Just In
Don't Miss
- News Raichur: ರಾಯಚೂರಿನಲ್ಲಿ ತಣ್ಣಗಾಗದ ಬಂಡಾಯದ ಬೆಂಕಿ: ಬಿವಿ ನಾಯಕ್, ತಿಪ್ಪರಾಜು ಜೊತೆ ಬಿಜೆಪಿ ಸಂಧಾನ ವಿಫಲ!
- Movies ಲಂಡನ್ನಲ್ಲಿ ಬಾಡಿಗೆಗೆ ಪಡೆದಿದ್ದ ಬಂಗಲೆಯನ್ನೇ ಖರೀದಿಸಿದ್ರಾ ಪ್ರಭಾಸ್?
- Technology Tecno: ಬಹುನಿರೀಕ್ಷಿತ ಟೆಕ್ನೋ ಪೋವಾ 6 ಪ್ರೊ ಲಾಂಚ್! 12GB RAM.. 6000mAh ಬ್ಯಾಟರಿ.. ಬೆಲೆ ಎಷ್ಟು?
- Sports CSK vs RCB: ದಾಖಲೆಯ ಪುಟ ಸೇರಿದ ಉದ್ಘಾಟನಾ ಪಂದ್ಯ: 16.8 ಕೋಟಿ ಜನರಿಂದ ವೀಕ್ಷಣೆ
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಊರಿಗೆ ಕಾಲಿಡುವ ಮುನ್ನವೇ ಡೆಂಗ್ಯೂವನ್ನು ಓಡಿಸೋಣ!
ರಾಜಧಾನಿ ದೆಹಲಿಯಲ್ಲಿ ಡೆಂಗ್ಯೂ ಅಥವಾ ಡೆಂಗಿ ಜ್ವರ ಅಪಾರವಾಗಿ ಹರಡಿದೆ. ಅಲ್ಲಿನ ಮುಖ್ಯಮಂತ್ರಿಗಳು ಸೊಳ್ಳೆಗಳ ವಿರುದ್ಧ ಸಮರವನ್ನೇ ಸಾರಿದ್ದಾರೆ. ಇದು ಅಲ್ಲಿನ ವಿಷಯ, ನಮಗೇನು ಎಂದು ಸುಮ್ಮನೇ ಕೂರುವಂತಿಲ್ಲ. ಏಕೆಂದರೆ ಕರ್ನಾಟಕದಲ್ಲಿಯೂ ಅಲ್ಲಲ್ಲಿ ಡೆಂಗ್ಯೂ ಮತ್ತು ಚಿಕುನ್ ಗುನ್ಯಾ ಪ್ರಕರಣಗಳು ಕಾಣಿಸಿಕೊಂಡಿವೆ.
ಒಂದು ಕಾಲದಲ್ಲಿ ಮಲೇರಿಯಾ ರೋಗ ಭಾರತದ ಜನರ ನಿದ್ದೆಯನ್ನೇ ಕೆಡಿಸಿದ್ದಂತೆ ಈ ರೋಗಗಳೂ ಭಾರತವನ್ನೇ ಆವರಿಸಬಹುದು. ಅಂದು ಅನಾಫೆಲಿಸ್ ಸೊಳ್ಳೆಯ ಕಾಲವಾಗಿದ್ದರೆ ಈಗ ಅದರ ಸೊಸೆ ಏಡಿಸ್ ಈಜಿಪ್ತಿ ಎಂಬ ಸೊಳ್ಳೆಯ ಕಾಲವಾಗಿದೆ. ಡೆಂಗ್ಯೂ ಜ್ವರ ಬಂದಾಗ ತಿನ್ನಬೇಕಾದ ಆಹಾರಗಳು
ಅನಾಫಿಲಿಸ್ ಕಪ್ಪಗಿದ್ದು ಸಂಜೆಯಾದ ಬಳಿಕ ಮಾತ್ರ ಮನೆಗಳ ಒಳಗೆ ಧಾಳಿ ಮಾಡಿ ಮಲೇರಿಯಾ ಹಬ್ಬಿಸುತ್ತಿದ್ದರೆ ಇದರ ಸೊಸೆ ಬಿಳಿ ಕಪ್ಪು ಪಟ್ಟೆಪಟ್ಟೆಯ ಪಕ್ಕಾ ಖದೀಮಳಾಗಿದ್ದು (ಹೌದು ಕೇವಲ ಹೆಣ್ಣು ಸೊಳ್ಳೆಗಳು ಮಾತ್ರವೇ ಕಚ್ಚುತ್ತವೆ) ಹಾಡು ಹಗಲೇ ಮನೆಗೆ ನುಗ್ಗಿ ಮನುಷ್ಯರ ರಕ್ತ ಕುಡಿದು ರೋಗ ಹಬ್ಬಿಸಿ ಹಾರಿ ಹೋಗುತ್ತದೆ.
