Just In
Don't Miss
- News ಲೋಕಸಭೆ ಚುನಾವಣೆ : ಶೇ 100ರಷ್ಟು ಮತದಾನವಾದರೆ ಸಿಗಲಿದೆ ಪ್ರಶಸ್ತಿ
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಘಾತದ ಗಾಯಕ್ಕೊಳಗಾಗಿರುವ ಮೆದುಳಿನ ಚೇತರಿಕೆಗೆ 10 ಪೌಷ್ಟಿಕ ಆಹಾರಗಳು
ನಮ್ಮ ದೇಹದ ಅತ್ಯಂತ ಮುಖ್ಯ ಅಂಗವೆಂದರೆ ಮೆದುಳು, ಒಂದು ವೇಳೆ ತಲೆಗೆ ಅಥವಾ ಮೆದುಳಿಗೆ ನೇರ ಸಂಪರ್ಕ ಕಲ್ಪಿಸುವ ನರಗಳಿರುವ ದೇಹದ ಇತರ ಭಾಗದಲ್ಲಿ ಬಿದ್ದ ಭಾರೀ ಏಟಿನ ಕಾರಣ ಮೆದುಳು ಆಘಾತದ ಗಾಯಕ್ಕೊಳಗಾಗುತ್ತದೆ. (traumatic brain injury). ದೇಹದ ಇತರ ಅಂಗಗಳಂತೆಯೇ ಮೆದುಳಿಗೂ ತನ್ನನ್ನು ತಾನು ಸರಿಪಡಿಸಿಕೊಂಡು ಮೆತ್ತೊಮ್ಮೆ ಆರೋಗ್ಯವಂತ ಅಂಗವಾಗುವ ಕ್ಷಮತೆಯಿದೆ. ಆದರೆ ಇದಕ್ಕೆ ಆರೋಗ್ಯಕರ ಆಹಾರಕ್ರಮವನ್ನು ಅನುಸರಿಸಿಕೊಂಡು ಹೋಗುವುದು ಅತಿ ಅಗತ್ಯ. ಇಂದಿನ ಲೇಖನದಲ್ಲಿ ಈ ಆಘಾತಕ್ಕೊಳಗಾಗಿರುವವರಿಗೆ ಯಾವ ಆಹಾರಗಳು ಸೂಕ್ತ ಎಂಬುದನ್ನು ವಿವರಿಸಲಿದ್ದೇವೆ.
ಸಾಮಾನ್ಯವಾಗಿ ಮೆದುಳನ್ನು ತಲೆಬುರುಡೆಯ ಗಟ್ಟಿ ಕವಚ ಹಾಗೂ ಮೆದುಳನ್ನು ಆವರಿಸಿರುವ ಸ್ನಿಗ್ಧ ದ್ರವ ಅತ್ಯಂತ ಮೃದುವಾಗಿರುವ ಮೆದುಳನ್ನು ಹೆಚ್ಚಿನ ಎಲ್ಲಾ ಆಘಾತದಿಂದ ತಡೆಯುತ್ತವೆ ಹಾಗೂ ಚಿಕ್ಕ ಪುಟ್ಟ ಆಘಾತಗಳಿಂದ ಮೆದುಳಿನ ಜೀವಕೋಶಗಳನ್ನು ತಾತ್ಕಾಲಿಕವಾಗಿ ಬಾಧಿಸುತ್ತವೆ. ಒಂದು ವೇಳೆ ಆಘಾತ ಭಾರಿಯಾಗಿದ್ದರೆ ಇದರ ಪರಿಣಾಮವಾಗಿ ಮೆದುಳಿನ ಅಂಗಾಂಶಗಳು ಹರಿಯಬಹುದು, ಜಜ್ಜಬಹುದು, ರಕ್ತಸ್ರಾವ ಹಾಗೂ ಮೆದುಳಿಗೆ ಇತರ ರೂಪದ ಗಂಭೀರ ಗಾಯಗಳನ್ನು ಉಂಟುಮಾಡಬಹುದು.
