For Quick Alerts
ALLOW NOTIFICATIONS  
For Daily Alerts

ದುರ್ಗಾ ಪೂಜೆಯ ಗೌಜಿ ಗದ್ದಲದ ಆ ಪೆಂಡಾಲು, ಕೇಳಿದರೆ ಆರೋಗ್ಯಕ್ಕೆ ಒಳ್ಳೆಯದು!

By Arshad
|

ಭಾರತದ ಸಂಸ್ಕೃತಿಯ ಅವಿಭಾಜ್ಯ ಅಂಗಗಳೆಂದರೆ ಹಬ್ಬಗಳು. ಹೊಸವರ್ಷದಿಂದ ತೊಡಗಿ, ಹೋಳಿ, ದಸರಾ, ದೀಪಾವಳಿ, ಕ್ರಿಸ್ಮಸ್, ಈದ್ ಮೊದಲಾದ ಹಬ್ಬಗಳಿಂದ ವರ್ಷದ ಹನ್ನೆರಡೂ ತಿಂಗಳು ಒಂದಲ್ಲ ಒಂದು ಹಬ್ಬವಿದ್ದೇ ಇರುತ್ತದೆ. ಈ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ವಿಶೇಷ ಪೆಂಡಾಲುಗಳನ್ನು ಅಥವಾ ವೇದಿಕೆಗಳನ್ನು ರಚಿಸಿ ಎಲ್ಲರೂ ಜೊತೆಯಾಗಿ ಸಂಭ್ರಮಿಸುವ ಮೂಲಕ ಭ್ರಾತೃತ್ವವನ್ನು ಮೆರೆಯುವುದು ಮಾತ್ರವಲ್ಲ, ವಿಶೇಷ ಅಡುಗೆ, ಸಿಹಿಗಳನ್ನು ಹಂಚಿಕೊಂಡು ಒಬ್ಬರಿಗೊಬ್ಬರು ಶುಭಾಶಯ ಕೋರುತ್ತಾರೆ.

ಈ ಹಬ್ಬಗಳಲ್ಲಿ ಪ್ರಮುಖವಾದ ದುರ್ಗಾ ಪೂಜೆ, ದೀಪಾವಳಿ, ಗಣೇಶ ಚತುರ್ಥಿ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸಲಾಗುತ್ತಿದ್ದು ಸಾರ್ವಜನಿಕರ ಅನುಕೂಲಕ್ಕಾಗಿ ಪೆಂಡಾಲುಗಳನ್ನು ಕಟ್ಟಲಾಗುತ್ತದೆ. ಈ ಪೆಂಡಾಲುಗಳನ್ನು ಪ್ರತಿವರ್ಷ ಭಿನ್ನ ವಿನ್ಯಾಸಗಳಲ್ಲಿ ರಚಿಸಲಾಗುತ್ತದೆ ಹಾಗೂ ದೇವರ ವಿಗ್ರಹಗಳನ್ನೂ ಅತ್ಯಂತ ಕಲಾತ್ಮಕವಾಗಿ ನಿರ್ಮಿಸಲಾಗುತ್ತದೆ.

Pandals During Durga Puja

ಪೂಜೆಯ ಸಮಿತಿ ಸಾರ್ವಜನಿಕರ ಸುರಕ್ಷತೆಗೆ ಅತಿ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಾರೆ. ಪರಿಣಾಮವಾಗಿ ಹೆಚ್ಚು ಜನರು ಆಗಮಿಸಿದರೂ ಇದು ಕುಸಿಯದಂತೆ ಬಲವಾಗಿ ನಿರ್ಮಿಸಲಾಗುತ್ತದೆ. ಹೆಚ್ಚು ಜನರನ್ನು ಆಕರ್ಷಿಸಲು ಬಹುಮಾನಗಳು ಹಾಗೂ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ.

ಸುತ್ತಮುತ್ತಲ ಉಳ್ಳವರು ಈ ಬಹುಮಾನಗಳನ್ನು ಪ್ರಾಯೋಜಿಸಿ ಹಬ್ಬದ ಸಂಭ್ರಮ ಹೆಚ್ಚಿಸಲು ನೆರವಾಗುತ್ತಾರೆ. ಈ ಬಹುಮಾನಗಳನ್ನು ಗೆಲ್ಲಲು ಸ್ಪರ್ಧಿಗಳೂ ಉತ್ಸಾಹದಿಂದ ಭಾಗವಹಿಸಿ ಪುನೀತರಾಗುತ್ತಾರೆ. ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆಯನ್ನು ಅತ್ಯಂತ ವೈಭವಯುತವಾಗಿ ಆಚರಿಸಲಾಗುತ್ತದೆ. ಒಟ್ಟು ಐದು ದಿನಗಳ ಆಚರಣೆಗಾಗಿ ಸಿದ್ಧತೆಗಳು ಕೆಲವಾರು ತಿಂಗಳುಗಳ ಹಿಂದಿನಿಂದಲೇ ಪ್ರಾರಂಭವಾಗುತ್ತದೆ. ಈ ಅವಧಿಯಲ್ಲಿ ಜನರೂ ಭಾರೀ ಪ್ರಮಾಣದಲ್ಲಿ ವಸ್ತುಗಳನ್ನು ಖರೀದಿಸುತ್ತಾರೆ.

