For Quick Alerts
ALLOW NOTIFICATIONS  
For Daily Alerts

ಕೆಂಡದಂತಹ ಕೋಪ, ನಿಮ್ಮನ್ನೇ ಸುಟ್ಟು ಬಿಡಬಹುದು!

By Super Admin
|

ಸಾಮಾನ್ಯವಾಗಿ ಪ್ರತಿ ಪತಿಯಂದಿರಿಗೂ ಅವರ ಪತ್ನಿಯರಿಂದ ಬೇಡಿಕೆ ಈ ತರಹ ಬರುತ್ತದೆ :"ರೀ ನೀವು ಸಿಟ್ಟು ಮಾಡಿಕೊಳ್ಳುವುದಿಲ್ಲ ಎಂದರೆ ಒಂದು ವಿಷಯ ಕೇಳಬೇಕಿತ್ತು" ಇದರ ಮುಂದಿನ ಭಾಗ ಆ ವಿಷಯ, ಸಂದರ್ಭ ಅನುಸರಿಸಿ ಹಲವು ಕವಲುಗಳಲ್ಲಿ ಮುಂದುವರೆಯಬಹುದು. ಆದರೆ ಪ್ರಾರಂಭದಲ್ಲಿ ಬಳಸುವ ಪದ ಒಂದೇ, ಅದೇ ಸಿಟ್ಟು. ಅರಿಷಡ್ವರ್ಗಗಳಲ್ಲಿ ಒಂದಾಗ ಕೋಪ ಜನಸಾಮಾನ್ಯರನ್ನು ಬಿಡಿ, ಅಂತಹಾ ಮಹರ್ಷಿ, ದೇವತೆಗಳನ್ನೇ ಬಿಟ್ಟಿರಲಿಲ್ಲ. ವಾಸ್ತವವಾಗಿ ನಮ್ಮ ಮನಸ್ಸಿಗೆ ಹಿಡಿಸದ ಯಾವುದೋ ಒಂದು ವಿಷಯ ಹೊರಹೊಮ್ಮುವ ಬಗೆಯೇ ಸಿಟ್ಟು. ಕೋಪದ ಭರದಲ್ಲಿ ಕೈಗೊಂಡ ನಿರ್ಣಯಗಳೆಲ್ಲವೂ ಅಧ್ವಾನವೇ ಆಗಿರುತ್ತವೆ. ಇದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ.

Different Forms Of Anger, and how to manage it

ಇದರ ಪರಿಣಾಮ ಎದುರಿನವರ ಪ್ರಾಣಕ್ಕೂ ಕುತ್ತಾಗಬಹುದು. ಸಿಟ್ಟು ಚಿಕ್ಕ ಮಗುವಿನಿಂದ ಹಿಡಿದು ವೃದ್ಧರಲ್ಲಿ, ಹುಚ್ಚರಲ್ಲಿಯೂ, ಆರೋಗ್ಯವಂತರಲ್ಲಿಯೂ ಎಲ್ಲರಲ್ಲಿಯೂ ಹುದುಗಿರುವ ಒಂದು ಗುಣವಾಗಿದೆ. ಆದರೆ ಸಿಟ್ಟು ಬಂದಾಗ ಮನಸ್ಸಿನ ಸ್ಥಿಮಿತ ಕಳೆದುಕೊಳ್ಳದೇ ಮುಂದಿನ ಕ್ರಮವನ್ನು ಯೋಚಿಸಿ ಸೂಕ್ತ ನಡೆಗಳನ್ನು ನಡೆಸುವುದರಲ್ಲಿ ಜಾಣತನವೂ, ವಿವೇಕತನವೂ ಅಡಗಿದೆ. ಸೈತಾನನ ಸ್ವಭಾವದ ಕೋಪ, ನಮಗ್ಯಾಕೆ ಬೇಕು ಅಲ್ಲವೇ?