ಈ ಗಾಯಗಳ ಗಂಭೀರತೆಯನ್ನು ಅನುಸರಿಸಿ ಚಿಕಿತ್ಸೆ ಹಾಗೂ ಚೇತರಿಕೆಗೆ ದೀರ್ಘಕಾಲ ತೆಗೆದುಕೊಳ್ಳಬಹುದು ಅಥವಾ ಸಾವು ಸಹಾ ಎದುರಾಗಬಹುದು. ಆಘಾತಕ್ಕೊಳಗಾದ ಮೆದುಳಿನಿಂದಾಗಿ ಹಲವಾರು ದೈಹಿಕ ಹಾಗೂ ಮಾನಸಿಕ ಪರಿಣಾಮಗಳನ್ನು ಎದುರಿಸಬೇಕಾಗಿ ಬರಬಹುದು. ಅಲ್ಪಪ್ರಮಾಣದ ಆಘಾತದ ಪರಿಣಾಮವಾಗಿ ಸ್ಮೃತಿ ಕಳೆದುಕೊಳ್ಳುವುದು, ಸೂಕ್ತ ಪ್ರತಿಕ್ರಿಯೆಯನ್ನು ನೀಡದೇ ಹೋಗುವುದು, ಮಾತನಾಡಲು ಸಾಧ್ಯವಾಗದೇ ಹೋಗುವುದು, ಸುಸ್ತು, ನಿದ್ದೆ ಆವರಿಸಲು ಕಷ್ಟವಾಗುವುದು ಹಾಗೂ ಮಂಪರು ಕವಿದಿರುವುದು ಮೊದಲಾದವು ಎದುರಾಗುತ್ತವೆ. ಮಾನಸಿಕ ಕ್ಷಮತೆಯಲ್ಲಿ ಎದುರಾಗುವ ತೊಂದರೆಗಳೆಂದರೆ ಸ್ಮರಣಶಕ್ತಿಯ ಕುಂದುವಿಕೆ, ಚಿತ್ತವಿಕಾರತೆ, ಖಿನ್ನತೆ ಅಥವ ಅತೀವ ಉದ್ವೇಗ ಮೊದಲಾದವು ಎದುರಾಗುತ್ತವೆ.
ಕೆಲವು ಸಂದರ್ಭಗಳಲ್ಲಿ ಸತತ ಹಾಗೂ ಅತೀವವಾದ ತಲೆನೋವು, ಸತತವಾಗಿ ಮರುಕಳಿಸುವ ವಾಂತಿ, ಥಟ್ಟನೇ ದೇಹದ ಕೆಲವು ಅಂಗಗಳು ಸೆಳೆದುಕೊಳ್ಳುವುದು, ಹೊಂದಾಣಿಕೆ ಅಥವಾ ಸಹಕಾರ ಸಿಗದೇ ಹೋಗುವುದು ಇತ್ಯಾದಿಗಳು ಎದುರಾಗುತ್ತವೆ. ರೋಗಿಯ ಅರಿವಿನ ಮೇಲೆ ಬೀರುವ ಪರಿಣಾಮಗಳಿಂದಾಗಿ ತೀವ್ರವಾದ ಗೊಂದಲಕ್ಕೊಳಗಾಗುವುದು, ಮಾತಿನಲ್ಲಿ ತೊದಲುವುದು, ಅತೀವವಾಗಿ ಹೆದರಿ ನಡುಗುವುದು ಹಾಗೂ ಕೋಮಾ ಸ್ಥಿತಿಗೆ ತಲುಪುವುದು ಮೊದಲಾದವು ಎದುರಾಗುತ್ತವೆ. ಬನ್ನಿ, ಈ ಸ್ಥಿತಿಗೆ ಎದುರಾಗಿರುವ ರೋಗಿಗಳಿಗೆ ಸೂಕ್ತವಾದ ಆಹಾರಗಳು ಯಾವುವು ಎಂಬುದನ್ನು ನೋಡೋಣ...
