Just In
- 4 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 5 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 6 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 7 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾವು ಈ ರೀತಿಯ ಭಾರತೀಯ ಆಹಾರ ಶೈಲಿ ಪಾಲಿಸಿದರೆ ಕಾಯಿಲೆ ಬಲು ದೂರ
"ಆರೋಗ್ಯವೇ ಭಾಗ್ಯ" ಅನ್ನೋ ಗಾದೆಮಾತಲ್ಲಿ ಅದೆಷ್ಟು ಸತ್ಯ ಅಡಗಿದೆ ಅನ್ನೋದು ಗೊತ್ತಾಗಬೇಕಾದರೆ ಆರೋಗ್ಯ ಕಳ್ಕೊಂಡೋರನ್ನ ಕೇಳಿ ನೋಡಿ. ಜೀವನದಲ್ಲಿ ಎಲ್ಲಾನೂ ಇದ್ದು, ಆರೋಗ್ಯ ಒಂದಿಲ್ಲದಿದ್ದರೆ ಆ "ಎಲ್ಲಾನೂ" ಇದ್ದೂ ಏನು ಪ್ರಯೋಜನ ಅಂತಾ ನಿಟ್ಟುಸಿರು ಬಿಟ್ಟಾರು ಅವರು. ಆ ಕಾರಣಕ್ಕಾಗಿಯೇ ಪತ್ರಿಕೆಗಳಲ್ಲಿ, ಜಾಲತಾಣಗಳಲ್ಲಿ ಪ್ರಕಟವಾಗೋ ಎಲ್ಲ ಆರೋಗ್ಯ-ಸಂಬಂಧೀ ಬರಹಗಳತ್ತ ಪ್ರತಿಯೊಬ್ಬರೂ ಸಹಜವಾಗಿಯೇ ಕಣ್ಣು ಹಾಯಿಸುತ್ತೇವೆ, ಸಾಕಷ್ಟು ಮಾಹಿತಿಯನ್ನ ಕಲೆಹಾಕುತ್ತೇವೆ ಕೂಡ. ಇಷ್ಟೆಲ್ಲವನ್ನೂ ಮಾಡೋ ನಿಮಗೆ ಅತ್ಯುತ್ತಮ ಆಹಾರವಸ್ತುಗಳ್ಯಾವುವು ಅನ್ನೋದರ ಮಾಹಿತಿ ತುಂಬಾ ಚೆನ್ನಾಗೇ ಇರುತ್ತೆ ಬಿಡಿ.
ಆರೋಗ್ಯವನ್ನ ಕಾಪಾಡ್ಕೊಳ್ಳೋದಕ್ಕೋಸ್ಕರ ಪ್ರತಿದಿನ ಬರೋಬ್ಬರಿ 10,000 ಹೆಜ್ಜೆಗಳಷ್ಟು ನಡೆಯೋರು ನೀವು, ಕೀಟೋಜೆನಿಕ್ ಆಹಾರಪದ್ಧತಿಯ ಒಳಿತು, ಕೆಡುಕುಗಳ ಬಗ್ಗೆ ನಿಮಗೆ ಚೆನ್ನಾಗಿ ತಿಳುವಳಿಕೆನೂ ಇರುತ್ತೆ. ನಿಜ, ಒಟ್ಟಾರೆ ಆರೋಗ್ಯವನ್ನ ಕಾಪಾಡ್ಕೊಳ್ಳೋದಕ್ಕೆ ಆರೋಗ್ಯಕರ ಹವ್ಯಾಸಗಳನ್ನ ರೂಢಿಸಿಕೊಳ್ಳೋದು ತುಂಬಾನೇ ಮುಖ್ಯ. ಆದ್ರೆ ನೀವು ತಿನ್ನೋ ಆಹಾರ ಕೊಡೋವಂತಹ ಎಲ್ಲ ಪೋಷಕಾಂಶಗಳನ್ನ ನಿಮ್ಮ ದೇಹ ಗರಿಷ್ಟ ಪ್ರಮಾಣದಲ್ಲಿ ಬಳಸ್ಕೋತಾ ಇದ್ಯೋ ಇಲ್ವೋ ಅನ್ನೋದು ಇಲ್ಲಿ ಚರ್ಚೆಯ ವಿಷಯ.