ನವರಾತ್ರಿ ವಿಶೇಷ: ಮಧುಮೇಹಿಗಳಿಗೆ ಉಪವಾಸದ 12 ಸುರಕ್ಷಿತ ಮಾರ್ಗಗಳು

ಪೂಜಾ ಸಮಿತಿ ಪ್ರತಿ ವರ್ಷ ಹೊಸ ಹೊಸ ವಿನ್ಯಾಸದ, ಬಣ್ಣಬಣ್ಣದ ಆಕರ್ಶಕ ದೀಪಗಳಿರುವ ತೂಗುದೀಪ, ಕೋಟೆ ಆಥವಾ ಗುಡ್ಡಬೆಟ್ಟದ ರೂಪವನ್ನು ಹೋಲುವಂತಹ ಪೆಂಡಾಲುಗಳನ್ನು ಕಲಾತ್ಮಕವಾಗಿ ನಿರ್ಮಿಸುವತ್ತ ಹೆಚ್ಚು ವ್ಯಸ್ತರಾಗಿರುತ್ತಾರೆ. ಈ ಪೆಂಡಾಲುಗಳನ್ನು ನೋಡಿಯೇ ಕಣ್ತುಂಬಿಕೊಳ್ಳಲು ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಮಹಾರಾಷ್ಟ್ರದಲ್ಲಿ ಗಣಪತಿ ಹೇಗೋ ಹಾಗೇ ಇಲ್ಲಿ ದುರ್ಗಾ ಪೂಜೆಯನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ.

ಹಬ್ಬದ ದಿನ ಬೆಳಗ್ಗಿನಿಂದಲೇ ಪೂಜೆ, ವೇದಪಾರಾಯಣ, ಆರತಿ ಬಳಿಕ ಪ್ರಸಾದ ಅರ್ಪಣೆ, ವಿತರಣೆ ಮೊದಲಾದ ಧಾರ್ಮಿಕ ಕಾರ್ಯಗಳು ನಡೆಯುತ್ತವೆ. ಸಾಮಾನ್ಯವಾಗಿ ನಾವೆಲ್ಲಾ ಈ ಪೆಂಡಾಲುಗಳನ್ನು ದೂರದಿಂದಲೇ ಕಂಡು ಮೆಚ್ಚುಗೆ ವ್ಯಕ್ತಪಡಿಸುತ್ತೇವೆ. ಕೆಲಸ ಬಾಹುಳ್ಯದ ನೆಪ ಹೇಳಿ ಪೆಂಡಾಲುಗಳ ಒಳಗೆ ಹೋಗುವುದೇ ಇಲ್ಲ. ಹಾಗಿದ್ದಾಗ ಅಲ್ಲಿನ ಚಟುವಟಿಕೆಗಳಲ್ಲಿ ಭಾಗಿಯಾಗುವುದಂತೂ ದೂರದ ಮಾತು. ಬದಲಿಗೆ ಗೌಜಿಯಿಂದ ದೂರ ಮನೆಯಲ್ಲಿಯೇ ಅಥವಾ ಹೋಟೆಲಿನಲ್ಲಿ ಊಟ ಮಾಡುವ ಮೂಲಕ ಕಾಲ ಕಳೆಯುವವರೇ ಹೆಚ್ಚು. ಅಲ್ಲದೇ ಇತ್ತೀಚಿನ ವರ್ಷಗಳಲ್ಲಿ ಜನಜಂಗುಳಿ ಹೆಚ್ಚಾದಾಗ ಪೋಲಿಗಳೂ ತಮ್ಮ ವರಸೆ ತೋರುವ ಕಾರಣ ಕೆಲವಾರು ಅಹಿತಕರ ಘಟನೆಗಳೂ ನಡೆದಿವೆ.

