Just In
- 4 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 5 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 5 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 5 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ತ್ರೀರೋಗ ತಜ್ಞರು ಎಂದೂ ತಿಳಿಸದ ರೋಗಿಗಳ ವಿಚಿತ್ರ ಅಭ್ಯಾಸಗಳು
ಸಾಮಾನ್ಯವಾಗಿ ಮಹಿಳೆಯರು ತಮ್ಮ ಆರೋಗ್ಯಕ್ಕಿಂತಲೂ ತಮ್ಮ ಕುಟುಂಬದ ಆರೋಗ್ಯಕ್ಕೇ ಹೆಚ್ಚಿನ ಮಹತ್ವ ನೀಡುತ್ತಾರೆ. ಗಹನವಾದ ಆರೋಗ್ಯದ ಸಮಸ್ಯೆ ಎದುರಾಗಿದ್ದರೂ ಮನೆಯ ಸದಸ್ಯರ ಯಾವುದೋ ಅಗತ್ಯಕ್ಕಾಗಿ ತಮ್ಮ ವೈದ್ಯರ ಭೇಟಿಯನ್ನೇ ಮುಂದೂಡುತ್ತಾರೆ. ಎಷ್ಟೋ ಸಲ, ಪ್ರಮುಖವಾದ ತೊಂದರೆಯೊಂದು ಎದುರಾಗಿ ಬಹಳಷ್ಟು ಕಷ್ಟ ಅನುಭವಿಸುತ್ತಿದ್ದರೂ ಇತರ ಕಾರಣಗಳಿಂದಾಗಿ ವೈದ್ಯರ ಭೇಟಿ ಮುಂದೂಡಿದ ಬಳಿಕ ಆ ತೊಂದರೆ ತಾನಾಗಿಯೇ ಕೊಂಚ ಕಡಿಮೆಯಾದಂತೆ ಅನ್ನಿಸಿದರೆ, ಈಗ ತಾನಾಗಿಯೇ ಸರಿಹೋಯಿತಲ್ಲ, ಇನ್ನೇಕೆ ವೈದ್ಯರ ಭೇಟಿ? ಎಂಬ ಭಾವನೆಯೇ ಬಹುತೇಕ ಎಲ್ಲಾ ಮಹಿಳೆಯರಲ್ಲಿರುತ್ತದೆ. ಬಹುಶಃ ಈ ಪರಿಯನ್ನೇ ಕಂಡು ಕವಿ "ಸ್ತ್ರೀ ಎಂದರೆ ಅಷ್ಟೇ ಸಾಕೇ" ಎಂದು ಹಾಡಿರಬಹುದು!.
ವಾಸ್ತವದಲ್ಲಿ, ಯಾವುದೋ ತೊಂದರೆ ಪ್ರಕಟವಾಗಿರದೇ ಇದ್ದರೂ, ಒಳಗಿಂದೊಳಗೇ ಇದು ಉಲ್ಬಣಗೊಳ್ಳುತ್ತಿರಬಹುದು. ಹೀಗೆ, ಒಂದು ವೇಳೆ ಉಲ್ಬಣಗೊಂಡರೆ ಮಾತ್ರ ತೊಂದರೆ ತಡೆಯಲಾರದೇ ಕಡೆಯ ಘಳಿಗೆಯಲ್ಲಿ ವೈದ್ಯರ ಬಳಿ ಬರುವವರೇ ಹೆಚ್ಚು. ವೈದ್ಯರ ಭೇಟಿಯನ್ನು ತಡವಾಗಿಸಲು ಕೇವಲ ಇದೊಂದೇ ಕಾರಣವಾಗಬೇಕಾಗಿಲ್ಲ, ಆದರೆ ಕೆಲವು ಮಹಿಳೆಯರು ಕ್ಷುಲ್ಲುಕ ಎನಿಸುವ ಕಾರಣಗಳಿಗೂ ವೈದ್ಯರ ಬಳಿ ಹೋಗುವುದನ್ನು ತಡವಾಗಿಸುತ್ತಾರೆ. ಒಂದು ವೇಳೆ ಹೋದರೂ, ಯಾವುದೋ ಸಮಸ್ಯೆಗೆ ಸಂಬಂಧಿಸಿಲ್ಲದೇ ಇರುವ ವಿಷಯಕ್ಕೆ ತಲೆಕೆಡಿಸಿಕೊಳ್ಳುತ್ತಾ ವೈದ್ಯರಿಗೂ ಇರಿಸು ಮುರಿಸು ತರುತ್ತಾರೆ. ಇಂತಹ ಕೆಲವು ಅಭ್ಯಾಸಗಳನ್ನು ತಮ್ಮ ರೋಗಿಗಳಲ್ಲಿ ಗಮನಿಸಿದ ವೈದ್ಯರು, ವಿಶೇಷವಾಗಿ ಸ್ತ್ರೀರೋಗ ತಜ್ಞರು ಹಾಗೂ ಪ್ರಸೂತಿ ತಜ್ಞರು ಇಂತಹ ಕೆಲವು ಅಭ್ಯಾಸಗಳ ಬಗ್ಗೆ ವಿವರಿಸುತ್ತಾರೆ. ಹಾಗಾಗಿ, ನಿಮಗೆ ಅರಿವಿಲ್ಲದೇ ಕೆಲವು ಅಭ್ಯಾಸಗಳನ್ನು ನೀವು ಈಗಾಗಲೇ ರೂಢಿಸಿಕೊಂಡಿದ್ದರೆ ಇದು ನಿಮ್ಮ ವೈದ್ಯರಿಗೆ ಮುಜುಗರ ತರಿಸುವ ಮುನ್ನವೇ ನಿಮ್ಮನ್ನು ನೀವು ಬದಲಿಸಿಕೊಳ್ಳಲು ಇಂದಿನ ಲೇಖನ ನೆರವಾಗಲಿದೆ. ಹೇಗೆ? ಬನ್ನಿ ನೋಡೋಣ:
1. ನೀವು ನಿಮ್ಮ ಸಮಸ್ಯೆಗೂ ಮಿಗಿಲಾಗಿ ನಿಮ್ಮ ಕೇಶನಿವಾರಣೆಯ ಬಗ್ಗೆ ಚಿಂತಿಸುತ್ತಿದ್ದರೆ
ಸಾಮಾನ್ಯವಾಗಿ ಪ್ರಸೂತಿ-ಸ್ತ್ರೀರೋಗ ತಜ್ಞರು ಪ್ರತಿ ರೋಗಿಯ ಆರೋಗ್ಯ ಮಾಹಿತಿಯನ್ನು ಪಡೆಯಲು ಸರಾಸರಿ ಹನ್ನೊಂದು ನಿಮಿಷಗಳನ್ನು ತೆಗೆದುಕೊಳ್ಳುತ್ತಾರೆ. ಈ ಸಮಯದಲ್ಲಿ, ಅಕಸ್ಮಾತ್ತಾಗಿ ನಿಮಗೆ ನಿಮ್ಮ ಕಾಲುಗಳ ಅಥವಾ ಕೈಗಳ ರೋಮಗಳನ್ನು ನಿವಾರಿಸದೇ ಇರುವುದು ನಿಮ್ಮ ಚಿಂತೆಗೆ ಕಾರಣವಾಗಿದ್ದರೆ, ನಿಮಗೆ ಮುಜುಗರ ಎದುರಾಗಬಹುದು. ಆದರೆ ನಿಮ್ಮ ವೈದ್ಯರಿಗೆ ಹಾಗೆನ್ನಿಸುವುದಿಲ್ಲ. ಏಕೆಂದರೆ ಅವರಿಗೆ ನಿಮ್ಮ ಆರೋಗ್ಯದ ಮಾಹಿತಿಗಳು ಬಲು ಮುಖ್ಯವಾಗಿದ್ದು ನೀವು ಶೇವಿಂಗ್ ಮಾಡಿಕೊಂಡು ಬಂದಿದ್ದೀರೋ, ಇಲ್ಲವೋ ಮೊದಲಾದ ವಿವರಗಳಿಗೆ ಯಾವುದೇ ಮಹತ್ವವಿರುವುದಿಲ್ಲ. ರೋಗಿಯ ಆರೋಗ್ಯದ ಮಾಹಿತಿಗಳು ಅವಶ್ಯವೇ ಹೊರತು ಅವರ ಸೌಂದರ್ಯದ ವಿವರಗಳಲ್ಲ. ರೋಗಿಯ ಆಂತರಿಕ ಅಂಗಗಳ ಆರೋಗ್ಯವೇ ನಮಗೆ ಮುಖ್ಯ. ಹಾಗಾಗಿ, ವೈದ್ಯರ ಬಳಿ ಹೋದಾಗ, ನಿಮ್ಮ ಸೌಂದರ್ಯದ ಕಾಳಜಿಯ ಯಾವುದೇ ವಿಷಯದ ಬಗ್ಗೆ ಚಿಂತಿಸದಿರಿ.