ಒಮೆಗಾ 3 ಕೊಬ್ಬಿನ ಆಮ್ಲ ಹೆಚ್ಚಿರುವ ಆಹಾರಗಳು
ಬಂಗಡೆ, ಸಾಲ್ಮನ್ ಹಾಗೂ ಬೂತಾಯಿ ಮೊದಲಾದ ಮೀನುಗಳಲ್ಲಿ ಒಮೆಗಾ ೩ ಕೊಬ್ಬಿನ ಆಮ್ಲ ಹೇರಳವಾಗಿರುತ್ತದೆ. ಈ ಮೀನುಗಳನ್ನು ಸೇವಿಸುವ ಮೂಲಕ ಅರಿವಿನ ಶಕ್ತಿ, ಮುದ್ದೆಯಾಗಿರುವವ ಮೆದುಳಿನ ನರಗಳು ಮತ್ತು ಘಾಸಿಗೊಂಡಿರುವ ನ್ಯೂರಾನ್ ಗಳು ಶೀಘ್ರವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಕೊಬ್ಬಿನ ಆಮ್ಲಗಳಲ್ಲಿ Docosahexaenoic acid ಎಂಬ ಪೋಷಕಾಂಶ ಅತಿ ಪ್ರಮುಖವಾದ ಕೊಬ್ಬಿನ ಆಮ್ಲವಾಗಿದ್ದು ನ್ಯೂರಾನ್ ಗಳ ಚೇತರಿಸುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. (DHA) ಎಂಬ ಹೃಸ್ವರೂಪದ ಈ ಆಮ್ಲ ಮೆದುಳಿನ ಜೀವಕೋಶಗಳ ನಡುವೆ ಇರುವ ಸಿನಾಪ್ಟಿಕ್ ಎಂಬ ದ್ರವರೂಪದ ಪೊರೆಯ (synaptic membrane fluidity) ದ್ರವ್ಯತೆ ಹಾಗೂ ಕ್ಷಮತೆಯನ್ನು ಹೆಚ್ಚಿಸುವ ಮೂಲಕ ಶೀಘ್ರ ಚೇತರಿಕೆಗೆ ನೆರವಾಗುತ್ತದೆ.
ವಿಟಮಿನ್ ಇ ಹೆಚ್ಚಿರುವ ಆಹಾರಗಳು
ಒಣಫಲಗಳು, ಪಾಲಕ್, ಬಸಲೆ ಸೊಪ್ಪು ಹಾಗೂ ಆಲಿವ್ ಎಣ್ಣೆ ಮೊದಲಾದವುಗಳಲ್ಲಿ ವಿಟಮಿನ್ ಇ ಹೇರಳವಾಗಿರುತ್ತದೆ. ಇದೊಂದು ಉತ್ತಮ ಆಂಟಿ ಆಕ್ಸಿಡೆಂಟ್ ಆಗಿದ್ದು ದೇಹದಲ್ಲಿ ಎದುರಾಗಿರುವ ಫ್ರೀ ರ್ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡುತ್ತವೆ. ಈ ಫ್ರೀ ರ್ಯಾಡಿಕಲ್ ಎಂಬ ಕಣಗಳು ನ್ಯೂರಾನ್ ಗಳು ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ತಡೆಯೊಡ್ಡುತ್ತವೆ ಹಾಗೂ ಕೆಲವಾರು ಬಗೆಯ ಕ್ಯಾನ್ಸರ್ ಗೂ ಕಾರಣವಾಗುತ್ತವೆ. ಈ ಕಣಗಳಿಗೆ ತಡೆಯೊಡ್ಡುವ ಮೂಲಕ ವಿಟಮಿನ್ ಇ ನ್ಯೂರಾನ್ ಗಳ ಚೇತರಿಸುವಿಕೆಯನ್ನು ಚುರುಕುಗೊಳಿಸುತ್ತದೆ ಹಾಗೂ ಮೆದುಳಿನ ಕ್ಷಮತೆಯನ್ನು ಶೀಘ್ರವೇ ಮೊದಲಿನಂತಾಗಿಸಲು ನೆರವಾಗುತ್ತದೆ.