ಜನಜಂಗುಳಿಯಲ್ಲಿ ಸಿಲುಕಿಕೊಂಡ ಕೆಲವರಿಗೆ ಉಸಿರು ಕಟ್ಟಿಕೊಂಡ ಅನುಭವವಾದರೆ ಕೆಲವರು ಕಾಲ್ತುಳಿತಕ್ಕೂ ಒಳಗಾಗುತ್ತಾರೆ. ಕೆಲವರು ಕಳೆದು ಹೋಗುತ್ತಾರೆ. ಇವನ್ನೆಲ್ಲ ಗಮನಿಸಿದ ಪೋಲೀಸ್ ಇಲಾಖೆ ಹಾಗೂ ಪೂಜಾ ಸಮಿತಿ ಅಹಿತಕರ ಘಟನೆ ನಡೆಯದಂತೆ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವ ಕಾರಣ ಈಗ ಕೊಂಚ ಸುರಕ್ಷತೆ ಕಂಡುಬರುತ್ತಿದೆ.

ಅಗ್ನಿ ಆಕಸ್ಮಿಕದ ಸಂದರ್ಭವನ್ನು ಎದುರಿಸಲು ಅಗ್ನಿಶಾಮಕ ಉಪಕರಣಗಳನ್ನೂ ಅಲ್ಲಲ್ಲಿ ಇರಿಸಲಾಗಿದೆ. ಗೌಜಿ ಗದ್ದಲ ನಮಗೆ ಬೇಡ ಎಂದು ಈ ಪೆಂಡಾಲುಗಳಿಂದ ದೂರವಿದ್ದವರಿಗೆ ಈ ಮೂಲಕ ಪಡೆಯಬಹುದಾದ ಕೆಲವು ಆರೋಗ್ಯಕರ ಪ್ರಯೋಜನಗಳ ಬಗ್ಗೆ ಅರಿವಿಲ್ಲದೇ ಇರಬಹುದು. ವಾಸ್ತವವಾಗಿ ಕೆಲವು ಪ್ರಯೋಜನಗಳಿವೆ. ಬನ್ನಿ, ಇವು ಯಾವುದೆಂದು ನೋಡೋಣ:

ಮಾನಸಿಕ ಆರೋಗ್ಯದಲ್ಲಿ ವೃದ್ಧಿ
ಆರೋಗ್ಯ ಎಂದಾಕ್ಷಣ ದೈಹಿಕವಾಗಿಯೇ ಆಗಬೇಕೆಂದೇನಿಲ್ಲ. ಮಾನಸಿಕವಾದ ಆರೋಗ್ಯ ಪಡೆದರೂ ಅದು ಆರೋಗ್ಯವೇ. ಸಾಮಾನ್ಯವಾಗಿ ನಾವೆಲ್ಲಾ ಒಂದು ವೇಳಾಪಟ್ಟಿಯಂತೆ ನಡೆಯುವ ಯಂತ್ರಗಳಾಗಿದ್ದೇವೆ. ವರ್ಷದುದ್ದಕ್ಕೂ ಈ ಯಾಂತ್ರಿಕ ಜೀವನ ನಡೆಸಿದ ನಮಗೆ ಈ ಹಬ್ಬಗಳು ಕೊಂಚ ಬದಲಾವಣೆಯನ್ನು ತರುತ್ತವೆ. ಈ ಸಂದರ್ಭದಲ್ಲಿ ತಮ್ಮ ಆತ್ಮೀಯರನ್ನು ಭೇಟಿಯಾಗುವ ಸಂದರ್ಭವೂ ಅನೂಚಾನವಾಗಿ ಒದಗಿಬರುತ್ತದೆ. ಇದರಿಂದ ಮನೋಭಾವ ಉತ್ತಮಗೊಳ್ಳುತ್ತದೆ.

ಗೆಳೆಯರೊಂದಿಗೆ ಅಥವಾ ಮನೆಮಂದಿಯೊಂದಿಗೆ ಊರನ್ನೆಲ್ಲಾ ಸುತ್ತಾಡಿ ಮನಕ್ಕೆ ಇಷ್ಟವಾದುದನ್ನೆಲ್ಲ ಮೆಲ್ಲುತ್ತಾ ಆಕರ್ಷಕವೆಂದು ಕಂಡುಬಂದಿದ್ದನ್ನು ಕೊಳ್ಳುತ್ತಾ ಸುತ್ತಾಡುವುದೇ ಒಂದು ರೀತಿಯ ಸಂತೋಷ ನೀಡುತ್ತದೆ. ಪೆಂಡಾಲಿಗೆ ಭೇಟಿ ನೀಡಿ ಪೂಜಾಕಾರ್ಯದಲ್ಲಿ ಪಾಲ್ಗೊಂಡು ದೇವರ ಆಶೀರ್ವಾದ ಪಡೆಯುವ ಮೂಲಕ ಮಾನಸಿಕವಾದ ನೆಮ್ಮದಿ ಹಾಗೂ ರಕ್ಷಣಾಭಾವನೆ ಪಡೆಯಬಹುದು. ಜೊತೆಯಲ್ಲಿರುವ ಎಲ್ಲರೂ ಹಬ್ಬವನ್ನು ಆಚರಿಸುವ ಹುಮ್ಮಸ್ಸಿನಲ್ಲಿಯೇ ಇರುವ ಕಾರಣ ಎಲ್ಲರ ಚಿಕ್ಕ ಪುಟ್ಟ ತಪ್ಪುಗಳೆಲ್ಲಾ ಮುಚ್ಚಿಹೋಗಿ ಎಲ್ಲರ ಉತ್ತಮ ಗುಣಗಳೇ ವಿಜೃಂಬಿಸುತ್ತವೆ. ಇದು ಮಾನಸಿಕ ಆರೋಗ್ಯ ವೃದ್ಧಿಸಲು ಪೂರಕವಾಗಿದೆ.

