Just In
Don't Miss
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Movies ಬಿಸಿಲು, ಮಳೆ, ಧೂಳು ಬರಲಿ.. ಯಶ್ ಇದ್ರೆ ಸಾಕು.. ಏನಂತೀರಾ?
- News ಪೂಜೆ ಮಾಡಿದ ಈ ಲಿಂಬೆಹಣ್ಣು ಲಕ್ಷಕ್ಕೆ ಹರಾಜ್! ಶಾಕ್ ಆಡ್ಬೇಡಿ ಇದು ನಿಜ...
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೀಪಾವಳಿಯ ಸಮಯದಲ್ಲಿ 'ಅಸ್ತಮಾದ' ಅಪಾಯ ಜಾಸ್ತಿ! ಇರಲಿ ಎಚ್ಚರ...
ದೀಪಾವಳಿ ಎಂದರೆ ಪಟಾಕಿ ಸಿಡಿಸಿ ಸಂಭ್ರಮಿಸುವ ಮೂಲಕ ವಾತಾವರಣ ಅತಿ ಹೆಚ್ಚೇ ಎಂಬಂತೆ ಇಂದು ಕಲುಷಿತಗೊಳ್ಳುತ್ತಿದೆ. ದೀಪಾವಳಿಯ ಸಂಭ್ರಮವನ್ನು ದೀಪಗಳ ಸಾಲು, ಸಿಹಿ ಹಾಗೂ ಹೊಸಬಟ್ಟೆಗಳನ್ನು ತೊಟ್ಟು ನಗುನಗುತ್ತಾ ಎಲ್ಲರೊಂದಿಗೆ ಬೆರೆತು ಆಚರಿಸುವುದೇ ನಿಜವಾದ ಆಚರಣೆಯಾಗಿದೆ.
ಆದರೆ ಇಂದಿನ ದಿನಗಳಲ್ಲಿ ಜಿದ್ದಿಗೆ ಬಿದ್ದವರಂತೆ ತಮ್ಮ ಸಾಮರ್ಥ್ಯಕ್ಕೂ ಮೀರಿ ಲಕ್ಷಾಂತರ ರೂಪಾಯಿ ಬೆಲೆಯ ಪಟಾಕಿಗಳನ್ನು, ಅದರಲ್ಲೂ ಭಾರೀ ಸದ್ದು ಹೊರಡಿಸುವ ಪಟಾಕಿಗಳನ್ನು ಸುಟ್ಟು ಸಂಭ್ರಮಿಸುತ್ತಿರುವುದು ಹಬ್ಬದ ಕಳೆಯನ್ನು ಕಳೆಗುಂದಿಸುತ್ತದೆ. ಪರಿಣಾಮವಾಗಿ ಎಲ್ಲೆಡೆ ಗಾಳಿಯೆಲ್ಲಾ ಹೊಗೆ ತುಂಬಿಕೊಂಡಿರುತ್ತದೆ. ನಗರದ ರಸ್ತೆ, ಅಂಗಳ ಎಲ್ಲೆಲ್ಲೂ ಈ ಪಟಾಕಿಗಳು ಸಿಡಿದಾಗ ಛಿದ್ರವಾಗಿದ್ದ ಕಾಗದಗಳು ಚಿಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ. ಗಾಳಿಯಲ್ಲೆಲ್ಲಾ ಗಂಧಕದ ವಾಸನೆ, ಹೊಗೆ, ಅಷ್ಟೇ ಅಲ್ಲ, ಪಟಾಕಿ ಸಿಡಿದು ಸಂಭವಿಸಿದ ಅಪಘಾತಗಳು ಸಹಾ!
ಈ ಬಾರಿಯ ದೀಪಾವಳಿ ಹಬ್ಬಕ್ಕೆ ಸ್ವಲ್ಪ ಸ್ವೀಟ್ಸ್ ಕಡಿಮೆ ತಿನ್ನಿ!!