ಅರಿಶಿನ
ನಮ್ಮ ಭಾರತೀಯ ಅಡುಗೆಗಳಲ್ಲಿ ಹಳದಿ ಬಣ್ಣ ಹಾಗೂ ರುಚಿಗಾಗಿ ಅರಿಶಿನವನ್ನು ಪ್ರಮುಖ ಸಾಂಬಾರ ಪದಾರ್ಥದ ರೂಪದಲ್ಲಿ ಬಳಸಲಾಗುತ್ತದೆ. ಅರಿಶಿನದಲ್ಲಿ ಕುರ್ಕುಮಿನ್ ಎಂಬ ಪೋಷಕಾಂಶವಿದೆ ಹಾಗೂ ಇದು ಘಾಸಿಗೊಂಡಿರುವ ಮೆದುಳಿನ ಚೇತರಿಕೆಗೆ ನೆರವಾಗುತ್ತದೆ ಎಂದು ಕಂಡುಕೊಳ್ಳಲಾಗಿದೆ. ಅಲ್ಲದೇ ಆಲ್ಜೀಮರ್ಸ್ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೂ ಅರಿಶಿನ ಉತ್ತಮ ಆಹಾರವಾಗಿದ್ದು ಉತ್ಕರ್ಷಣಶೀಲ ಒತ್ತಡವನ್ನು ಕಡಿಮೆಗೊಳಿಸಿ ಶೀಘ್ರವೇ ಚೇತರಿಸಿಕೊಳ್ಳಲು ನೆರವಾಗುತ್ತದೆ. ಅಲ್ಲದೇ ಮೆದುಳಿನ ಮೇದಸ್ಸುಗಳು ಪೆರಾಕ್ಸೈಡೀಕರಣಕ್ಕೊಳಗಾದಂತೆ ತಡೆಯುವ ಹಾಗೂ ನೈಟ್ರಿಕ್ ಆಕ್ಸೈಡ್ ಆಧಾರಿತ ಕಣಗಳಿಂದ ಮೆದುಳನ್ನು ರಕ್ಷಿಸುವ ಮೂಲಕ ಅರಿಶಿನ ಮೆದುಳಿನ ಪಾಲಿನ ಜೀವರಕ್ಷಕನಾಗಿದೆ.
ಅಮೈನೋ ಆಮ್ಲ ಹೆಚ್ಚಿರುವ ಆಹಾರಗಳು
ನಮ್ಮ ದೇಹದ ಜೀವರಾಸಾಯನಿಕ ಕ್ರಿಯೆಯಲ್ಲಿ ಪ್ರೋಟೀನುಗಳ ಪಾತ್ರ ಮಹತ್ತರವಾಗಿದೆ ಹಾಗೂ ಅಮೈನೋ ಆಮ್ಲಗಳು ಈ ಪ್ರೋಟೀನುಗಳ ಮೂಲ ಅಂಶಗಳಾಗಿವೆ. ನಮ್ಮ ದೇಹದ ಸ್ನಾಯುಗಳು, ಜೀವಕೋಶಗಳು ಹಾಗೂ ಅಂಗಾಂಶಗಳ ಹೆಚ್ಚಿನ ಭಾಗ ಅಮೈನೋ ಆಮ್ಲಗಳಿಂದಾಗಿದೆ. ಅಂದರೆ ಇವು ದೇಹದ ಈ ಅಂಗಗಳು ಹಲವಾರು ಬಗೆಯ ಕಾರ್ಯಗಳನ್ನು ನಿರ್ವಹಿಸಲು ನೆರವಾಗುತ್ತವೆ. ನಮ್ಮ ಮೆದುಳಿನ ಜೀವಕೋಶಗಳಲ್ಲಿಯೂ ಅಮೈನೋ ಆಮ್ಲಗಳಿವೆ ಹಾಗೂ ಇವುಗಳು ಸಾಮಾನ್ಯ ಮಟ್ಟದಲ್ಲಿರುವ ಮೂಲಕ ಸಂಕೇತಗಳನ್ನು