Just In
Don't Miss
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Movies 'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅತಿಯಾದ ಎಣ್ಣೆ ಆಹಾರ ತಿಂದ ನಂತರ ಹೀಗೆ ಮಾಡಿ
ಎಣ್ಣೆ ಜಿಡ್ಡಿನ ಆಹಾರ ಅಥವಾ ಆಯ್ಲಿ ಫುಡ್ ಎಂದರೆ ಹಲವರಿಗೆ ಬಾಯಲ್ಲಿ ನೀರು ಬರುತ್ತದೆ. ಕೆಲವರಿಗಂತೂ ಬೆಳಗ್ಗೆ, ಮಧ್ಯಾಹ್ನ, ಸಂಜೆ ಎಣ್ಣೆಯಲ್ಲಿ ಕರಿದ ಯಾವುದಾದರೂ ಪದಾರ್ಥಗಳು ತಮ್ಮ ಊಟದ ಜೊತೆ ನೆಂಚಿಕೊಳ್ಳಲು ಇರಲೇಬೇಕು. ಇದು ಮನೆಯಲ್ಲಿರುವವರ ಕಥೆಯಾದರೆ, ಇನ್ನು ಮನೆಯ ಹೊರಗಡೆ ದುಡಿಯುವ ಮಂದಿ ಪಿಜ್ಜಾ, ಬರ್ಗರ್ ಮೊರೆಹೋಗುತ್ತಾರೆ.
ಇವುಗಳಲ್ಲಿರುವ ಜಿಡ್ಡಿನಾಂಶ ಬೇರೆ ಯಾವ ಆಹಾರಗಳಲ್ಲಿ ಹುಡುಕಿದರೂ ಸಿಗುವುದಿಲ್ಲ. ಇಷ್ಟೊಂದು ದೊಡ್ಡ ಪ್ರಮಾಣದ ಜಿಡ್ಡಿನ ಅಂಶ ನಿಮ್ಮ ದೇಹ ಸೇರಿದರೆ ನಿಜಕ್ಕೂ ಅದನ್ನು ಜೀರ್ಣವಾಗಿಸಿಕೊಳ್ಳುವ ಶಕ್ತಿ ನಿಮ್ಮಲ್ಲಿದೆಯೇ ಎಂಬುದನ್ನು ನೀವೇ ಯೋಚಿಸಬೇಕು. ಹೆಚ್ಚು ಎಣ್ಣೆ ಜಿಡ್ಡಿನ ಆಹಾರ ಸೇವನೆಯಿಂದ ನಿಮ್ಮ ದೇಹದಲ್ಲಿ ಕೆಟ್ಟ ಕೊಬ್ಬಿನ ಅಂಶ, ಕೊಲೆಸ್ಟ್ರಾಲ್ ಅಂಶ, ರಕ್ತದ ಒತ್ತಡ, ಹೃದಯದ ಸಮಸ್ಯೆ, ಮಧುಮೇಹ ಇತ್ಯಾದಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಲು ನೀವೇ ದಾರಿ ಮಾಡಿಕೊಟ್ಟಂತೆ ಆಗುತ್ತದೆ.
ಹಾಗಾದರೆ ಎಣ್ಣೆಯಂಶ ಇರುವ ಆಹಾರಗಳನ್ನು ಸೇವಿಸುವುದೇ ಬೇಡವೇ ಎಂದು ನೀವು ಕೇಳಬಹುದು. ನೀವು ಸೇವಿಸುವ ಯಾವುದೇ ಆಹಾರ ಮಿತಿಯಲ್ಲಿರಬೇಕು ಎಂಬುದರ ಅರ್ಥ ನಿಮಗಾದರೆ ಮುಕ್ಕಾಲುಪಾಲು ನೀವು ಆರೋಗ್ಯದ ಸಮಸ್ಯೆಗಳ ವಿರುದ್ಧ ಗೆದ್ದಂತೆಯೇ.......!!!
ಈ ಲೇಖನದಲ್ಲಿ ಎಣ್ಣೆಯಂಶ ಇರುವ ಆಹಾರವನ್ನು ಸೇವಿಸಿದ ನಂತರ ಯಾವೆಲ್ಲಾ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ತಿಳಿಸಿಕೊಡಲಾಗಿದೆ.