ಈ ವಿಚಾರದಲ್ಲಿ ನಮ್ಮ ಹಿರಿಯರು ನಿಜಕ್ಕೂ ಜಾಣರಾಗಿದ್ದರು. ತಮ್ಮ ದೇಹಪ್ರಕೃತಿಗೆ ಅನುಸಾರವಾಗಿ ಅವ್ರು ಎಷ್ಟು ಬೇಕೋ ಅಷ್ಟೇ ಊಟ ಮಾಡೋರಾಗಿದ್ರು, ತಾವು ಏನನ್ನ ತಿಂತಾ ಇದ್ದೀವಿ ಅನ್ನೋದರ ಬಗ್ಗೆ ನಿಗಾ ವಹಿಸ್ತಿದ್ರು, ತಮ್ಮ ಸಾಮರ್ಥ್ಯಕ್ಕೆ ತಕ್ಕ ಹಾಗೆ ಊಟ ಮಾಡಿದ್ರು. ನೆಲದ ಮೇಲೆ ಕೂತು ಊಟ ಮಾಡೋದು ( ಹೀಗ್ ಮಾಡಿದ್ರೆ ಗ್ಯಾಸ್ಟ್ರಿಕ್ ತೊಂದರೆಗಳು ಹತ್ರಾನೂ ಸುಳಿಯಲ್ಲ!), ಕೈಯಿಂದಾನೇ ಊಟ ಮಾಡೋವಂತಹ (ದೇಹದ ಪ್ರಾಣಶಕ್ತೀನಾ ಸಮತೋಲನದಲ್ಲಿಟ್ಟು ಜೀರ್ಣಕ್ರಿಯೆಗೆ ಚುರುಕು ಮುಟ್ಟಿಸುತ್ತೆ) ಸರಳ ಆಚರಣೆಗಳಲ್ಲೂ ಎಷ್ಟೆಲ್ಲ ಆರೋಗ್ಯ ಲಾಭಗಳಿರ್ತಿದ್ವು ಅಂತೀರಾ!! ಆದ್ರಿಂದ, ನಿಮ್ಮ ಆರೋಗ್ಯ ಇನ್ನಷ್ಟು ಚೆನ್ನಾಗಿರ್ಬೇಕೂಂತಾ ನೀವು ಬಯಸೋದಾದ್ರೆ ನಿಮ್ಮ ಹಿರಿಯರ ಮಾತಿಗೆ ಕಿವಿಕೊಡಿ ಮತ್ತು ಆ ಮೂಲಕ ಅವರ 'ಆರೋಗ್ಯದ ಗುಟ್ಟು' ಗಳನ್ನ ತಿಳ್ಕೊಂಡು ಭರಪೂರ ಲಾಭ ಮಾಡ್ಕೊಳ್ಳಿ.
1. ಕೊಬ್ಬುಗಳು ನಿಮ್ಮ ಆರೋಗ್ಯದ ಶತ್ರುಗಳು ಅಂತಾನೇ ಯಾಕ್ ಅಂದ್ಕೋತೀರಾ ?
ತುಪ್ಪದಲ್ಲಿರೋವಷ್ಟು ಪೋಷಕಾಂಶಗಳು ಇನ್ಯಾವುದರಲ್ಲಿ ತಾನೇ ಇದೆ ಹೇಳಿ ? ಆರೋಗ್ಯ ಪ್ರಪಂಚ, ಆಧುನಿಕ ವೈದ್ಯ ಪ್ರಪಂಚ ತುಪ್ಪನಾ ಒಂದು "ಅತ್ಯುತ್ತಮ ಆಹಾರವಸ್ತು" ಅಂತಾ ಹೇಳೋದಕ್ಕೆ ಬಹಳಾ ಮುಂಚೇನೇ ಭಾರತೀಯ ಅಡುಗೆಮನೆಗಳಲ್ಲಿ ತುಪ್ಪ ರಾರಾಜಿಸ್ತಾ ಇತ್ತು ಕಣ್ರೀ!! "ತುಪ್ಪ ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೇದು, ಅದರಲ್ಲಿ ಒಮೇಗಾ - 3 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ 'ಎ' ಹೇರಳವಾಗಿವೆ, ಜೀರ್ಣಕ್ರಿಯೆಗೆ ತುಪ್ಪ ತುಂಬಾ ಸಹಕಾರಿ, ಕೊಬ್ಬಿನಲ್ಲಿ ಕರಗೋ ವಿಟಮಿನ್ ಗಳು ತುಪ್ಪದಲ್ಲಿ ಇರೋದ್ರಿಂದ ತುಪ್ಪ ತೂಕವನ್ನ ಕಳ್ಕೋಳ್ಳೋದಕ್ಕೂ ಸಹಕಾರಿ" ಅಂತಾ ಹೇಳ್ತಾರೆ ಡಾ. ವೇದಿಕಾ ಸಿಂಗ್ ಅವರು. ಮಧ್ಯಮ ಪ್ರಮಾಣದಲ್ಲಿ ತುಪ್ಪನಾ ನಿಮ್ಮ ದಾಲ್ ಗಳಲ್ಲಿ, ಖಿಚಡಿಗಳಲ್ಲಿ, ರೊಟ್ಟಿಗಳಲ್ಲಿ, ಅಥವಾ ಹಲ್ವಾಗಳಲ್ಲಿ ಸೇರಿಸಿಕೊಂಡು ಸೇವಿಸಿ. ಆ ಕ್ಷಣಾನೇ ನಿಮ್ಮ ದೇಹಕ್ಕೆ ನವಚೈತನ್ಯ ಬಂದಂತಾಗುತ್ತೆ ನೋಡಿ! ತುಪ್ಪಕ್ಕೆ ಆ ಶಕ್ತಿ ಇದೆ!!