2. ಮಾಸಿಕ ದಿನ ಎದುರಾಯಿತು ಎಂದು ವೈದ್ಯರ ಭೇಟಿಯನ್ನು ಮುಂದೂಡದಿರಿ
ಕೆಲವೊಮ್ಮೆ ರೋಗಿ ವೈದ್ಯರಲ್ಲಿ ಭೇಟಿಯ ಸಮಯವನ್ನು ಮುಂಗಡವಾಗಿ ನಮೂದಿಸಿಕೊಂಡಿದ್ದರೂ ಸರಿಯಾದ ಸಮಯಕ್ಕೆ ಹಾಜರಾಗದೇ ತಪ್ಪಿಸಿಕೊಳ್ಳುತ್ತಾರೆ. ಇದಕ್ಕೆ ಮುಖ್ಯ ಕಾರಣ ಆ ದಿನದಂದು ಅವರ ಮಾಸಿಕ ದಿನ ಎದುರಾಗಿರುವುದು. ಆದರೆ ಹೀಗೆ ಮಾಡದಿರಿ ಎಂದು ಪ್ರತಿ ತಜ್ಞರೂ ತಮ್ಮ ರೋಗಿಯಲ್ಲಿ ವಿನಂತಿಸಿಕೊಳ್ಳುತ್ತಾರೆ. ಇಂದು ವಿಜ್ಞಾನ ಬಹಳ ಮುಂದುವರೆದಿದ್ದು ಪಾಪ್ ಸ್ಮಿಯರ್ ಮೊದಲಾದ ಆಧುನಿಕ ವಿಧಾನಗಳ ಮೂಲಕ ಮಹಿಳೆಯ ಆರೋಗ್ಯದ ವಿವರಗಳನ್ನು ತಿಂಗಳ ಎಲ್ಲಾ ದಿನಗಳಂದು ಪಡೆಯಬಹುದು. ಸಾಮಾನ್ಯವಾಗಿ, ಮಹಿಳೆಯರು ತಮ್ಮ ದೇಹರಿಂದ ಹೊರಹರಿಯುವ ರಕ್ತದ ಬಗ್ಗೆ ವೈದ್ಯರು ಏನೆಂದುಕೊಳ್ಳುತ್ತಾರೋ ಎಂಬ ದುಗುಡದಲ್ಲಿರುತ್ತಾರೆ. ನಿಜ ಹೇಳಬೇಕೆಂದರೆ ಪ್ರಸೂತಿ-ಸ್ತ್ರೀರೋಗ ತಜ್ಞರು ತಮ್ಮ ದೈನಂದಿನ ಕಾರ್ಯದಲ್ಲಿ ನೋಡಿರುವ ರಕ್ತದ ಪ್ರಮಾಣಕ್ಕೆ ಹೋಲಿಸಿದರೆ ಇದು ನಗಣ್ಯ. ಹಾಗಾಗಿ ಈ ಕಾರಣಕ್ಕೆ ನಿಮ್ಮ ವೈದ್ಯರ ಭೇಟಿಯನ್ನು ಮುಂದೂಡುವ ಅಗತ್ಯವಿಲ್ಲ. ಕೆಲವೊಮ್ಮೆ ಸ್ರಾವ ವಿಪರೀತವಾಗಿದ್ದರೆ, ಈ ಸಮಯದಲ್ಲಿ ತಾನು ಮಾಡಲಿರುವ ಪರೀಕ್ಷೆ ಸಲ್ಲುವುದೋ ಅಥವಾ ಮತ್ತೊಮ್ಮೆ ರೋಗಿಯನ್ನು ಬರಹೇಳಬೇಕೋ ಎಂಬುದನ್ನು ವೈದ್ಯರೇ ನಿರ್ಧರಿಸುತ್ತಾರೆ. ಹಾಗಾಗಿ ಯಾವುದೇ ಕಾರಣವಿದ್ದರೂ ವೈದ್ಯರ ನಿಗದಿತ ಭೇಟಿಯನ್ನು ಮುಂದೂಡದಿರಿ. ವಾಸ್ತವದಲ್ಲಿ, ಹೀಗೆ ಮುಂದೂಡಿದಾಗ ವೈದ್ಯರಿಗೆ ಲಭಿಸಬಹುದಾಗಿದ್ದ ಆ ಕ್ಷಣದ ಪ್ರಮುಖ ಮಾಹಿತಿ ಲಭಿಸದೇ ಹೋಗಬಹುದು!.