ಉಗುರು ಬೆಚ್ಚಗಿನ ನೀರು ಕುಡಿಯಿರಿ
ಬಿಸಿ ನೀರು ಮತ್ತು ಎಣ್ಣೆಯ ಅಂಶ ಪರಮ ಬದ್ದ ವೈರಿಗಳು ಎಂದು ಹೇಳುತ್ತಾರೆ. ಹಾಗಾಗಿ ಹಿಂದಿನ ಕಾಲದಲ್ಲಿ ಮದುವೆ ಮನೆಗಳಲ್ಲಿ ತುಪ್ಪದ ಊಟ ಬಡಿಸಿದ ನಂತರ ಎಲ್ಲರಿಗೂ ಕೈತೊಳೆದುಕೊಳ್ಳಲು ಬಿಸಿನೀರು ಕೊಡುತ್ತಿದ್ದರು. ಬಿಸಿನೀರಿನ ಪ್ರಭಾವ ಕೇವಲ ದೇಹದ ಮೇಲಷ್ಟೇ ಎಂದು ತಿಳಿದುಕೊಂಡರೆ ಅದು ತಪ್ಪು.
ಯಾವುದಾದರೂ ಜಿಡ್ಡಿನ ಆಹಾರ ಪದಾರ್ಥ ಸೇವಿಸಿದ ಬಳಿಕ ಉಗುರು ಬೆಚ್ಚಗಿನ ನೀರು ಕುಡಿಯುವ ಅಭ್ಯಾಸ ಇಟ್ಟುಕೊಂಡರೆ ಜೀರ್ಣಕ್ರಿಯೆಯಲ್ಲಿ ಸಾಕಷ್ಟು ಸಹಾಯವಾಗುತ್ತದೆ.
ನಿಮಗೆಲ್ಲಾ ತಿಳಿದಿರುವಂತೆ ನೀರು ಪೌಷ್ಟಿಕ ಸತ್ವಗಳನ್ನು ಮತ್ತು ದೇಹದ ತ್ಯಾಜ್ಯಗಳನ್ನು ಕೊಂಡೊಯ್ಯುವ ಮಧ್ಯವರ್ತಿ ಎಂದು ಹೇಳಬಹುದು. ಜೀರ್ಣಕ್ರಿಯೆಗೆ ಸಂಬಂಧಪಟ್ಟಂತೆ ಬಿಸಿ ನೀರು ಕುಡಿಯುವುದರಿಂದ ಎಣ್ಣೆಯ ಅಂಶ ಹೊಂದಿರುವ ಆಹಾರದಲ್ಲಿ ಕಂಡುಬರುವ ಪೌಷ್ಟಿಕ ಸತ್ವಗಳು ಜೀರ್ಣವಾಗುವ ರೂಪಕ್ಕೆ ಬದಲಾಗುತ್ತದೆ.
ಊಟವಾದ ನಂತರ ಸಾಕಷ್ಟು ನೀರು ಕುಡಿಯದಿದ್ದರೆ, ಸಣ್ಣ ಕರುಳು ಜೀರ್ಣಕ್ರಿಯೆಗೆ ಬೇಕಾದ ದೇಹದಲ್ಲಿ ಲಭ್ಯವಿರುವ ನೀರಿನ ಅಂಶವನ್ನು ಹೀರಿಕೊಂಡು ದೇಹಕ್ಕೆ ನಿರ್ಜಲೀಕರಣ ಮತ್ತು ಮಲಬದ್ಧತೆಯ ಸಮಸ್ಯೆ ಎದುರಾಗುವಂತೆ ಮಾಡುತ್ತದೆ. ಆದ್ದರಿಂದ ಎಣ್ಣೆ ಜಿಡ್ಡಿನ ಅಂಶ ಇರುವ ಆಹಾರ ಪದಾರ್ಥ ಸೇವಿಸಿದ ಮೇಲೆ ಸ್ವಲ್ಪ ಹೆಚ್ಚಾಗಿ ಉಗುರು ಬೆಚ್ಚಗಿನ ನೀರು ಕುಡಿಯಬೇಕು.
