Just In
Don't Miss
- News ಬೆಂಗಳೂರು ನಮ್ಮ ಮೆಟ್ರೋ ಬೆಳಗ್ಗೆ 03:35ಕ್ಕೆ ಆರಂಭ: ಏಕೆ? ಕಾರಣ ಇಲ್ಲಿದೆ
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Movies Lok Sabha Election 2024: ಕನ್ನಡ ತಾರೆಯರು ನಾಳೆಏಪ್ರಿಲ್ 26 ಎಲ್ಲೆಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ?
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯೋಧರ ಚಿತಾಭಸ್ಮ ಸಂಗ್ರಹಿಸಲು ಬರೋಬ್ಬರಿ 1.2 ಲಕ್ಷ ಕಿ.ಮೀ ದೂರ ಕ್ರಮಿಸಿದ ಬೆಂಗಳೂರಿನ ವ್ಯಕ್ತಿ, ದೇಶ ಸೇವೆ ಅಂದರೆ ಇದಲ್ವೇ?
ನಮ್ಮ ಯೋಧರು ಯುದ್ಧ ಅಥವಾ ಕಾರ್ಯಾಚರಣೆ ವೇಳೆ ಹುತಾತ್ಮರಾದರೆ ನಾವು ಅವರ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಅವರಿಗೆ ಗೌರವ ಕೊಡುತ್ತೇವೆ. ವೀರ ಯೋಧನಿಗೆ ನಮನ ಎಂದು ಸಲ್ಲಿಸುತ್ತೇವೆ. 2019ರಲ್ಲಿ ಪುಲ್ವಾಮ ದಾಳಿಯಲ್ಲಿ ನಮ್ಮ 40 ಯೋಧರು ಹುತಾತ್ಮರಾಗಿದ್ದರು. ಈ ವೇಳೆಯೂ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಾಕಿ ಶೋಕ ವ್ಯಕ್ತಪಡಿಸಿದ್ದರು.
ಆದರೆ ಅನೇಕರು ಘಟನೆ ನಡೆದ ಕೊಂಚ ದಿನ ಬಳಿಕ ಮರೆತು ಬಿಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ. ಕೆಲವರ ಮನ ಹುತಾತ್ಮರ ಕುಟುಂಬಕ್ಕೆ ಏನಾದರೂ ಮಾಡಬೇಕು ಎನ್ನುವ ಹಂಬಲ ಹೊಂದಿರುತ್ತದೆ. ಇಂತಹ ಹಂಬಲ ಹೊಂದಿರುವ ಎಲ್ಲರೂ ಈ ಕಾರ್ಯಗಳನ್ನು ಮಾಡುವುದಿಲ್ಲ. ಕೆಲವರು ಹಠಕ್ಕೆ ಬಿದ್ದು ಇಂತಹ ಒಳ್ಳೆಯ ಕಾರ್ಯವನ್ನು ಮಾಡುತ್ತಾರೆ. ಅಂತಹುದೇ ಒಬ್ಬ ವ್ಯಕ್ತಿ ಬೆಂಗಳೂರಿನಲ್ಲಿದ್ದಾರೆ.
ಹೌದು, ಬೆಂಗಳೂರು ಮೂಲದ ಉಮೇಶ್ ಗೋಪಿನಾಥ್ ಜಾಧವ್ ಅವರ ಮನ ಹುತಾತ್ಮ ಯೋಧರು ಹಾಗೂ ಕುಟುಂಬದವರಿಗೆ ಮಿಡಿದಿದೆ. ಇವರು ಮಾಡಿದ ಕಾರ್ಯ ಕೇಳಿದ್ರೆ ನೀವು ಈ ಸ್ಟೋರಿ ಸಂಪೂರ್ಣವಾಗಿ ಓದಿದ ಬಳಿಕ ಈ ಮನುಷ್ಯನಿಗೆ ಒಂದು ಬಿಗ್ ಸಲ್ಯೂಟ್ ಹೊಡೆಯುವುದರಲ್ಲಿ ಡೌಟೇ ಇಲ್ಲ.ಪುಲ್ವಾಮದಲ್ಲಿ ಹುತಾತ್ಮರಾದ ಯೋಧರ ಊರಿಗೆ ತೆರಳಿ ಚಿತಾ ಭಸ್ಮ ಅಥವಾ ಮಣ್ಣನ್ನು ಸಂಗ್ರಹಿಸಿದ್ದಾರೆ.