ಈ ಕುತ್ಸಿತ ಸಂಭ್ರಮದ ಪರಿಣಾಮವಾಗಿ ಗಾಳಿಯೆಲ್ಲಾ ಹೊಗೆ ಹಾಗೂ ಗಂಧಕಭರಿತವಾಗಿ ಇದನ್ನು ಸೇವಿಸಲು ಮನುಷ್ಯರು ಮಾತ್ರವಲ್ಲ, ಪ್ರಾಣಿ ಪಕ್ಷಿಗಳೂ ಹರಸಾಹಸ ಪಡಬೇಕಾಗುತ್ತದೆ. ವಿಶೇಷವಾಗಿ ಅಸ್ತಮಾ ರೋಗಿಗಳಿಗೆ ಈ ಗಾಳಿಯನ್ನು ಸೇವಿಸಲು ಸಾಧ್ಯವಾಗದೇ ಉಸಿರಾಟ ಕಷ್ಟಕರವಾಗಿ ಜೀವ ಹೋಗುವ ಸಂಭವವೂ ಇದ್ದು ಇವರೆಲ್ಲಾ ಪಟಾಕಿ ಸುಟ್ಟವರನ್ನು ಹಿಡಿಶಾಪ ಹಾಕುತ್ತಾರೆ.
ಮನೆ-ಮರಗಳಲ್ಲಿ ಗೂಡು ಮಾಡಿ ಮೊಟ್ಟೆ ಇಟ್ಟಿದ್ದ ಗುಬ್ಬಚ್ಚಿ, ಪಾರಿವಾಳ ಮೊದಲಾದ ಚಿಕ್ಕ ಪಕ್ಷಿಗಳ ಮೊಟ್ಟೆಗಳು ಹೊಗೆಯನ್ನು ಹೀರಿಕೊಂಡು ಗಟ್ಟಿಯಾಗಿ ಇವುಗಳನ್ನು ಒಡೆಯಲು ಅಸಮರ್ಥವಾಗಿ ಮರಿಗಳು ಹುಟ್ಟುವುದೇ ಇಲ್ಲ. ಇದೇ ಕಾರಣಕ್ಕೆ ಇಂದು ಬೆಂಗಳೂರಿನಲ್ಲಿ ಗುಬ್ಬಚ್ಚಿಗಳು ಅವಸಾನದ ಅಂಚಿನಲ್ಲಿದೆ. ಅಸ್ತಮಾ ರೋಗಿಗಳಿಗೆ ಈ ವಾಯುಸೇವನೆ ಪ್ರಾಣಾಪಾಯವನ್ನೂ ಉಂಟುಮಾಡಬಹುದು. ಬನ್ನಿ, ಒಂದು ವೇಳೆ ನಿಮಗೆ ಹೊಗೆಭರಿತ ವಾಯುವನ್ನು ಅನಿವಾರ್ಯವಾಗಿ ಸೇವಿಸಬೇಕಾಗಿ ಬಂದರೆ ಈ ಪರಿಸ್ಥಿತಿಯನ್ನು ಎದುರಿಸಲು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ:
ಮಾಸ್ಕ್ ಧರಿಸಿ
ಹೊಗೆತುಂಬಿಕೊಂಡ ಗಾಳಿಯಲ್ಲಿ ಹೋಗಲೇಬೇಕೆಂದಿದ್ದರೆ ಔಷಧಿ ಅಂಗಡಿಗಳಲ್ಲಿ ದೊರಕುವ ಹತ್ತಿಯ ಮಾಸ್ಕ್ ಗಳನ್ನು ಧರಿಸಿ. ದೀಪಾವಳಿಯಲ್ಲಿ ಪಟಾಕಿ ಹೊಡೆಯುವ ಸಮಯದಲ್ಲಿ ಗಾಢ ಹಾಗೂ ದಟ್ಟ ಹೊಗೆ ನೆಲಮಟ್ಟದಲ್ಲಿಯೇ ಇದ್ದು ಇದರಲ್ಲಿ ಗಂಧಕದ ಅಂಶ ತೀರಾ ಹೆಚ್ಚಾಗಿರುತ್ತದೆ. ಅದೃಷ್ಟವಶಾತ್ ಈ ಗಂಧಕದ ಕಣಗಳು ಕೊಂಚ ದೊಡ್ಡವೇ ಇದ್ದು ಮಾಸ್ಕ್ ಮೂಲಕ ಹಾದು ಹೋಗಲಾರವು. ಆದ್ದರಿಂದ ಮಾಸ್ಕ್ ಧರಿಸುವುದು ಉತ್ತಮ ಆಯ್ಕೆ. ಒಂದು ವೇಳೆ ಮಾಸ್ಕ್ ಆ ಹೊತ್ತಿಗೆ ಲಭ್ಯವಿಲ್ಲದೇ ಹೋದರೆ ನಿಮ್ಮಲ್ಲಿರುವ ಕರವಸ್ತ್ರ, ಸ್ಕಾರ್ಫ್, ಟೀಶರ್ಟ್, ಒಟ್ಟಾರೆ ನಿಮ್ಮ ಕೈಗೆ ಸಿಗುವ ಯಾವುದೇ ಬಟ್ಟೆಯನ್ನು ಮೂಗಿಗೆ ಅಡ್ಡಹಿಡಿದು ಉಸಿರಾಡಿ. ಈ ಬಟ್ಟೆಯನ್ನು ನೆನೆಸಿ ಇದರ ಮೂಲಕ ಉಸಿರಾಡುವುದು ಇನ್ನೂ ಉತ್ತಮ.