ವಿಷಕಾರಿ ತ್ಯಾಜ್ಯ ಹೊರಹಾಕುವ ಪಾನೀಯ ಸೇವನೆ
ಈ ಬಗೆಯ ಪಾನೀಯಗಳು ಹೆಚ್ಚಾಗಿ ಎಣ್ಣೆಯ ಅಂಶ ಹೊಂದಿರುವ ಆಹಾರಗಳನ್ನು ಸೇವಿಸಿದ ನಂತರ ದೇಹದ ಪ್ರತಿ ಭಾಗದಲ್ಲೂ ಶೇಖರಣೆಯಾಗುವ ವಿಷಕಾರಿ ತ್ಯಾಜ್ಯಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಕೆಲವು ಸಂಶೋಧಕರು ಮತ್ತು ದೈಹಿಕ ಸ್ವಾಸ್ಥ್ಯ ತಜ್ಞರು ಹೇಳುವ ಪ್ರಕಾರ ಡಿಟೊಕ್ಸಿಫಿಕೇಷನ್ ಪಾನೀಯಗಳು ಕೇವಲ ವಿಷಕಾರಿ ಅಂಶಗಳನ್ನು ದೇಹದಿಂದ ಹೊರಹಾಕುವುದು ಮಾತ್ರವಲ್ಲದೆ ಮನುಷ್ಯನ ದೇಹದ ತೂಕ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಉದಾಹರಣೆಗೆ ತಾಜಾ ನಿಂಬೆಹಣ್ಣಿನ ಜ್ಯೂಸ್. ಊಟವಾದ ಬಳಿಕ ಒಂದು ಗ್ಲಾಸ್ ಆಗ ತಾನೆ ತಯಾರು ಮಾಡಿದ ನಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ. ದೇಹದಲ್ಲಿ ಶೇಖರಣೆಯಾಗಿರುವ ಕೊಬ್ಬಿನ ಅಂಶ ಕರಗುವುದರಿಂದ ಹಿಡಿದು ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸುವವರೆಗೂ ಸಹಾಯವಾಗುತ್ತದೆ. ಆದ್ದರಿಂದ ಎಣ್ಣೆಯ ಜಿಡ್ಡಿನಾಂಶ ಹೊಂದಿರುವ ಆಹಾರಗಳನ್ನು ಸೇವನೆ ಮಾಡಿದ ಹದಿನೈದು ನಿಮಿಷಗಳ ನಂತರ ಡಿಟೊಕ್ಸಿಫಿಕೇಷನ್ ಪಾನೀಯಗಳನ್ನು ಕುಡಿಯುವುದನ್ನು ಮರೆಯಬೇಡಿ.
ಊಟ ಮಾಡಿದ ನಂತರ ವಾಕ್ ಮಾಡಿ
ವಿಶೇಷವಾಗಿ ಮಧ್ಯಾಹ್ನದ ಸಮಯದಲ್ಲಿ ನಮ್ಮ ದೇಹ ಹೆಚ್ಚು ಆಹಾರ ಸೇವಿಸಲು ಪ್ರೇರೇಪಿಸುತ್ತದೆ ಮತ್ತು ಇದು ನಮ್ಮ ದೇಹದ ಕಾರ್ಯಚಟುವಟಿಕೆಗೆ ಅವಶ್ಯಕ ಕೂಡ. ಆದರೆ ನಾವು ಮಾಡುವ ಒಂದು ತಪ್ಪು ಎಂದರೆ ಚೆನ್ನಾಗಿ ಊಟ ಮಾಡಿ ತಕ್ಷಣ ನಮ್ಮ ಕೆಲಸಕ್ಕೆ ನಾವು ಹಾಜರಾಗುತ್ತೇವೆ. ಈಗಿನ ಸಾಕಷ್ಟು ಮಂದಿ ಆಫೀಸ್ ಕೆಲಸಗಳಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದರಿಂದ ಊಟ ಮಾಡಿದ ನಂತರ ಒಂದು ಸಣ್ಣ ವಾಕ್ ಸಹ ಮಾಡದೆ ಕುಳಿತು ಕೆಲಸ ನಿರ್ವಹಿಸಲು ಪ್ರಾರಂಭ ಮಾಡುವುದರಿಂದ ದೇಹದಲ್ಲಿ ಸಾಕಷ್ಟು ನಕಾರಾತ್ಮಕ ಪರಿಣಾಮಗಳು ಬೀರುತ್ತವೆ.