3. ನಿಮಗೆ ನೀವೆ ಚಿಕಿತ್ಸೆ ತೆಗೆದುಕೊಂಡಾಗ
ಹಿಂದಿನ ಅನುಭವಗಳ ಬಳಿಕ ಮಹಿಳೆಯರು ತಮಗೆ ಎದುರಾಗುವ ಮೂತ್ರಕೋಶದ ಸೋಂಕು ಮತ್ತು ಶಿಲೀಂಧ್ರದ ಸೋಂಕುಗಳಿಗೆ ವೈದ್ಯರ ಸಲಹೆ ಪಡೆಯದೇ ಹಿಂದೆ ಪಡೆದಿದ್ದ ಔಷಧಿಗಳನ್ನೇ ಕೊಂಡು ಸೇವಿಸುತ್ತಾರೆ. ಹೀಗೆ ತಾವಾಗಿಯೇ ಔಷಧಿ ತೆಗೆದುಕೊಳ್ಳುವುದನ್ನು ಪ್ರಾರಂಭಿಸಿದ ಬಳಿಕದ ದಿನಗಳಲ್ಲಿಯೇ ವೈದ್ಯರ ಭೇಟಿಯ ದಿನ ನಿಗದಿಯಾಗಿದ್ದರೆ, ವಾಸ್ತವವಾಗಿ ಈ ಚಿಕಿತ್ಸೆ ಮುಗಿಯುವವರೆಗೂ ನೀವು ವೈದ್ಯರಲ್ಲಿ ಬರಬಾರದು. ಏಕೆಂದರೆ ನೀವು ಈಗಾಗಲೇ ನಿಮ್ಮ ತೊಂದರೆಗೆ ಯಾವುದೋ ಔಷಧಿಗಳನ್ನು ತೆಗೆದುಕೊಂಡಿದ್ದು ನಿಮ್ಮ ದೇಹ ಆ ಔಷಧಿಗಳಿಗೆ ಸ್ಪಂದಿಸುತ್ತಿರುವಾಗ ವೈದ್ಯರಿಗೆ ನಿಮ್ಮ ಇತರ ಮುಖ್ಯ ತೊಂದರೆಯ ಲಕ್ಷಣಗಳನ್ನು ಪಡೆಯುವುದಾಗಲೀ ಅಥವಾ ಸೂಕ್ತ ಚಿಕಿತ್ಸೆ ನೀಡುವುದಾಗಲೀ ಸಾಧ್ಯವಾಗುವುದಿಲ್ಲ. ಆದ್ದರಿಂದ, ಒಂದು ವೇಳೆ ನಿಮ್ಮ ಭೇಟಿಗೂ ಮುನ್ನ ನಿಮಗೆ ಮೂತ್ರಕೋಶದ ಸೋಂಕು ಮತ್ತು ಶಿಲೀಂಧ್ರದ ಸೋಂಕು ಎದುರಾಗಿದ್ದರೆ ನಿಮ್ಮ ವೈದ್ಯರಲ್ಲಿ ಕರೆ ಮಾಡಿ ಈ ಬಗ್ಗೆ ಮುಂಚಿತವಾಗಿ ತಿಳಿಸಿದರೆ ಇದಕ್ಕೆ ಅಗತ್ಯವಿರುವ ಪ್ರತಿಜೀವಕ ಔಷಧಿಗಳನ್ನು ಔಷಧಿ ಅಂಗಡಿಯಿಂದ ಪಡೆಯಲು ವೈದ್ಯರು ಸಲಹೆ ಮಾಡುತ್ತಾರೆ. ತಾನು ಯಾವ ಔಷಧಿ ಒದಗಿಸಿದ್ದೇನೆ, ಇದಕ್ಕೆ ಮುಂದಿನ ಚಿಕಿತ್ಸೆ ಹೇಗೆ ಎಂಬುದು ವೈದ್ಯರಿಗೆ ಸುಲಭವಾಗಿ ನಿರ್ಧರಿಸಲು ಸಾಧ್ಯವಾಗುತ್ತದೆ. ಹಾಗಾಗಿ ನೀವಾಗಿ ನಿಮ್ಮ ಸೋಂಕುಗಳಿಗೆ ಔಷಧಿ ಪಡೆಯುವುದನ್ನು ಪ್ರಾರಂಭಿಸಿದ್ದರೆ, ದಯವಿಟ್ಟು ಈ ಔಷಧಿಗಳು ಮುಗಿಯುವವರೆಗೂ ತಾಳ್ಮೆಯಿಂದ ಕಾದು ಬಳಿಕವೇ ವೈದ್ಯರ ಮುಂದಿನ ಭೇಟಿಯನ್ನು ನಿಗದಿಗೊಳಿಸಿ. ಸಾಮಾನ್ಯವಾಗಿ ಈ ಸೋಂಕುಗಳಿಗೆ ನೀಡಲಾಗುವ ಔಷಧಿಗಳು ಒಂದು ವಾರದ ಮಟ್ಟಿಗಿರುವ ಕಾರಣ ಇದನ್ನು ಪ್ರಾರಂಭಿಸಿದ ಬಳಿಕ ಆ ವಾರದಲ್ಲಿಯೇ ಮುಗಿಸುವುದು ಅಗತ್ಯ. ಈ ಮೂಲಕ ಆ ಸೋಂಕಿಗೆ ಮತ್ತೊಮ್ಮೆ ಒಳಗಾಗದಂತೆ ಕಾಪಾಡಬಹುದು. ಒಂದು ವೇಳೆ ನಿಮಗೆ ಸೋಂಕು ಸತತವಾಗಿ ಆವರಿಸುತ್ತಿದ್ದರೆ, ಈ ಬಗ್ಗೆ ವೈದ್ಯರಲ್ಲಿ ಸ್ಪಷ್ಟವಾಗಿ ತಿಳಿಸಬೇಕು.