ಪಟಾಕಿಗಳನ್ನು ಸುಡುವ ಸ್ಪರ್ಧೆ ಇರುವ ಸ್ಥಳಗಳಿಗೆ ಹೋಗಲೇಬೇಡಿ
ಕೆಲವು ಸ್ಥಳಗಳಲ್ಲಿ ಕೆಲವು ವ್ಯಕ್ತಿಗಳು ಜಿದ್ದಿಗೆ ಬಿದ್ದು ಪಟಾಕಿ ಸುಡುವ ಸ್ಪರ್ಧೆಯೋ ಎಂಬಂತೆ ಲಕ್ಷಾಂತರ ರೂಪಾಯಿಗಳನ್ನು ಕ್ಷಣಮಾತ್ರದಲ್ಲಿ ಸುಡುತ್ತಾರೆ. ಈ ಪ್ರದೇಶದಲ್ಲಿ ಅತ್ಯಂತ ಹೆಚ್ಚಿನ ದಟ್ಟನೆಯ ಹೊಗೆ ತುಂಬಿರುತ್ತದೆ. ಆದ್ದರಿಂದ ಎಲ್ಲಿ ಪಟಾಕಿಯ ಸದ್ದು ಕೇಳಿಬರುತ್ತಿದೆಯೋ, ಅಥವಾ ದೂರದಿಂದಲೇ ಹೊಗೆ ಮೇಲೇಳುತ್ತಿರುವುದು ಕಂಡು ಬಂದರೆ ಆ ಪ್ರದೇಶಗಳತ್ತ ಮುಖ ಹಾಕದಿರುವುದೇ ಜಾಣತನದ ಕ್ರಮವಾಗಿದೆ.
ಮನೆಯಲ್ಲಿಯೇ ಇರಿ
ಅನಿವಾರ್ಯ ಸಂದರ್ಭವಿಲ್ಲದೇ ಮನೆಯಿಂದ ಹೊರಹೋಗುವ ಸಾಹಸವನ್ನೇ ಮಾಡಬೇಡಿ. ಇದಕ್ಕೂ ಮುನ್ನ ನಿಮ್ಮ ಮನೆಯ ಎಲ್ಲಾ ಕಿಟಕಿ ಬಾಗಿಲುಗಳನ್ನು ಗಟ್ಟಿಯಾಗಿ ಮುಚ್ಚಿ ಹೊಗೆ ಒಳಬರದಂತೆ ಬಂದೋಬಸ್ತ್ ಮಾಡಿ. ಒಂದು ವೇಳೆ ನಿಮ್ಮ ಮನೆಯಲ್ಲಿ ಏಸಿ ಇದ್ದರೆ ಇದನ್ನು ಪೂರ್ಣ ಮಟ್ಟದಲ್ಲಿಟ್ಟು ಚಾಲನೆ ನೀಡಿ. ಇದರಿಂದ ಉಸಿರುಗಟ್ಟುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ.