ಆರೋಗ್ಯ ತಜ್ಞರು ತಮ್ಮ ಅಭಿಪ್ರಾಯದಲ್ಲಿ ಹೇಳುವ ಪ್ರಕಾರ ಒಬ್ಬ ಆರೋಗ್ಯವಂತ ಮನುಷ್ಯ ಮಧ್ಯಾಹ್ನದ ಸಮಯದಲ್ಲಿ ಊಟ ಮಾಡಿದ ನಂತರ ಅದರಲ್ಲೂ ಯಾವುದಾದರೂ ಎಣ್ಣೆಯ ಅಂಶ ಹೆಚ್ಚಿರುವ ಆಹಾರವನ್ನು ಸೇವಿಸಿದ ಬಳಿಕವಂತೂ ಸುಮಾರು 30 ನಿಮಿಷಗಳ ಕಾಲ ಕಡ್ಡಾಯವಾಗಿ ವಾಕ್ ಮಾಡಲೇಬೇಕು. ಇದರಿಂದ ಕರುಳಿನ ಚಲನೆ ಸುಗಮಗೊಂಡು ಜೀರ್ಣ ಪ್ರಕ್ರಿಯೆ ಚೆನ್ನಾಗಿ ನಡೆದು ದೇಹದ ತೂಕ ನಿರ್ವಹಣೆ ಸಹಜ ಸ್ಥಿತಿಯಲ್ಲಿ ಆಗುತ್ತದೆ.
ಮುಂದಿನ ಆಹಾರದ ಸೇವನೆಯ ಬಗ್ಗೆ ಕಲ್ಪನೆ ಇರಲಿ
ಇದು ಒಂದು ಒಳ್ಳೆಯ ಅಭ್ಯಾಸ. ಸದ್ಯ ಆಹಾರ ಸೇವನೆ ಮಾಡಿದ ನಾವು ಮುಂದಿನ ನಮ್ಮ ಆಹಾರ ಸೇವನೆ ಎಷ್ಟು ಗಂಟೆಗೆ ಮತ್ತು ಯಾವ ಆಹಾರ ಸೇವನೆ ಮಾಡಬೇಕೆಂಬ ಒಂದು ಸಣ್ಣ ಆಲೋಚನೆ ನಮ್ಮ ಮನಸ್ಸಿನಲ್ಲಿ ಬಂದರೆ ಆಹಾರ ಸೇವನೆಗೆ ಮುಂಚೆ ತಿನ್ನುವ ರಸ್ತೆಬದಿಯ ಜಂಕ್ ಫುಡ್ ಅಥವಾ ಎಣ್ಣೆ ಜಿಡ್ಡಿನ ಅಂಶವಿರುವ ಬೇಕರಿ ಪದಾರ್ಥಗಳನ್ನು ಸೇವಿಸುವುದನ್ನು ತಡೆಯಬಹುದು. ಇನ್ನು ಬೆಳಗಿನ ಸಮಯದಲ್ಲಿ ಯಾವುದೇ ಕಾರಣಕ್ಕೂ ಉಪಹಾರವನ್ನು ತಪ್ಪಿಸಬಾರದು ಎಂದು ಹೇಳುತ್ತಾರೆ.
ಬೆಳಗಿನ ಉಪಹಾರ ಮುಗಿಸಿ ಕೆಲಸಕ್ಕೆ ಹಾಜರಾಗುವುದರಿಂದ ಮಧ್ಯಾಹ್ನದವರೆಗೂ ನಮ್ಮನ್ನು ಚಟುವಟಿಕೆಯಿಂದ ಕೂಡಿರಲು ನಾವು ಸೇವಿಸಿದ ಉಪಹಾರ ನಮ್ಮನ್ನು ಕಾಪಾಡುತ್ತದೆ. ಮಧ್ಯಾಹ್ನದ ಸಮಯದಲ್ಲಿ ಮಾಡುವ ಊಟದಲ್ಲಿ ತರಕಾರಿಗಳು, ದ್ವಿದಳ ಧಾನ್ಯಗಳು ಹೆಚ್ಚಿದ್ದರೆ ಉತ್ತಮ. ಸಂಜೆಯಾಗುತ್ತಿದ್ದಂತೆ ಸಾಕಷ್ಟು ನೀರು, ಹಣ್ಣಿನ ರಸ ಕುಡಿಯುವುದು ಒಳ್ಳೆಯ ಅಭ್ಯಾಸ ಮಾತ್ರವಲ್ಲದೆ ದೇಹದಲ್ಲಿ ನೀರಿನ ಅಂಶ ಕಾಪಾಡಿಕೊಳ್ಳಲು ನೆರವಾಗುತ್ತದೆ. ರಾತ್ರಿಯ ಸಮಯದಲ್ಲಿ ಸ್ವಲ್ಪ ಲಘು ಆಹಾರ ಸೇವಿಸಿದರೆ ಉತ್ತಮ. ಇದರಿಂದ ಚೆನ್ನಾಗಿ ನಿದ್ರೆ ಹತ್ತುತ್ತದೆ. ಜೊತೆಗೆ ಜೀರ್ಣಾಂಗಗಳಿಗೆ ಸಾಕಷ್ಟು ವಿಶ್ರಾಂತಿ ದೊರಕುತ್ತದೆ.