2. ಮಧ್ಯಾಹ್ನದ ಊಟಕ್ಕೆ ದ್ವಿದಳ ಧಾನ್ಯಗಳಿರಲಿ, ರಾತ್ರಿಯೂಟಕ್ಕೆ ದಾಲ್ ಅನ್ನ ಉಪಯೋಗಿಸಿ
ನೀವು ಸಸ್ಯಾಹಾರಿ ಹೌದೋ ಅಲ್ವೋ ಅಂತೂ ದೇಹಕ್ಕೆ ಬೇಕಾಗೋವಷ್ಟು ಪ್ರೋಟೀನ್ ನ ಅಂಶ ನಿಮ್ಮ ಊಟದಲ್ಲಿ ಇರೋ ಸಾಧ್ಯತೆ ಕಡಿಮೆ ಅಂತಾನೇ ಹೇಳ್ಬೇಕು. ಇದಕ್ಕೆ ಪರಿಹಾರ ಏನು ಹಾಗಾದ್ರೆ ? ಪರಿಹಾರ ಇಷ್ಟೇ : ದ್ವಿದಳ ಧಾನ್ಯಗಳನ್ನ ನಿಮ್ಮ ಮಧ್ಯಾಹ್ನದ ಊಟಕ್ಕೂ, ಬೇಳೆ ಕಾಳುಗಳನ್ನ ರಾತ್ರಿಯೂಟಕ್ಕೂ ಸೇರಿಸಿಕೊಂಡ್ರಾಯ್ತು. ಹುರುಳಿ, ಬಟಾಣಿ, ಕಡಲೆ, ಲೆಂಟಿಲ್ ಗಳು, ಮತ್ತು ಇತರ ದ್ವಿದಳ ಧಾನ್ಯಗಳು ಪ್ರೋಟೀನ್ ಗಳ ಆಗರಗಳು. ಕರಗುವ ಮತ್ತು ಕರಗದ ನಾರಿನಂಶ ದಂಡಿಯಾಗಿವೆ ಇವುಗಳಲ್ಲಿ. ಹಾಗಾಗಿ ಇವು ಕೊಲೆಸ್ಟರಾಲ್ ನ ಕಡಿಮೆ ಮಾಡುತ್ವೆ, ರಕ್ತದಲ್ಲಿ ಸಕ್ಕರೆಯ ಅಂಶವನ್ನ ನಿಯಂತ್ರಿಸುತ್ವೆ, ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ವೆ, ಮತ್ತು ಮಲವಿಸರ್ಜನೆ ಸರಾಗವಾಗಿ ಆಗೋ ಹಾಗೆ ನೋಡ್ಕೋಳ್ತವೆ. ಕಬ್ಬಿಣಾಂಶ, ಪೊಟಾಶ್ಯಿಯಂ, ಮೆಗ್ನೀಷಿಯಂ, ಕ್ಯಾಲ್ಸಿಯಂ, ಮತ್ತು ಸತುವಿನಂತಹ ಮುಖ್ಯ ಖನಿಜಾಂಶಗಳು ಇವುಗಳಲ್ಲಿವೆ. ಮುಖ್ಯವಾಗಿ ಬಿ ವಿಟಮಿನ್ ಗಳು ಇವುಗಳಲ್ಲಿ ವಿಪುಲವಾಗಿವೆ.
3. ಇನ್ನಾದರೂ ತರಕಾರಿ ಸಿಪ್ಪೇನಾ ಸುಲಿದು ಬಿಸಾಕೋದನ್ನ ನಿಲ್ಸಿ
ಪ್ರತೀ ಬಾರಿಯೂ ಆಲೂಗೆಡ್ಡೆನಾ ಬೇಯಿಸೋದಕ್ಕೆ ಮೊದಲು ನೀವು ಅದರ ಸಿಪ್ಪೇನಾ ಸುಲಿಯೋದನ್ನ ನೋಡಿ ನಿಮ್ಮ ಅಜ್ಜಿ ಬೈತಾ ಇದ್ದಿದ್ದು ನಿಮಗೆ ನೆನಪಿದ್ಯಾ ? "ನೀನು ಸಮಯವನ್ನ ಜೊತೆಗೆ ಪೋಷಕಾಂಶಗಳನ್ನ ಹಾಳು ಮಾಡ್ತಾ ಇದ್ದೀಯಾ" ಅಂತಾ ಅಜ್ಜಿ ಅರಚಿಕೊಳ್ತಿದ್ರು. ಅವ್ರು ಹಾಗೆ ಬೈತಾ ಇದ್ದಿದ್ದು ಸುಮ್ನೆ ಏನಲ್ಲ, ಖಂಡಿತಾ ಅದ್ರಲ್ಲಿ ಖಂಡಿತಾ ಅರ್ಥ ಇದೆ. ಹಾಗೆ ನೀವು ಸುಲಿದು ಬಿಸಾಡೋ ಸಿಪ್ಪೇಲಿ ಕರಗದೇ ಇರೋ ನಾರಿನಂಶ ಅಗಾಧವಾಗಿದ್ದು, ಇದಂತೂ ನಿಮ್ಮ ಜೀರ್ಣಾಂಗವ್ಯೂಹದ ಆರೋಗ್ಯಕ್ಕೆ ಮತ್ತು ಹಾಗೇನೇ ಮಲಬದ್ಧತೆನಾ ನಿವಾರ್ಸೋದಕ್ಕೆ ಹೇಳಿ ಮಾಡಿಸಿದ್ದು. ಉದಾಹರಣೆಗೆ ಈ ಆಲೂಗೆಡ್ಡೆ ಸಿಪ್ಪೇನಾ ತಗೊಳ್ಳಿ. ಅದರಲ್ಲಿರೋದೇ ನಾರಿನಂಶ, ವಿಟಮಿನ್ ಗಳು ಮತ್ತು ಖನಿಜಾಂಶಗಳು. ಕುಂಬಳಕಾಯಿ ಸಿಪ್ಪೆಯಲ್ಲಿ ವಿಟಮಿನ್ ಕೆ ದಂಡಿಯಾಗಿದ್ದು, ಇದು ಗಾಯ ಆದಾಗ ರಕ್ತ ಹೆಪ್ಪುಗಟ್ಟೋದಕ್ಕೆ ಮತ್ತು ಮೂಳೆ ರೂಪುಗೊಳ್ಳೋದಕ್ಕೆ ತುಂಬಾನೇ ಅಗತ್ಯ. ನೇರಳೆ ಬಣ್ಣದ ಮೊಟ್ಟೆಯಾಕಾರದ ಬದನೆಕಾಯಿಯ ಸಿಪ್ಪೆಯಲ್ಲಿ ಕ್ಲೋರೋಜೆನಿಕ್ ಆಮ್ಲ ಅಂತಾ ಕರೆಸಿಕೊಳ್ಳೋ ಉರಿಶಾಮಕ ರಾಸಾಯನಿಕ ಇದೆ. ಇದು ದೇಹದ ಸಕ್ಕರೆಯ ಮಟ್ಟವನ್ನ ನಿಯಂತ್ರಿಸುತ್ತೆ.
