Just In
Don't Miss
- News Rain Alert: ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ: ಈ ಜಿಲ್ಲೆಗಳಲ್ಲಿ ಭಾರಿ ಬಿಸಿಲು
- Movies Bhagyalakshmi: ಶ್ರೇಷ್ಠಾ-ತಾಂಡವ್ ಮದುವೆಗೆ ಕುಸುಮಾ ಹಾರೈಕೆ; ಸತ್ಯ ಗೊತ್ತಾದ್ರೆ ಐತೆ ಮಾರಿ ಹಬ್ಬ!
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನೀವು ನಿರ್ಲಕ್ಷಿಸಲೇಬಾರದ 8 ಆರೋಗ್ಯಕಾರಿ ಮುನ್ನೆಚ್ಚರಿಕೆಗಳು!
ನಾಗರಿಕತೆ ಬೆಳೆಯುತ್ತಾ ಹೋದಂತೆ ದೈಹಿಕ ಶ್ರಮ ಕಡಿಮೆಯಾಗುತ್ತಾ ನಾವು ಸವಲತ್ತುಗಳ ದಾಸರಾಗುತ್ತಿದ್ದೇವೆ. ದಿನಕ್ಕೆ ನಿಗದಿತವಾದ ವ್ಯಾಯಾಮವನ್ನೂ ಪೂರೈಸದೇ ಆರೋಗ್ಯದ ಬಗ್ಗೆ ಕಾಳಜಿಯನ್ನು ಕಡೆಗಣಿಸುತ್ತಾ ಅನಾರೋಗ್ಯವನ್ನು ಅರಿವಿಲ್ಲದೆಯೇ ಆಹ್ವಾನಿಸುತ್ತಿದ್ದೇವೆ.
ನಮ್ಮ ದೇಹದಲ್ಲೊಂದು ಅದ್ಭುತ ಶಕ್ತಿಯಿದೆ, ಅದೇ ರೋಗ ನಿರೋಧಕ ಶಕ್ತಿ. ಆದರೆ ಈ ಶಕ್ತಿಗೂ ಕೆಲವು ಮಿತಿಗಳಿವೆ. ಆ ಮಿತಿಯ ಮೇರೆ ತಲುಪುವವರೆಗೂ ದೇಹ ನಮ್ಮಲ್ಲಿರುವ ಕಾಯಿಲೆಯ ಬಗ್ಗೆ ಯಾವುದೇ ಸೂಚನೆ ನೀಡುವುದಿಲ್ಲ, ಒಳಗಿಂದೊಳಗೇ ಆ ರೋಗದ ವಿರುದ್ಧ ಸೆಣೆಸುತ್ತಲೇ ಇರುತ್ತದೆ. ಈ ಸೆಣಸಾಟದಲ್ಲಿ ನಮ್ಮ ರೋಗ ನಿರೋಧಕ ಶಕ್ತಿಯ ಬಲ ಕುಂದುತ್ತಿದ್ದಂತೆಯೇ ದೇಹ ಕೆಲವು ಮುನ್ಸೂಚನೆಗಳನ್ನು ನೀಡಲು ತೊಡಗುತ್ತದೆ.
ನಿಮ್ಮ ಹೊಟ್ಟೆಯ ಕೊಬ್ಬನ್ನು 10 ದಿನಗಳಲ್ಲೇ ಕರಗಿಸಿಕೊಳ್ಳಿ!