ಪ್ರೋಬಯೋಟಿಕ್ ಸೇವನೆ
ಪ್ರೋಬಯೋಟಿಕ್ ಎಂದಾಕ್ಷಣ ಗೊಂದಲಕ್ಕೊಳಗಾಗಬೇಡಿ. ಮೊಸರನ್ನು ಈ ರೀತಿ ಕರೆಯುತ್ತಾರೆ. ನೀವು ಯಾವಾಗಲಾದರೂ ಬೋಂಡಾ, ವಡೆ, ಪೂರಿಯಂತಹ ಆಹಾರಗಳನ್ನು ಸೇವಿಸಿದ ಬಳಿಕ 1 ಕಪ್ ಗಟ್ಟಿ ಮೊಸರು ಸೇವನೆ ಮಾಡಿ. ಇದರಿಂದ ನಿಮ್ಮ ಕರುಳಿಗೆ ಸಾಕಷ್ಟು ಪುನಶ್ಚೇತನ ಸಿಕ್ಕಂತಾಗಿ ನೀವು ಸೇವಿಸಿದ ಎಣ್ಣೆಯ ಅಂಶವಿರುವ ಆಹಾರವನ್ನು ಚೆನ್ನಾಗಿ ಜೀರ್ಣ ಮಾಡುತ್ತದೆ. ಪ್ರತಿ ದಿನ ಮೊಸರಿನ ಸೇವನೆ ಅಭ್ಯಾಸ ಇಟ್ಟುಕೊಂಡಿದ್ದರೆ ನಿಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ಬಲಗೊಳ್ಳುತ್ತಾ ಹೋಗುತ್ತದೆ. ಇದು ಯಾವುದೇ ಬಗೆಯ ಸೋಂಕುಗಳಿಂದ ನಿಮ್ಮನ್ನು ರಕ್ಷಿಸುತ್ತದೆ.
ಹಣ್ಣು - ತರಕಾರಿಗಳ ಸೇವನೆಯನ್ನು ಮರೆಯಬೇಡಿ
ನಿಮ್ಮ ಆಹಾರ ಪದ್ಧತಿಯಲ್ಲಿ ಎಂದಿಗೂ ಹಣ್ಣು ಮತ್ತು ತರಕಾರಿಗಳ ಸೇವನೆಯನ್ನು ಮಾತ್ರ ಮಿಸ್ ಮಾಡಿಕೊಳ್ಳಬೇಡಿ. ಪ್ರತಿದಿನ ಬೇಯಿಸಿದ ತರಕಾರಿಗಳು ಊಟ ಮಾಡಿದ ನಂತರ ಹಣ್ಣುಗಳನ್ನು ಸೇವಿಸುವುದರಿಂದ ನಿಮ್ಮ ದೇಹಕ್ಕೆ ಸಾಕಷ್ಟು ವಿಟಮಿನ್ ಅಂಶಗಳು, ಖನಿಜಾಂಶಗಳು ಮತ್ತು ನಾರಿನಂಶಗಳು ಲಭ್ಯವಾಗುತ್ತವೆ. ಇದರಿಂದ ನಿಮ್ಮ ದೇಹದ ಎಲ್ಲಾ ಕಾರ್ಯಚಟುವಟಿಕೆ ಸರಾಗವಾಗಿ ನಡೆಯುತ್ತದೆ.