ನಿಮ್ಮ ಇನ್ ಹೇಲರ್ ಸದಾ ಬಳಿಯಲ್ಲಿರಿಸಿ
ಎಲ್ಲೆಲ್ಲೂ ಹೊಗೆಯೇ ಹೊಗೆ ಇದ್ದಾಗ ನಿಮ್ಮ ರಕ್ಷಣೆಗೆ ಯಾರೂ ಬರಲಾರರು. ಆದ್ದರಿಂದ ವೈದ್ಯರು ನಿಮಗೆ ನೀಡಿರುವ ಇನ್ ಹೇಲರ್ ಉಪಕರಣವನ್ನು ಸದಾ ಕೈಯಲ್ಲಿಯೇ ಇರಿಸಿಕೊಳ್ಳಿ. ಒಂದು ವೇಳೆ ಇದು ಮುಗಿಹೋಗುವ ಹಂತದಲ್ಲಿದ್ದರೆ ಇನ್ನೊಂದನ್ನು ಸಿದ್ಧವಾಗಿರಿಸಿ ಜೊತೆಗೆ ಇಟ್ಟುಕೊಳ್ಳಿ. ಒಂದು ಕ್ಷಣವೂ ಇವಿಲ್ಲದೇ ಹೊರಹೋಗಬೇಡಿ. ಏಕೆಂದರೆ ಹೊಗೆಯ ವಾತಾವಾರಣ ಈಗಾಗಲೇ ಅಸ್ತಮಾ ತೊಂದರೆ ಇರುವವರಿಗೆ ಯಾವ ರೀತಿಯಲ್ಲಿ ಘಾತಕವಾಗಬಹುದು ಎಂದು ಗೊತ್ತಿರುವುದಿಲ್ಲ. ಇದು ಅಸ್ತಮಾ ರೋಗಿಗಳಂತೆಯೇ ಇತರ ರೋಗಿಗಳೂ ತಮಗೆ ಅಗತ್ಯವಿರುವ ಔಷಧಿಗಳನ್ನು ಸದಾ ಕೈಯಲ್ಲಿ ಇರಿಸಿಕೊಂಡಿರುವುದು ಉತ್ತಮ.
ಈ ಸಮಯದಲ್ಲಿ ಸ್ವಚ್ಛಗೊಳಿಸಲು ಹೋಗಬೇಡಿ
ಮನೆಯ ಹಾಗೂ ಇತರ ಸ್ಥಳಗಳಲ್ಲಿ ಸ್ವಚ್ಛಗೊಳಿಸುವಾಗ ಕೊಂಚವಾದರೂ ಧೂಳು ಎದ್ದೇ ಏಳುತ್ತದೆ. ಈ ಧೂಳು ಅಸ್ತಮಾ ರೋಗಿಗಳಿಗೆ ತೊಂದರೆ ತಂದೊಡ್ಡಬಹುದು. ಹಬ್ಬದ ಸಮಯದಲ್ಲಿ ಈಗಾಗಲೇ ಹೊಡೆದ ಪಟಾಕಿಯಿಂದ ವಾಯುವಿನಲ್ಲಿ ಸಾಕಷ್ಟು ಹೊಗೆ ಇದ್ದೇ ಇರುತ್ತದೆ. ಈ ಹೊಗೆಯ ಸಮಯದಲ್ಲಿ ಕಸ ಗುಡಿಸಿದರೆ ಏಳುವ ಧೂಳು ಅಸ್ತಮಾ ರೋಗಿಗಳಿಗೆ ಘಾತಕವಾಗಬಹುದು. ವಿಶೇಷವಾಗಿ ಮೂಗು ಮತ್ತು ಬಾಯಿಯ ಮೂಲಕ ಒಳಪ್ರವೇಶಿಸುವ ಧೂಳಿನ ಕಣಗಳು ಅಸ್ತಮಾಘಾತವನ್ನು ಪ್ರಚೋದಿಸಬಹುದು. ಪರಿಣಾಮವಾಗಿ ಉಸಿರಾಟ ಕಷ್ಟಕರವಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ಸ್ವಚ್ಛಗೊಳಿಸುವ ಕಾರ್ಯವನ್ನು ಸರ್ವಥಾ ಕೈಗೊಳ್ಳಬಾರದು.
ವಿಟಮಿನ್ ಸಿ, ಎ ಮತ್ತು ಡಿ ಸೇವಿಸಿ:
ಈ ಸಮಯದಲ್ಲಿ ವಿಟಮಿನ್ ಸಿ ಮತ್ತು ಡಿ ಹೆಚ್ಚಿರುವ ಹಣ್ಣು ತರಕಾರಿಗಳನ್ನು ಹೆಚ್ಚಾಗಿ ಸೇವಿಸುವುದು ಅಗತ್ಯವಾಗಿದೆ. ವಿಶೇಷವಾಗಿ ಹಬ್ಬಕ್ಕೂ ಮೊದಲ ಕೆಲವು ದಿನಗಳಿಂದ ಸಾಕಷ್ಟು ಹಣ್ಣು ಹಸಿತರಕಾರಿಗಳನ್ನು ಸೇವಿಸಿ. ವಿಟಮಿನ್ ಸಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಸಾಮಾನ್ಯ ಶೀತ ಎದುರಾಗದಂತೆ ತಡೆಯುತ್ತದೆ. ಇದೊಂದು ಪ್ರಬಲ ಆಂಟಿ ಆಕ್ಸಿಡೆಂಟ್ ಸಹಾ ಆಗಿದ್ದು ಹಲವಾರು ರೋಗಗಳ ವಿರುದ್ದ ರಕ್ಷಣೆ ಒದಗಿಸುತ್ತದೆ.ಅಲ್ಲದೇ ವಿಟಮಿನ್ ಡಿ ದೇಹದ ರೋಗ ನಿರೋಧಕ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ.
ಚಿಕ್ಕ ಪ್ರಮಾಣದಲ್ಲಿ ಆಹಾರ ಸೇವಿಸಿ:
ಹಬ್ಬದ ಸಂಭ್ರಮದಲ್ಲಿ ಎಲ್ಲರ ಮನೆಯಲ್ಲಿಯೂ ವಿಶೇಷ ಅಡುಗೆಗಳನ್ನು ಸಿದ್ಧಪಡಿಸಲಾಗುತ್ತದೆ. ಅಪರೂಪಕ್ಕೆ ಮಾಡಿದ್ದು ಎಂದು ಎಲ್ಲರೂ ಕೊಂಚ ಹೆಚ್ಚೇ ಸಿಹಿ ಮತ್ತು ವಿಶೇಷ ಭಕ್ಷ್ಯಗಳನ್ನು ಸೇವಿಸುತ್ತಾರೆ. ಆದರೆ ಅಸ್ತಮಾ ರೋಗಿಗಳಿಗೆ ಹಬ್ಬದ ಸಂಭ್ರಮದಲ್ಲಿ ಹೆಚ್ಚಿನ ಆಹಾರ ಸೇವಿಸಲು ಅವಕಾಶವಿಲ್ಲ. ಆದರೆ ಹಬ್ಬದ ಸಂಭ್ರಮವನ್ನು ಕಳೆದುಕೊಳ್ಳದಿರುವ ಚಿಕ್ಕ ಪ್ರಮಾಣದಲ್ಲಿ ಆಹಾರವನ್ನು ಸೇವಿಸಿ. ಹಬ್ಬದ ಹುಮ್ಮಸ್ಸಿನಲ್ಲಿ ಸ್ನೇಹಿತರು ಹಾಗೂ ಕುಟುಂಬವರ್ಗದವರು ಬಲವಂತವಾಗಿ ಸಿಹಿಯನ್ನು ತಿನ್ನಿಸಿಯೇ ತಿನ್ನಿಸುತ್ತಾರೆ. ಆದರೆ ಸಿಹಿವಸ್ತುಗಳು ಅಸ್ತಮಾ ರೋಗಿಗಳಿಗೆ ಅಲರ್ಜಿಕಾರಕವಾಗಿದ್ದು ಉಸಿರಾಟದ ನಾಳಗಳನ್ನು ಇನ್ನಷ್ಟು ಕಿರಿದಾಗಿಸಬಹುದು. ಆದ್ದರಿಂದ ವಿಶೇಷವಾಗಿ ಸಿಹಿವಸ್ತುಗಳನ್ನು ಆದಷ್ಟು ಕಡಿಮೆ ಮಾಡಬೇಕು. ಬಲವಂತವಾಗಿ ತಿನ್ನಿಸಿದರೂ ನುಂಗುವ ನಿರ್ಧಾರ ಮಾತ್ರ ನಿಮ್ಮದೇ ಆದ ಕಾರಣ ಸಿಹಿಯನ್ನು ಬಾಯಿಗೆ ಸ್ವೀಕರಿಸಿದರೂ ನಿಧಾನವಾಗಿ ಆಚೆ ಹೋಗಿ ಬಾಯಿ ಮುಕ್ಕಳಿಸಿ ಉಗುಳುವ ಮೂಲಕ ಸಿಹಿವಸ್ತುವಿನ ಧಾಳಿಯಿಂದ ರಕ್ಷಣೆ ಪಡೆಯಬಹುದು.