4. ಸಿಹೀನಾ ಬಿಳಿಸಕ್ಕರೆಯ ರೂಪಕ್ಕೆ ಬದಲಾಗಿ ಬೆಲ್ಲದ ರೂಪದಲ್ಲಿ ಧಾರಾಳವಾಗಿ ಸೇವಿಸಬಹುದು
ಸಿಹಿ ತಿಂಡಿಗಳೆಂದರೆ ಯಾರಿಗೆ ತಾನೇ ಇಷ್ಟ ಇರೋಲ್ಲ ಹೇಳಿ ? ಆದರೆ, ಹಾಗೆ ಸಿಹಿ ತಿಂಡಿ ರೂಪದಲ್ಲಿ ಸಂಸ್ಕರಿತ ಬಿಳಿ ಸಕ್ಕರೆಯನ್ನ ಸೇವಿಸಿದ್ರೆ ದೇಹದೊಳಗೆ ಬರೀ ಕ್ಯಾಲರಿಗಳನ್ನ ತುಂಬ್ಕೊಂಡ ಹಾಗಾಗತ್ತೆ ಅಷ್ಟೇ. ಅದರ ಬದಲಿಗೆ ಬೆಲ್ಲಾನಾ ಸೇವಿಸಿರಿ. ಆ್ಯಂಟಿ-ಆಕ್ಸಿಡೆಂಟ್ ಗಳಿಂದ ತುಂಬಿ ತುಳುಕೋ ಬೆಲ್ಲ ಚಳಿಗಾಲಕ್ಕೆ ಅಂತಾನೇ ಹೇಳಿಮಾಡಿಸಿರೋವಂತಹ ಅತ್ಯುತ್ತಮ ಆಹಾರವಸ್ತು. ಪ್ರತಿದಿನಾನೂ ಒಂದು ಚಿಕ್ಕ ತುಂಡು ಬೆಲ್ಲನಾ ತಿಂದ್ರೆ ದೇಹದ ರೋಗನಿರೋಧಕ ಶಕ್ತಿ ಜಾಸ್ತಿಯಾಗತ್ತೆ. ಆಗ ಶರೀರಕ್ಕೆ ಸೋಂಕುಗಳ ವಿರುದ್ಧ ಸೆಣಸಾಡೋ ಸಾಮರ್ಥ್ಯಾನೂ ಹೆಚ್ಚುತ್ತೆ. ಹಿಂದೆ, ಪಿ.ಎಮ್.ಎಸ್. ನಿಂದ ಬಳಲ್ತಾ ಇದ್ದ ಹೆಂಗಳೆಯರಿಗೆ ಹೊಟ್ಟೆ ಹಿಂಡಿದಂತಾಗೋ ನೋವು ಮತ್ತು ಮಾನಸಿಕ ತುಮುಲಗಳಂತಹ ಕಿರಿಕಿರಿಗಳನ್ನ ನಿವಾರಿಸೋಕೆ ಬೆಲ್ಲ ತಿನ್ನಿ ಅಂತಾ ಹೇಳ್ತಾ ಇದ್ರು. ಊಟ ಆದ್ಮೇಲೆ ಚೆನ್ನಾಗಿ ಜೀರ್ಣ ಆಗೋದಕ್ಕೆ ಒಂದು ಚಿಕ್ಕ ತುಂಡು ಬೆಲ್ಲ ತಿನ್ನಿ. ಪಚನಕ್ರಿಯೆಗೆ ನೆರವಾಗೋದರ ಜೊತೆಗೆ ಇದು ವಿಷಧಾತುಗಳನ್ನ ನಿವಾರಿಸೋದರ ಮೂಲಕ ಪಿತ್ತಕೋಶವನ್ನ ಶುದ್ಧೀಕರಿಸೋದಕ್ಕೂ ನೆರವಾಗತ್ತೆ.