ಹಾಗಾದ್ರೆ ಈ ವ್ಯಕ್ತಿಯ ಹಿನ್ನಲೆ ಏನು? ಇವರು ಈ ರೀತಿ ಮಾಡಲು ಕಾರಣವೇನು? ಇವರ ಈ ಕಾರ್ಯದ ಹಿಂದಿರುವ ಉದ್ದೇಶವೇನು? ಈ ಎಲ್ಲದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಗೋಪಿನಾಥ್ ಜಾಧವ್ ಮಾಡಿದ್ದೇನು?
ಬೆಂಗಳೂರಿನಲ್ಲಿ ಸಂಗೀತಾ ಶಾಲೆಯನ್ನು ಹೊಂದಿರುವ ಉಮೇಶ್ ಗೋಪಿನಾಥ್ ಜಾಧವ್, ಹೀಗೆ ಒಂದು ದಿನ ತನ್ನ ಕೆಲಸದಲ್ಲಿದ್ದಾಗ ಪುಲ್ವಾಮ ದಾಳಿ ಬಗ್ಗೆ ಅವರಿಗೆ ತಿಳಿಯುತ್ತದೆ. ಈ ದಾಳಿಯಲ್ಲಿ ನಮ್ಮ 40 ಯೋಧರು ಹುತಾತ್ಮರಾಗಿರುವುದು ತಿಳಿದಾಗ ಉಮೇಶ್ ಗೋಪಿನಾಥ್ ಜಾಧವ್ ಗೆ ತೀವ್ರ ನೋವು ಉಂಟಾಗುತ್ತದೆ.
ಈ ಹುತಾತ್ಮ ಯೋಧರ ಕುಟುಂಬದ ಬಗ್ಗೆ ನೆನೆದು ಗೋಪಿನಾಥ್ ಜಾಧವ್ ತೀವ್ರ ಚಿಂತಾಕ್ರಾಂತರಾಗುತ್ತಾರೆ. ಪುಲ್ವಾಮದ ಹುತಾತ್ಮ ಯೋಧರು ಹಾಗೂ ಕುಟುಂಬಕ್ಕೆ ಏನಾದರೂ ಮಾಡಬೇಕು ಎಂದು ಗೋಪಿನಾಥ್ ನಿರ್ಧರಿಸುತ್ತಾರೆ. ಇದಕ್ಕಾಗಿ ಪುಲ್ವಾಮ ಘಟನೆಯ ಹುತಾತ್ಮ ಯೋಧರ ಮಣ್ಣು ಅಥವಾ ಚಿತಾ ಭಸ್ಮ ಸಂಗ್ರಹಿಸಲು ನಿರ್ಧರಿಸುತ್ತಾರೆ.
ಅದರಲ್ಲೂ ಪುಲ್ವಾಮ ಘಟನೆ ನಡೆದು ವರ್ಷದೊಳಗೆ ಈ ಕಾರ್ಯವನ್ನು ಮಾಡಬೇಕು ಎಂದು ನಿಶ್ಚಯಿಸಿ, ಎಪ್ರಿಲ್ 9 ರಂದು ಏಕಾಂಗಿಯಾಗಿ ಯಾತ್ರೆ ಆರಂಭಿಸುತ್ತಾರೆ. ಹೀಗೆ ಪುಲ್ವಾಮದಲ್ಲಿ ಹುತಾತ್ಮರಾದ ಪ್ರತೀ ಯೋಧನ ಮನೆಗೆ ಭೇಟಿ ನೀಡುತ್ತಾರೆ.
16 ಜಿಲ್ಲೆಗಳಲ್ಲಿ ಬರೋಬ್ಬರಿ 61,000 ಕಿ.ಮೀ ಸಂಚರಿಸಿ ಹುತಾತ್ಮ ಯೋಧರ ಮನೆಗಳಿಂದ ಮಣ್ಣು ಅಥವಾ ಚಿತಾಭಸ್ಮವನ್ನು ಸಂಗ್ರಹಿಸುತ್ತಾರೆ. ಪುಲ್ವಾಮ ದಾಳಿ ನಡೆದು ಒಂದು ವರ್ಷದೊಳಗೆ ಮಣ್ಣು ಅಥವಾ ಚಿತಾ ಭಸ್ಮ ಸಂಗ್ರಹಿಸುವ ಕಾರ್ಯವನ್ನು ಉಮೇಶ್ ಗೋಪಿನಾಥ್ ಜಾಧವ್ ಮುಗಿಸುತ್ತಾರೆ.