4. ನೀವು ಯಾವ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೀರಿ ಎಂದು ಹೇಳದೇ ಇದ್ದರೆ
ವೈದ್ಯರಲ್ಲಿ ಸುಳ್ಳು ಹೇಳಬಾರದು ಎಂಬ ಗಾದೆಯೇ ಇದೆ. ನೀವು ನಿಮ್ಮ ಇತರ ಯಾವುದೋ ತೊಂದರೆಗಾಗಿ ಬೇರೊಬ್ಬ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದು ಔಷಧಿ ಸೇವಿಸುತ್ತಿದ್ದರೆ, ಆ ಔಷಧಿಗಳ ವಿವರಗಳನ್ನು ನಿಮ್ಮ ಪ್ರಸೂತಿ-ಸ್ತ್ರೀರೋಗ ತಜ್ಞರಿಗೆ ತಿಳಿಸುವುದು ಅವಶ್ಯವಾಗಿದೆ. ಕೆಲವೊಮ್ಮೆ ನೀವು ಈ ವೈದ್ಯರ ಬಳಿ ಭೇಟಿ ನೀಡಿರುವ ಕಾರಣ ಅಷ್ಟು ಮುಖ್ಯವಲ್ಲದಿದ್ದು ವೈದ್ಯರಿಗೆ ಇನ್ನೊಬ್ಬ ವೈದ್ಯರ ಔಷಧಿಗಳನ್ನು ತಿಳಿಸುವುದು ಅಗತ್ಯವಿಲ್ಲ ಎಂದು ನಿಮಗೆ ಅನ್ನಿಸಬಹುದು. ಆದರೆ ನೀವು ತೆಗೆದುಕೊಳ್ಳುತ್ತಿರುವ ಯಾವುದೇ ಔಷಧಿಗಳು ಇನ್ನೊಂದು ಔಷಧಿಯೊಂದಿಗೆ ಸೇವಿಸಿದಾಗ ವ್ಯತಿರಿಕ್ತ ಪರಿಣಾಮವನ್ನುಂಟುಮಾಡಬಹುದು. ಹೀಗಾಗಬಾರದು ಎಂದಿದ್ದರೆ, ವೈದ್ಯರಿಗೆ ನೀವು ಈಗ ಸೇವಿಸುತ್ತಿರುವ ಔಷಧಿಯ ಹೆಸರು ಪ್ರಮಾಣ ಮೊದಲಾದ ವಿವರಗಳನ್ನು ಒದಗಿಸಬೇಕು. ಆಗ ವೈದ್ಯರಿಗೆ ನೀವು ತೆಗೆದುಕೊಳ್ಳುತ್ತಿರುವ ಔಷಧಿಗಳನ್ನು ನಿಲ್ಲಿಸದೆಯೇ ಈ ತೊಂದರೆಗೆ ಯಾವ ಔಷಧಿ ನೀಡಬೇಕೆಂದು ನಿರ್ಧರಿಸಲು ಸಾಧ್ಯವಾಗುತ್ತದೆ.
5. ನಿಮ್ಮ ತೊಂದರೆಯ ಬಗ್ಗೆ ಹೇಳದೇ ಇದ್ದರೆ
ಕೆಲವು ತೊಂದರೆಗಳು ಮಹಿಳೆಗೆ ಹೇಳಿಕೊಳ್ಳಲು ಸಂಕೋಚವಾಗುತ್ತದೆ. ತನ್ನ ತಾಯಿಯ ಹೊರತಾಗಿ ಬೇರೊಬ್ಬರಲ್ಲಿ, ಅದು ಪ್ರಸೂತಿ-ಸ್ತ್ರೀರೋಗ ತಜ್ಞರೇ ಆಗಿದ್ದರೂ ಸರಿ, ಕೆಲವು ಮಹಿಳೆಯರು ತಮ್ಮ ಅತ್ಯಂತ ಗೋಪ್ಯ ಸಂಗತಿಗಳನ್ನು ಹೇಳಿಕೊಳ್ಳುವುದಿಲ್ಲ. ಹೆಚ್ಚಿನವರು ಇವನ್ನು ಕ್ಷುಲ್ಲುಕ ಅಥವಾ ಅಷ್ಟು ಮುಖ್ಯವಲ್ಲ ಅಥವಾ ಕೇಳಿದವರಿಗೆ ವಿಚಿತ್ರ ಎನಿಸಬಹುದು ಎಂಬ ಆತಂಕವಿರುತ್ತದೆ. ಆದರೆ ಎಲ್ಲಿಯವರೆಗೆ ಮಹಿಳೆ ತನಗಾಗುತ್ತಿರುವ ನೋವು ಅಥವಾ ಇತರ ಅನುಭವಗಳನ್ನು ಸ್ಪಷ್ಟವಾಗಿ ವಿವರಿಸುವುದಿಲ್ಲವೋ ಅದಕ್ಕೆ ಸಂಬಂಧಿಸಿದ ಮಾಹಿತಿ ವೈದ್ಯರ ಗಮನಕ್ಕೆ ಬಾರದೇ ಹೋಗುವ ಮೂಲಕ ನೀಡಬೇಕಾದ ಮುಖ್ಯ ಚಿಕಿತ್ಸೆ ಸಿಗದೇ ಹೋಗಬಹುದು. ಕೆಲವು ತೊಂದರೆಗಳು ನಿಜಕ್ಕೂ ಮುಜುಗರ ತರಿಸುವಂತಹದ್ದೇ ಆಗಿರುತ್ತವೆ. ಕೆಲವೊಮ್ಮೆ, ಯಾವುದೋ ಗುರುತು ಅಥವಾ ಸೂಚನೆ ರೋಗಿಗೆ ನಗಣ್ಯ ಎಂದೆನ್ನಿಸಬಹುದು. ವಾಸ್ತವವಾಗಿ, ಇದು ದೊಡ್ಡ ತೊಂದರೆಯೊಂದರ ಲಕ್ಶಣವೇ ಆಗಿರಬಹುದು. ಒಮ್ಮೆ ರೋಗಿಯೊಬ್ಬರ ಕೈಗಳ ಮೇಲೆ ಸೂಕ್ಷ್ಮವಾದ ಕೆಂಪು ಗೀರುಗಳಿದ್ದವು. ಆಕೆ ಆ ಲಕ್ಷಣವನ್ನು ಸಂಪೂರ್ಣವಾಗಿ ಅಲಕ್ಷಿಸಿದ್ದರು. ಆದರೆ ಕ್ವಚಿತ್ತಾಗಿ ಗಮನಿಸಿದ ವೈದ್ಯರು ಇದು ಎಷ್ಟು ದಿನದಿಂದ ಇದೆ ಎಂದು ಕೇಳಿದಾಗ ಬಹಳ ದಿನಗಳಿಂದಲೇ ಇದೆ ಎಂಬ ಉತ್ತರ ಸಿಕ್ಕಿತ್ತು. ಅನುಮಾನ ಗಟ್ಟಿಯಾಗುತ್ತಾ ಕೆಲವು ಪರೀಕ್ಷೆಗಳನ್ನು ಮಾಡಿಸಿದಾಗ ಇದು ಲಿಂಫೋಮಾ (lymphoma) ಎಂಬ ಒಂದು ಬಗೆಯ ಕ್ಯಾನ್ಸರ್ ನ ಲಕ್ಷಣ ಎಂದು ತಿಳಿದುಬಂದಿತ್ತು. ಹಾಗಾಗಿ, ನಿಮ್ಮ ದೇಹದಲ್ಲಿ ಕಂಡುಬರುವ ಯಾವುದೇ ಲಕ್ಷಣಗಳಿರಲಿ, ನಿಮಗೆ ಮುಖ್ಯವೆಂದು ಅನ್ನಿಸದಿದ್ದರೂ ಸರಿ, ವೈದ್ಯರಿಗೆ ಪೂರ್ಣವಾಗಿ ವಿವರಿಸಿ.
6. ಗರ್ಭಕಂಠದ ಕ್ಯಾನ್ಸರ್ ಪರೀಕ್ಷೆಗೆ ಒಪ್ಪದಿದ್ದಾಗ
ಒಂದು ವೇಳೆ ವೈದ್ಯರು ಆರೋಗ್ಯವಂತಳಾಗಿ ಕಾಣಬರುವ ಮಹಿಳೆಗೂ ಗರ್ಭಕಂಠದ ಕ್ಯಾನ್ಸರ್ ಪರೀಕ್ಷೆಗೆ ಒಳಪಡಲು ತಿಳಿಸಿದರೆ ಹೆಚ್ಚಿನವರು ಪರೀಕ್ಷೆ ಮಾಡಿಸುವುದಿರಲಿ, ವೈದ್ಯರ ಬಳಿ ಮತ್ತೊಮ್ಮೆ ಬರುವುದನ್ನೇ ನಿಲ್ಲಿಸಿಬಿಡುತ್ತಾರೆ. ಆದರೆ ತಜ್ಞರ ಪ್ರಕಾರ ಈ ಪರೀಕ್ಷೆಯಿಂದ ಮುಂದೆ ಎದುರಾಗಲಿರುವ ದೊಡ್ಡ ಗಂಡಾಂತರದಿಂದ ಪಾರಾಗಬಹುದು. "ನಮ್ಮಲ್ಲಿ ಬರುವ ಕ್ಯಾನ್ಸರ್ ರೋಗಿಗಳಲ್ಲಿ ಹೆಚ್ಚಿನವರು ಈ ರೋಗದ ಉಲ್ಬಣಾವಸ್ಥೆಯ ಲಕ್ಷಣಗಳು ಕಂಡುಬಂದ ಬಳಿಕವೇ ಬಂದಿರುವವರಾಗಿದ್ದಾರೆ. ಉದಾಹರಣೆಗೆ, ಕೆಟ್ಟ ವಾಸನೆಯಿಂದ ಕೂಡಿದ ಸ್ರಾವ. ಈ ಹಂತದಲ್ಲಿ ರೋಗಿಯನ್ನು ಪರೀಕ್ಷಿಸಿದಾಗ ಕ್ಯಾನ್ಸರ್ ಈಗಾಗಲೇ ನಾಲ್ಕನೆಯ ಹಂತವನ್ನು ತಲುಪಿರುತ್ತದೆ" ಎನ್ನುತ್ತಾರೆ ವೈದ್ಯರು. ಇಂದಿನ ಮಹಿಳೆಯರ ಆರೋಗ್ಯದ ಮಾಹಿತಿಗಳನ್ನು ಆಧರಿಸಿದ ಸಮೀಕ್ಷೆಯ ಪ್ರಕಾರ ಇಪ್ಪತ್ತರ ಹರೆಯದಲ್ಲಿರುವ ಮಹಿಳೆಯರು ಪ್ರತಿ ಮೂರು ವರ್ಷಗಳಿಗೊಮ್ಮೆ, ಮೂವತ್ತು ದಾಟಿದ ಮತ್ತು ಅರವತ್ತೈದು ವರ್ಷದವರೆಗಿನ ಮಹಿಳೆಯರು ಪ್ರತಿ ಮೂರು ವರ್ಷಗಳಿಗೊಮ್ಮೆ ಪಾಪ್ ಸ್ಮಿಯರ್ ಪರೀಕ್ಷೆಯನ್ನೂ ಐದು ವರ್ಷಗಳಿಗೊಮ್ಮೆ ಹೆಚ್ ಪಿ ವಿ ಪರೀಕ್ಷೆಯನ್ನೂ ಮಾಡಿಸಿಕೊಳ್ಳಬೇಕು. ಅರವತ್ತೈದು ದಾಟಿದ ಮಹಿಳೆಯರು ಹಿಂದಿನ ಪರೀಕ್ಷೆಗಳು ಸಾಮಾನ್ಯ ಫಲಿತಾಂಶ ನೀಡಿದ್ದರೆ ಇವನ್ನು ಮತ್ತೆ ಮುಂದುವರೆಸಬೇಕಾಗಿಲ್ಲ.
7. ಅಂತರ್ಜಾಲದಲ್ಲಿ ತಮ್ಮ ತೊಂದರೆಗೆ ಸಲಹೆ ಕೇಳಿದಾಗ
ತಮ್ಮ ಅನಾರೋಗ್ಯದ ಲಕ್ಷಣಗಳನ್ನು ಅಂತರ್ಜಾಲದಲ್ಲಿ ವಿವರಿಸಿ ಸಲಹೆ ಕೇಳುವ ಮೂಲಕ ಸೂಕ್ತ ಪರಿಹಾರ ಲಭಿಸುತ್ತದೆ ಎಂದು ಕೆಲವರು ಅಂದುಕೊಂಡಿದ್ದಾರೆ. ಆದರೆ ವಾಸ್ತವವಾಗಿ ಇದು ಪರಿಹಾರ ನೀಡುವ ಬದಲು ಈಗಿರುವ ದುಗುಡವನ್ನು ಇನ್ನಷ್ಟು ಉಲ್ಬಣಗೊಳಿಸಬಹುದು. ಏಕೆಂದರೆ ಕಾಯಿಲೆಯ ಒಂದು ಲಕ್ಷಣ ಸುಮಾರು ಒಂದು ಡಜನ್ನಿಗೂ ಹೆಚ್ಚಿನ ಕಾಯಿಲೆಗಳ ಲಕ್ಷಣವಾಗಿರುತ್ತದೆ. ಹಾಗಾಗಿ ಡಾ. ಗೂಗಲ್ ನಿಮಗೆ ಈ ತೊಂದರೆ ಬಂದಿರುವ ನಿಜವಾದ ಕಾಯಿಲೆಗೆ ಬದಲಾಗಿ ನಿಮಗೆ ಇಲ್ಲದೇ ಇರುವ ದೊಡ್ಡ ಕಾಯಿಲೆಯನ್ನು ಸೂಚಿಸಬಹುದು. ಹಾಗಾಗಿ, ಒಂದು ವೇಳೆ ನಿಮಗೆ ನಿಮ್ಮ ಆರೋಗ್ಯದ ಬಗ್ಗೆ ನಿಜವಾದ ಕಾಳಜಿ ಇದ್ದರೆ ವೈದ್ಯರನ್ನು ಮುಖತಃ ಭೇಟಿಯಾಗಿ. ಡಾ. ಗೂಗಲ್ ಬೇಡ
