ಒಂದು ದಿನ ಒಬ್ಬ ಸನ್ಯಾಸಿಯೊಬ್ಬರು ನದಿ ತೀರದಲ್ಲಿ ಏಕಾಗ್ರಚಿತ್ತರಾಗಿ ಧ್ಯಾನ ಮಾಡುತ್ತಿದ್ದರು. ಒಬ್ಬ ಯುವಕನು ಅವರ ಬಳಿಗೆ ಬಂದು ಅವರ ಧ್ಯಾನಕ್ಕೆ ಅಡಚಣೆಯನ್ನು ಉಂಟು ಮಾಡಿ “ಗುರುಗಳೆ ನಾನು ನಿಮ್ಮ ಶಿಷ್ಯನಾಗಲು ಬಯಸುತ್ತಿದ್ದೇನೆ” ಎಂದು ಹೇಳಿದನು.
ಆಗ ನಿಧಾನವಾಗಿ ಕಣ್ಣು ಬಿಟ್ಟ ಆ ಸನ್ಯಾಸಿಯು “ಏಕೆ?” ಎಂದು ಯುವಕನನ್ನು ಕಾರಣ ಕೇಳಿದರು.
ಆ ಯುವಕನು ಒಂದು ಕ್ಷಣ ಯೋಚಿಸಿ “ನಾನು ದೇವರನ್ನು ಹುಡುಕಲು ಬಯಸುತ್ತಿದ್ದೇನೆ” ಎಂದು ಹೇಳಿದನು.
ಗುರುಗಳು ಚಟಕ್ಕನೆ ಎದ್ದು ನಿಂತರು ಮತ್ತು ಆ ಯುವಕನ ಕತ್ತನ್ನು ಗಟ್ಟಿಯಾಗಿ ಹಿಡಿದುಕೊಂಡರು. ಆತನನ್ನು ದರದರನೆ ಎಳೆದು ತಂದು, ನದಿಯಲ್ಲಿ ಆತನ ಮುಖವನ್ನು ಮುಳುಗಿಸಿ, ತಪ್ಪಿಸಿಕೊಳ್ಳಲು ಅವಕಾಶ ನೀಡದಂತೆ ಗಟ್ಟಿಯಾಗಿ ಹಿಡಿದುಕೊಂಡರು. ಒಂದು ನಿಮಿಷ ಅವನನ್ನು ಹಾಗೇ ನೀರಿನಲ್ಲಿ ಮುಳುಗಿಸಿದ ನಂತರ ಅವನಿಗೆ ಉಸಿರು ಕಟ್ಟಿದಂತಾಯಿತು, ಕೈಕಾಲು ಒದರುತ್ತ ಹುಯ್ದಾಡಲು ಪ್ರಾರಂಭಿಸಿದ. ಜೀವಕ್ಕಾಗಿ ಒದ್ದಾಡುತ್ತಿದ್ದ ಅವನನ್ನು ಸನ್ಯಾಸಿಯು ನೀರಿನಿಂದ ಹೊರಗೆ ಎಳೆದು ತಂದರು.
ಹೊರಗೆ ಬಂದ ಕೂಡಲೆ ಯುವಕ ಕುಡಿದ ನೀರನ್ನೆಲ್ಲ ಉಗಿದು, ಏದುಸಿರು ಬಿಡಲು ಪ್ರಾರಂಭಿಸಿದ. ಅಂತಿಮವಾಗಿ ಅವನನ್ನು ಆರಾಮಾಗಿ ಬಿಟ್ಟು ಆ ಸನ್ಯಾಸಿ ಆತನನ್ನು ಉದ್ದೇಶಿಸಿ ಮಾತನಾಡುತ್ತಾರೆ, “ಯವಕನೆ, ಈಗ ಹೇಳು, ನಿನ್ನನ್ನು ನೀರಿನಲ್ಲಿ ಮುಳುಗಿಸಿದಾಗ ಎಲ್ಲದಕ್ಕಿಂತ ಅತಿ ಮುಖ್ಯವಾಗಿ ನಿನಗೆ ಬೇಕೆನಿಸಿದ್ದು ಯಾವುದು?” ಎಂದು ಕೇಳುತ್ತಾರೆ.
ಆಗ ಯುವಕ “ಗಾಳಿ” ಎಂದು ಉತ್ತರಿಸುತ್ತಾನೆ.
“ಚೆನ್ನಾಗಿದೆ.. ಈಗ ಮನೆಗೆ ಹೋಗು. ಗಾಳಿಗಿಂತ ದೊಡ್ಡ ದೇವರು ನಿನಗೆ ಬೇಕು ಅಂತ ಅನಿಸಿದಾಗ ಮತ್ತೆ ನನ್ನ ಹತ್ತಿರ ಬಾ” ಎಂದು ನಗುತ್ತ ಹೇಳುತ್ತಾರೆ ಆ ಸನ್ಯಾಸಿ. ದೇವರನ್ನು ಕಾಣಲು ಬಂದ ಯುವಕ ಮರುಮಾತಿಲ್ಲದೆ ಅಲ್ಲಿಂದ ಜಾಗ ಖಾಲಿ ಮಾಡುತ್ತಾನೆ.





