ಕೋಪ ಬಂದಾಗ ಯಾವುದಾದರೊಂದು ರೂಪದಲ್ಲಿ ತೋರ್ಪಡಿಸಿಕೊಳ್ಳುವುದು ಆರೋಗ್ಯಕರ. ಸಿಟ್ಟು ಬಂದಾಗ ಆ ಕ್ಷಣಕ್ಕೆ ತೋರ್ಪಡಿಸಿಕೊಳ್ಳದೇ ಮನಸ್ಸಿನಲ್ಲಿ ಹುದುಗಿಸಿಕೊಂಡರೆ ಇದರ ಪರಿಣಾಮ ಎಷ್ಟು ಭೀಕರವಾಗಬಹುದು ಎಂಬುದಕ್ಕೆ ಹಿಟ್ಲರ್, ವೀರಪ್ಪನ್‌ರೇ ಸಾಕ್ಷಿಯಾಗಿದ್ದಾರೆ. ಇದು ಮಾನಸಿಕವಾಗಿಯೂ ದೈಹಿಕವಾಗಿಯೂ ಆರೋಗ್ಯವನ್ನು ಕೆಡಿಸಬಹುದು. ಆದ್ದರಿಂದ ಸಿಟ್ಟು ಬರುವುದನ್ನು ಮೂಲದಲ್ಲಿಯೇ ಹತ್ತಿಕ್ಕುವುದು ಜಾಣತನದ ಕ್ರಮ. ಇಂದು ಸಿಟ್ಟಿನ ಬಗೆಗಳು ಯಾವುವು, ಇವನ್ನು ನಿಯಂತ್ರಿಸಿಕೊಳ್ಳುವುದು ಹೇಗೆ ಎಂಬುದನ್ನು ನೋಡೋಣ:

ಅಸಹನೆ
ನಮ್ಮ ನಿತ್ಯದ ಚಟುವಟಿಕೆಗಳಲ್ಲಿ ಬಹುತೇಕವು ಇತರರನ್ನು ಅವಲಂಬಿಸಿರುತ್ತದೆ. ಹಾಗಾಗಿ ಎಲ್ಲವೂ ನಾವಂದುಕೊಂಡತೆಯೇ ನಡೆಯುತ್ತದೆ ಎಂದು ಹೇಳುವಂತಿಲ್ಲ. ಕೊಂಚ ಏರುಪೇರು, ಹಿಂದೆ ಮುಂದೆ, ನಿಧಾನ-ತಡ, ಲಭ್ಯತೆ-ಅಲಭ್ಯತೆ ಇತ್ಯಾದಿಗಳ ಮೂಲಕ ನಮಗೆ ದಕ್ಕಬೇಕಾದುದು ದಕ್ಕದೇ ಅಥವಾ ಸಕಾಲಕ್ಕೆ ದಕ್ಕದೇ ಹೋಗಬಹುದು. ಉದಾಹರಣೆಗೆ ತಡವಾಗಿ ಬರುವ ಬಸ್ಸು, ಟ್ರಾಫಿಕ್ ಜಾಂ, ಕಡೆ ಘಳಿಗೆಯಲ್ಲಿ ಲ್ಯಾಪ್ ಟಾಪ್ ಕೈಕೊಡುವುದು ಇತ್ಯಾದಿಗಳು ನಮ್ಮ ಅಸಹನೆಯನ್ನು ಹೆಚ್ಚಿಸುತ್ತವೆ. ಇದಕ್ಕೇನೂ ಮಾಡುವಂತಿಲ್ಲ. ಮುಂಗೋಪ ಒಳ್ಳೆಯದಲ್ಲವೆಂದು ನೀವೂ ಒಪ್ಪುತ್ತೀರಾ?