ಸಾಗಿಸುವ ನ್ಯೂರೋ ಟ್ರಾನ್ಸ್ ಮಿಟರ್ ಗಳೂ ಸೂಕ್ತವಾಗಿ ಕಾರ್ಯನಿರ್ವಹಿಸಲು ಅಗತ್ಯವಾಗಿವೆ. ಒಂದು ವೇಳೆ ಲ್ಯೂಸಿನ್, ಐಸೋಲ್ಯೂ಼ಸಿನ್ ಮತ್ತು ವ್ಯಾಲೀನ್ ಎಂಬ ಅಮೈನೋ ಆಮ್ಲಗಳನ್ನು ಹೆಚ್ಚುವರಿಯಾಗಿ ಪಡೆಯುವಂತಾದರೆ ಇದು ಮೆದುಳಿನ ಅರಿವಿನ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ. ಆದ್ದರಿಂದ ಪ್ರೋಟೀನುಗಳು ಹೆಚ್ಚಿರುವ ಆಹಾರಗಳಾದ ಕೋಳಿಮಾಂಸ, ಮೀನು, ಬೀನ್ಸ್ ಮೊದಲಾದವುಗಳ ಸೇವನೆಯಿಂದ ಹೆಚ್ಚಿನ ಪ್ರಮಾಣದ ಅಮೈನೋ ಆಮ್ಲಗಳನ್ನು ಪಡೆಯಲು ಸಾಧ್ಯವಾಗುತ್ತದೆ ಹಾಗೂ ಮೆದುಳು ಶೀಘ್ರವೇ ಚೇತರಿಸಿಕೊಳ್ಳುತ್ತದೆ.
ಖೋಲೀನ್ ಸಮೃದ್ಧ ಆಹಾರಗಳು
ಖೋಲೀನ್ ಎಂಬುದು ನೀರಿನಲ್ಲಿ ಕರಗುವ ಪೋಶಕಾಂಶವಾಗಿದ್ದು ನರವ್ಯವಸ್ಥೆಯ ಚಟುವಟಿಕೆಯನ್ನು ಉತ್ತಮಗೊಳಿಸುವ ಸಾಮರ್ಥ್ಯ ಪಡೆದಿದೆ. ಖೋಲೀನ್ ಹೆಚ್ಚಿರುವ ಆಹಾರ ಸೇವನೆಯಿಂದ ಶೀಘ್ರವೇ ಮೆದುಳಿನ ಘಾಸಿಗೊಂಡ ಜೀವಕೋಶಗಳು ಸರಿಯಾಗತೊಡಗುತ್ತವೆ ಹಾಗೂ ಬೆಳವಣಿಗೆಯನ್ನೂ ಪಡೆಯುತ್ತವೆ. ತನ್ಮೂಲಕ ಕ್ಯಾನ್ಸರ್ ಎದುರಾಗುವ ಸಾಧ್ಯತೆಯನ್ನು ಕಡಿಮೆಯಾಗಿಸುತ್ತದೆ ಹಾಗೂ ಮೆದುಳಿನ ಜೀವಕೋಶಗಳು ಪರಸ್ಪರ ಹೆಣೆದುಕೊಂಡಿರಲು ನೆರವಾಗುತ್ತದೆ. ಖೋಲೀನ್ ಹೆಚ್ಚಿರುವ ಆಹಾರಗಳೆಂದರೆ ಮೊಟ್ಟೆಗಳು, ವಿಶೇಷವಾಗಿ ಮೊಟ್ಟೆಯ ಹಳದಿಭಾಗ, ಬೀಫ್ ಯಕೃತ್, ಡೈರಿ ಉತ್ಪನ್ನಗಳು, ನೆನೆಸಿಟ್ಟ ಒಣಫಲಗಳು, ದ್ವಿದಳ ಧಾನ್ಯಗಳು ಹಾಗೂ ಕೋಸಿನ ಜಾತಿಯ ತರಕಾರಿಗಳು.