5. ಬೇರೆ ಬೇರೆ ಬಗೆಯ ಹಸಿರು ತರಕಾರಿಗಳನ್ನ ಉಪಯೋಗಿಸಿ
ಪಾಲಕ್ ಸೊಪ್ಪು, ಸಾಸಿವೆ ಸೊಪ್ಪು, ಮತ್ತು ಮೆಂತೆ ಸೊಪ್ಪುಗಳು ಪೋಷಕಾಂಶಗಳ ಭಂಡಾರಗಳು ಅಂತಾನೇ ಆಹಾರ ಪ್ರಪಂಚದಲ್ಲಿ ಪ್ರಖ್ಯಾತವಾಗಿವೆ. ಹಿಂದಿನ ತಲೆಮಾರಿನವರು ಸ್ಥಳೀಯ ಮತ್ತು ಆಯಾ ಋತುಗಳಲ್ಲಿ ಬೆಳೆಯೋ ಹಸಿರು ಸೊಪ್ಪುಗಳ ಬಗ್ಗೆ ಲಾವಣಿಗಳನ್ನ ಕಟ್ಟಿ ಹಾಡ್ತಾ ಇದ್ರು. ಉದಾಹರಣೆಗೆ ಹಳ್ದಿ ಪತ್ತಾ ಅನ್ನೋ ಸೊಪ್ಪು ಉಸಿರಾಟದ ಅಲರ್ಜಿಗಳನ್ನ ಹೋಗಲಾಡಿಸಬಲ್ಲದು, ಲಿಂಗಾರು ಸೊಪ್ಪು ಆ್ಯಂಟಿ-ಆಕ್ಸಿಡೆಂಟ್ ಗಳು ಮತ್ತು ಒಮೇಗಾ - 3 ಆವಶ್ಯಕ ಕೊಬ್ಬಿನಾಮ್ಲಗಳ ಸಮೃದ್ಧ ಮೂಲ, "ಇಮ್ಲಿ ಕಾ ಪತ್ತಾ" ಅನ್ನೋ ಸೊಪ್ಪಲ್ಲಿ ವಿಟಮಿನ್ ಸಿ, ನಾರಿನಂಶ, ಪೊಟಾಶ್ಯಿಯಂ, ಕಬ್ಬಿಣಾಂಶ, ಮತ್ತು ಕ್ಯಾಲ್ಸಿಯಂ ಅಗಾಧವಾಗಿವೆ, "ಹಾಕ್" ಅನ್ನೋ ಸೊಪ್ಪು ಜೀರ್ಣಕ್ರಿಯೆಗೆ ಬಹಳ ಸಹಕಾರಿ, ಹಾಗೂ ತಕ್ಲಾ ಅನ್ನೋ ಸೊಪ್ಪಿನ ಸಾಗು ಮಳೆಗಾಲದ ರೋಗಗಳನ್ನ ದೂರ ಇಡೋದಕ್ಕೆ ಸಹಕಾರಿ.
6. ಈ ಕೆಳಗೆ ಹೆಸರಿಸಿರೋ ಆರೋಗ್ಯದಾಯಕ ಪೇಯಗಳನ್ನ ಕುಡಿಯಿರಿ
"ಈಗಿನವರ ಸ್ಟೈಲ್" ಅಂತಾ ಅನ್ನುಸ್ಕೊಂಡಿರೋ ಸೆಲೆರಿ ಜ್ಯೂಸ್ ಮತ್ತು ಕಾಲೆ ಸ್ಮೂದಿಗಳು ಹದಿಹರೆಯದವರ ಮೆಚ್ಚುಗೆಗೆ ಪಾತ್ರವಾಗಿರೋವಂತಹವುಗಳು ಅನ್ನೋದನ್ನೇನೋ ಒಪ್ಕೊಳ್ಳೋಣ. ಆದರೆ, ನಮ್ಮ ಭಾರತೀಯ ಸಾಂಪ್ರದಾಯಿಕ ಪೇಯಗಳು ಯಾವ ಜ್ಯೂಸು, ಸ್ಮೂದಿಗಳಿಗೆ ಕಡಿಮೆ ಇವೆ ಹೇಳಿ ? ನಿಜ ಹೇಳ್ಬೇಕೂಂದ್ರೆ ಇವುಗಳಲ್ಲಿರೋವಷ್ಟು ಪೋಷಕಾಂಶಗಳು ಬೇರೆ ಇನ್ಯಾವುದ್ರಲ್ಲೂ ಇಲ್ಲ. "ಆಮ್ ಪನ್ನಾ" ಅಂತಾ ಕರೆಯಲ್ಪಡೋ ಪೇಯದಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ವಾತಾವರಣದ ಉಷ್ಣತೆ ವಿಪರೀತವಾದಾಗ ಬಿಸಿಲ ಹೊಡೆತದಿಂದ ರಕ್ಷಿಸಿಕೊಳ್ಳೋದಕ್ಕೆ ಇದು ನೆರವಾಗತ್ತೆ. ಜೊತೆಗೆ ಇದು ನಿಮ್ಮ ಉದರದ ಆರೋಗ್ಯಕ್ಕೂ ಉತ್ತಮವಾಗಿದ್ದು, ಪಚನಕ್ರಿಯೆಗೆ ಸಹಕಾರಿ. ಥಂಡಾಯಿ ಅನ್ನೋದು ಬೇಸಿಗೆಕಾಲದ ಇನ್ನೊಂದು ಆರೋಗ್ಯದಾಯಕ ಪೇಯವಾಗಿದ್ದು, ಬೇಸಿಗೆಯ ಬಿಸಿಲ ಬೇಗೆಯಲ್ಲಿ ಬಳಲಿ ಬೆಂಡಾದವರು ಇದನ್ನ ಕುಡಿದರೆ ಅವರಿಗೆ ನವಚೈತನ್ಯ ಕೊಡುತ್ತದೆ. ಉತ್ತರ ಭಾರತದಲ್ಲಿ ಸಿಕ್ಕಾಪಟ್ಟೆ ಚಳಿ ಶುರು ಆದಾಗ "ಗಾಜರ್ ಕಿ ಕಂಜಿ" ಅನ್ನೋ ಪೇಯ ಜೀರ್ಣಕ್ರಿಯೇನಾ ಚುರುಕು ಮಾಡಿ ಮಲಬದ್ಧತೆಯನ್ನ ಒದ್ದೋಡಿಸುತ್ತೆ. ಲಸ್ಸಿ ದೇಹವನ್ನ ತಂಪಾಗಿರಿಸಿದರೆ "ಜಲ್ ಜೀರಾ" ಅನ್ನೋ ಪೇಯ ಪಚನಕ್ರಿಯೆಯ ತೊಂದರೆಗಳನ್ನ ನಿವಾರಿಸಿ ದೇಹದ pH ಮಟ್ಟಾನಾ ಕಾಪಿಟ್ಟುಕೊಳ್ಳೋದಕ್ಕೆ ನೆರವಾಗತ್ತೆ.