ಬಳಿಕ ಫೆಬ್ರವರಿ 14( ಪುಲ್ವಾಮ ದಾಳಿ ನಡೆದ ದಿನ) ರಂದು ಜಾದವ್ ಅವರು CRPF ಅಧಿಕಾರಿಗಳಿಗೆ ಚಿತಾಭಸ್ಮವನ್ನು ಹಸ್ತಾಂತರಿಸಿದ್ದಾರೆ. ಅದನ್ನು ಈಗ ಲೆತ್ಪೋರಾ ಶಿಬಿರದಲ್ಲಿ ಸ್ಮಾರಕವಾಗಿ ಇರಿಸಲಾಗಿದೆ. ಈಗಲೂ ಈ ಚಿತಾ ಭಸ್ಮ ಇರುವ ಹೂಜಿ ಅಲ್ಲಿದೆ.
ಈ ಕಾರ್ಯಕ್ಕೆ CRPF ಉಮೇಶ್ ಗೋಪಿನಾಥ್ ಜಾಧವ್ ಅವರಿಗೆ ಅಭಿನಂದನೆ ಸಲ್ಲಿಸಿದೆ.
ಇಲ್ಲಿಗೆ ನಿಲ್ಲಿಲ್ಲ ಜಾಧವ್ ಅವರ ಯೋಧರ ಮೇಲಿನ ಪ್ರೇಮ!
ಈ ಹಿಂದೆ ಮಣ್ಣು ಅಥವಾ ಚಿತಾಭಸ್ಮ ಸಂಗ್ರಹಕ್ಕೆ ಕೇವಲ 2000 ರೂ. ಹಿಡಿದುಕೊಂಡು ಉಮೇಶ್ ಗೋಪಿನಾಥ್ ಜಾಧವ್ ಹೊರಟಿದ್ದರು. ಕಾರಿನಲ್ಲಿ ಹೋದ ಕಾರಣ ಭಾರೀ ಖರ್ಚು ಕೂಡ ಆಗಿತ್ತು. ಹಣ ಬತ್ತಿದರೂ ಗೋಪಿನಾಥ್ ಜಾಧವ್ ಅವರ ದೇಶ ಪ್ರೇಮ, ಯೋಧರ ಮೇಲಿನ ಪ್ರೇಮ ಬತ್ತಿರಲಿಲ್ಲ.
ಹೀಗಾಗಿ ಮತ್ತೆ ಈ ರೀತಿಯ ಅಭಿಯಾನವನ್ನು ಆರಂಭಿಸಲು ಮುಂದಾಗಿದ್ದಾರೆ. ಈ ವರೆಗೆ ಹುತಾತ್ಮರಾದ ಯೋಧರ ಮನೆಗೆ ಭೇಟಿ ನೀಡಿ ಅಲ್ಲಿಂದ ಮಣ್ಣು ಅಥವಾ ಚಿತಾಭಸ್ಮ ತೆಗೆದುಕೊಂಡು ಬರವು ಯೋಜನೆ ಹಾಕಿಕೊಳ್ಳುತ್ತಾರೆ. ತನ್ನ ಪ್ರಯಾಣವನ್ನು ಆರಂಭಿಸುತ್ತಾರೆ. ಬರೋಬ್ಬರಿ ಮೂರು ವರ್ಷ ಎರಡು ತಿಂಗಳುಗಳ ಕಾಲ ಸುಮಾರು 1.2 ಲಕ್ಷ ಕಿ.ಮೀ ದೂರ ಕ್ರಮಿಸಿ 150 ಯೋಧರ ಮನೆಗಳಿಗೆ ತೆರಳಿ ಅಲ್ಲಿಂದ ಮಣ್ಣು ಅಥವಾ ಚಿತಾಭಸ್ಮವನ್ನು ಕಲೆಕ್ಟ್ ಮಾಡಿದ್ದಾರೆ. ಸದ್ಯ ದೆಹಲಿಯಲ್ಲಿರುವ ಜಾಧವ್ ಹುತಾತ್ಮ ಯೋಧರ ಮನೆಗಳಿಂದ ಸಂಗ್ರಹಿಸಿದ ಮಣ್ಣ ಅಥವಾ ಚಿತಾಭಸ್ಮವನ್ನು ಸೇನೆಗೆ ಹಸ್ತಾಂತರಿಸಲು ಮುಂದಾಗಿದ್ದಾರೆ.
