For Quick Alerts
ALLOW NOTIFICATIONS  
For Daily Alerts

ಯಶಸ್ಸಿಗೆ ಅಡ್ಡಿಪಡಿಸುವ ಸಂಗತಿಗಳನ್ನು ಮೆಟ್ಟಿ ನಿಲ್ಲುವುದು ಹೇಗೆ?

By Arshad
|

ಯಶಸ್ವಿ ವ್ಯಕ್ತಿಗಳ ಬಗ್ಗೆ ಕೆದಕಿದರೆ ಅವರ ಮನೋಸ್ಥೈರ್ಯವೇ ಅವರನ್ನು ಈ ಮಟ್ಟಕ್ಕೆ ಮೇಲೆ ತಂದಿರುವುದನ್ನು ಗಮನಿಸಬಹುದು. ಜೀವನದಲ್ಲಿ ಎದುರಾಗುವ ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸಿ ವಿಜಯಿಯಾಗಲು ಮನೋಸ್ಥೈರ್ಯ ಅತಿ ಅಗತ್ಯವಾಗಿದೆ. ಯಾವುದೇ ಕೆಲಸ ಬರಲಿ, ಲೀಲಾಜಾಲವಾಗಿ ಮುಗಿಸುವೆ ಎಂಬ ಭರವಸೆ ಮೂಡುತ್ತದೆ. ನಿಮ್ಮ ಜೀವನದ ಗುರಿಯನ್ನು ಮುಟ್ಟಲು ಇದು ಸಹಕಾರಿಯಾಗಿದೆ.

ಗುರಿಮುಟ್ಟುವತನಕ ವಿರಮಿಸಲಾರೆ ಎಂದು ತೊಡುವ ಹಠ ಮನೋಸ್ಥೈರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಕೆಲವೊಮ್ಮೆ ಚಿಕ್ಕಪುಟ್ಟ ಸಂಗತಿಗಳೂ ನಮ್ಮ ಮನೋಸ್ಥೈರ್ಯವನ್ನು ಕದಡುತ್ತವೆ. ಕೇವಲ ಅಗಸನ ಮಾತಿನಿಂದ ಶ್ರೀರಾಮನೇ ವಿಚಲಿತಗೊಳ್ಳಲಿಲ್ಲವೇ?

Things That Affect Your Willpower To Achieve Success

ಯಾವ ನೋವೇ ಬರಲಿ ಎದೆಗುಂದದಿರಲಿ ಎಂದು ಬೈಬಲ್‌ನ ವಾಕ್ಯವೊಂದು ಹೇಳುತ್ತದೆ. ಎಂತಹ ಪರಿಸ್ಥಿತಿಯಲ್ಲಿಯೂ ಎದೆಗುಂದದಿರುವುದು ಯಶಸ್ಸಿನ ಮೊದಲ ಹೆಜ್ಜೆಯಾಗಿದೆ. ಈ ಮನೋಸ್ಥೈರ್ಯವನ್ನು ಕಲಕುವ ಕೆಲವು ಸಂಗತಿಗಳನ್ನು ಬೋಲ್ಡ್ ಸ್ಕೈ ತಂಡ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ.

ಆತ್ಮವಿಶ್ವಾಸದಲ್ಲಿ ಕೊರತೆ
ನಿಮ್ಮ ಮನೋಸ್ಥೈರ್ಯ ಕುಂದಲು ಆತ್ಮವಿಶ್ವಾಸದಲ್ಲಿ ಕೊರತೆ ಮುಖ್ಯ ಕಾರಣವಾಗಿದೆ. ಪೂರ್ವಾಗ್ರಹ ಪೀಡಿತರಾದ ನಾವು ಹಲವು ಕೀಳರಿಮೆಗಳನ್ನು ಮನದಾಳದಲ್ಲಿ ಪೋಷಿಸಿಕೊಂಡು ಬಂದಿದ್ದೇವೆ. ನಿಮ್ಮ ಗುರಿಯತ್ತ ನೀವು ಸಾಗುತ್ತಿರುವಾಗ ಕೆಲವೊಂದು ಸಂಗತಿಗಳು ನಿಮ್ಮಿಂದ ಸಾಧ್ಯವಿಲ್ಲ ಎಂದು ನೀವೇ ಪ್ರಯತ್ನಿಸುವ ಮೊದಲೇ ಒಪ್ಪಿಕೊಂಡು ಸೋಲುವುದು ಆತ್ಮಸ್ಥೈರ್ಯ ಕುಂದಲು ಕಾರಣವಾಗಿದೆ.