8. ಪರೀಕ್ಷೆ ನಡೆಸುವ ಸಮಯದಲ್ಲಿ ಮೊಬೈಲ್ ಬಳಸಿದಾಗ
ವೈದ್ಯರು ತಮ್ಮ ರೋಗಿಯನ್ನು ಪರೀಕ್ಷಿಸುತ್ತಿರುವಾಗ ರೋಗಿಯ ಆರೋಗ್ಯವೇ ಮಹತ್ವದ ವಿಷಯವಾಗಿರುತ್ತದೆ. ಈ ಸಂದರ್ಭದಲ್ಲಿ ನೀವು ಅತ್ಯಂತ ಅನಿವಾರ್ಯ ಸಂದರ್ಭಗಳ ಹೊರತಾಗಿ ನಿಮ್ಮ ಮೊಬೈಲ್ ಬಳಸಬಾರದು. ಒಂದು ವೇಳೆ ನೀವು ಬಳಸಿದರೆ ಇದು ನೇರವಾಗಿ ನಿಮ್ಮ ವೈದ್ಯರಿಗೆ ಅವಮಾನಿಸಿದಂತೆಯೇ ಸರಿ. ವೈದ್ಯರು ತಮ್ಮ ಕಾರ್ಯವನ್ನು ನಿರ್ವಹಿಸುತ್ತಿರುವಾಗ ಅವರ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುವುದು ಹಾಗೂ ಅವರ ಕಾರ್ಯದಲ್ಲಿ ಸಹಕರಿಸುವುದು ರೋಗಿಯ ಕರ್ತವ್ಯವಾಗಿದೆ. ಹಾಗಾಗಿ, ಸಾಧ್ಯವಾದಷ್ಟೂ ಮೊಬೈಲ್ ಅಥವಾ ಇತರ ಯಾವುದೇ ಉಪಕರಣದ ಬಳಕೆ ಬೇಡ.
9. ಪರಿಮಳ ಬರುವ ಮಹಿಳಾ ಸ್ವಚ್ಛತಾ ಪ್ರಸಾದನಗಳ ಬಳಕೆ
ಮಹಿಳೆಯರ ಸ್ವಚ್ಛತಾ ಪ್ರಸಾದನಗಳು ಇಂದು ಹಲವು ಬಣ್ಣ ಮತ್ತು ಪರಿಮಳಗಳಲ್ಲಿ ದೊರಕುತ್ತದೆ. ವಾಸ್ತವವಾಗಿ, ಈ ಪರಿಮಳಗಳು ಮಾರುಕಟ್ಟೆಯ ತಂತ್ರವೇ ಹೊರತು ನಿಮ್ಮ ಗುಪ್ತಾಂಗಗಳ ಸ್ವಚ್ಛತೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ! ಯಾವುದೇ ಪ್ರಸೂತಿ-ಸ್ತ್ರೀರೋಗ ತಜ್ಞರಂತೂ ತಮ್ಮ ರೋಗಿಗಳಿಗೆ ಈ ಪ್ರಸಾದನಗಳನ್ನು ಉಪಯೋಗಿಸಿ ಬನ್ನಿ ಎಂದು ಹೇಳುವುದಿಲ್ಲ. ವಾಸ್ತವದಲ್ಲಿ, ಈ ಭಾಗವನ್ನು ಮಹಿಳಾ ಸುಗಂಧಗಳಿಂದ ಮರೆಮಾಚುವುದನ್ನು ಪ್ರಸೂತಿ-ಸ್ತ್ರೀರೋಗ ತಜ್ಞರು ಸಲಹೆ ಮಾಡುವುದಿಲ್ಲ. ಬದಲಿಗೆ ಈ ಸುಗಂಧಗಳು ಗುಪ್ತಾಂಗದಲ್ಲಿ ನೈಸರ್ಗಿಕವಾಗಿರುವ ಬ್ಯಾಕ್ಟೀರಿಯಾಗಳನ್ನು ಕೊಂದು ಸೋಂಕು ಎದುರಾಗಲು ಕಾರಣವಾಗಬಹುದು. ಅದರಲ್ಲೂ ಇಂದು ಹೆಚ್ಚಿನ ಮನ್ನಣೆ ಪಡೆಯುತ್ತಿರುವ ಡೋಶೆ (douche)ಗಳನ್ನು ಬಳಸದೇ ಇರುವುದು ನೀವು ನಿಮ್ಮ ಗುಪ್ತಾಂಗಕ್ಕೆ ನೀಡಬಹುದಾದ ದೊಡ್ಡ ಉಡುಗೊರೆಯಾಗಿದೆ.