ್ತಾಳೆ. ಅದೇ ಕಾರಣಕ್ಕಾಗಿ ವಿಷ್ಣುವು ಆಕೆಗೆ ವರ ನೀಡುತ್ತಾನೆ. ನಿನಗೊಂದು ಪರಮಶಕ್ತಿ ಇರಲಿದೆ ಮತ್ತು ನೀನು ಜಗಜ್ಜನಿತೆಯಾಗುವೆ. ಅಷ್ಟೇ ಅಲ್ಲ ಆಕೆಯನ್ನು ನದಿಯಾಗಿಸಿದ ಎಂದೂ ಕೂಡ ಹೇಳಲಾಗುತ್ತೆ. ಅದುವೇ ಸದ್ಯ ನೇಪಾಳದಲ್ಲಿ ಹರಿಯುತ್ತಿರುವ ಗಂಧಕಿ ನದಿ ಎನ್ನಲಾಗಿದೆ.

ಪುರಾಣದ ಈ ಕಥೆ ಈಗಲೂ ಜನರ ಮನಸ್ಸಲ್ಲಿ ಹಾಗೆಯೇ ಉಳಿದಿದೆ.

English summary

STORY OF TULSI: THE UNFORTUNATE GODDESS

Tulsi or Basil is one plant which you will find in almost every Hindu household. Every morning the woman of the house offers water, incense and flowers to the plant. In the evening oil lamps are lit in front of the plant. Have you ever wondered why only the Basil plant receives this special treatment and not the other plants?
X
Desktop Bottom Promotion