ನಿಮ್ಮ ಸಾಮರ್ಥ್ಯದ ಬಗ್ಗೆ ಉತ್ಪ್ರೇಕ್ಷೆ ಬೇಡ
ಎಲ್ಲರಲ್ಲಿಯೂ ಎಲ್ಲಾ ರೀತಿಯ ವಿದ್ಯೆ ಮತ್ತು ಸಾಮರ್ಥ್ಯವಿರುವುದಿಲ್ಲ. ನಿಮ್ಮ ಸಾಮರ್ಥ್ಯಗಳಲ್ಲಿ ಕೆಲವೊಂದು ಕೊರತೆಗಳಿರಬಹುದು. ಅದನ್ನು ಒರೆಹಚ್ಚದೇ ಆ ಸಾಮರ್ಥ್ಯ ನಿಮಗಿದೆ ಎಂದು ಹಮ್ಮಿಕೊಂಡಿದ್ದರೆ, ಬಳಿಕ ಆ ಸಾಮರ್ಥ್ಯವನ್ನು ಪರೀಕ್ಷಿಸುವ ಸಮಯದಲ್ಲಿ ಹೀನಾಯ ಸೋಲು ಅನುಭವಿಸಿದರೆ ನಿಮ್ಮ ಆತ್ಮಸ್ಥೈರ್ಯ ಉಡುಗುತ್ತದೆ. ಪರಿಣಾಮವಾಗಿ ನೀವು ಉತ್ತಮವಾಗಿ ಸಾಧನೆ ನಿರ್ವಹಿಸಬಲ್ಲ ವಿಷಯದಲ್ಲಿಯೂ ಹಿಂದೆ ಬೀಳುತ್ತೀರಿ. ಇದಕ್ಕಾಗಿ ನೀವು ಯಾವ ವಿಷಯದಲ್ಲಿ ಕಡಿಮೆ ಸಾಮರ್ಥ್ಯ ಹೊಂದಿದ್ದೀರೋ, ಅಲ್ಲಿಯೇ ಹೆಚ್ಚಿನ ಶ್ರಮ ವಹಿಸುವುದು ಅಗತ್ಯವಾಗಿದೆ. ನಿಮ್ಮ ದೇಹದಲ್ಲಿರುವ ಮಚ್ಚೆಯು ಏನನ್ನು ಪ್ರತಿಪಾದಿಸುತ್ತದೆ?

ಹೆಚ್ಚಿನ ಒತ್ತಡ
ಯಾವುದೇ ಕೆಲಸವಾದರೂ ಒಂದು ಹದ್ದುಬಸ್ತಿನೊಳಗಿದ್ದರೆ ಮಾತ್ರ ಅಪ್ಯಾಯಮಾನವಾಗಿರುತ್ತದೆ. ಹೆಚ್ಚಾದರೆ ಮಾತ್ರ ಮಾನಸಿಕ ಮತ್ತು ದೈಹಿಕವಾಗಿ ಒತ್ತಡ ನೀಡಲು ಪ್ರಾರಂಭಿಸುತ್ತದೆ. ಇದನ್ನು ಅಲಕ್ಷಿಸಿ ಮುಂದುವರೆದರೆ ದೇಹದಲ್ಲಿ ಹಲವು ಬದಲಾವಣೆಗಳಾಗುತ್ತವೆ. ರಕ್ತದಲ್ಲಿರುವ ಸಕ್ಕರೆ ಅಂಶ ಪೂರ್ಣವಾಗಿ ಇಲ್ಲವಾಗಿ ಸುಸ್ತು ಆವರಿಸುತ್ತದೆ. ದೈಹಿಕವಾಗಿ ಶಕ್ತಿಯೇ ಇಲ್ಲದಿದ್ದ ಬಳಿಕ ಮನೋಸ್ಥೈರ್ಯವೂ ಉಡುಗುತ್ತಾ ಬರುತ್ತದೆ.
ವಾಸ್ತವವಾಗಿ ಮೆದುಳಿಗೆ ನಮ್ಮ ದೇಹ ಉಪಯೋಗಿಸುವ ಗ್ಲುಕೋಸ್ ನ ಪ್ರಮಾಣದಲ್ಲಿ ಕಾಲುಭಾಗ ಅಗತ್ಯವಿದೆ. ರಕ್ತದಲ್ಲಿ ಗ್ಲುಕೋಸ್ ಇಲ್ಲದಿದ್ದ ಬಳಿಕ ದೇಹದೊಂದಿಗೆ ಮೆದುಳು ಸಹಾ ನಿಧಾನಕ್ಕೆ ಸಾಮರ್ಥ್ಯಕಳೆದುಕೊಳ್ಳುತ್ತಾ ಬರುತ್ತದೆ. ಇದನ್ನು ತಡೆಯಲು ಸೂಕ್ತ ಪ್ರಮಾಣದ ವಿಶ್ರಾಂತಿ ಮತ್ತು ಒತ್ತಡವಿಲ್ಲದೇ ಕೆಲಸ ಮಾಡುವ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.