ಬಸ್ ಬಂದಿದ್ದು ತಡವಾದರೆ ಇದರ ಹಿಂದಿನ ಸ್ಟಾಪ್‌ನಲ್ಲಿ ಏನೋ ತೊಂದರೆ ಆಗಿದ್ದಿರಬಹುದು. ಆದರೆ ಇದನ್ನು ತಡೆಯುವುದು ನಮ್ಮಿಂದ ಸಾಧ್ಯವಿಲ್ಲವಲ್ಲ? ಆದ್ದರಿಂದ ನಮ್ಮ ನಿಯಂತ್ರಣದಲ್ಲಿರದ ಯಾವುದೇ ಸಂದರ್ಭಕ್ಕೆ ಅಸಹನೆಯುಂಟಾಗಿ ಕೋಪದಲ್ಲಿ ಪರಿವರ್ತಿತವಾಗುವ ಹಂತದಲ್ಲಿದ್ದಾಗ ದೀರ್ಘವಾಗಿ ಇಡಿಯ ಶ್ವಾಸಕೋಶ ತುಂಬಿಕೊಳ್ಳುವಂತೆ ಉಸಿರು ತುಂಬಿಕೊಂಡು ನಿಧಾನವಾಗಿ ಒಂದರಿಂದ ಹತ್ತರವರೆಗೆ ಎಣಿಸುತ್ತಾ, ಅಂದರೆ ಹತ್ತು ಬಂದಾಗ ಪೂರ್ಣ ಉಸಿರು ಖಾಲಿಯಾಗಬೇಕು, ಹಾಗೆ ಮಾಡಿ. ಅಗತ್ಯ ಕಂಡರೆ ಇನ್ನೊಂದು ಸಲ ಮಾಡಿ. ಸಿಟ್ಟು ಅಸಹನೆ ಮಾಯವಾಗಿರುತ್ತದೆ! ಮ್ಯಾಜಿಕ್!

ಸೇಡಿನ ಮನೋಭಾವ
ದಿನವಿಡೀ ನಾವು ಹಲವು ಜನರನ್ನು ಭೇಟಿಯಾಗಬೇಕಾಗುತ್ತದೆ. ನಮ್ಮಿಂದ ಸಹಜವಾಗಿ ಆಗುವ ತಪ್ಪುಗಳಿಗೆ ಎದುರಿನವರು ನಯವಾಗಿ ಗದರಬಹುದು, ಅಥವಾ ನಾವೇ ಇತರರನ್ನು ಗದರಬಹುದು. ಈ ಗದರುವಿಕೆಗೆ ನಾವೆಲ್ಲಾ ಎಷ್ಟು ಒಗ್ಗಿ ಹೋಗಿದ್ದೇವೆ ಎಂದರೆ ನಾಳೆ, ನಾಡಿದ್ದು, ಇಡಿಯ ಜೀವಮಾನ ಇದೇ ತಪ್ಪನ್ನು ಮಾಡುತ್ತಲೇ ಇರುತ್ತೇವೆ, ಗದರಿವಿಕೆಯನ್ನು ಪಡೆಯುತ್ತಲೇ ಇರುತ್ತೇವೆ. ನಾಯಿಬಾಲ ಡೊಂಕು ಎಂದು ಹೀಗೇ ನಮ್ಮನ್ನು ಗದರಿದ ಹಿರಿಯರೆಲ್ಲಾ ಸುಮ್ಮನಾಗಿಬಿಟ್ಟಿದ್ದಾರೆ. ಆದರೆ ಕೆಲವೊಮ್ಮೆ ನಮ್ಮಿಂದಾದ ತಪ್ಪಿಗೆ ಮನನೋಯುವಂತೆ ಬೈಯುವ ವ್ಯಕ್ತಿಯ ಮೇಲೆ ಸೇಡಿನ ಮನೋಭಾವ ಮೂಡುತ್ತದೆ. ಕ್ರೋಧಗೊಂಡ ಮನಸ್ಸನ್ನು ಶಾಂತಗೊಳಿಸುವುದು ಹೇಗೆ?