ಈ ಮೂಲಕ ಈ ಮಣ್ಣಿನ ತನ್ನ ಋಣವನ್ನು ತೀರಿಸಲು ಹೊರಟಿದ್ದಾರೆ. ತನ್ನ ದೇಶ ಪ್ರೇಮ, ಸೇನೆ ಮೇಲಿನ ಪ್ರೇಮವನ್ನು ತೋರಿಸುತ್ತಿದ್ದಾರೆ.
ಈ ಮಣ್ಣಿನಿಂದ ಹುತಾತ್ಮರ ಸ್ಮಾರಕ ನಿರ್ಮಿಸಲು ಮನವಿ!
ಇನ್ನು ಹುತಾತ್ಮ ಯೋಧರ ಮನೆಯಿಂದ ತಂದಿರುವ ಮಣ್ಣನ್ನು ಸುಮ್ಮನೆ ಹೀಗೆ ಇಡುವುದಕ್ಕಿಂತ ಹುತಾತ್ಮ ಯೋಧರ ಹೊಸ ಸ್ಮಾರಕ ನಿರ್ಮಿಸಬೇಕು ಅದರಲ್ಲಿ ಈ ಮಣ್ಣನ್ನು ಬಳಕೆ ಮಾಡಬೇಕು ಎಂದು ಉಮೇಶ್ ಗೋಪಿನಾಥ್ ಜಾಧವ್ ತನ್ನ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸೇನೆಯ ಮುಖ್ಯಸ್ಥರನ್ನು ಭೇಟಿ ಮಾಡಿ ತನ್ನ ಇಚ್ಚೆ ತಿಳಿಸುವುದಾಗಿ ಜಾಧವ್ ತಿಳಿಸಿದ್ದಾರೆ. ಹೊಸ ಸ್ಮಾರಕ ಭಾರತದ ಭೂಪಟದ ರೀತಿ ನಿರ್ಮಿಸಿ, ಈ ಸ್ಮಾರಕಕ್ಕೆ ಈ 150 ಹುತಾತ್ಮ ಯೋಧರ ಮನೆಗಳಿಂದ ತಂದ ಮಣ್ಣನ್ನು ಬಳಸಬೇಕು ಎಂದು ಜಾಧವ್ ಮನವಿ ಮಾಡಿದ್ದಾರೆ.
ಜರ್ನಿ ಬಗ್ಗೆ ಗೋಪಿನಾಥ್ ಹೇಳುವುದೇನು?
ಜರ್ನಿ ಬಗ್ಗೆ ಗೋಪಿನಾಥ್ ಪ್ರತಿಕ್ರಿಯೆ ನೀಡಿದ್ದು, ದೇಶ ಹಾಗೂ ಸೇನೆಯ ಮೇಲಿನ ಗೌರವದಿಂದ ಈ ರೀತಿ ಮಾಡಿದ್ದೇನೆ. ಅವರ ತ್ಯಾಗಕ್ಕೆ ನಾವು ಏನು ಮಾಡಿದರು ಸಾಟಿಯಾಗದು ಎಂದಿದ್ದಾರೆ. ನಾನು ಕೆಲ ಹುತಾತ್ಮ ಯೋಧರ ಮನೆಗೆ ಹೋದಾಗ ಅವರು ಕೇವಲ ಮಣ್ಣನ್ನು ಕೊಟ್ಟಿಲ್ಲ.