ಈ ಸೂಚನೆಗಳನ್ನು ಕಡೆಗಣಿಸಿದರೆ ದಿನೇದಿನೇ ರೋಗ ಉಲ್ಬಣಿಸುತ್ತಾ ಹೋಗಿ ರೋಗ ಶರೀರವನ್ನು ಅಥವಾ ಶರೀರದ ಪ್ರಮುಖ ಅಂಗವನ್ನು ಆವರಿಸಿಬಿಡುತ್ತದೆ. ನಮ್ಮನ್ನು ತಪಾಸಿಸುವ ವೈದ್ಯರು ಮೊತ್ತ ಮೊದಲು ಗಮನಿಸುವುದೇ ಈ ಲಕ್ಷಣಗಳನ್ನು! ಈ ಲಕ್ಷಣಗಳನ್ನು ಆಧರಿಸಿ ಯಾವ ಕಾಯಿಲೆ ಇರಬಹುದೆಂದು ಅಂದಾಜಿಸಿ ಕೆಲವು ಪರೀಕ್ಷೆಗಳ ಮೂಲಕ ಖಾತರಿಪಡಿಸಿಕೊಂಡು ಚಿಕಿತ್ಸೆ ನೀಡುತ್ತಾರೆ. ಉದಾಹರಣೆಗೆ ಶೀತವಾದರೆ ವೈದ್ಯರು ಮೊದಲು ಗಮನಿಸುವುದು ಶೀತ ಯಾವ ಕಾರಣಕ್ಕೆ ಬಂದಿರಬಹುದು ಎಂದು. ನಾವು ತಿಳಿದಿರುವಂತೆ ಶೀತ ನಿಜಕ್ಕೂ ಕಾಯಿಲೆಯೇ ಅಲ್ಲ! ಅದು ನಮ್ಮ ರೋಗ ನಿರೋಧಕ ವ್ಯವಸ್ಥೆ ಮೂಗಿನ ಮೂಲಕ ದೇಹ ಪ್ರವೇಶಿಸಿರುವ ವೈರಸ್ಸುಗಳನ್ನು ಹೊರಗೋಡಿಸುವ ತಂತ್ರ!
ಕ್ರೋಧಗೊಂಡ ಮನಸ್ಸನ್ನು ಶಾಂತಗೊಳಿಸುವುದು ಹೇಗೆ?
ತಂಬಾಕು ಅಗಿಯುವವರೂ ಎಲ್ಲಾ ಎಚ್ಚರಿಕೆಗಳನ್ನು ಅಲಕ್ಷಿಸಿ ತಮ್ಮ ದುರ್ವ್ಯಸನವನ್ನು ಮುಂದುವರೆಸುತ್ತಲೇ ಇರುತ್ತಾರೆ. ಏಕೆಂದರೆ ಅವರ ರೋಗ ನಿರೋಧಕ ಶಕ್ತಿ ತಂಬಾಕಿನ ಕೆಡುಕಿನ ವಿರುದ್ಧ ಸೆಣೆಸುತ್ತಲೇ ಇರುತ್ತದೆ. ಈ ಸೆಣೆಸಾಟದ ಪ್ರಾರಂಭಿಕ ಜಯವನ್ನೇ ಅವರು ತಮಗೇನೂ ಆಗದು ಎಂಬ ಭ್ರಮೆಯಲ್ಲಿರುತ್ತಾರೆ. ಇಲ್ಲಿಯೂ ದೇಹ ಕೆಲವು ಸುಳಿವುಗಳನ್ನು ನೀಡುತ್ತದೆ. ಉದಾಹರಣೆಗೆ ಒಸಡುಗಳಲ್ಲಿ ನೋವು. ಆದರೆ ಈ ವ್ಯಸನಿಗಳು ಅದನ್ನು ಕಡೆಗಣಿಸುತ್ತಾರೆ, ಕಟ್ಟಕಡೆಗೆ ರೋಗ ನಿರೋಧಕ ಶಕ್ತಿ ಕೈಚೆಲ್ಲುತ್ತದೆ, ನಿರಾಯಾಸವಾಗಿ ಕ್ಯಾನ್ಸರ್ ಬಾಯಿಯನ್ನು ಆವರಿಸುತ್ತದೆ. ಇಂತಹದ್ದೇ ಕಡೆಗಣಿಸಬಾರದ ಎಂಟು ಸುಳಿವುಗಳನ್ನು ಇಲ್ಲಿ ವಿವರಿಸಲಾಗಿದೆ.