ಒತ್ತಡ ನಿವಾರಕ
ಹಾಸ್ಯದಿಂದ ಆಯಸ್ಸು ಹೆಚ್ಚುತ್ತದೆ ಎಂದು ಸುಭಾಷಿತವೊಂದು ಹೇಳುತ್ತದೆ. ಹಬ್ಬದ ವಾತಾವರಣವೆಂದರೆ ಇಲ್ಲಿ ಸಾಕಷ್ಟು ಹಾಸ್ಯವಿರಲೇಬೇಕು. ಕೆಲಸದ ವಾತಾವರಣವೇನೇ ಇದ್ದರೂ ಮನೆಗೆ ಬಂದ ತಕ್ಷಣ ಹಬ್ಬದ ಹುಮ್ಮಸ್ಸಿನಲ್ಲಿ ಎಲ್ಲರೂ ತೊಡಗುತ್ತಾರೆ. ನಗರದ ಹಲವೆಡೆ ನೂರಾರು ಪೆಂಡಾಲುಗಳನ್ನು ಸ್ಥಾಪಿಸಿದ್ದು ಹೆಚ್ಚು ಹೆಚ್ಚು ಪೆಂಡಾಲುಗಳಿಗೆ ಭೇಟಿ ನೀಡುವ ಹುಮ್ಮಸ್ಸಿನಲ್ಲಿ ಎಷ್ಟು ಪೆಂಡಾಲುಗಳಿಗೆ ಭೇಟಿ ನೀಡಿದರೂ ಉಡುಗದ ಉತ್ಸಾಹ ಆಯಾಸವನ್ನು ಮರೆಸಿಬಿಡುತ್ತದೆ. ಆದ್ದರಿಂದ ಹಬ್ಬಗಳೆಂದರೆ ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ದೈಹಿಕವಾಗಿಯೂ ಮಾನಸಿಕವಾಗಿಯೂ ಚುರುಕಾಗಿಡುವ ಸಂದರ್ಭವಾಗಿದೆ.

ಪೆಂಡಾಲುಗಳಲ್ಲಿ ಮೊಳಗುವ ಘಂಟೆಯ ದನಿ, ಶಂಖದ ನಾದ ಮನವನ್ನು ಮೊದಗೊಳಿಸುತ್ತದೆ. ಈ ಸದ್ದು ಬ್ಯಾಕ್ಟೀರಿಯಾ ಹಾಗೂ ವೈರಸ್ಸುಗಳನ್ನು ಓಡಿಸುತ್ತದೆ ಎಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಆದ್ದರಿಂದ ಈ ವರ್ಷದ ಹಬ್ಬದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಸಾಧ್ಯವಾದಷ್ಟು ಹೆಚ್ಚು ಸಂತೋಷಪಡಲು ಇದೊಂದು ಉತ್ತಮ ಸಂದರ್ಭವಾಗಿದೆ. ಈ ಮೂಲಕ ಮಾನಸಿಕ ಒತ್ತಡ ನಿವಾರಿಸಲು ಹಾಗೂ ಚಿಂತೆಗಳನ್ನು ಮರೆಯಲು ಸಾಧ್ಯವಾಗುತ್ತದೆ.

English summary

Health Benefits Of Visiting Pandals During Durga Puja

Talking about pandals, Durga Puja, Diwali and Ganesh Chaturthi are few festivals that are celebrated with such décor. Pandals are designed following various themes and artistic idols are crafted. Puja committee members take special care towards the safety of the people. The pandals win several prizes and acclamations from renowned houses; these people are always busy and in a rush to be the best and win lots of awards.
X
Desktop Bottom Promotion