ಋಣಾತ್ಮಕ ಯೋಚನೆ
ಯಾವುದೇ ಕೆಲಸಕ್ಕೆ ಧನಾತ್ಮಕ ಯೋಚನೆ ವಾಯುವೇಗವನ್ನು ನೀಡುತ್ತದೆ. ಒಂದು ವೇಳೆ ನಮ್ಮ ಯೋಚನೆಗಳಲ್ಲಿ ಋಣಾತ್ಮಕ ಭಾವನೆಗಳು ಬಂದಾಕ್ಷಣ ಈ ವೇಗಕ್ಕೆ ತಡೆಯೊಡ್ಡಿದಂತಾಗುತ್ತದೆ. ಈಗ ಎರಡೂ ಶಕ್ತಿಗಳ ನಡುವೆ ಸಮರವುಂಟಾಗಿ ನಿಮ್ಮ ಗುರಿಯತ್ತ ಸಾಗುವ ವೇಗ ಕಡಿಮೆಯಾಗುತ್ತದೆ. ಒಂದು ವೇಳೆ ಋಣಾತ್ಮಕ ಶಕ್ತಿಯೇ ಪ್ರಾಬಲ್ಯ ಹೊಂದಿದ್ದರೆ ನಿಮ್ಮ ಗುರಿ ವಿಚಲಿತವಾಗಬಹುದು. ಆದ್ದರಿಂದ ಎಂದಿಗೂ ಋಣಾತ್ಮಕ ಯೋಚನೆಗಳಿಂದ ದೂರವಿರಿ. ಜೀವನವನ್ನು ಸ್ಮಾರ್ಟ್‌ಫೋನ್ ಹೇಗೆ ಕಂಗೆಡಿಸುತ್ತದೆ?

ಮುಂದೇನಾಗಬಹುದೋ ಎಂಬ ಆತಂಕ
ಯಾವುದೇ ಪ್ರಯತ್ನ ಮೊತ್ತ ಮೊದಲ ಬಾರಿ ಫಲಕಾರಿಯಾಗುವುದಿಲ್ಲ ಎಂಬ ಸತ್ಯವನ್ನು ಮನಗಾಣುವುದು ಅವಶ್ಯ. ನೀವು ಗುರಿಯತ್ತ ಸಾಗಲು ಮಾಡಿದ ಪ್ರಯತ್ನ ಫಲಕೊಡುವ ಮುನ್ನವೇ ಅದರ ಫಲದ ಬಗ್ಗೆ ಅನುಮಾನ ಪಡುವುದು ನಿಮ್ಮ ಮನೋಸ್ಥೈರ್ಯವನ್ನು ಕುಗ್ಗಿಸುತ್ತದೆ. ಹೀಗೆ ಮಾಡಬಾರದಿತ್ತೇನೋ, ಹೀಗೆ ಮಾಡಿದ್ದುದು ತುಂಬಾ ಬೇಗನೇ ಆಯಿಯೋ ಏನೋ ಎಂದು ಕೈ ಕೈ ಹಿಸುಕಿಕೊಳ್ಳುವುದು ನಿಮ್ಮ ಮನೋಸ್ಥೈರ್ಯವನ್ನು ಕದಡಿ ಹಿಮ್ಮೆಟ್ಟಿಸುತ್ತದೆ. ಫಲ ಏನೇ ಬರಲಿ, ನಿಮ್ಮ ಪ್ರಯತ್ನಗಳು ಮಾತ್ರ ಪ್ರಾಮಾಣಿಕವಾಗಿದ್ದು ಪೂರ್ಣಪ್ರಮಾಣದಲ್ಲಿರಲಿ. ನೆನಪಿಡಿ, ಧನಾತ್ಮಕ ಯೋಚನೆಯ ಫಲಿತಾಂಶ ಧನಾತ್ಮಕವೇ ಆಗಿರುತ್ತದೆ.

English summary

Things That Affect Your Willpower To Achieve Success

What is will power? Willpower is what makes you to face the challenges in your happily. It means you are confident enough to do any work you want to do.Can will power be strengthened? There are many factors that affect willpower.
Story first published: Tuesday, February 3, 2015, 19:02 [IST]
X
Desktop Bottom Promotion