ಉಬ್ಬಿದ ದುಗ್ದರಸ ಗ್ರಂಥಿಗಳು (Swollen Lymph Nodes)
ನಮ್ಮ ದೇಹದಲ್ಲಿ ಕುತ್ತಿಗೆಯಿಂದ ಕಂಕುಳವರೆಗೆ, ಸೊಂಟದ ಎಡಬಲ ಮೂಳೆಗಳಿಂದ ಆಸನದವೆರೆಗೆ, ಕಿವಿಯ ಕೆಳಭಾಗದ ಕುತ್ತಿಗೆಯಲ್ಲಿ ಮತ್ತು ಎದೆಯ ನಡುವಿನ ಭಾಗದಿಂದ ಹೊಟ್ಟೆಯವರೆಗೆ ಹೆಚ್ಚಾಗಿ ದುಗ್ದರಸ ಗ್ರಂಥಿಗಳಿವೆ. ವಿರಳವಾಗಿ ದೇಹದ ಇತರ ಭಾಗದಲ್ಲಿಯೂ ಇವೆ. ಸಾಧಾರಣವಾಗಿ ಇವು ಚರ್ಮದ ಅಡಿಯಲ್ಲಿಯೇ ಇರುವುದರಿಂದ ಎದ್ದು ಕಾಣುವುದಿಲ್ಲ. ಒಂದು ವೇಳೆ ಈ ಗ್ರಂಥಿಗಳು ಉಬ್ಬಿರುವುದು ಕಂಡುಬಂದರೆ ಕೂಡಲೇ ವೈದ್ಯರನ್ನು ಭೇಟಿಯಾಗಿ ಇದಕ್ಕೆ ಕಾರಣವನ್ನು ಕಂಡುಕೊಳ್ಳಬೇಕು. ದೇಹದ ಹಲವು ವೈಪರೀತ್ಯವನ್ನು ಈ ಉಬ್ಬಿದ ಗ್ರಂಥಿಗಳು ಸಾದರಪಡಿಸುತ್ತವೆ.
ನಿಲ್ಲದ ಕೆಮ್ಮು
ಕೆಮ್ಮು ನಮ್ಮ ರೋಗ ನಿರೋಧಕ ಶಕ್ತಿಯ ಒಂದು ಅಸ್ತ್ರ. ಗಂಟಲ ಒಳಭಾಗದಲ್ಲಿ ಹಲವು ದ್ರವಗಳನ್ನು ಸ್ರವಿಸಿ ಯಾವಾಗಲೂ ತೇವವಾಗಿರುವಂತೆ ನೋಡಿಕೊಳ್ಳುತ್ತದೆ. ಒಂದು ವೇಳೆ ವೈರಸ್ಸುಗಳು ಧಾಳಿಯಿಟ್ಟರೆ ಈ ದ್ರವದಲ್ಲಿ ಅಂಟಿಕೊಳ್ಳುತ್ತದೆ. ಬಳಿಕ ಸತ್ತ ವೈರಸ್ಸುಗಳನ್ನು ಕಫದ ರೂಪದಲ್ಲಿ ಕೆಮ್ಮಿನ ಮೂಲಕ ಹೊರಹಾಕುತ್ತದೆ. ಒಂದು ವೇಳೆ ಕೆಮ್ಮು ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರೆ ವೈದ್ಯರನ್ನು ಕಾಣುವುದು ಅವಶ್ಯಕ.