ವಿಟಮಿನ್ B12 ಹೆಚ್ಚಿರುವ ಆಹಾರಗಳು
ನಮ್ಮ ದೇಹದ ನರಗಳ ಹಾಗೂ ರಕ್ತದಲ್ಲಿರುವ ಜೀವಕೋಶಗಳನ್ನು ಆರೋಗ್ಯಕರವಾಗಿರಿಸಲು ವಿಟಮಿನ್ B12 ಅಗತ್ಯವಾದ ಪೋಷಕಾಂಶವಾಗಿದೆ. ಈ ಪೋಷಕಾಂಶ ನರಗಳ ಜೀವಕೋಶಗಳ ಹೊರಕವಚ ದೃಢವಾಗಿಸುವ ಮೂಲಕ ಘಾಸಿಗೊಳಗಾಗುವುದನ್ನು ತಡೆಯುತ್ತದೆ. ವಿಟಮಿನ್ B12 ಹೆಚ್ಚಿರುವ ಆಹಾರಗಳನ್ನು ಸೇವಿಸುವ ಮೂಲಕ ಘಾಸಿಗೊಳಗಾಗಿದ್ದ ನರಗಳ ಜೀವಕೋಶಗಳು ಶೀಘ್ರವೇ ಚೇತರಿಸಿಕೊಂಡು ಮೆದುಳಿನ ಕ್ಷಮತೆಯನ್ನು ಮೊದಲಿನ ಸ್ಥಿತಿಗೆ ತರಲು ನೆರವಾಗುತ್ತದೆ. ಮಾಂಸ, ಹಾಲು ಮತ್ತು ಮೊಟ್ಟೆಗಳಲ್ಲಿ ವಿಟಮಿನ್ B12 ಹೆಚ್ಚಿನ ಪ್ರಮಾಣದಲ್ಲಿರುತ್ತದೆ.
ಮ್ಯಾಂಗನೀಸ್ ಹೆಚ್ಚಿರುವ ಆಹಾರಗಳು
ಇಡಿಯ ಧಾನ್ಯಗಳು, ಒಣಫಲಗಳು, ಹಣ್ಣುಗಳು ಮತ್ತು ಹಸಿ ತರಕಾರಿಗಳಲ್ಲಿ ಮ್ಯಾಂಗನೀಸ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಘಾಸಿಗೊಂಡ ಮೆದುಳಿನ ಚೇತರಿಕೆಗೆ ನೆರವಾಗುತ್ತದೆ. ಅಲ್ಲದೇ ಮೆದುಳಿನ ಅರಿವಿನ ಶಕ್ತಿಯನ್ನು ಹೆಚ್ಚಿಸಲೂ ನೆರವಾಗುತ್ತದೆ. ಕಾರ್ಬೋಹೈಡ್ರೇಟುಗಳನ್ನು ಜೀವರಾಸಾಯನಿಕ ಕ್ರಿಯೆಗೆ ಒಳಪಡಿಸಲು ನೆರವಾಗುವ ಮೂಲಕವೂ ಮೆದುಳಿನ ಕಾರ್ಯನಿರ್ವಹಣೆ ಉತ್ತಮಗೊಳಿಸುತ್ತದೆ. ಇಡಿಯ ಧಾನ್ಯ, ದಪ್ಪನೆಯ ಸೊಪ್ಪುಗಳು, ಟೀ ಮೊದಲಾವುಗಳಲ್ಲಿಯೂ ಮ್ಯಾಂಗನೀಸ್ ಹೆಚ್ಚಿನ ಪ್ರಮಾಣದಲ್ಲಿದೆ.