ಈ ಸೇಡಿನ ಮನೋಭಾವ ಯಾವ ರೂಪದಲ್ಲಿ ಹೊರಹೊಮ್ಮಬಹುದು ಎಂಬುದನ್ನು ಅರಿಯಲು ಸಾಧ್ಯವೇ ಇಲ್ಲ. ಒಂದು ನಾಣ್ಣುಡಿಯಲ್ಲಿ ಹೇಳಿರುವ ಪ್ರಕಾರ "ನಿಮಗೆ ಬೈದ ವ್ಯಕ್ತಿಯನ್ನು ನೆನಪಿಟ್ಟುಕೊಳ್ಳಬೇಡಿ, ಆದರೆ ಇದಕ್ಕೆ ಕಾರಣವಾದ ಸಂದರ್ಭವನ್ನು ಎದುರಿಸಲು ಕಲಿಯಿರಿ" ಅಂದರೆ ಎದುರಿನ ವ್ಯಕ್ತಿ ಬೈದರೆ ಇದಕ್ಕೆ ನಮ್ಮ ತಪ್ಪನ್ನೇ ಹೊಣೆಯಾಗಿಸಿ ಮನಃಪೂರ್ವಕವಾಗಿ ಕ್ಷಮೆ ಕೇಳಿ ಕೋಪಕ್ಕೆ ಕಾರಣವಾದ ತಪ್ಪನ್ನು ಸರಿಪಡಿಸಲು ಪ್ರಾರಂಭಿಸಿ. ಎಲ್ಲಕ್ಕೂ ಮೊದಲಿಗೆ ನಿಮ್ಮನ್ನು ಬೇರೆಯವರೊಂದಿಗೆ ಹೋಲಿಸಿಕೊಳ್ಳುವುದನ್ನು ನಿಲ್ಲಿಸಿ. ಏಕೆಂದರೆ ನಮಗಿಂತಲೂ ಸುಖಿ ಎಂದು ಕಂಡುಬರುವ ಆ ವ್ಯಕ್ತಿಗಳ ಮನದಲ್ಲಿ ಯಾವ ಸುಖ ಇದೆ ಎಂದು ನಾವು ಅರಿಯಲಾರೆವು.

ದ್ವೇಷ
ಪ್ರೀತಿ ಮತ್ತು ದ್ವೇಷ ಒಂದು ನಾಣ್ಯದ ಎರಡು ಮುಖಗಳು. ಪ್ರೀತಿ ಹೆಚ್ಚಾದಷ್ಟೂ ದ್ವೇಶವನ್ನು ದೂರಮಾಡಿದಂತೆ. ಸಾಮಾನ್ಯವಾಗಿ ದ್ವೇಷವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ ಪ್ರೀತಿ ಮನುಷ್ಯರ ಮನಸ್ಸುಗಳನ್ನು ಹೇಗೆ ಬದಲಿಸಬಹುದು ಎಂಬುದನ್ನು ಇತಿಹಾಸದಲ್ಲಿ ನೋಡಬಹುದು. ಓರ್ವ ವ್ಯಕ್ತಿಯ ಮೇಲಿನ ದ್ವೇಷಕ್ಕೆ ಹಲವಾರು ಕಾರಣಗಳಿರಬಹುದು. ಆದರೆ ಒಮ್ಮೆ ದ್ವೇಶ ಮೂಡಿತೋ ಆಗ ಆ ವ್ಯಕ್ತಿಯ ಒಳ್ಳೆಯ ಗುಣಗಳೆಲ್ಲಾ ಗೌಣವಾಗುತ್ತವೆ, ಹಾಗೂ ಕೆಟ್ಟ ಗುಣಗಳೇ ವಿಜೃಂಭಿಸುತ್ತವೆ. ಸಣ್ಣಪುಟ್ಟ ಕಾರಣಕ್ಕೆ ಮುನಿಸಿಕೊಳ್ಳುವುದು ಸರಿಯೇ?

