For Quick Alerts
ALLOW NOTIFICATIONS  
For Daily Alerts

ಕನಕದಾಸ ಜಯಂತಿ: ದಾಸಶ್ರೇಷ್ಠರಲ್ಲಿ ಒಬ್ಬರಾದ ಕನಕದಾಸರ ಬಗ್ಗೆ ತಿಳಿದಿರಲೇಬೇಕಾದ ವಿಚಾರಗಳಿವು

|

ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನೆಕಾರರಲ್ಲಿ ಕನಕದಾಸರು ಒಬ್ಬರು. 15-16ನೇ ಶತಮಾನದಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಾಗಿದ್ದರು. ಇವರು ಆಧುನಿಕ ಕರ್ನಾಟಕದ ಕವಿ, ತತ್ವಜ್ಞಾನಿ, ಸಂಗೀತಗಾರ ಮತ್ತು ಸಂಯೋಜಕರಾಗಿದ್ದು, ಕೀರ್ತನೆ ಮತ್ತು ಉಗಾಭೋಗಕ್ಕೆ ಹೆಸರುವಾಸಿಯಾಗಿದ್ದಾರೆ. ಕೀರ್ತನೆಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತಹ ಸರಳವಾಗಿ ಕನ್ನಡ ಭಾಷೆಯಲ್ಲಿ ರಚಿಸಿ, ಎಲ್ಲಾ ಕಾಲಘಟ್ಟಕ್ಕೂ ಸಲ್ಲುವಂತೆ ಮಾಡಿದ್ದಾರೆ.

Kanakadasa Jayanthi 2021 : Interesting facts about the saint singer Kanakadasa in kannada

ಇವರ ಜನ್ಮದಿನಾಚರಣೆಯನ್ನು ನವೆಂಬರ್ 11ರಂದು ರಾಜ್ಯದಾದ್ಯಂತ ಆಚರಣೆ ಮಾಡಲಾಗುತ್ತದೆ. ಈ ಪ್ರಯುಕ್ತ ಇವರ ಕುರಿತು ನೀವು ತಿಳಿದುಕೊಳ್ಳಲೇಬೇಕಾದ ಕೆಲವು ವಿಚಾರಗಳನ್ನು ತಿಳಿಸಿಕೊಡಲಿದ್ದೇವೆ.

ಕನಕದಾಸರ ಕುರಿತಾದ ಕೆಲವು ಸಂಗತಿಗಳನ್ನು ಈ ಕೆಳಗೆ ನೀಡಲಾಗಿದೆ:

1. ತಿಮ್ಮಪ್ಪ ನಾಯಕ ಕನಕದಾಸರ ಮೂಲ ಹೆಸರಾಗಿದ್ದು, ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ 1509ರಲ್ಲಿ ಕುರುಬ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು.

2. ತಿಮ್ಮಪ್ಪನಾಯಕ ಒಬ್ಬ ಸೇನಾಧಿಪತಿಯ ಮಗನಾಗಿ ಜನಿಸಿದನಷ್ಟೆ. ಬಾಲ್ಯದಲ್ಲಿಯೇ ಅಕ್ಷರಾಭ್ಯಾಸ, ಬಂಕಾಪುರದ ಶ್ರೀನಿವಾಸಾಚಾರ್ಯರ ಬಳಿ ವಿದ್ಯಾಭ್ಯಾಸವಾಗಿ, ವ್ಯಾಕರಣ, ತರ್ಕ, ಮೀಮಾಂಸೆ, ಸಾಹಿತ್ಯಗಳಲ್ಲಿ ಪಾರಂಗತನಾದನು. ಜೊತೆಗೆ ಕತ್ತಿವರಸೆ, ಕುದುರೆ ಸವಾರಿಯನ್ನೂ ಕಲಿತರು. ಕೆಲವು ವರ್ಷಗಳಲ್ಲಿ ಬೀರಪ್ಪನಾಯಕ ಮತ್ತು ಬಚ್ಚಮ್ಮ ತೀರಿಕೊಂಡರು. ತಂದೆಯ ಬಳಿಕ ತಿಮ್ಮಪ್ಪ ನಾಯಕ ತನ್ನ ಕಿರಿವಯಸ್ಸಿನಲ್ಲಿಯೇ ಬಂಕಾಪುರ ಪ್ರಾಂತ್ಯಕ್ಕೆ ದಂಡನಾಯಕರಾದರು.

3. ಕನಕದಾಸರು ದಂಡನಾಯಕರಾಗಿದ್ದಾಗ, ಯುದ್ಧವೊಂದರಲ್ಲಿ ತೀವ್ರವಾಗಿ ಗಾಯಗೊಂಡು ಸೋತ ನಂತರ ವೈರಾಗ್ಯ ಉಂಟಾಗಿ ಯೋಧರಾಗಿ ತಮ್ಮ ವೃತ್ತಿಯನ್ನು ತ್ಯಜಿಸಿ ಹರಿಭಕ್ತರಾದರಂತೆ.

4. ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರು. ಇವರಿಂದ ಮಧ್ವ ತತ್ವಶಾಸ್ತ್ರವನ್ನು ಕಲಿತ, ಕನಕದಾಸರು ಉಡುಪಿ ಶ್ರೀ ಕೃಷ್ಣನ ಅನನ್ಯ ಭಕ್ತರಾದರು. ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು. ಇವರ ಕೀರ್ತನೆಗಳ ಅಂಕಿತನಾಮ ಕಾಗಿನೆಲೆಯ ಆದಿಕೇಶವರಾಯ ಎಂಬುದಾಗಿದೆ.

5. 15 - 16 ನೆಯ ಶತಮಾನದಲ್ಲೇ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಭಕ್ತ ಎಂದರೆ ಕನಕದಾಸರು. ಈ ವ್ಯವಸ್ಥೆಯ ಕುರಿತು ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ.

6. ಕರ್ನಾಟಕ ಸಂಗೀತಕ್ಕಾಗಿ ಕನ್ನಡ ಭಾಷೆಯಲ್ಲಿ ಸಂಯೋಜನೆ ಮಾಡಿದ್ದಾರೆ. ಇತರ ಹರಿದಾಸರಂತೆ, ಅವರು ಸರಳ ಕನ್ನಡ ಭಾಷೆ ಸಂಯೋಜನೆಗಳಿಗೆ ಬಳಸಿದರು. ಜನಸಾಮಾನ್ಯರಿಗ ಸುಲಭವಾಗಿ ಅರ್ಥವಾಗುವುದು ಇದರ ಹಿಂದಿನ ಉದ್ದೇಶವಿರಬಹುದು.

7. ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿರುವುದಲ್ಲದೇ, ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ಮುಂಡಿಗೆಗಳ ರೂಪದಲ್ಲಿ ನೀಡಿದ್ದಾರೆ. ಸುಮಾರು 316 ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಮಾತ್ರ ಲಭ್ಯವಾಗಿವೆ. ಅವರ ಐದು ಮುಖ್ಯ ಕಾವ್ಯಕೃತಿಗಳು ಇಂತಿವೆ:

ಮೋಹನತರಂಗಿಣಿ

ನಳಚರಿತ್ರೆ

ರಾಮಧಾನ್ಯ ಚರಿತೆ

ಹರಿಭಕ್ತಿಸಾರ

ನೃಸಿಂಹಸ್ತವ

8.ಅನೇಕರ ನಂಬಿಕೆಯಂತೆ ಉಡುಪಿಯ ದೇವಸ್ಥಾನದಲ್ಲಿ ಕನಕದಾಸರಿಗೆ ಪ್ರವೇಶ ದೊರೆಯದೆ ಹೋದಾಗ ದೇವಸ್ಥಾನದ ಹಿಂದೆ ನಿಂತು ಹಾಡತೊಡಗಿದರಂತೆ "ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ" ಆಗ ದೇವಸ್ಥಾನದ ಹಿಂಭಾಗ ಗೋಡೆ ಒಡೆದು ಕೃಷ್ಣನ ವಿಗ್ರಹ ಹಿಮ್ಮುಖವಾಗಿ ತಿರುಗಿತಂತೆ.

ಈಗಲೂ ಉಡುಪಿ ಶ್ರೀ ಕೃಷ್ಣ ದೇವಸ್ಥಾನದ ಹಿಂದಗಡೆಯ ಗೋಡೆಯಲ್ಲಿರುವ ಬಿರುಕಿನಲ್ಲಿ ಶ್ರೀಕೃಷ್ಣನನ್ನು ಕಾಣಬಹುದು. ಅಲ್ಲಿ ಒಂದು ಕಿಟಕಿಯನ್ನು ನಿರ್ಮಿಸಲಾಗಿದ್ದು ಅದನ್ನು 'ಕನಕನ ಕಿಂಡಿ' ಎಂದು ಕರೆಯಲಾಗುತ್ತಿದೆ.

9. ಕರ್ನಾಟಕದಲ್ಲಿ 2008ರಿಂದ ಕನಕದಾಸ ಜಯಂತಿ ಆಚರಣೆ ಮಾಡಲಾಗುತ್ತಿದೆ. ಈ ಸರ್ಕಾರಿ ದಿನ ರಜೆ ಇರುವುದು.

10. ಡಾ. ರಾಜ್‌ಕುಮಾರ್ ಅವರು ಮುಖ್ಯ ಭೂಮಿಕೆಯಲ್ಲಿರುವ 'ಭಕ್ತ ಕನಕದಾಸ' ಚಲನಚಿತ್ರವು 1960ರಲ್ಲಿ ತೆರೆಕಂಡಿದೆ. ವೈ.ಆರ್.ಸ್ವಾಮಿ. ನಿರ್ದೇಶಿಸಿರುವ ಈ ಚಿತ್ರದಲ್ಲಿ ಅಳವಡಿಸಲಾಗಿರುವ ಕನಕದಾಸರ ಕೀರ್ತನೆಗಳನ್ನು ಪಿ.ಬಿ. ಶ್ರೀನಿವಾಸ್ ಅವರು ಹಾಡಿದ್ದಾರೆ. 'ಕುಲಕುಲಕುಲವೆಂದು ಹೊಡೆದಾಡದಿರಿ', 'ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ', 'ದೀನ ನಾನು ಸಮಸ್ತ ಲೋಕಕೆ ದಾನಿ ನೀನು' ಹಾಡುಗಳು ಜನಪ್ರಿಯವಾಗಿವೆ.

English summary

Kanakadasa Jayanthi 2022 : Interesting facts about the saint singer Kanakadasa in kannada

Here we talking about Kanakadasa Jayanthi 2021 : Interesting facts about the saint singer Kanakadasa in kannada, read on
X
Desktop Bottom Promotion