ಫೋಲಿಕ್ ಆಮ್ಲ ಹೆಚ್ಚಿರುವ ಆಹಾರಗಳು
ರಕ್ತದ ಕಣಗಳು ಯಥೇಚ್ಛವಾಗಿರಲು ಫೋಲಿಕ್ ಆಮ್ಲ ಅಗತ್ಯವಾಗಿ ಬೇಕು. ಇದು ಹೃದಯದ ಕಾಯಿಲೆ ಹಾಗೂ ಸ್ತಂಭನದಿಂದ ರಕ್ಷಿಸುತ್ತದೆ. ಈ ಆಮ್ಲ ಮೆದುಳಿಗೆ ತಲುಪುವ ಸೆರೋಟೋನಿನ್ ಎಂಬ ರಸದೂತದ ಪ್ರಮಾಣವನ್ನೂ ತಗ್ಗಿಸಲು ನೆರವಾಗುತ್ತದೆ. ಒಂದು ಸಂಶೋಧನೆಯಲ್ಲಿ ಕಂಡುಕೊಂಡಂತೆ ಆಲ್ಜೀಮರ್ಸ್ ಕಾಯಿಲೆಯಿಂದ ಮೆದುಳನ್ನು ರಕ್ಷಿಸುವಲ್ಲಿ ಈ ಆಮ್ಲ ಪ್ರಮುಖ ಪಾತ್ರ ವಹಿಸುತ್ತದೆ ಹಾಗೂ ತನ್ಮೂಲಕ ಇತರ ಮೆದುಳಿನ ತೊಂದರೆಗಳಿಂದಲೂ ರಕ್ಷಿಸುತ್ತದೆ. ಅಲ್ಲದೇ ರಕ್ತದಲ್ಲಿ ಹೋಮೋಸಿಸ್ಟೈನ್ ಎಂಬ ಅಂಶವನ್ನು ಕಡಿಮೆಗೊಳಿಸುವ ಮೂಲಕ ರಕ್ತದ ಗುಣಮಟ್ಟವನ್ನೂ ಉತ್ತಮಗೊಳಿಸುತ್ತದೆ. ದಪ್ಪನೆಯ ಎಲೆಗಳು, ಲಿಂಬೆಯ ಜಾತಿಯ ಹಣ್ಣುಗಳು, ಬೀನ್ಸ್, ದ್ವಿದಳ ಧಾನ್ಯಗಳು ಮೊದಲಾದವುಗಳಲ್ಲಿ ಫೋಲಿಕ್ ಆಮ್ಲ ಹೇರಳವಾಗಿರುತ್ತದೆ.