ಈಕೆಯ ಪೊಗರಿಗೆ ನಾವೇ, ಜನಸಾಮಾನ್ಯರೇ ಮುಖ್ಯವಾಗಿ ಕಾರಣ. ಏಕೆಂದರೆ ನಮ್ಮ ಮನೆಗಳ ಸುತ್ತಮುತ್ತ ಗಲೀಜು ನೀರು ನಿಂತಿದ್ದರೂ, ಮಳೆಯ ಅಥವಾ ಇತರ ನೀರು ನಿಲ್ಲುವ ವಸ್ತುಗಳನ್ನು ವಿಲೇವಾರಿ ಮಾಡದೇ ಸೋಮಾರಿಗಳಾಗಿರುವ ಮೂಲಕ ಈ ಸೊಳ್ಳೆಗಳಿಗೆ ಮೊಟ್ಟೆಗಳನ್ನಿಡಲು ಪ್ರಶಸ್ತ ಸ್ಥಳಗಳನ್ನು ಪುಕ್ಕಟೆಯಾಗಿ ನೀಡಿದ್ದೇವೆ. ಡೆಂಗ್ಯೂ ಜ್ವರದ ಹತೋಟಿಗೆ ಪಪ್ಪಾಯಿ ಗಿಡದ ಎಲೆಗಳೇ ಸಾಕು
ಈಗ ದೆಹಲಿಯಲ್ಲಿ ಸೊಳ್ಳೆಗಳ ವಿರುದ್ದ ಸಮರ ಸಾರಿದ್ದು ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳ ಸುತ್ತ ಇರುವ ಈ ನೀರು ನಿಲ್ಲುವ ಜಾಗಗಳನ್ನೆಲ್ಲಾ ತೆರವುಗೊಳಿಸಿ ಸ್ವಚ್ಛಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಮಳೆಗಾಲದ ಮಹಾಮಾರಿ ಡೆಂಗ್ಯೂ ಜ್ವರ: ಇರಲಿ ಕಟ್ಟೆಚ್ಚರ!
ನಮ್ಮ ಊರಿಗೂ ಈ ಸ್ಥಿತಿ ಬರುವ ಮುನ್ನವೇ ಎಚ್ಚೆತ್ತುಕೊಂಡರೆ ಈ ಪಟ್ಟೆಪಟ್ಟೆ ಮಾರಿಯನ್ನು ಊರಿನಿಂದಲೇ ಉಚ್ಛಾಟಿಸಿ ನಮ್ಮ ಮಕ್ಕಳ ಸಹಿತ ಊರಿನ ಎಲ್ಲಾ ಜನರನ್ನು ಈ ಕಾಯಿಲೆಯಿಂದ ರಕ್ಷಿಸಬಹುದು. ಹೇಗೆ? ಎಂದು ಕೇಳಿದವರಿಗೆ ಕೆಳಗಿನ ವಿವರಗಳು ಪ್ರೋತ್ಸಾಹಿಸಬಹುದು:
ಕ್ರಮ #1
ನಿಮ್ಮ ಮನೆಯ ಸುತ್ತ ಮುತ್ತ ಇರುವ ಯಾವುದೇ ನೀರು ಸಂಗ್ರಹದ ಬಕೆಟ್ಟು, ತೊಟ್ಟಿ, ಟಿನ್ನು, ಗೆರಟೆಚಿಪ್ಪು, ಅಡ್ಡಬಿದ್ದ ಟೈರು, ಅಲ್ಲಲ್ಲಿ ನಿಂತ ನೀರು, ಒಟ್ಟಾರೆ ಯಾವುದೇ ನೀರು ನಿಲ್ಲುವ ಪಾತ್ರೆ ಅಥವಾ ಅಂತಹದ್ದೇ ವಸ್ತುಗಳಲ್ಲಿನ ನೀರು ತೆಗೆದು ಉಲ್ಟಾವಾಗಿಸಿಡಿ. ಅನಗತ್ಯ ಎನಿಸಿದ್ದನ್ನು ಕಸದ ಬುಟ್ಟಿಗೆ ಒಗೆಯಿರಿ. ಒಂದು ವೇಳೆ ಮನೆಯ ಕೆಲಸಕ್ಕೆ ಈ ನೀರು ಅಗತ್ಯವಾಗಿದ್ದರೆ ಇದು ಪೂರ್ಣವಾಗಿ ಆವರಿಸುವಂತೆ ಮುಚ್ಚುವ ವ್ಯವಸ್ಥೆ ಮಾಡಿ.