ಇದಕ್ಕೆ ವಿರುದ್ಧವಾಗಿ ನಾವು ಪ್ರೀತಿಸುವ ವ್ಯಕ್ತಿಗಳ ಅವಗುಣಗಳನ್ನು ಚರ್ಚಿಸದೇ ಕೇವಲ ಅವರ ಒಳ್ಳೆಯ ಗುಣಗಳನ್ನು ಮಾತ್ರ ಚರ್ಚಿಸುತ್ತೇವೆ. ದ್ವೇಷದ ಮೂಲಕ ನಮ್ಮ ಮನಸ್ಸಿನಲ್ಲಿ ಒಳ್ಳೆಯದನ್ನು ಗುರುತಿಸುವ ಗುಣಕ್ಕೆ ನಾವು ಬಲವಂತವಾಗಿ ಪಟ್ಟಿ ಕಟ್ಟಿಕೊಂಡು ಬಿಡುತ್ತೇವೆ. ಬದಲಿಗೆ ಇವರ ಒಳ್ಳೆಯ ಕಾರ್ಯಗಳಿಗೆ ಅಡ್ಡಗಾಲು ಇಡುವಂತಹ ಯೋಚನೆಗಳನ್ನೂ ಮಾಡುತ್ತೇವೆ. ಇವೇ ನಮ್ಮ ಸಿಟ್ಟನ್ನು ಇನ್ನಷ್ಟು ಭೋರ್ಗರೆಯುವಂತೆ ಮಾಡುತ್ತದೆ. ನಿಧಾನವಾಗಿ ನಮ್ಮೊಳಗಿನ ಮನುಷ್ಯ ಸಾಯುತ್ತಾ ರಾಕ್ಷಸ ಜೀವಂತವಾಗುತ್ತಾನೆ.

ಇದಕ್ಕೆ ಉತ್ತಮ ಪರಿಹಾರ ಎಂದರೆ ಉದಾರಿಯಾಗುವುದು. ದ್ವೇಷಭಾವನೆಯನ್ನು ಬಿಟ್ಟುಬಿಡುವುದು. ದ್ವೇಶವಿರುವ ವ್ಯಕ್ತಿಯ ಅವಗುಣಗಳ ಬಗ್ಗೆ ಯೋಚಿಸದೇ ಆತನಲ್ಲಿರುವ ಒಳ್ಳೆಯ ಗುಣಗಳನ್ನು ಮಾತ್ರ ಯೋಚಿಸುವುದು ಹಾಗೂ ಈ ಗುಣಕ್ಕೆ ಮುಕ್ತ ಪ್ರಶಂಸೆ ನೀಡುವುದು. ಒಂದು ವೇಳೆ ಎದುರಿನ ವ್ಯಕ್ತಿಯೂ ನಿಮ್ಮಂತೆಯೇ ಯೋಚಿಸುವ ಮನಸ್ಸಿನವನಾಗಿದ್ದರೆ ನಿಮ್ಮ ಈ ಬದಲಾವಣೆಯನ್ನು ಖಂಡಿತಾ ಸ್ವಾಗತಿಸುವರು. ಆಗ ದ್ವೇಷ ತನ್ನಿಂತಾನೇ ಅಳಿದು ಪ್ರೀತಿ ಬೆಳೆಯುತ್ತದೆ. ಸಿಟ್ಟಿನ ಬಗ್ಗೆ ನಿಮ್ಮಲ್ಲಿ ಯಾವುದಾದರೂ ಮಾಹಿತಿ ಇದ್ದಲ್ಲಿ ನಮ್ಮೊಂದಿಗೆ ಖಂಡಿತಾ ಹಂಚಿಕೊಳ್ಳಿ. ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಭಾಗವನ್ನು ಬಳಸಿಕೊಳ್ಳಿ.

English summary

Different Forms Of Anger, and how to manage it

There are various reasons for a person to get angry. Generally, anger is described as an emotional outburst or displeasure. The outcome of anger outburst is always not great, as it can cause an emotional harm to the other person. Anger is just not for teens, when they are denied something that they have been craving for.
X
Desktop Bottom Promotion