ಉಸಿರಾಟದಲ್ಲಿ ತೊಂದರೆ
ಸಾಮಾನ್ಯವಾಗಿ ನಮಗೆ ದಿನನಿತ್ಯದ ಕೆಲಸಕಾರ್ಯಗಳಿಗೆ ಶ್ವಾಸಕೋಶವನ್ನು ಪೂರ್ಣವಾಗಿ ಆವರಿಸುವಷ್ಟು ಉಸಿರು ತೆಗೆದುಕೊಳ್ಳುವ ಅಗತ್ಯವಿಲ್ಲ. ಹಾಗಾಗಿ ನಾವು ಅನೈಚ್ಛಿಕವಾಗಿ ಚಿಕ್ಕ ಉಸಿರನ್ನೇ ಉಸಿರಾಡುತ್ತಿರುತ್ತೇವೆ. ಹೆಚ್ಚಿನ ಶ್ರಮದ, ಉದಾಹರಣೆಗೆ ಓಟ, ಉದ್ವೇಗ ಮೊದಲಾದ ಸಂದರ್ಭದಲ್ಲಿ ಉಸಿರಾಟ ತೀವ್ರವಾಗುತ್ತದೆ. ಒಂದು ವೇಳೆ ದಿನನಿತ್ಯದ ಕೆಲಸಗಳಿಗೂ ಉಸಿರು ಸಾಕಾಗದೇ ಕೊಂಚ ಹೆಚ್ಚಿನ ಶ್ರಮವಹಿಸಿ ಉಸಿರಾಡಬೇಕಾದರೆ ಶ್ವಾಸಕೋಶ ಮತ್ತು ಗಂಟಲಿನ ತೊಂದರೆಯ ಬಗ್ಗೆ ದೇಹ ಸುಳಿವು ನೀಡುತ್ತಿದೆ ಎಂದು ಅರ್ಥ.
ನಿದ್ರಾಹೀನತೆ
ಪ್ರತಿ ಜೀವಿಗೂ ನಿದ್ರೆ ಅವಶ್ಯಕ. ದೈಹಿಕ ಮತ್ತು ಮಾನಸಿಕ ಚಟುವಟಿಕೆಯನ್ನನುಸರಿಸಿ ಆರರಿಂದ ಎಂಟು ಘಂಟೆ ನಿದ್ದೆ ನಮಗೆ ಬೇಕು. ಒಂದು ವೇಳೆ ಇದಕ್ಕೂ ಕಡಿಮೆ ಸಮಯ ನಿದ್ದೆ ಬರುತ್ತಿದ್ದರೆ ಅಥವಾ ನಿದ್ದೆ ಬರಬೇಕಾದ ಹೊತ್ತಿನಲ್ಲಿ ಬರದೇ ಬರಬಾರದ ಹೊತ್ತಿನಲ್ಲಿ ಆವರಿಸಿಕೊಂಡರೂ ದೇಹ ಏನನ್ನೋ ಹೇಳಬಯಸುತ್ತಿದೆ ಎಂದು ಅರ್ಥೈಸಿಕೊಳ್ಳಬಹುದು. ಇದರಲ್ಲಿ ಪ್ರಮುಖವಾದ ಸುಳಿವು ಹೃದಯಕ್ಕೆ ಸಂಬಂಧಿಸಿದೆ.
ಅನಾವಶ್ಯಕ ಉದ್ವೇಗ, ತಳಮಳ
ಹೆರಿಗೆ ಕೋಣೆಯ ಹೊರಗೆ ಶತಪಥ ತಿರುಗುತ್ತಿರುವ ತಂದೆಯ ತಳಮಳ ಯಾರಿಗೂ ಅರ್ಥವಾಗುತ್ತದೆ. ಆದರೆ ಅನಾವಶ್ಯಕವಾಗಿ ಉದ್ವೇಗ, ತಳಮಳಕ್ಕೆ ಒಳಗಾಗುತ್ತಿದ್ದರೆ ದೇಹ ಏನನ್ನೋ ಹೇಳಬಯಸುತ್ತಿದೆ ಎಂದು ತಿಳಿದುಕೊಳ್ಳಬಹುದು.