ಕ್ರಮ #2
ಹೂಕುಂಡಗಳ ಬುಡದಲ್ಲಿನ ತೇವ ಈ ಸೊಳ್ಳೆಗಳಿಗೆ ಮೊಟ್ಟೆಯಿಡಲು ಪ್ರಶಸ್ತ ಸ್ಥಳ. ಅಂದರೆ ಇಲ್ಲಿ ಕೊಂಚವಾದರೂ ನೀರಿದ್ದರೆ ಮಾತ್ರ. ಆದ್ದರಿಂದ ನಿಮ್ಮ ನೆಚ್ಚಿನ ಹೂಗಿಡಗಳ ಬುಡದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ. ಸಾಧ್ಯವಾದರೆ ಮೇಲ್ಭಾಗದಲ್ಲಿ ಮರಳು ಮುಚ್ಚಿ. ಒಟ್ಟಾರೆ ನೀರು ನಿಲ್ಲದಂತೆ ನೋಡಿಕೊಳ್ಳಿ.
ಕ್ರಮ #3
ನಿಮ್ಮ ಮನೆಯ ಸುತ್ತ ಮುತ್ತ ಸ್ವಚ್ಛವಾಗಿರಿಸಿದರೂ ನಿಮ್ಮ ಅಕ್ಕಪಕ್ಕದವರು ಅಥವಾ ಓರಗೆಯಲ್ಲಿ ಎಲ್ಲರೂ ಆವರಣವನ್ನು ಸ್ವಚ್ಛವಾಗಿರಿಸುತ್ತಾರೆ ಎಂದು ಹೇಳಲಾಗುವುದಿಲ್ಲ. ಕೆಲವೊಮ್ಮೆ ಮನೆಗೆ ಬೀಗ ಹಾಕಿ ಹೊರಹೋದವರ ಮನೆಯಲ್ಲಿಯೂ ನೀರು ನಿಲ್ಲುವ ಸಾಧ್ಯತೆ ಇದೆ. ಅಲ್ಲಿ ಹುಟ್ಟುವ ಸೊಳ್ಳೆಗಳಿಂದ ರಕ್ಷಿಸಿಕೊಳ್ಳಲು ದಿನವಿಡೀ ಮೈಕೈಗೆ ಸೊಳ್ಳೆಗಳನ್ನು ವಿಕರ್ಷಿಸುವ ಮುಲಾಮನ್ನು ಹಚ್ಚಿಕೊಳ್ಳಿ. ಏಕೆಂದರೆ ಡೆಂಗಿ ಹರಡುವ ಸೊಳ್ಳೆ ಹಾಡು ಹಗಲೇ ಮನೆಗೆ ನುಗ್ಗುತ್ತದೆ.
ಕ್ರಮ #4
ನಿಮ್ಮ ಮನೆಯ ಕಿಟಕಿ ಬಾಗಿಲುಗಳಿಗೆ ಸೊಳ್ಳೆಪರದೆ ಅಥವಾ ದಪ್ಪ ಪರದೆಗಳನ್ನು ಹಾಕಿಸಿ. ಇದರಲ್ಲಿ ಸೊಳ್ಳೆ ತೂರುವಷ್ಟು ದೊಡ್ಡ ತೂತು ಇದೆಯೇ ನೋಡಿ. ಇದ್ದರೆ ತಕ್ಷಣ ಸೂಜಿ ದಾರದಿಂದ ಪಕ್ಕದ ಎಳೆಗಳನ್ನು ಸೇರಿಸಿ ಗಂಟು ಹಾಕಿ. ಏಕೆಂದರೆ ಈ ಪಟ್ಟೆಪಟ್ಟೆಯ ಸೊಳ್ಳೆ ಇಂತಹ ತೂತುಗಳನ್ನು ಹುಡುಕಿ ಒಳಗೆ ತೂರುವ ಕುತಂತ್ರಿ ಬುದ್ಧಿಯನ್ನೂ ಹೊಂದಿದೆ.
ಕ್ರಮ #5
ರಾತ್ರಿ ಮಲಗುವಾಗ ಸೊಳ್ಳೆ ಪರದೆಯ ಒಳಗೇ ಮಲಗಿ. ವಿಶೇಷವಾಗಿ ಮಕ್ಕಳು ದಿನದ ಹೊತ್ತಿನಲ್ಲಿ ಮಲಗುವಾಗ ಮರೆಯದೇ ಸೊಳ್ಳೆ ಪರದೆಯನ್ನು ತೆರೆದು ಅದರೊಳಗೇ ಮಲಗುವಂತೆ ಮಾಡಿ.