ಸಾಕಷ್ಟು ನೀರು ಕುಡಿಯಿರಿ:
ಈ ಸಮಯದಲ್ಲಿ ದೇಹದಲ್ಲಿ ಸಾಕಷ್ಟು ಆರ್ದ್ರತೆ ಇರುವುದು ಅಗತ್ಯವಾಗಿದ್ದು ನೀರಿನ ಕೊರತೆಯಿಂದ ಅಸ್ತಮಾಘಾತದ ಸಾಧ್ಯತೆ ಹೆಚ್ಚುತ್ತದೆ. ಏಕೆಂದರೆ ಶ್ವಾಸಕೋಶದಲ್ಲಿ ನೀರಿನ ಪಸೆ ಕಡಿಮೆ ಇದ್ದರೆ ಶ್ವಾಸನಾಳಗಳು ಇನ್ನಷ್ಟು ಕಿರಿದಾಗಬಹುದು ಹಾಗೂ ಶ್ವಾಸಕೋಶದಲ್ಲಿ ಹೆಚ್ಚು ಹೆಚ್ಚು ಕಫವುಂಟಾಗಲು ಕಾರಣವಾಗಬಹುದು. ಇದು ಅಸ್ತಮಾಘಾತಕ್ಕೆ ಮೂಲ ಕಾರಣವಾಗಿವೆ.
ಮದ್ಯಪಾನ ಬೇಡವೇ ಬೇಡ:
ಹಬ್ಬದ ಸಂಭ್ರಮವನ್ನು ಎಲ್ಲರೊಂದಿಗೆ ಸಂತೋಷದಿಂದ ಹಂಚಿಕೊಂಡು ಸಂತೋಷಪಡುವುದೇ ನಿಜವಾದ ಹಬ್ಬದ ಆಚರಣೆಯಾಗಿದೆ. ಆದರೆ ಕೆಲವು ವ್ಯಕ್ತಿಗಳು ಈ ಸಂದರ್ಭವನ್ನು ಮದ್ಯ ಕುಡಿಯುವ ಅವಕಾಶವೆಂಬಂತೆ ಪರಿಗಣಿಸಿ ಮತ್ತಿನಲ್ಲಿ ತಮ್ಮ ಸಮಯವನ್ನು ಕಳೆಯುತ್ತಾರೆ. ಆದರೆ ಮದ್ಯದ ಮತ್ತು ಅಸ್ತಮಾ ರೋಗಿಗಳಿಗೆ ಸರ್ವಥಾ ಸಲ್ಲದು. ಮಾದಕ ಪಾನೀಯಗಳನ್ನು ಕೆಡದಂತೆ ರಕ್ಷಿಸಲು ಸೇರಿಸಿರುವ ಸಂರಕ್ಷಕಗಳು ಅಸ್ತಮಾಘಾತವನ್ನು ಪ್ರಾರಂಭಿಸಬಹುದು. ಆದ್ದರಿಂದ ಈ ಅವಧಿಯಲ್ಲಿ ಮದ್ಯದ ನೆನಪನ್ನೂ ಮಾಡಬಾರದು.
ಎಣ್ಣೆಯ ಆಹಾರಗಳು ಬೇಡ
ಹಬ್ಬದ ಸಂದರ್ಭದಲ್ಲಿ ಸಿಹಿವಸ್ತುಗಳ ಜೊತೆಗೇ ವಿಶೇಷ ಖಾದ್ಯಗಳನ್ನೂ ತಯಾರಿಸಲಾಗುತ್ತದೆ. ರುಚಿ ಬರಲೆಂದು ಎಣ್ಣೆಯನ್ನೂ ಧಾರಾಳವಾಗಿ ಬಳಸಲಾಗಿರುತ್ತದೆ. ಆದರೆ ಎಣ್ಣೆಯ ಜಿಡ್ಡು ಅಸ್ತಮಾ ರೋಗಿಗಳಿಗೆ ಮಾರಕವಾಗಿದ್ದು ಶ್ವಾಸನಾಳಗಳನ್ನು ಕಿರಿದಾಗಿಸುತ್ತದೆ. ಪರಿಣಾಮವಾಗಿ ಅಸ್ತಮಾಘಾತದ ಸಾಧ್ಯತೆ ಹೆಚ್ಚುತ್ತದೆ.