ಆಗಾಗ ಬರುವ ಎದೆಯುರಿ
ಸಾಧಾರಣವಾಗಿ ಆಗಿಬರದ ಏನನ್ನೋ ತಿಂದಾಗ ಹೊಟ್ಟೆಯಲ್ಲಿ ಅಮ್ಲವನ್ನು ಹೆಚ್ಚಿಸಿ ಹೊಟ್ಟೆಯುಬ್ಬರ ಹಾಗೂ ಅನ್ನನಾಳದಲ್ಲಿ ಉರಿಯನ್ನು ಉಂಟುಮಾಡುತ್ತದೆ. ಈ ಉರಿ ಅನ್ನನಾಳದ ಒಳಭಾಗದಲ್ಲಿ ಕೆಳಗಿನಿಂದ ಮೇಲಕ್ಕೇರುವಂತೆ ಅನುಭವ ಮೂಡುವುದರಿಂದ (ಉರಿಯೂತ) ಎದೆಯಲ್ಲಿ ಉರಿಯುವ ಭಾವನೆ ಮೂಡಿಸುತ್ತದೆ. ಸಾಧಾರಣವಾಗಿ ಒಂದು ಬಾರಿಯ antacid ಔಷದಿಯ ಮೂಲಕ ಈ ಉರಿ ಕಡಿಮೆಯಾಗಬೇಕು. ಬದಲಾಗಿ ಯಾವುದೇ ಊಟ ಮಾಡಿದರೂ ಎದೆಯುರಿ ಬೇರೆಯೇ ಲಕ್ಷಣಗಳನ್ನು ತೋರುತ್ತಿರಬಹುದು. ಅನ್ನನಾಳದ ಬದಲು ಶ್ವಾಸಕೋಶದ ತೊಂದರೆಯನ್ನೇ ತಿಳಿಸುತ್ತಿರಬಹುದು. ಕೂಡಲೇ ವೈದ್ಯರನ್ನು ಕಾಣುವುದು ಅವಶ್ಯ.
ಕೂಡಲೇ ಕಾಣಿಸಿಕೊಳ್ಳುವ ಸುಸ್ತು
ಆಟವಾಡಿ ಬಂದು ಕುಳಿತಾಕ್ಷಣ ಕಾಣಿಸಿಕೊಳ್ಳುವ ಸುಸ್ತು ಕೆಲಸಮಯದ ಬಳಿಕ ಕೊನೆಗೊಳ್ಳುತ್ತದೆ. ಕೆಲವೊಮ್ಮೆ ಯಾವುದೇ ದೈಹಿಕ ಚಟುವಟಿಕೆಗಳ ಹೊರತಾಗಿಯೂ ಸುಸ್ತು ಆವರಿಸುತ್ತದೆ. ಏನನೂ ಮಾಡಲು ಆಸಕ್ತಿ ಉಳಿದಿರುವುದಿಲ್ಲ. ಈ ಸುಸ್ತಿನಿಂದ ಹೊರಬರಲು ತುಂಬಾ ಸಮಯ ಬೇಕಾಗುತ್ತದೆ. ಈ ಕುರುಹು ಹಲವಾರು ವ್ಯಾಧಿಗಳ ಕುರುಹಾಗಿದೆ. ಈ ಹೊತ್ತಿನಲ್ಲಿ ಉದಾಸೀನತೆ ಸಲ್ಲದು. ವೈದ್ಯರ ಭೇಟಿ ಅವಶ್ಯ.
ಪದೇ ಪದೇ ಹೊಟ್ಟೆ ಕೆಡುತ್ತಿರುವುದು
ಅಜೀರ್ಣತೆ, ಮಲಬದ್ಧತೆ, ಹೊಟ್ಟೆಯಲ್ಲಿ ಉರಿ ಮೊದಲಾದವು ಪದೇಪದೇ ಕಾಣಿಸಿಕೊಳ್ಳುತ್ತಿದ್ದರೆ ಹೊಟ್ಟೆ, ಕರುಳು ಅಥವಾ ದೊಡ್ಡ ಕರುಳುಗಳಲ್ಲಿ ಎಲ್ಲಿಯೂ ತೊಂದರೆ ಇರಬಹುದು. ಈ ಸುಳಿವುಗಳನ್ನು ಕಡೆಗಣಿಸದೇ ವೈದ್ಯರ ಸಲಹೆ ಪಡೆದುಕೊಳ್ಳುವುದು ಅಗತ್ಯ.