ಆದರೆ ಕೆಲವರ ಆರೋಗ್ಯಕ್ಕೆ ಎಣ್ಣೆಯ ಜಿಡ್ಡಿನ ಅಂಶ ದೇಹದಲ್ಲಿನ ನಾರಿನಾಂಶವನ್ನು ಹಿಡಿದಿಡುತ್ತದೆ ಮತ್ತು ಮಲಬದ್ಧತೆಗೆ ಕಾರಣವಾಗುತ್ತದೆ ಎಂಬ ಮಾತಿದೆ. ಅಂತಹವರು ಬೆಳಗಿನ 10 ರಿಂದ 11 ಗಂಟೆ ಸಮಯದಲ್ಲಿ ಹಣ್ಣುಗಳು, ಗೋಡಂಬಿ, ಬಾದಾಮಿ, ವಾಲ್ನಟ್ ಬೀಜಗಳು, ಒಣದ್ರಾಕ್ಷಿ ಮತ್ತು ಖರ್ಜೂರಗಳನ್ನು ಸೇವಿಸುವುದರಿಂದ ಸಾಕಷ್ಟು ಸಹಾಯವಾಗುತ್ತದೆ. ಮಧ್ಯಾಹ್ನದ ಊಟದ ಸಮಯದಲ್ಲಿ ಬೇಯಿಸಿದ ತರಕಾರಿ ಸಾರಿನ ಸೇವನೆಯ ಜೊತೆ ಕೆಲವು ತರಕಾರಿಗಳನ್ನು ಹಸಿಯಾಗಿಯೇ ಸೇವಿಸುವುದರಿಂದ ಸಾಕಷ್ಟು ಪೌಷ್ಟಿಕಾಂಶಗಳು ದೇಹಕ್ಕೆ ಸಿಗುವುದರಲ್ಲಿ ಎರಡು ಮಾತಿಲ್ಲ.
ನಿದ್ರೆಯನ್ನು ಕಡೆಗಣಿಸಬೇಡಿ
ಒಬ್ಬ ಆರೋಗ್ಯವಂತ ವ್ಯಕ್ತಿ ಒಂದು ದಿನಕ್ಕೆ ಎಂಟು ಗಂಟೆಗಳ ಕಾಲ ನಿದ್ರೆ ಮಾಡಬೇಕು ಎಂದು ವೈದ್ಯರು ಹೇಳುತ್ತಾರೆ. ಏಕೆಂದರೆ ಇದು ಇಡೀ ದಿನ ಕಷ್ಟ ಪಟ್ಟು ದುಡಿದ, ಸಾಕಷ್ಟು ಕಾರ್ಯ ಚಟುವಟಿಕೆಗಳಲ್ಲಿ ಭಾಗಿಯಾದ ದೇಹಕ್ಕೆ ಮತ್ತು ದೇಹದ ಅಂಗಾಂಗಗಳಿಗೆ ಅವಶ್ಯಕ.
ರಾತ್ರಿಯ ಸಮಯದಲ್ಲಿ ಕಣ್ತುಂಬಾ ನಿದ್ರೆ ಮಾಡುವುದರಿಂದ ಮರುದಿನ ಎದ್ದ ತಕ್ಷಣ ನಮ್ಮ ಮನಸ್ಸು ಸಾಕಷ್ಟು ಪ್ರಶಾಂತವಾಗಿದ್ದು, ಮೈಕೈ ನೋವೆಲ್ಲಾ ಮಾಯವಾಗಿರುತ್ತದೆ. ಮಾನಸಿಕ ಖಿನ್ನತೆ ಮತ್ತು ಆತಂಕದಿಂದ ಬಳಲುತ್ತಿರುವವರಿಗೆ ನಿದ್ರೆ ಸಂಜೀವಿನಿಯೇ ಸರಿ.
ಎಣ್ಣೆ ಜಿಡ್ಡಿನ ಆಹಾರ ಪದಾರ್ಥಗಳನ್ನು ಸೇವಿಸಿದ ಬಳಿಕ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ
ತಂಪಾದ ಆಹಾರ ಸೇವನೆ ಬೇಡವೇಬೇಡ
ಮದುವೆ ಮನೆಗಳಲ್ಲಿ ನಾವು ಗಮನಿಸಿರುವ ಹಾಗೆ ಆಹಾರ ತಯಾರಿಕೆಯಲ್ಲಿ ಸಾಕಷ್ಟು ಎಣ್ಣೆಯಂಶ ಬಳಸಿರುತ್ತಾರೆ. ಬಂದ ಅತಿಥಿಗಳಿಗೆ ಆಹಾರವನ್ನು ಉಣಬಡಿಸಿ ನಂತರ ಕೊನೆಯಲ್ಲಿ ಐಸ್ ಕ್ರೀಂ ತಿನ್ನಲು ಕೊಡುತ್ತಾರೆ. ಆದರೆ ಇದು ಬಹಳಷ್ಟು ತಪ್ಪು ಎಂದು ಆರೋಗ್ಯ ತಜ್ಞರ ಅಭಿಪ್ರಾಯ. ಮುಖ್ಯವಾಗಿ ಎಣ್ಣೆಯ ಜಿಡ್ಡಿನಾಂಶ ಸೇವಿಸಿದ ಬಳಿಕ ಐಸ್ ಕ್ರೀಮ್ ತಿನ್ನುವುದರಿಂದ ಹೊಟ್ಟೆಯಲ್ಲಿನ ಆಹಾರದ ಜೀರ್ಣ ಪ್ರಕ್ರಿಯೆಯಲ್ಲಿ ಸಾಕಷ್ಟು ತೊಡಕುಂಟಾಗುತ್ತದೆ.