ಫೋಲಿಕ್ ಆಮ್ಲ ಹೆಚ್ಚಿರುವ ಆಹಾರಗಳು
ಸತುವಿನ ಅಂಶವನ್ನೊಳಗೊಂಡ ಆಹಾರಗಳು ಆಕ್ಸೋನಾಲ್ (ಅಥವಾ ನರತಂತುಗಳ ಮೂಲಕ) ಹಾಗೂ ಸಿನಾಪ್ಟಿಕ್ (ಎರಡು ನ್ಯೂರಾನ್ ಗಳ ನಡುವೆ) ಸಂದೇಶಗಳನ್ನು ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಲ್ಲದೇ ಸತು ನ್ಯೂಕ್ಲಿಕ್ ಆಮ್ಲದ ಜೀವರಾಸಾಯನಿಕ ಕ್ರಿಯೆ, ಮೆದುಳಿನಲ್ಲಿರುವ ಅತಿಸೂಕ್ಷ್ಮ ಪ್ರೋಟೀನ್ ಗಳಾದ ಟ್ಯೂಬ್ಯುಲಿನ್ ಎಂಬ ಕಣಗಳ ವೃದ್ಧಿ ಹಾಗೂ ಘಾಸಿಗೊಂಡಿದ್ದ ಜೀವಕೋಶಗಳಲ್ಲ್ ಫಾಸ್ಪೇಟ್ ಗಳನ್ನು ತುಂಬಿಸುವಲ್ಲಿ (phosphorylation) ಅತಿ ಅಗತ್ಯವಾದ ಪೋಷಕಾಂಶವಾಗಿದೆ. ಸತುವಿರುವ ಅಹಾರವನ್ನು ಸೇವಿಸದೇ ಹೋದರೆ ಇದು ಮೆದುಳಿನ ಚೇತರಿಕೆಯ ಸಮಯದಲ್ಲಿ ಡಿ ಎನ್ ಎ ಗಳಲ್ಲಿ ಏರುಪೇರು, ಆರ್ ಎನ್ ಎ ಹಾಗೂ ಪ್ರೋಟೀನುಗಳ ಘಟಕಗಳನ್ನು ನಿರ್ಮಿಸುವಲ್ಲಿ ವೈಫಲ್ಯವನ್ನು ಎದುರಿಸಬೇಕಾಗುತ್ತದೆ. ಅಲ್ಲದೇ ನರತಂತುಗಳ ಮೂಲಕ ಸಂಕೇತಗಳು ರವಾನಿಸಲ್ಪಡುವ ಕ್ಷಮತೆ ಹಾಗೂ ಅರಿವಿನ ಶಕ್ತಿಯೂ ಉತ್ತಮಗೊಳ್ಳುತ್ತದೆ. ಸತು ಹೆಚ್ಚಿರುವ ಅಹಾರಗಳೆಂದರೆ ಸಿಂಪಿ, ಹಸುವಿನ ಮಾಂಸ, ಕುಂಬಳ ಬೀಜಗಳು, ಕುರಿ ಮಾಂಸ ಇತ್ಯಾದಿ.
ಸೆಲೆನಿಯಂ ಹೆಚ್ಚಿರುವ ಆಹಾರಗಳು
ನಮ್ಮ ದೇಹದ ಜೀವಕೋಶಗಳ ಹೊರಪದರವನ್ನು ಘಾಸಿಯಿಂದ ರಕ್ಷಿಸಲು ಹಾಗೂ ಕೆಲವು ರಸದೂತಗಳು ಜೊತೆಗೂಡಿ ಕಾರ್ಯನಿರ್ವಹಿಸಲು ಸೆಲೆನಿಯಂ ನೆರವಾಗುತ್ತದೆ. ಸೆಲೆನಿಯಂ ಇರುವ ಅಹಾರದ ಸೇವನೆಯ ಬಳಿಕ ನಮ್ಮ ದೇಹದ ನ್ಯೂರಾನ್ ಗಳು ಇನ್ನೊಂದು ನ್ಯೂರೋ ಟ್ರಾನ್ಸ್ ಮಿಟರ್ ಆದ ಡೋಪಮೈನ್ ಎಂಬ ಪೋಷಕಾಂಶವನ್ನು ಬಳಸುವ ಸಮಯದಲ್ಲಿ ಉತ್ಕರ್ಷಣಶೀಲ ಘಾಸಿಗೆ ಒಳಗಾಗುವ ಸಾಧ್ಯತೆ ಅತಿ ಕಡಿಮೆ ಇರುತ್ತದೆ. ಆದ್ದರಿಂದ ಮೆದುಳಿನ ಘಾಸಿಗೊಳಗಾಗಿರುವ ವ್ಯಕ್ತಿಗಳು ಸೆಲೆನಿಯಂ ಹೆಚ್ಚಿರುವ ಅಹಾರಗಳಾದ ಸಾಗರ ಉತ್ಪನ್ನಗಳು, ಯಕೃತ್ ಹಾಗೂ ಮೊಟ್ಟೆಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಬೇಕು. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.