ಬದಲಾಗಿ ಕೆಲವರು ಹುತಾತ್ಮ ಯೋಧರ ಬ್ಯಾಡ್ಜ್ ಗಳು, ಪೆನ್, ಪುಸ್ತಕ, ಅವರು ಇಷ್ಟಪಡುತ್ತಿದ್ದ ವಸ್ತುಗಳನ್ನು ಕೊಟ್ಟರು. ಈ ಮೂಲಕ ನನ್ನ ಕಾರ್ಯಕ್ಕೆ ಅವರು ಪ್ರೀತಿ ವ್ಯಕ್ತಪಡಿಸಿದರು. ಇನ್ನು ಕೆಲವು ಕಡೆ ಭಾವನಾತ್ಮಕವಾಗಿ ಕೆಲ ಪೋಷಕರು ಮಾತನಾಡುವಾಗ ಅಲ್ಲಿಂದ ಬರಲು ಮನಸ್ಸು ಆಗುತ್ತಿರಲಿಲ್ಲ. ಹೀಗಾಗಿ ಕೆಲವು ಕಡೆ 4 ರಿಂದ 5 ದಿನ ನಿಂತು ಅವರಿಗೆ ಸಾಂತ್ವನ ಹೇಳಿ ಬರುತ್ತಿದ್ದೆ ಎಂದು ಗೋಪಿನಾಥ್ ತಿಳಿಸಿದ್ದಾರೆ. ಇನ್ನು ಜರ್ನಿ ವೇಳೆ ಹಲವು ಸವಾಲುಗಳನ್ನು ಎದುರಿಸಿದೆ ಎಂದು ಹೇಳುವ ಗೋಪಿನಾಥ್, ಜರ್ನಿ ವೇಳೆ ನಿದ್ದೆ ಗೆಡುತ್ತಿದೆ. ಮುಂಬಯಿ ಪ್ರವಾಹದಲ್ಲಿ ನನ್ನ ಕಾರಿಗೆ ಸಮಸ್ಯೆ ಉಂಟಾಗಿತ್ತು.
ಟಯರ್ ಸವೆಯೋದು ಹೀಗೆ ಹಲವಾರು ಸಮಸ್ಯೆಗಳನ್ನು ಎದುರಿಸಿದೆ ಎಂದು ಅವರು ಹೇಳಿದ್ದಾರೆ. ಆಹಾರ ಸಿಗದೆ ಬಿಸ್ಕೆಟ್ ತಿಂದು ಪ್ರಯಾಣ ಮಾಡುತ್ತಿದ್ದ ಬಗ್ಗೆ ತಿಳಿಸಿದ್ದಾರೆ.
ಮಗನನ್ನು ಸೇನೆಗೆ ಸೇರಿಸುವೆ!
ಇನ್ನು ಬೆಂಗಳೂರು ಮೂಲದ ಉಮೇಶ್ ಗೋಪಿನಾಥ್ ಜಾಧವ್ ಅವರ ದೇಶ ಹಾಗೂ ಸೇನೆ ಪ್ರೇಮ ಇಲ್ಲಿಗೆ ನಿಂತಿಲ್ಲ. ಮುಂದಿನ ದಿನಗಳಲ್ಲಿ ಯುವಕರಲ್ಲಿ ದೇಶ ಪ್ರೇಮದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇನೆ ಎಂದಿರುವ ಅವರು ತನ್ನ ಮಗನನ್ನು ಸೇನೆಗೆ ಸೇರಿಸುವ ಎಂದಿದ್ದಾರೆ. ತನ್ನ ಮಗ ಈಗ ಎಂಟನೇ ತರಗತಿಯಲ್ಲಿ ಕಲಿಯುತ್ತಿದ್ದ ಈಗ ಎನ್ ಸಿಸಿ ಗೆ ಸೇರಿಕೊಂಡಿದ್ದಾನೆ. ಅವನಿಗೂ ದೇಶ ಸೇವೆ ಮಾಡುವ ಬಯಕೆ ಇದೆ ಎಂದು ಹೇಳಿದ್ದಾರೆ. ಇನ್ನು ನನ್ನ ಈ ಯಶಸ್ವಿ ಪ್ರಯಾಣಕ್ಕೆ ತನ್ನ ಕುಟುಂಬದವರ ಸಹಕಾರ ಇತ್ತು ಎಂದು ಇದೆ ವೇಳೆ ಗೋಪಿನಾಥ್ ಸ್ಮರಿಸಿಕೊಂಡಿದ್ದಾರೆ.
ತಾನಾಯ್ತು ತನ್ನ ಕೆಲಸವಾಯ್ತು ಎಂದು ಇರುವವರ ಮಧ್ಯೆ ಉಮೇಶ್ ಗೋಪಿನಾಥ್ ಜಾಧವ್ ನಿಜಕ್ಕೂ ವಿಭಿನ್ನವಾಗಿದ್ದಾರೆ. ತನ್ನ ಈ ವಿನೂತನ ಕಾರ್ಯದಿಂದ ದೇಶ ಸೇವೆ ಮಾಡಿದ್ದಾರೆ. ನಿಜಕ್ಕೂ ಇವರು ಗ್ರೇಟ್ ಅಲ್ವಾ?