ಜೊತೆಗೆ ಕರುಳು ಮತ್ತು ಲಿವರ್ ಮೇಲೆ ಸಾಕಷ್ಟು ಕೆಟ್ಟ ಪರಿಣಾಮ ಬೀರುತ್ತದೆ ಇದರಿಂದ ಅಜೀರ್ಣತೆ ಮತ್ತು ಹೊಟ್ಟೆ ಉಬ್ಬರ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಭಾರವಾದ ಆಹಾರಗಳನ್ನು ಸೇವಿಸಿದ ಬಳಿಕ ಯಾವುದೇ ಕಾರಣಕ್ಕೂ ರೆಫ್ರಿಜರೇಟರ್ ನ ತಂಪಾದ ನೀರು, ಐಸ್ ಕ್ರೀಮ್, ತಂಪು ಪಾನೀಯಗಳ ಸೇವನೆ ಬೇಡವೇ ಬೇಡ.
ಎಂದಿಗೂ ಆಹಾರ ಸೇವನೆಯ ತಕ್ಷಣ ಮಲಗಬೇಡಿ
ಇದು ಇತ್ತೀಚಿನ ಜನರಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಒಂದು ಚಾಳಿ. ರಾತ್ರಿ ಊಟ ಮುಗಿಸಿದ ಬಳಿಕ ಹತ್ತು ನಿಮಿಷ ಕೂಡ ವಾಕಿಂಗ್ ಮಾಡದೆ ಹೋಗಿ ಮಲಗಿ ಬಿಡುತ್ತಾರೆ. ಆದರೆ ಇದರಿಂದ ಪರೋಕ್ಷವಾಗಿ ಹೃದಯದ ಆರೋಗ್ಯಕ್ಕೆ ತೊಂದರೆಯಾಗುತ್ತದೆ ಎಂಬ ಅರಿವಿರುವುದಿಲ್ಲ. ಊಟವಾದ ತಕ್ಷಣ ಮಲಗಿ ಕೊಳ್ಳುವುದರಿಂದ ಜೀರ್ಣ ಪ್ರಕ್ರಿಯೆಯಲ್ಲಿ ವಿರುದ್ಧ ರೀತಿಯ ಪರಿಣಾಮ ಬೀರಿ ಆಹಾರದಲ್ಲಿರುವ ಕೊಬ್ಬಿನ ಅಂಶ ಸಾಕಷ್ಟು ಶೇಖರಣೆಯಾಗುತ್ತದೆ.
ಇದರಿಂದ ರಕ್ತ ಸಂಚಾರದಲ್ಲಿ ವ್ಯತ್ಯಾಸವಾಗಿ ಹೃದಯದ ಕಾರ್ಯಚಟುವಟಿಕೆಗೆ ತುಂಬಾ ತೊಂದರೆ ಉಂಟಾಗುತ್ತದೆ. ಇದರ ಜೊತೆ ಹೊಟ್ಟೆಯುಬ್ಬರ ಗ್ಯಾಸ್ಟಿಕ್ ಸಮಸ್ಯೆ ಕಟ್ಟಿಟ್ಟ ಬುತ್ತಿ. ಹಾಗಾಗಿ ರಾತ್ರಿ ಊಟ ಮಾಡಿದ ಬಳಿಕ ಸಾಧ್ಯವಾದರೆ 30 ನಿಮಿಷಗಳ ತನಕ ಚೆನ್ನಾಗಿ ವಾಕ್ ಮಾಡಿ.