7. ಒಂದು ದಿನದ ಮಟ್ಟಿಗೆ ಉಪವಾಸ ಮಾಡಿ
ಆಹಾರ ಸೇವನೆಯ ವಿಚಾರಕ್ಕೆ ಬಂದಾಗಲೆಲ್ಲ "ಆಗಾಗ್ಗೆ ಉಪವಾಸನೂ ಮಾಡೋದು ಒಳ್ಳೇದು" ಅಂತಾ ಹೇಳೋದು ಈಗಿನ ಒಂದು ಫ಼್ಯಾಷನ್ ಥರ ಕಾಣುತ್ತೆ. ಆದರೆ ಈ ಉಪವಾಸ ಆಚರಣೆಯ ಪದ್ಧತಿ ಶತಶತಮಾನಗಳಿಂದಲೂ ನಮ್ಮ ಭಾರತೀಯ ಸಂಸ್ಕೃತಿಯ ಒಂದು ಭಾಗವೇ ಆಗಿದೆ. "ವಾರಕ್ಕೊಂದು ಬಾರಿ ಉಪವಾಸ ಮಾಡೋದ್ರಿಂದ ದೇಹ ತೂಕಾನಾ ಕಳ್ಕೋಳ್ಳೋದು ಸುಲಭ, ಅಧಿಕ ರಕ್ತದೊತ್ತಡ ಮತ್ತು ಉರೀನಾ ಕಡಿಮೆ ಮಾಡತ್ತೆ, ಕೊಲೆಸ್ಟರಾಲ್ ಅನ್ನ ತಗ್ಗಿಸುತ್ತೆ, ಬುದ್ಧಿ ಚುರುಕಾಗುತ್ತೆ, ಹಾಗೂ ಜೊತೆಗೆ ಕೆಲಬಗೆಯ ಕ್ಯಾನ್ಸರ್ ಗಳಿಂದ್ಲೂ ರಕ್ಷಣೆ ಸಿಗತ್ತೆ" ಅಂತಾ ಹೇಳ್ತಾರೆ ಡಾ. ಸಿಂಗ್ ಅವರು. ನಿಜ ಹೇಳ್ಬೇಕೂಂದ್ರೆ, ಈಗಿನ ಸಂಶೋಧನೆ ಕಂಡುಕೊಂಡಿರೋ ಪ್ರಕಾರ, ಡಯಟಿಂಗ್ ಗಿಂತಲೂ ಉಪವಾಸವೇ ಹೆಚ್ಚು ಲಾಭದಾಯಕ.
8. ಸಾಂಬಾರ ಪದಾರ್ಥಗಳ ಬಳಕೆಗೆ ಹಿಂಜರಿಕೆ ಬೇಡ
ಅಡುಗೆ ಮನೆ ಕಪಾಟಲ್ಲಿ ಸಾಂಬಾರ ಪದಾರ್ಥಗಳನ್ನ ತುಂಬಿಕೊಂಡಿರೋ ಡಬ್ಬಿಗಳಿಲ್ಲ ಅಂತಂದ್ರೆ ಅದು ಒಂದು ಭಾರತೀಯ ಅಡುಗೆಮನೆ ಅಂತಾ ಕರೆಸಿಕೊಳ್ಳೋದಕ್ಕೆ ಸಾಧ್ಯಾನೇ ಇಲ್ಲ ಬಿಡಿ. ಈ ಸಾಂಬಾರ ಪದಾರ್ಥಗಳು ಊಟದ ರುಚೀನಾ ಹೆಚ್ಚಿಸೋದಷ್ಟೇ ಅಲ್ಲ, ಬದಲಾಗಿ ಬಹುತೇಕ ಸಾಂಬಾರ ಪದಾರ್ಥಗಳಲ್ಲಿ ಅವಾಕ್ಕಾಗಿಸೋವಷ್ಟು ಆರೋಗ್ಯದಾಯಕ ಅಂಶಗಳಿರುತ್ವೆ. ಚೆಕ್ಕೆಯು ರಕ್ತದಲ್ಲಿನ ಸಕ್ಕರೆಯ ಅಂಶವನ್ನ ತಗ್ಗಿಸುತ್ತೆ, ಅರಿಶಿನದಲ್ಲಿರೋ ಕರ್ಕ್ಯುಮಿನ್ ಅನ್ನೋ ರಾಸಾಯನಿಕ ಉರಿಶಾಮಕ ಗುಣವುಳ್ಳದ್ದು, ತುಳಸಿದಳ ರೋಗನಿರೋಧಕ ಶಕ್ತೀನಾ ಹೆಚ್ಚಿಸುತ್ತೆ, ಶುಂಠಿ ನೋವನ್ನ ನಿಭಾಯಿಸೋದಕ್ಕೆ ಮತ್ತು ತಿಂದ ಆಹಾರ ಚೆನ್ನಾಗಿ ಪಚನ ಆಗೋಕೆ ಸಹಕಾರಿ, ಬೆಳ್ಳುಳ್ಳಿಯ ಸೇವನೆ ಹೃದಯದ ಆರೋಗ್ಯಾನಾ ಸುಧಾರಿಸುತ್ತೆ.