ಕ್ರಮ #6
ನಿಮ್ಮ ಮನೆಯಲ್ಲಿ ಕೂಲರ್ ಅಥವಾ ಫಿಲ್ಟರ್ ರೂಪದ ನೀರಿನ ಸಂಗ್ರಹ ವಿಧಾನಗಳಿದ್ದರೆ ನೀರು ಬಗ್ಗಿಸಿಕೊಳ್ಳುವಲ್ಲಿ ತೊಟ್ಟಿಕ್ಕುವ ನೀರನ್ನು ಸಂಗ್ರಹಿಸುವ ತಟ್ಟೆ ಅಥವಾ ಟ್ರೇ ಅನ್ನು ಪ್ರತಿದಿನ ಸ್ವಚ್ಛಗೊಳಿಸಿ, ಆದಷ್ಟು ಒಣದಾಗಿಯೇ ಇರುವಂತೆ ಮಾಡಿ.
ಕ್ರಮ #7
ನಿಮ್ಮ ಮನೆಯ ಕಸದ ಬುಟ್ಟಿಯನ್ನು ಸದಾ ಮುಚ್ಚಿಡಿ. ಇದಕ್ಕಾಗಿ ಮುಚ್ಚಳವನ್ನು ಕಾಲಿನಿಂದ ಮೆಟ್ಟಿ ತೆರೆಯುವ ಕಸದ ಬುಟ್ಟಿ ಇದ್ದರೆ ತುಂಬಾ ಉತ್ತಮ.
ಕ್ರಮ #8
ಸೊಳ್ಳೆಗಳನ್ನು ಮನೆಗೆ ಬಾರದಿರುವಂತೆ ಮಾಡಲು ಅತ್ಯುತ್ತಮ ನೈಸರ್ಗಿಕ ವಿಧಾನವೆಂದರೆ ನಿಮ್ಮ ಮನೆಯ ಅಕ್ಕಪಕ್ಕದಲ್ಲಿ ತುಳಸಿ ಗಿಡಗಳಿರುವಂತೆ ನೋಡಿಕೊಳ್ಳುವುದು. ಈ ಗಿಡದ ಪರಿಮಳವಿರುವಲ್ಲಿ ಸೊಳ್ಳೆಗಳು ಮೊಟ್ಟೆ ಇಡುವುದಿಲ್ಲ. ಆದ್ದರಿಂದ ಮನೆಯ ಎಲ್ಲಾ ಕಿಟಕಿ ಬಾಗಿಲು ಇರುವಲ್ಲೆಲ್ಲಾ ಕುಂಡದಲ್ಲೊಂದು ತುಳಸಿ ಗಿಡ ನೆಟ್ಟಿದ್ದರೆ ಉತ್ತಮ. ಕ್ಷಣ ಮಾತ್ರದಲ್ಲಿ ಸೊಳ್ಳೆಗಳನ್ನು ಹಿಮ್ಮೆಟ್ಟಿಸಬಲ್ಲ ಅಪೂರ್ವ ಸಸ್ಯಗಳು
ಕ್ರಮ #9
ಮನೆಯ ಎಲ್ಲಾ ಕಡೆ ಪರದೆ ಹಾಕಿಸಲು ಸಾಧ್ಯವಾಗದಿದ್ದರೆ ನಿತ್ಯವೂ ಕೊಂಚ ಕರ್ಪೂರವನ್ನು ಹಚ್ಚಿ ಇದರ ಹೊಗೆಯನ್ನು ಮನೆಯ ಒಳಾಂಗಣವೆಲ್ಲಾ ಪಸರಿಸುವಂತೆ ಮಾಡಿ. ಕೆಲವು ಕರ್ಪೂರ ಹಚ್ಚಿ ಮನೆಯ ಎಲ್ಲಾ ಕಿಟಕಿ ಬಾಗಿಲು ಮುಚ್ಚಿ ಸುಮಾರು ಹದಿನೈದು ಇಪ್ಪತ್ತು ನಿಮಿಷ ಹಾಗೇ ಬಿಡಿ. ಬಳಿಕ ಎಲ್ಲಾ ಕಿಟಕಿ ಬಾಗಿಲುಗಳನ್ನು ತೆರೆದು ಹೊಗೆ ಹೊರಹೋಗುವಂತೆ ಮಾಡಿ. ಈ ಹೊಗೆಯೊಂದಿಗೆ ಒಳಗೆ ಕಳ್ಳನಂತೆ ನುಗ್ಗಿ ಆಶ್ರಯ ಪಡೆದಿದ್ದ ಸೊಳ್ಳೆಗಳೂ ಹೊರಹೋಗುತ್ತವೆ. ಬಳಿಕ ಎಲ್ಲಾ ಕಿಟಕಿ ಬಾಗಿಲುಗಳನ್ನು ಭದ್ರಪಡಿಸಿ.