9. ಸ್ಥಳೀಯವಾಗಿ ಸಿಗೋ ಆಹಾರವಸ್ತುಗಳಲ್ಲೇ ಇರೋದು ಅತೀ ಹೆಚ್ಚು ಜೀವಸತ್ವ!
ಆಹಾರವಸ್ತುಗಳು ಎಷ್ಟು ತಾಜಾವಾಗಿರುತ್ತವೋ ಅಷ್ಟರಮಟ್ಟಿಗೆ ಅವು ಸೇವನೆಗೆ ಬಲು ಯೋಗ್ಯ ಅನ್ನೋದು ಹಿಂದಿನವರ ನಂಬಿಕೆ. ಅವರ ಈ ನಂಬಿಕೆ ನೂರಕ್ಕೆ ನೂರರಷ್ಟು ನಿಜ. ಹಾಗಾಗೀನೇ ಅವರು ಊಟದಲ್ಲಿ ಬಳಸ್ಕೊಳ್ತಾ ಇದ್ದ ಎಲ್ಲ ಆಹಾರವಸ್ತುಗಳಿಂದಾನೂ ಗರಿಷ್ಟ ಪ್ರಮಾಣದಲ್ಲಿ ಪೋಷಕಾಂಶಗಳನ್ನ ಪಡಕೊಳ್ಳೋಕೆ ಅವರಿಗೆ ಸಾಧ್ಯ ಆಗ್ತಾ ಇದ್ದಿದ್ದು. ಇದು ವೈದ್ಯಕೀಯವಾಗಿನೂ ಸಾಬೀತಾಗಿರುವ ವಿಷಯ. ಹಾಗಾಗಿ ಹಿಂದಿನ ತಲೆಮಾರಿನವರು ಆಯಾ ಋತುಮಾನಕ್ಕೆ ಸ್ಥಳೀಯವಾಗಿ ಸಿಗೋವಂತಹ ತಾಜಾ ಆಹಾರವಸ್ತುಗಳನ್ನೇ ಬಳಸ್ತಾ ಇದ್ರು. ಹೀಗಾದಾಗ ಅವರ ಆಹಾರವಸ್ತುಗಳು ಯಾವಾಗಲೂ ತಾಜಾ-ತಾಜಾ ಇರುತ್ತಿದ್ವು, ಅವರು ವಾಸಿಸೋ ಸ್ಥಳದ ವಾತಾವರಣಕ್ಕೆ ಮತ್ತು ಆಯಾ ಋತುವಿಗೆ ಯೋಗ್ಯವಾಗಿರ್ತಿದ್ವು, ಆರೋಗ್ಯದಾಯಕವಾಗಿರ್ತಿದ್ವು, ಮತ್ತೆ ಎಲ್ಲಕ್ಕಿಂತ ಮುಖ್ಯವಾಗಿ ಅವು ರಾಸಾಯನಿಕಗಳಿಂದ ಮುಕ್ತವಾಗಿರ್ತಿದ್ವು.
10. ರಾತ್ರಿ ಬೇಗ ಊಟ ಮುಗ್ಸೋದು, ಮುಂಜಾನೇ ಬೇಗ ಏಳೋದು
ಪ್ರತೀ ಒಬ್ಬರ ದೇಹದಲ್ಲೂ ದಿನದ ಯಾವ ಯಾವ ಕಾಲಕ್ಕೆ ಏನೇನ್ ಮಾಡಿದ್ರೆ ಒಳ್ಳೇದು ಅಂತಾ ಸೂಚಿಸೋ ಒಂದು ಗಡಿಯಾರ ಇರತ್ತೆ ಕಣ್ರೀ! ಅದನ್ನೇ "ಜೈವಿಕ ಗಡಿಯಾರ" ಅಥವಾ "ಬಯಲಾಜಿಕಲ್ ಕ್ಲಾಕ್" ಅನ್ನೋದು!! ವಾತಾವರಣದಲ್ಲಾಗೋ ಬದಲಾವಣೆ, ನಿದ್ರೆ, ಹಾಗೂ ಆಹಾರ ಸೇವನೆ ಅಥವಾ ಪಚನಕ್ರಿಯೆಯಂತಹ ದೈಹಿಕ ಚಟುವಟಿಕೆಗಳ ಕರಾರುವಕ್ಕಾದ ವೇಳೆಗಳ ಸೂಚಕವೇ ಈ ಜೈವಿಕ ಗಡಿಯಾರ. ಈ ಜೈವಿಕ ಗಡಿಯಾರದ ಲಯಬದ್ಧತೆಯನ್ನ ಬಹುಶ: ನಮ್ಮ ಹಿರೀಕರು ಅರ್ಥ ಮಾಡಿಕೊಂಡಂತೆ ಆಧುನಿಕ ವಿಜ್ಞಾನವೂ ಅರ್ಥಮಾಡಿಕೊಂಡಿಲ್ಲ ಅನ್ಸುತ್ತೆ!! ಅದಕ್ಕೇ ಅವರು ರಾತ್ರಿ ಬೇಗನೇ ಉಣ್ಣುತ್ತಿದ್ದರು. ಏಕೆಂದರೆ ಸರಿಯಾದ ವೇಳೆಗೆ ಮಾಡೋ ಊಟ ದೇಹತೂಕ ಮತ್ತು ನಿದ್ರಾಚಕ್ರಗಳ ಮೇಲೆ ಪ್ರಭಾವ ಬೀರುತ್ತೆ ಅಂತಾ ಅವರಿಗೆ ಚೆನ್ನಾಗಿ ಗೊತ್ತಿತ್ತು. "ರಾತ್ರಿ ಬೇಗನೇ ಊಟ ಮುಗಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ನಿದ್ರೆ ಚೆನ್ನಾಗಿ ಬರುತ್ತದೆ, ಹೃದಯದ ಆರೋಗ್ಯ ಸುಧಾರಿಸುತ್ತದೆ, ಬೊಜ್ಜಿನ ಅಪಾಯ ತಗ್ಗುತ್ತದೆ, ಹಾಗೂ ಜೊತೆಗೆ ಮನಸ್ಥಿತಿ ಮತ್ತು ಚೈತನ್ಯ ಮಟ್ಟಗಳು ಸುಧಾರಿಸುತ್ತವೆ. ಯಾವಾಗಲೂ ರಾತ್ರಿಯೂಟ ಮತ್ತು ಮಲಗಲು ತೊಡಗುವುದಕ್ಕೆ ನಡುವೆ ಮೂರು ಘಂಟೆಗಳ ಅಂತರವಿರಲಿ" ಎನ್ನುತ್ತಾರೆ ಡಾ. ಸಿಂಗ್ ಅವರು.
11. ಮಲಗುವುದಕ್ಕೆ ಮೊದಲು ಹಾಲು ಕುಡಿಯಿರಿ
ನೀವು ಹಾಸಿಗೆಯಲ್ಲಿ ಮಲಗಿಕೊಂಡು ಸರಿರಾತ್ರಿ ಎರಡು ಘಂಟೆಯಾಗುವವರೆಗೂ ಅದೆಷ್ಟೇ ಮಗ್ಗುಲು ಬದಲಾಯಿಸುತ್ತಿದ್ದರೂ ನಿಮಗೆ ನಿದ್ರೆ ಹತ್ತುವುದಿಲ್ಲ. ಅದೇ ನಿಮ್ಮ ಅಜ್ಜನನ್ನ ಗಮನಿಸಿ, ಅವರು ಹಾಸಿಗೆಯಲ್ಲಿ ಮಲಗಿ ಐದು ನಿಮಿಷಗಳು ಕಳೆಯೋದರೊಳಗೆ ಸೊಂಪಾದ ನಿದ್ರೆಗೆ ಜಾರಿರುತ್ತಾರೆ! ಇದು ಹೇಗೆ ಸಾಧ್ಯ ಅಂತಾ ಆಶ್ಚರ್ಯವಾಗುತ್ತದೆಯೇ ? ಎಲ್ಲ ಒಂದು ಲೋಟ ಬಿಸಿ ಹಾಲಿನ ಮಹಿಮೆ ಕಣ್ರೀ!! ಮಲಗೋದಕ್ಕೆ ಮೊದಲು ಉದ್ದನೆಯ ಲೋಟದಷ್ಟು ಬೆಚ್ಚಗಿನ ಹಾಲು ಕುಡಿಯಿರಿ! "ಇತ್ತೀಚೆಗೆ ಹಾಲಿನ ಬಗ್ಗೆ ಇಲ್ಲಸಲ್ಲದ ಆರೋಪಗಳು ಬರ್ತಾ ಇವೆ. ಆದರೆ ಐತಿಹಾಸಿಕವಾಗಿ ನೋಡಿದರೆ ಹಾಲು ಭಾರತೀಯರ ಆಹಾರಪದ್ಧತಿಯ ಅವಿಭಾಜ್ಯ ಅಂಗವೇ ಆಗಿತ್ತು. ಹಾಲಿನಲ್ಲಿ ಟ್ರಿಪ್ಟೋಫ಼್ಯಾನ್ ಎಂಬ ಹೆಸರಿನ ಅಮೈನೋ ಆಮ್ಲವಿದ್ದು ಇದು ಸುಖ ನಿದ್ದೆಗೆ ನಾಂದಿ ಹಾಡುತ್ತದೆ. ಮೆಲಟೋನಿನ್ ಎಂಬ ಒಳ್ಳೆಯ ರಾಸಾಯನಿಕವೂ ಹಾಲಿನಲ್ಲಿದ್ದು, ಇದು ನಿದ್ರೆ-ಎಚ್ಚರ ಚಕ್ರವನ್ನ ನಿಭಾಯಿಸೋದರಲ್ಲಿ ಮಹತ್ತರ ಪಾತ್ರ ವಹಿಸುತ್ತದೆ" ಎಂದು ಹೇಳುತ್ತಾರೆ ಆಹಾರತಜ್ಞರಾದ ತನ್ವಿ ಕಾರ್ಣಿಕ್ ಅವರು. ಲ್ಯಾಕ್ಟೋಸ್ ನಿಮ್ಮ ದೇಹಕ್ಕೆ ಆಗಿಬರೋಲ್ಲವೇ ?! ಹಾಗಿದ್ದರೆ ತೆಂಗಿನ ಹಾಲನ್ನು ಅಥವಾ ಬಾದಾಮಿ ಹಾಲನ್ನು ಪ್ರಯತ್ನಿಸಿ ನೋಡಿ, ಎಂಟು ಘಂಟೆಗಳ ಕಾಲ ಲೋಕವನ್ನೇ ಮರೆಯೋ ರೀತಿಯಲ್ಲಿ ನಿದ್ದೆಯ ತೆಕ್ಕೆಗೆ ಜಾರಿಬಿಡಿ!!